Sunday, November 3, 2013

ಮೇಲೂರಿನ ಅಪ್ಪಟ ಕನ್ನಡ ಪ್ರೇಮ

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿನ  ಹೊಯ್ಸಳ ಬಡಾವಣೆಯ ಹೊಯ್ಸಳ ನಾಗರಿಕರ ವೇದಿಕೆಯ ನಾಮಫಲಕ


’ಸ್ವಾಮಿ, ನೀವು ತುಂಬ ಒಳ್ಳೆಯ ಕಲಾವಿದರು. ನಿಮ್ಮ ಬಗ್ಗೆ ಗೌರವವಿದೆ. ಆದರೆ ತಾಯಿ ಭುವನೇಶ್ವರಿಗೆ ಅಸಡ್ಡೆ ಮಾಡಿದರೆ, ನಾವು ಸುಮ್ಮನಿರುವವರಲ್ಲ. ನಿಮ್ಮನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಗ್ರಾಮದ ಗಡಿ ದಾಟಲು ಬಿಡುವುದಿಲ್ಲ...’ ಈ ರೀತಿ ಕನ್ನಡ ಮತ್ತು ಕನ್ನಡತಾಯಿಯ ಅಭಿಮಾನದಿಂದ ಇತ್ತೀಚೆಗೆ ಹೀಗೆ ಎಚ್ಚರಿಕೆ ನೀಡಿದವರು ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮಸ್ಥರು. ಗ್ರಾಮಸ್ಥರ ಕನ್ನಡಾಭಿಮಾನ ಕಂಡು ಬೆರಗಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ’ಮುಖ್ಯಮಂತ್ರಿ’ ಚಂದ್ರು ಅವರು ಗ್ರಾಮಸ್ಠರು ಮತ್ತು ಕನ್ನಡಾಭಿಮಾನಿಗಳೊಂದಿಗೆ ರಸ್ತೆಯ ಮೇಲೆ ದೀರ್ಘಕಾಲದವರೆಗೆ ಕೂತು ನಂತರ ಕ್ಷಮೆಯಾಚಿಸಬೇಕಾಯಿತು.
 ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮಸ್ಥರ ಕನ್ನಡಾಭಿಮಾನಕ್ಕೆ ವಿಶಿಷ್ಟವಾದ ಇತಿಹಾಸವಿದೆ.  ಗೋಕಾಕ್‌ ಚಳುವಳಿಗೂ ಮುನ್ನವೇ 1966 ರಲ್ಲೇ ಮೇಲೂರಿನಲ್ಲಿ ಕನ್ನಡ ಸಂಘವಿತ್ತು. ’ಬಹುಶಃ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಕನ್ನಡ ಸಂಘಗಳೇ ಅಸ್ತಿತ್ವಕ್ಕೆ ಬಾರದೇ ಇರುವ ಕಾಲದಲ್ಲಿಯೇ ಮೇಲೂರಿನಲ್ಲಿ ಕನ್ನಡ ಸಂಘ ಸ್ಥಾಪಿಸಿದ್ದೆವು. ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಹಲವಾರು ಚಟುವಟಿಕೆ ಹಮ್ಮಿಕೊಳ್ಳುತ್ತಿದ್ದೆವು’ ಎಂದು ಗ್ರಾಮಸ್ಥರು ಹೇಳುತ್ತಾರೆ.
  ’ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವುದು ಇಲ್ಲಿನ ವಾಡಿಕೆ. ಕನ್ನಡ ನಾಟಕಗಳನ್ನು ಆಡಿಸುವುದು ಪರಿಪಾಠವಾಗಿತ್ತು. ಬಿ.ಎಂ.ಶ್ರೀಕಂಠಯ್ಯ, ಸಿದ್ಧವನಹಳ್ಳಿ ಕೃಷ್ಣಶರ್ಮ ರಂಥಹ ಸಾಹಿತಿಗಳನ್ನು ಆ ಕಾಲದಲ್ಲೇ ಕರೆಸಿ ಗೌರವಿಸಿದ್ದೆವು. ಚಿತ್ರನಟರಾದ ದಿನೇಶ್‌, ರಾಜೇಶ್‌ ಬಂದಿದ್ದರು. ನಟಿಯರಾದ ಗಿರಿಜಾ ಲೋಕೇಶ್‌, ಶಶಿಕಲಾ, ಜಯಲಕ್ಷ್ಮಿ ಮುಂತಾದವರು ನಮ್ಮ ನಾಟಕದಲ್ಲಿ ಅಭಿನಯಿಸಿದ್ದರು. ಹೋರಾಟಗಾರ ವಾಟಾಳ್‌ ನಾಗರಾಜ್‌ ಸಹ ಬಂದಿದ್ದರು. ಗೋಕಾಕ್‌ ಚಳುವಳಿಯ ಸಂದರ್ಭದಲ್ಲಿ ವರನಟ ಡಾ.ರಾಜ್‌ಕುಮಾರ್‌, ಅಂಬರೀಷ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌ ಪಾಲ್ಗೊಂಡಿದ್ದರು. ನಮ್ಮೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು’ ಎಂದು ಹಿರಿಯ ಕೀರ್ತನಾ ಕಲಾವಿದ ಮಾ.ಮು.ಸ್ವಾಮಿ ತಿಳಿಸಿದರು.
 ಇದಲ್ಲದೇ ಮೇಲೂರು ಗ್ರಾಮದಲ್ಲಿ ಇನ್ನೂ ಕೆಲವಾರು ವಿಶೇಷತೆಗಳಿವೆ. ಗಡಿಭಾಗದಲ್ಲಿದ್ದರೂ ಇಲ್ಲಿ ಒಮ್ಮೆಯೂ ತೆಲುಗು ನಾಟಕ ಪ್ರದರ್ಶಿಸಲು ಅವಕಾಶ ನೀಡಲಾಗಿಲ್ಲ. ಅಲ್ಲಿನ ಕೆಲ ರಸ್ತೆ ಮತ್ತು ವೃತ್ತಗಳಿಗೆ ಸಾಹಿತಿಗಳು ಮತ್ತು ಮಹನೀಯರ ಹೆಸರುಗಳನ್ನು ಇಡಲಾಗಿದೆ. ಇಲ್ಲಿನ ಪ್ರಮುಖ ವೃತ್ತಕ್ಕೆ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೋಲಾರ ಜಿಲ್ಲೆಯ ಕೆ.ಚಂಗಲರಾಯರೆಡ್ಡಿ ಹೆಸರಿಡಲಾಗಿದೆ. ಅಪ್ಪಟ ಕನ್ನಡ ಹೆಸರಿನ ಕರ್ನಾಟಕದ ಸಾಧಕರ ಹೆಸರಿನ ಬಡಾವಣೆಗಳಿವೆ. ರಾಷ್ಟ್ರಕವಿ ಕುವೆಂಪು ಬಡಾವಣೆ, ಹೊಯ್ಸಳ ಬಡಾವಣೆ, ಬಸವೇಶ್ವರ ಬಡಾವಣೆ, ಅಮೋಘವರ್ಷ ನೃಪತುಂಗ ರಸ್ತೆ ಇವರ ಕನ್ನಡ ಪ್ರೇಮವನ್ನು ಪ್ರತಿನಿಧಿಸಿದರೆ, ವಿಜಯನಗರ ಹೆಬ್ಬಾಗಿಲು ಎಂಬ ಹೆಸರಿನಲ್ಲಿ ಬೃಹತ್‌ ದ್ವಾರಬಾಗಿಲು ಕನ್ನಡದ ಪರಂಪರೆಗೆ ಗ್ರಾಮದ ಕೊಡುಗೆಯಂತಿದೆ.
 ’ಮೇಲೂರಿನಲ್ಲಿ ಡಾ.ರಾಜ್‌ ಅಭಿಮಾನಿಗಳ ಸಂಘ, ಕುವೆಂಪು ಯುವಕರ ಸಂಘ, ಹೊಯ್ಸಳ ನಾಗರೀಕ ವೇದಿಕೆ, ನೇತಾಜಿ ಕನ್ನಡ ಯುವಕ ಸಂಘಗಳಿವೆ. ವಿವಿಧ ಪಕ್ಷಗಳ ಬೆಂಬಲಿಗರಿದ್ದರೂ ಕನ್ನಡದ ಕಾರ್ಯಕ್ರಮವೆಂದರೆ ಗ್ರಾಮಸ್ಥರೆಲ್ಲರೂ ಒಂದಾಗುತ್ತಾರೆ. ಪ್ರತಿವರ್ಷವೂ ರಾಜ್ಯೋತ್ಸವವನ್ನು ವಿಶೇಷವಾಗಿ ಗ್ರಾಮದ ಹಬ್ಬವೆಂಬಂತೆ ಆಚರಿಸುತ್ತೇವೆ. ಈಗಿನ ಯುವಕರಲ್ಲಿ ಕನ್ನಡ ಪ್ರೇಮ ಹೆಚ್ಚಾಗಿದೆ. ಚಂಗಲರಾಯರೆಡ್ಡಿ ವೃತ್ತದ ಬಳಿಯಿರುವ ಶ್ರೀನಿವಾಸ್‌(ಪುಲಿ) ಅವರ ಟೈರುಗಳ ಪಂಚರ್‌ ಅಂಗಡಿ ಬಯಲು ಗ್ರಂಥಾಲಯದಂತಿದೆ. ಎಲ್ಲಾ ಕನ್ನಡ ದಿನಪತ್ರಿಕೆಗಳೂ ಅಲ್ಲಿ ಓದಲು ಸಿಗುತ್ತದೆ. ಬಹುಮುಖ್ಯ ಲೇಖನವಿದ್ದರೆ ಅದನ್ನವರು ಗೋಡೆಯ ಮೇಲೆ ಅಂಟಿಸಿ ಪ್ರದರ್ಶಿಸುತ್ತಾರೆ. ಅಲ್ಲಿ ವಿವಿಧ ಪತ್ರಿಕೆಗಳನ್ನು ಓದಿ ಚರ್ಚಿಸುವುದು ಹಲವರ ದಿನಚರಿಯ ಭಾಗವಾಗಿದೆ’ ಎಂದು ಡಾ.ರಾಜ್‌ಕುಮಾರ್ ಅಭಿಮಾನಿಗಳ ಬಳಗದ ಸುದರ್ಶನ್ ತಿಳಿಸಿದರು.

Thursday, October 10, 2013

ಎಲೆ ಮತ್ತು ಜಿಟಿಕ್ಕಾಯಿ ಜುಗಲ್‍ಬಂದಿ






 ತನ್ನ ತೂಕ ಹೆಚ್ಚಿದೆಯೋ ಅಥವಾ ಎಲೆಯ ಕ್ಷಮತೆ ಜಾಸ್ತಿಯಿದೆಯೋ ನೋಡುವ ಪುಟ್ಟ ಸಾಹಸ. ಅತ್ತ ಗಾಳಿ ಬೀಸುತ್ತಿದ್ದರೆ, ಇತ್ತ ಇದು ಇನ್ನಷ್ಟು ಗಟ್ಟಿಯಾಗಿ ನಿಲ್ಲಲು ಪ್ರಯತ್ನಿಸುತಿತ್ತು. ಗಾಳಿಯಿಂದ ಒಂದು ಇಂಚಿನಷ್ಟು ಎಲೆ ಮೇಲೆ ಏರಿದರೂ ಕ್ಷಣಮಾತ್ರದಲ್ಲೇ ಎರಡೂ ಇಂಚಿನಷ್ಟು ಅದು ಕೆಳಗಿಳಿಯುತಿತ್ತು. ಅಪರೂಪದ ಈ ಜುಗಲ್‌ಬಂದಿ ಒಂದರ್ಥದಲ್ಲಿ ಪುಟ್ಟ ’ಬಲ ಪ್ರದರ್ಶನ’ ಕಂಡು ಬಂದದ್ದು  ಶಿಡ್ಲಘಟ್ಟ ತಾಲ್ಲೂಕಿನ  ಹನುಮಂತಪುರ ಗ್ರಾಮದ ಹೊರವಲಯದಲ್ಲಿ. ಒಮ್ಮೆ ಎಲೆಯ ಬಲ ಹೆಚ್ಚಾದರೆ, ಮಗದೊಮ್ಮೆ ಪುಟಾಣಿ ಪಕ್ಷಿಯ ಬಲ ವೃದ್ಧಿಯಾಗುತಿತ್ತು.

 ಚಂಚಲ ಮನಸ್ಸಿನಿಂದ ಕೂಡಿದ್ದ ಹಕ್ಕಿಯು ಒಮ್ಮೆ ಎಲೆಯ ಮೇಲೆ ಕೂರುತ್ತ, ಮತ್ತೊಮ್ಮೆ ರಕ್ಕೆ ಬಡಿಯುತ್ತ ಪುಟಿಯುತಿತ್ತು. ಇನ್ನೇನೂ ಹಾರಿಕೊಂದು ದೂರಕ್ಕೆ ಹಾರಿ ಹೋಗುತ್ತದೆಯೆಂದು ಭಾವಿಸುವಷ್ಟರಲ್ಲಿ ಅದು ಎಲೆಯ ಮೇಲೆ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತಿತ್ತು. ಒಂಟಿಯಾಗಿದ್ದ ಹಕ್ಕಿಯು ತನಗೆ ಜೊತೆ ನೀಡಲು ಸಂಗಾತಿಯನ್ನು ಹುಡುಕುತ್ತಿರುವಂತೆಯೂ ಭಾಸವಾಗುತಿತ್ತು. ಸಂಗಾತಿಯ ಧ್ವನಿ ಕೇಳಿಸಿದರೂ ಸಾಕು ಉತ್ಸಾಹಗೊಳ್ಳುತ್ತಿದ್ದ ಪಕ್ಷಿಯು ಸುತ್ತಲೂ ಕಣ್ಣು ಹಾಯಿಸುತಿತ್ತು. ಒಲುಮೆಯ ದನಿ ಆಲಿಸುತ್ತಿರುವಾಗ ಕಿರಿಕಿರಿ ಮಾಡದಂತೆ ಎಲೆಯನ್ನು ಕಾಲಿನಿಂದ ಸೂಕ್ಷ್ಮವಾಗಿ ತಿವಿಯುತಿತ್ತು.

 ಅಂದ ಹಾಗೆ, ಈ ಪುಟ್ಟ ಹಕ್ಕಿಯ ಹೆಸರು ಜಿಟಿಕ್ಕಾಯಿ.  ಎಲೆಗಳ ಮರೆಯಲ್ಲಿ ಅಪರೂಪಕ್ಕೆ ಕಾಣಸಿಗುವ ಈ ಪಕ್ಷಿಯು ತುಂಬ ನಾಚಿಕೆ ಸ್ವಭಾವದ್ದು ಹೌದು. ಎಲ್ಲಿಯಾದರೂ ಸಂಚಲನ ಮತ್ತು ಜನರ ಚಟುವಟಿಕೆ ಗಮನಕ್ಕೆ ಬಂದರೆ, ನಿಮ್ಮ ಸಹವಾಸವೇ ಬೇಡವೆಂದು ಕೊಂಚ ದೂರಕ್ಕೆ ಹಾರಿ ಹೋಗುತ್ತದೆ. ಮೈಪೂರ್ತಿ ಸೌಂದರ್ಯದ ಗುಣ ಹೊಂದಿದ್ದರೂ ಅದನ್ನು ತೋರಿಸಿಕೊಡಲು ಅದು ಬಯಸುವುದಿಲ್ಲ.


Saturday, September 28, 2013

ಆವಲಕೊಂಡ

 ಆವಲಕೊಂಡ

ಬೀಸುವ ತಂಗಾಳಿ ಮೊಣಕಾಲೆತ್ತರ ಬೆಳೆದ ಹುಲ್ಲನ್ನು ತಳ್ಳುತ್ತಾ ಆಹ್ಲಾದವನ್ನುಂಟು ಮಾಡಿದರೆ, ಹಕ್ಕಿಗಳ ಚಿಲಿಪಿಲಿ ನಾದ, ಬಣ್ಣದ ಪಾತರಗಿತ್ತಿಗಳು, ಕಣ್ಣು ಹಾಸಿದಷ್ಟು ದೂರವೂ ಹಸಿರನ್ನು ಹೊದ್ದ ಕಾಡು ಮತ್ತು ಬಂಡೆಗಳಬೆಟ್ಟಗಳ ಸಾಲು ಜೀವ ಚೈತನ್ಯವುಂಟುಮಾಡುತ್ತವೆ. ಇದು ಮಲೆನಾಡಿನ ವರ್ಣನೆಯಲ್ಲ. ಮಲೆನಾಡನ್ನೂ ನಾಚಿಸುವ ಜಿಲ್ಲೆಯ ಬೆಟ್ಟವೊಂದರ ಮೇಲಿನ ದೃಶ್ಯ ವೈಭವವಿದು. 
 ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್‌ ಬಳಿಯಿರುವ ಆವಲಕೊಂಡ, ಹಸುಬೆಟ್ಟ ಅಥವಾ ಧೇನುಗಿರಿ ಅಲ್ಲಿನ ನರಸಿಂಹಸ್ವಾಮಿ ದೇಗುಲದೊಂದಿಗೆ ಸೂರ್ಯೋದಯ, ಸೂರ್ಯಾಸ್ತ ವೀಕ್ಷಣೆಗೂ, ಚಾರಣಕ್ಕೂ, ಜಗದ ಜಂಜಡವನ್ನು ಮರೆತು ಪ್ರಕೃತಿಯೊಂದಿಗೆ ಮೌನ ಸಂಭಾಷಣೆ ನಡೆಸುವ ತಾಣವಾಗಿದೆ. ಇಲ್ಲಿ ಬೇಸಿಗೆಯಲ್ಲಿ ತಂಗಾಳಿಯ ಅನುಭವ ದೊರೆತರೆ, ಚಳಿಗಾಲದಲ್ಲಿ ಬೆಟ್ಟಗಳ ಮೇಲೆ ಚಲಿಸುವ ಮೋಡಗಳು ಸುಂದರವಾಗಿ ಕಾಣುತ್ತವೆ. ಇನ್ನು ಮಳೆಗಾಲದಲ್ಲಿ ವರ್ಷಧಾರೆಯಲ್ಲಿ ಬೆಟ್ಟದ ಮೇಲೆ ನಿಂತು ತೊಯ್ಯುತ್ತಾ ನಿಸರ್ಗದಲ್ಲಿ ಒಂದಾಗುವುದೇ ಸೊಗಸಾದ ಅನುಭವ. 

 ದೂರದಿಗಂತದವರೆಗೆ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಬೆಟ್ಟದ ಸಾಲುಗಳು

ವಾರಾಂತ್ಯದಲ್ಲಿ ಒಂದು ದಿನ ಚಾರಣ ಕೈಗೊಳ್ಳಬಹುದಾದಂತ ಪ್ರವಾಸಿ ಸ್ಥಳ ಧೇನುಗಿರಿಯನ್ನು ಸ್ಥಳೀಯರು ಆವಲಕೊಂಡ, ಆವಲಬೆಟ್ಟ, ಹಸುಗಳಬೆಟ್ಟ ಎಂದೆಲ್ಲಾ ಕರೆಯುತ್ತಾರೆ. ಈ ಬೆಟ್ಟದ ಮೇಲೆ ನರಸಿಂಹದೇವರ ದೇವಸ್ಥಾನವೊಂದಿದೆ. ಈ ದೇವಾಲಯಕ್ಕೆ ಹೋಗಲು ಇನ್ನೂರು ಮೆಟ್ಟಿಲುಗಳನ್ನು ಹತ್ತಬೇಕು. 150 ಮೆಟ್ಟಿಲುಗಳನ್ನು ಹತ್ತಿದರೆ ಲಕ್ಷ್ಮೀದೇವಿಯ ಮಂದಿರವಿದೆ.ನರಸಿಂಹದೇವರ ದೇವಾಲಯ ಬಹಳ ಸಾಧಾರಣವಾದ ದೇಗುಲ. ಇದೊಂದು ಗುಹೆಯ ದೇವಾಲಯ. ಮೂರು ಕಡೆ ಗೋಡೆ ಮತ್ತು ಒಂದು ಕಿರುಬಾಗಿಲು ಇದೆ. ಮುಂಚಾಚಿದ ಹೆಬ್ಬಂಡೆಯ ತಳವೇ ಸೂರು ಹಾಗೂ ಹಿಂಬದಿಯ ಗೋಡೆಯಾಗಿದೆ. ಬಹಳ ತಗ್ಗಿನಲ್ಲಿರುವ ಈ ದೇವಾಲಯದಲ್ಲಿ ದೇವರ ವಿಗ್ರಹ ಮುಂದೆ ನಿಂತಾಗ ಮಾತ್ರ ತಲೆ ಎತ್ತಲೂ ಅವಕಾಶ. ಶ್ರಾವಣ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತದೆ.

 ದೇವಾಲಯದ ಬಳಿಯಿರುವ ಮಂಟಪ

ಬೆಟ್ಟದ ಮೇಲಿಂದ ಕಾಣುವ ವಿಹಂಗಮ ನೋಟ ಸುಂದರ ಹಾಗೂ ನಯನಮನೋಹರ. ಸುತ್ತಲೂ ಕಾಣುವ ಕೆರೆ,ಗದ್ದೆ, ಊರು, ಪಚ್ಚೆ ಬಣ್ಣದ ಹಸಿರು ಕಾನನ ಮನಸ್ಸಿಗೆ ಹೊಸ ಲವಲವಿಕೆ ತುಂಬುವುದು. ಹಸಿರಿನ ಮಧ್ಯದಲ್ಲಿ ಸ್ವಲ್ಪ ದೂರ ಕಾಲ್ನಡಿಗೆ, ಮೆಟ್ಟಿಲು ಹತ್ತುವ ಸಾಹಸ ಮಾಡಿದಾಗ ದಣಿವಿನಿಂದ ಕೂಡಿದ ದೇಹ ಬೆಟ್ಟದ ಮೇಲೆ ಉತ್ತಮ ಗಾಳಿ ಹಾಗೂ ಸುಂದರ ವಾತಾವರಣದಿಂದ ಹೊಸ ಶಕ್ತಿ ಪಡೆಯುತ್ತದೆ.
 ’ಹಿಂದೆ ಸಮುದ್ರ ಮಂಥನ ನಡೆದಾಗ ಜನಿಸಿದ ಹಸುವೊಂದು ಇಲ್ಲಿ ಬಂದು ನೆಲೆ ನಿಂತಿತಂತೆ. ಅಂದಿನಿಂದ ಈ ಬೆಟ್ಟಕ್ಕೆ ತುಂಬಾ ಹಸುಗಳು ಬರಲಾರಂಭಿಸಿದವು. ಹಾಗಾಗಿ, ಈ ಬೆಟ್ಟಕ್ಕೆ ಧೇನುಗಿರಿ ಅಂದರೆ ಕಾಮಧೇನುಗಳ (ಹಸುಗಳ)ಬೆಟ್ಟ ಎಂಬ ಹೆಸರು ಸ್ಥಿರವಾಯಿತು ಎಂದು ಹಿರಿಯರು ಹೇಳುತ್ತಾರೆ. ಈ ಗಿರಿಧಾಮ ಚಾರಣಿಗರಿಗೆ, ಪ್ರಕೃತಿ ಪ್ರಿಯರಿಗೆ ಹಾಗೂ ಆಧ್ಯಾತ್ಮ ಸಾಧಕರಿಗೆ ಇಷ್ಟವಾಗುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ನರಸಿಂಹಪ್ಪ.

ಹಸಿರನ್ನು ಹೊದ್ದ ಸಿರಿ ಭೂ ದೃಶ್ಯ ಮಲೆನಾಡನ್ನು ನೆನಪಿಸುತ್ತದೆ

Thursday, August 22, 2013

ಸಾವಿನ ನೆರಳು...

 ಮೊಮ್ಮಕ್ಕಳಿಗೆ ತಾನು ವಾಯುಸೇನೆಯಲ್ಲಿದ್ದಾಗ ಪಡೆದ ಪದಕಗಳನ್ನು ತೋರಿಸುತ್ತಿರುವ ಶಿಡ್ಲಘಟ್ಟದ ಎಸ್.ವಿ.ಅಯ್ಯರ್.

"ಪಾಕಿಸ್ತಾನದ ಸರ್ಗೋದಾ ಬಳಿ ಭೂಮಿಯೊಳಗೆ ವಾಯು ನಿಲ್ದಾಣ ಇರುವುದು ಗೊತ್ತಾಯಿತು. ಅದಕ್ಕೆ  ಒಂದೇ  ದ್ವಾರವಿತ್ತು. ಬಾಂಬರ್ ಫೈಟರ್ ವಿಮಾನಗಳು ಒಳ ಮತ್ತು ಹೊರ ಹೋಗುತ್ತಿದ್ದುದು ಗೊತ್ತೇ ಆಗುತ್ತಿರಲಿಲ್ಲ. ಆಗ ವೈಮಾನಿಕ ದಳದ ಗಾಂಧಿ ಎಂಬ ಧೀರ ಅಧಿಕಾರಿ ತಮ್ಮ ಬಾಂಬರ್ ವಿಮಾನವನ್ನು ಅದರೊಳಗೆ ನುಗ್ಗಿಸಿಬಿಟ್ಟರು. ಮರುಕ್ಷಣವೇ ಎಲ್ಲವೂ ಬ್ಲಾಸ್ಟ್ ಆಯಿತು. ಗಾಂಧಿ ಹುತಾತ್ಮರಾದರು. ಪಾಕಿಸ್ತಾನದ ಜಂಘಾಬಲವೇ ಕುಸಿಯಿತು. ಇದೆಲ್ಲವೂ ನಡೆದದ್ದು ೧೯೬೫ರಲ್ಲಿ. ಆ ದಿನವನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ’. ಈ ದೃಶ್ಯ ಸಿನಿಮಾದ್ದಲ್ಲ, ಪುಸ್ತಕದಲ್ಲಿ ಓದಿದ್ದೂ ಅಲ್ಲ. ಈ ಘಟನೆ ವಿವರಿಸಿ, ಘಟನೆಗೆ ಸಾಕ್ಷಿಯಾದವರು ಶಿಡ್ಲಘಟ್ಟದ ಎಸ್.ವಿ.ಅಯ್ಯರ್. ಅವರ ಪೂರ್ತಿ ಹೆಸರು ಸುಬ್ರಮಣ್ಯಂ ವೆಂಕಟೇಶ ಅಯ್ಯರ್. ೧೯೬೫ ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ’ಏರ್ ಡಿಫೆನ್ಸ್ ಸೇಫ್ಟಿ ಆರ್ಗನೈಸೇಷನ್” ನಿಯಂತ್ರಣಾಧಿಕಾರಿಯಾಗಿದ್ದ  ಅವರ ಕಣ್ಣೆದುರೇ ಹಲವಾರು ಅಧಿಕಾರಿಗಳು, ಸೈನಿಕರು ಹುತಾತ್ಮರಾದರು. ’ಆಗಿನ ಯುದ್ಧದ ದೃಶ್ಯ ನೆನಪಿಸಿಕೊಂಡರೆ, ಸ್ನೇಹಿತರ ಜೊತೆಗಿನ ಭಾವನಾತ್ಮಕ ಸಂಬಂಧ, ಪ್ರೀತಿ ಮತ್ತು ವಿಶ್ವಾಸ ಎಲ್ಲವೂ ಕಣ್ಣೆದುರಿಗೆ ಬರುತ್ತವೆ. ಅವರು ನಗುನಗುತ್ತಲೇ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸುತ್ತಿದ್ದರು" ಎನ್ನುವಾಗ ಅವರ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.

 ಶಿಡ್ಲಘಟ್ಟದ ಎಸ್.ವಿ.ಅಯ್ಯರ್ ಅವರು ವಾಯುಸೇನೆಯಲ್ಲಿದ್ದಾಗ ಪಡೆದ ಪದಕಗಳು.

  ಸುಮಾರು ೭೧ ರ ವಯೋಮಾನದ ಶಿಡ್ಲಘಟ್ಟದ ಎಸ್.ವಿ.ಅಯ್ಯರ್ ೧೯೬೩ ರಿಂದ ೧೯೭೮ ರವರೆಗೆ ಹದಿನೈದು ವರ್ಷಗಳ ಕಾಲ ದೇಶದ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದವರು. ಪಾಕಿಸ್ತಾನ ಮತ್ತು ಬಾಂಗ್ಲಾ ವಿಮೋಚನಾ ಯುದ್ಧಗಳಲ್ಲಿ ಭಾಗವಹಿಸಿದವರು. ಪ್ರತಿಷ್ಠಿತ ಜನರಲ್ ಸರ್ವಿಸ್ ಇಂಡಿಯಾ ಪದಕ, ಲಾಂಗ್ ಸರ್ವೀಸ್ ಪದಕ, ಸೈನ್ಯ ಸೇವಾ ಪದಕ, ೧೯೬೫ರ ಪಾಕಿಸ್ತಾನ ’ವಾರ್’ ಪದಕ, ಸಂಗ್ರಾಂ ಪದಕ, ಪಶ್ಚಿಮಿಸ್ಟಾರ್ ಪದಕ, ಬಾಂಗ್ಲಾ ಲಿಬರೇಷನ್ ವಾರ್ ಪದಕ, ಸ್ಕೌಟ್ಸ್ ಮತ್ತು ಗೈಡ್ಸ್ ಪದಕ ಸೇರಿದಂತೆ ಹಲವಾರು ಪದಕಗಳು ಅವರ ಸಾಧನೆಯ ದ್ಯೋತಕಗಳಾಗಿವೆ.
 ಪಾಲಮ್ ಏರ್‌ಬೇಸ್‌ನ ಏರ್ ಟ್ರಾಫಿಕ್ ಕಂಟ್ರೋಲ್‌ನಲ್ಲಿ ಕೆಲಸವನ್ನು ಆರಂಭಿಸಿದ ಅವರು ಬರ್ನಾಲ, ಜಮ್ಮು, ಶಿಲಾಂಗ್, ಗುಜರಾತ್‌ನ ಜಾಮ್‌ನಗರ್, ಅಸ್ಸಾಮ್‌ನ ಡಿಂಜಾನ್, ಜೋರಾತ್, ತೇಜ್‌ಪುರ್ ಮುಂತಾದ ಕಡೆ ಕಾರ್ಯನಿರ್ವಹಿಸಿದರು. ತರಬೇತಿಗೆಂದು ಪ್ರಪಂಚದ ಅತ್ಯಂತ ಶೀತಲ ಪ್ರದೇಶ ರಶಿಯಾದ ಸೈಬೀರಿಯಾ, ಯೂರೋಪ್‌ನ ಫ್ರಾನ್ಸ್, ಜರ್ಮನಿ ಹಾಗೂ ಇಂಗ್ಲೆಂಡ್‌ಗೆ ಕೂಡ ಹೋಗಿ ಬಂದಿದ್ದಾರೆ.
 "ಬರ್ನಾಲಾದಲ್ಲಿ ನಾವೆಲ್ಲರೂ ಭೂಮಿಯೊಳಗಿನ ಬಂಕರ್ ಒಳಗಡೆ ಅಡಗಿ ಕುಳಿತಿದ್ದೆವು. ಅದು ಹೇಗೋ ಪಾಕಿಸ್ತಾನದವರಿಗೆ ಗೊತ್ತಾಗಿಬಿಟ್ಟಿತು.  ಪಾಕಿಸ್ತಾನದವರು ೧೫  ಫೈಟರ್ಸ್ ವೈಮಾನಿಕ ಧಾಳಿ ನಡೆಸಿದವು. ಅವರ ಬಾಂಬ್ ಧಾಳಿಯಿಂದ ನಾನು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದೆ. ಆದರೆ ನಮ್ಮ ರೇಡಾರ್ ಸ್ಟೇಷನ್‌ಗೆ ಹಾನಿಯಾಯಿತು. ಯುದ್ಧ ಭೂಮಿಯಲ್ಲಿ ವಿಮಾನ ಹತ್ತಿದ ಪೈಲೆಟ್‌ಗೆ ಪುನಃ ನೆಲಕ್ಕೆ ಹಿಂತಿರುಗುವ ನಂಬಿಕೆ ಇರುವುದಿಲ್ಲ. ಆದರೆ ಪ್ರಾಣಾಪಾಯದ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ ಪೈಲಟ್‌ಗಳು ವಿಮಾವೇರಿಕೊಂಡು ಯುದ್ಧಭೂಮಿಗೆ ಹೊರಟುಬಿಡುತ್ತಿದ್ದರು’ ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು.

ಆಗ್ರಾದಲ್ಲಿ ಪೆರೇಡ್‌ಗೆಂದು ಸಿದ್ಧರಾಗಿದ್ದ ಎಸ್.ವಿ.ಅಯ್ಯರ್.

 ’ಯುದ್ಧಭೂಮಿಯತ್ತ ಯಾವ ವಿಮಾನ ಹಾರಬೇಕೆಂದು ನಿರ್ಧರಿಸುವ ನಿಯಂತ್ರಣಾ ಕಾರ್ಯಪಡೆಯಲ್ಲಿ ನಾನಿದ್ದೆ. ಯುದ್ಧಕ್ಕೆ ಹೊರಟ ಪೈಲೆಟ್‌ಗಳನ್ನು ಬೀಳ್ಕೊಡಲು ಬರುತ್ತಿದ್ದ ಅವರ ಕುಟುಂಬದವರ ಕಂಗಳಲ್ಲಿ ನೀರು ತುಂಬಿರುತ್ತಿತ್ತು. ಮುಖದಲ್ಲಿ ಆತಂಕದ ಭಾವ ಇರುತ್ತಿತ್ತು. ಸತ್ತಂತೆ ಬದುಕುವುದಕ್ಕಿಂತ ದೇಶಕ್ಕಾಗಿ ಹೋರಾಡುತ್ತಾ ಸಾಯುವುದರಲ್ಲಿ ಅರ್ಥವಿದೆ. ಸಾವನ್ನು ಅಂಗೈಯಲ್ಲಿ ಇರಿಸಿಕೊಂಡು ದೇಶಕ್ಕಾಗಿ ಹೋರಾಡುವವರು ನಾವು ಎಂದು ಮುಗುಳ್ನಕ್ಕು ಪೈಲಟ್‌ಗಳು ವಿಮಾನವನ್ನೇರುತ್ತಿದ್ದರು. ಆಪ್ತರ ಕ್ಷೇಮಕ್ಕಾಗಿ ಕುಟುಂಬದವರು ನಿಂತಲ್ಲೇ ಪ್ರಾರ್ಥಿಸುತ್ತಿದ್ದರು’ ಎಂದು ಅವರು ಹೇಳಿದರು.
’ನನ್ನ ಮೊದಲು ಮಗಳು ಬರ್ನಾಲದಲ್ಲಿ ಜನಿಸಿದರೆ, ಎರಡನೆಯವಳು ಜಮ್ಮುವಿನಲ್ಲಿ ಮತ್ತು ಮೂರನೆಯವಳು ಮೇಘಾಲಯದ ಶಿಲ್ಲಾಂಗ್‌ನಲ್ಲಿ ಜನಿಸಿದಳು. ೧೯೭೮ರಲ್ಲಿ ಶಿಡ್ಲಘಟ್ಟಕ್ಕೆ ಬಂದ ಮೇಲೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡೆ. ಆನೂರಿನಲ್ಲಿ ಯುವ ಸಮ್ಮೇಳನ ಆಯೋಜಿಸಿದೆ. ಕನ್ನಡಪರ ಸಂಘಟನೆಗಳ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದಲ್ಲದೆ, ಪತ್ರಕರ್ತನಾಗಿಯೂ ಕಾರ್ಯನಿರ್ವಹಿಸಿದೆ. ಪಟ್ಟಣಕ್ಕಾಗಿ ಕೋರ್ಟ್, ಕಾಲೇಜು ಮುಂತಾದ ಅಗತ್ಯಗಳಿಗಾಗಿ ಮುಖಂಡರ ಜೊತೆಗೆ ಓಡಾಡಿದೆ. ಈಚೆಗೆ ಶಿಕ್ಷಣ ಸಂಸ್ಥೆಯವರೊಬ್ಬರು ಕರೆದಾಗ, ನನ್ನ ಯುದ್ಧ ದಿನಗಳ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡೆ. ದೇಶದ ಸೇನೆಯಲ್ಲಿ ದುಡಿಯುವುದು ಶ್ರೇಷ್ಠವಾದದ್ದು. ನೀವೂ ಸೇರಿ ಎಂದು ಅವರಿಗೆ ಮಾರ್ಗದರ್ಶನ ಮಾಡಿದೆ’ ಎಂದು ಅವರು ನೆನಪುಗಳ ಸುರುಳಿ ಬಿಚ್ಚಿಡುತ್ತಾ ಮುಂದುವರಿದರು........

Monday, August 19, 2013

ಪತ್ರಿಕೆ, ಪುಸ್ತಕದಲ್ಲೂ ಬೆಳೆದಿತ್ತು ರೇಷ್ಮೆ!

 ಆನೂರು ಎ.ಎಂ.ಮುನೇಗೌಡರು.

 ರೇಷ್ಮೆ ಉದ್ಯಮದಲ್ಲಿ ಸಣ್ಣಪುಟ್ಟ ಬದಲಾವಣೆ ಆದರೂ ನೆನಪಾಗುವುದೇ ಶಿಡ್ಲಘಟ್ಟ. ರೇಷ್ಮೆ ಕೃಷಿಕರ ಹಾಡು-ಪಾಡು, ನೂತನ ತಂತ್ರಜ್ಞಾನದ ಪರಿಚಯ, ಬೆಲೆ ಏರಿಕೆ ಮತ್ತು ಕುಸಿತ, ರಫ್ತು ಮತ್ತು ಆಮದು ಮುಂತಾದವುಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಅನಿಸಿಕೆ, ಅಭಿಪ್ರಾಯ ನೀಡತೊಡಗುತ್ತಾರೆ.
  ಆಸಕ್ತಿಮಯ ಸಂಗತಿಯೆಂದರೆ, ಈ ರೀತಿಯ ಚರ್ಚೆ ಸಂವಾದಗಳು ಇತ್ತೀಚಿನದಲ್ಲ. ಈ ಎಲ್ಲದಕ್ಕೂ ಸುಮಾರು ೫೦ ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ.  ಅದು ೬೦ ರ ದಶಕದ ಸಮಯ. ವೈಜ್ಞಾನಿಕ ರೇಷ್ಮೆ ಬೇಸಾಯ ಆಗ ತಾನೆ ಅಖಂಡ ಕೋಲಾರ ಜಿಲ್ಲೆಗೆ ಪರಿಚಯವಾಗಿತ್ತು. ರೈತರು ಹಿಂಜರಿಯುತ್ತಲೇ ವಾಣಿಜ್ಯ ಬೆಳೆಯಾಗಿ ರೇಷ್ಮೆಯನ್ನು  ಕಂಡುಕೊಳ್ಳುತ್ತಿದ್ದರು. 
ರೇಷ್ಮೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತರಲ್ಲಿ ಆತ್ಮವಿಶ್ವಾಸ ತುಂಬಲೆಂದೇ  ಶಿಡ್ಲಘಟ್ಟ ತಾಲ್ಲೂಕಿನ ವ್ಯಕ್ತಿಯೊಬ್ಬರು ಪುಸ್ತಕಗಳನ್ನು ಹೊರತಂದರು.
 ರೇಷ್ಮೆಯಿಂದ ಯಾವ ರೀತಿ ಆರ್ಥಿಕ ಸಬಲತೆ ಕಾಣಬಹುದು ಎಂಬುದು ಸೇರಿದಂತೆ ಯಾವುದೆಲ್ಲ ಪರಿಹಾರೋಪಾಯ ಕಂಡುಕೊಳ್ಳಬಹುದು ಎಂಬುದನ್ನು ಅವರು ಪುಸ್ತಕಗಳ ಮೂಲಕ ತಿಳಿಪಡಿಸುತ್ತಿದ್ದರು.  ಹಾಗೆಂದು ಅವರೇನೂ ಸಾಹಿತಿಯಾಗಿರಲಿಲ್ಲ. ಆದರೆ ಸಾಹಿತ್ಯದ ಕುರಿತು ತುಂಬ ಆಸಕ್ತಿ ಇತ್ತು. ರೇಷ್ಮೆ ಕೃಷಿ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದ್ದರು.
 ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ಎ.ಎಂ.ಮುನೇಗೌಡ. ಆನೂರಿನ ಪಟೇಲ ಮುನಿಶಾಮೇಗೌಡರ ಪುತ್ರ.ಆಗಿನ ಕಾಲದಲ್ಲೇ ಕೃಷಿಗೆ ಸಂಬಂಧಿಸಿದಂತೆ ಎಲ್.ಎಜಿ ಎಂಬ ಡಿಪ್ಲೊಮ ಗಳಿಸಿದ್ದರು.  ಸರ್ಕಾರಿ ಉದ್ಯೋಗ ತಿರಸ್ಕರಿಸಿದ್ದ ಅವರು ತಮ್ಮ ಕುಲ ವೃತ್ತಿಯಾದ ವ್ಯವಸಾಯವನ್ನೇ ನಂಬಿ ಗ್ರಾಮಕ್ಕೆ ಹಿಂದಿರುಗಿದ್ದರು. ದೊಡ್ಡ ಕುಟುಂಬದ ಹಿರಿಯರಾಗಿದ್ದ ಅವರು ಕುಟುಂಬದ ಜವಾಬ್ದಾರಿಯೊಂದಿಗೆ ಸಾಹಿತ್ಯಾಭಿಮಾನಿಯಾಗಿದ್ದರು. ಆವರು ಜಿಲ್ಲೆಯ ಹಿರಿಯ ಸಾಹಿತಿಗಳಲ್ಲೊಬ್ಬರಾದ ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹಶಾಸ್ತ್ರಿಯವರ ಒಡನಾಟವನ್ನು ಹೊಂದಿದ್ದು, ಶಾಸ್ತ್ರಿಗಳ ಸಾಹಿತ್ಯ ಸೇವೆಗೆ ಆರ್ಥಿಕ ನೆರವನ್ನು ನೀಡುತ್ತಿದ್ದರು.


 ಆನೂರು ಎ.ಎಂ.ಮುನೇಗೌಡರ ರೈತರ ಕುರಿತಾದ ಪುಸ್ತಕ ’ಗ್ರಾಮೋದ್ಧಾರವಾಗುವುದೆಂದು?’.

ರೇಷ್ಮೆ ವ್ಯವಸಾಯದ ಬಗ್ಗೆ ರೈತರಿಗೆ ಸರ್ಕಾರ ಅರಿವು ಮೂಡಿಸುವ ಮುನ್ನವೇ ಮುನೇಗೌಡ ಅವರು "ರೇಷ್ಮೆ ಕೈಗಾರಿಕೆ" ಎಂಬ ದ್ವೈಮಾಸಿಕ ಪತ್ರಿಕೆ ತರುವ ಸಾಹಸಕ್ಕೆ ಕೈಹಾಕಿದರು. ಅವರಿಗೆ ಪತ್ರಿಕೋದ್ಯಮ ಮತ್ತು ಮುದ್ರಣದ ಬಗ್ಗೆ ಸಾಮಾನ್ಯ ಪರಿಚಯವೂ ಇರಲಿಲ್ಲ. ಆದರೆ ರೇಷ್ಮೆ ಬೇಸಾಯದ ಬಗ್ಗೆ ಅಪಾರವಾದ ತಿಳುವಳಿಕೆಯನ್ನು ಹೊಂದಿದ್ದರು. ಬೇರೆ ದೇಶಗಳಲ್ಲಿ ರೇಷ್ಮೆ ಕೃಷಿ ಹೇಗೆ ನಡೆದಿದೆ, ವ್ಯಾಪಿಸಿದೆ. ಅದರ ಸಾಧ್ಯಾಸಾಧ್ಯತೆಗಳೇನು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದರು. ತಾವು ತಿಳಿದುಕೊಂಡ ವಿಷಯಗಳನ್ನು ರೈತರಿಗೆ ತಿಳಿಸಬೇಕೆಂಬ ಕಾಳಜಿ, ಕಳಕಳಿಯಿತ್ತು.   ಬೆಂಗಳೂರಿನ ಕಲಾಸಿಪಾಳ್ಯಂನ ಹಾಸನದ ವೆಂಕಟೇಶಯ್ಯ ಅವರ ಮುದ್ರಣಾಲಯದಲ್ಲಿ ಇವರ ಪತ್ರಿಕೆ ರೂಪುಗೊಳ್ಳುತ್ತಿತ್ತು. ಪತ್ರಿಕೆಯ ಕರಡು ತಿದ್ದುವುದು, ಭಾಷೆಯನ್ನು ಪರಿಷ್ಕರಿಸುವುದು ಮುಂತಾದ ಕೆಲಸಗಳನ್ನು ಶಾಸ್ತ್ರಿಗಳು ಮಾಡುತ್ತಿದ್ದರು. ೧೬ ಪುಟಗಳ ಈ ಮಾಸಪತ್ರಿಕೆಯ ಎಲ್ಲಾ ಲೇಖನಗಳನ್ನೂ ಗೌಡರೇ ಬರೆಯುತ್ತಿದ್ದರು. ಕೆಲ ಲೇಖನಗಳು ಇಂಗ್ಲಿಷ್ ನಲ್ಲಿದ್ದರೆ, ಕೆಲ ಲೇಖನಗಳನ್ನು ಸಚಿತ್ರವಾಗಿಯೂ ಪ್ರಕಟಿಸುತ್ತಿದ್ದರು. ಅದರ ಬ್ಲಾಕುಗಳ ತಯಾರಿಕೆಗಾಗಿ ಬಹಳಷ್ಟು ಹಣ ವ್ಯಯವಾಗುತ್ತಿತ್ತು. ಈ ಪತ್ರಿಕೆಗೆ ಚಂದಾದಾರರಿದ್ದರೋ ಇಲ್ಲವೋ ಎಂಬುದನ್ನು ಪರಿಗಣಿಸದೇ, ಯಾವುದೇ ಆರ್ಥಿಕ ಅಪೇಕ್ಷೆಯಿಲ್ಲದೆ ಕೆಲ ಕಾಲ ಪತ್ರಿಕೆ ಹೊರತಂದರು. ಆರ್ಥಿಕ ಮುಗ್ಗಟ್ಟಿನಿಂದ, ಜನರ ಮತ್ತು ಸರ್ಕಾರದ ಪ್ರೋತ್ಸಾಹದ ಕೊರತೆಯಿಂದಾಗಿ ಪತ್ರಿಕೆ ಕೊನೆಯುಸಿರೆಳೆಯಿತು. 
  ಆನೂರು ಎ.ಎಂ.ಮುನೇಗೌಡರು ಹೊರತರುತ್ತಿದ್ದ ದ್ವೈಮಾಸಿಕ ಪತ್ರಿಕೆ ’ರೇಷ್ಮೆ ಕೈಗಾರಿಕೆ’.

  ರೈತರ ಬದುಕಿನ ಬಗ್ಗೆ ಕಳಕಳಿ ಹೊಂದಿದ್ದ ಮುನೇಗೌಡರು ’ಗ್ರಾಮೋದ್ಧಾರವಾಗುವುದೆಂದು?’ ಸೇರಿದಂತೆ ಕೆಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು. ೧೯೪೪-೪೫ ನೆಯ ವರ್ಷದಲ್ಲಿ ಗ್ರಾಮಾಭ್ಯುದಯ ಮತ್ತು ಒಕ್ಕಲಿಗರ ಪತ್ರಿಕೆಗಳಲ್ಲಿ ರೈತರ ಬಗ್ಗೆ ಇವರು ಬರೆದ ಲೇಖನಗಳನ್ನು ಒಟ್ಟುಗೂಡಿಸಿ ’ಗ್ರಾಮೋದ್ಧಾರವಾಗುವುದೆಂದು?’ ಪುಸ್ತಕ ಪ್ರಕಟಿಸಿದ್ದರು.  ಈ ಪುಸ್ತಕದ ಬಿನ್ನಹದಲ್ಲಿ, "ಗ್ರಾಮವಾಸಿಗಳು ಸಂಘಗಳನ್ನು ಏರ್ಪಡಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಮ್ಮ ಕಾಲಿನ ಮೇಲೆ ತಾವು ನಿಲ್ಲುವಂತಾಗಬೇಕು. ಪ್ರತಿಯೊಂದಕ್ಕೂ ಇತರರನ್ನೇ ನಂಬಿಕೊಂಡಿರುವುದು ಹಿಂದುಳಿದವರ ಲಕ್ಷಣ. ಇದು ತೊಲಗಿದಂತೆಲ್ಲಾ ರೈತನು ಅಭಿವೃದ್ಧಿ ಹೊಂದುತ್ತಿದ್ದಾರೆಂದು ತಿಳಿಯಬೇಕು. ಹೀಗಾಗಬೇಕಾದರೆ ರೈತನ ಹಿತಚಿಂತಕರೆಲ್ಲರೂ ರೈತನ ಅವಶ್ಯಕತೆಗಳ ನಿಜ ಸ್ವರೂಪವನ್ನು ತಿಳಿದು ನಡೆಯಬೇಕು. ಓದುಗರು ಸಾಹಿತ್ಯದೋಷಗಳನ್ನು ಮನ್ನಿಸಿ ರೈತನೊಬ್ಬನಿಂದ ಬರೆಯಲ್ಪಟ್ಟಿರುವ ಈ ಪುಸ್ತಕದಲ್ಲಿರುವ ವಿಷಯಗಳನ್ನು ಗಮನಿಸಬೇಕೆಂದು ವಿಜ್ಞಾಪನೆ’ ಎಂದು ಬರೆಯುತ್ತಾರೆ ಮುನೇಗೌಡರು.
 ಮುನೇಗೌಡರು ರೇಷ್ಮೆ ಬೇಸಾಯದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕ್ರಿಯಾಶೀಲರಾಗಿದ್ದವರು. ರೇಷ್ಮೆ ಬೇಸಾಯ ಸುಣ್ಣಕಟ್ಟು ರೋಗ ಮತ್ತು ಹೂಜಿ ನೊಣಗಳ ಹಾವಳಿಯಿಂದಾಗಿ ಸೊರಗಿದಾಗ ಅದರಿಂದ ಪಾರಾಗುವ ಬಗ್ಗೆ ತಮ್ಮ ಆಲೋಚನೆಗಳನ್ನು ದಾಖಲಿಸುತ್ತಿದ್ದರು. ಆಗ ಸರ್ಕಾರದ ರೇಷ್ಮೆ ಇಲಾಖೆ ಮುನೇಗೌಡರ ಸೂಚನೆಗಳನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಮೈಸೂರಿನ ರೇಷ್ಮೆ, ಜಪಾನಿನ ರೇಷ್ಮೆ, ರೇಷ್ಮೆ ಕುರಿತ ಕವನಗಳು, ರೇಷ್ಮೆ ಇಲಾಖೆ, ರೇಷ್ಮೆ ಕೈಗಾರಿಕೆಯ ವಿವಿಧ ಕಸುಬುಗಳ ಹಾಗೂ ಸಮಸ್ಯೆಗಳ ಕುರಿತಂತೆ ವೈವಿಧ್ಯಮಯ ಲೇಖನಗಳನ್ನು ಇವರ ’ರೇಷ್ಮೆ ಕೈಗಾರಿಕೆ’ ರೇಷ್ಮೆ ಕೈಗಾರಿಕೆಯ ಪ್ರಗತಿಗೆ ಮೀಸಲಾದ ಏಕೈಕ ದ್ವೈಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಆನೂರು ಎ.ಎಂ.ಮುನೇಗೌಡರು ಹೊರತರುತ್ತಿದ್ದ ದ್ವೈಮಾಸಿಕ ಪತ್ರಿಕೆ ’ರೇಷ್ಮೆ ಕೈಗಾರಿಕೆ’.

 "೧೯೭೮ ರಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾಗಿದ್ದ ನಾನು ಮತ್ತು ಮುನೇಗೌಡರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಸಂತೇಕಲ್ಲಹಳ್ಳಿ ಗ್ರಾಮದಲ್ಲಿ "ರೇಷ್ಮೆ ವ್ಯವಸಾಯದ ಆಗುಹೋಗುಗಳ" ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ರೇಷ್ಮೆ ಬೆಳೆಯುತ್ತಿದ್ದ ರೈತರಿಗಾಗಿ ನಡೆಸಿದ್ದೆವು. ಆಗ ಸುಣ್ಣಕಟ್ಟು ರೋಗ ಬಂದರೆ ಗೂಡುಗಳಿರುವ ದಡಿಗಳಿಗೆ ಮೆಣಸಿನಕಾಯಿ ಕಟ್ಟುತ್ತಿದ್ದೆವು. ಯಾವಾಗ ಬೈವೋಲ್ಟೀನ್ ಗೂಡು ಬೆಳೆಯಲು ಪ್ರಾರಂಭಿಸಿದೆವೊ ಈ ರೋಗ ನಮ್ಮನ್ನು ತರಿದುಹಾಕಿತು. ಹೂಜಿ ನೊಣ ಬಂದದ್ದು ಬಾಂಗ್ಲಾದೇಶದಿಂದ. ಇದರಿಂದ ಆಗುತ್ತಿದ್ದ ತೊಂದರೆಗಳು ಮತ್ತು ರೋಗಗಳನ್ನು ತಡೆಯಲು ಸರ್ಕಾರಿ ಅಧಿಕಾರಿಗಳು ಸೂಚಿಸಿದ್ದ ಫಾರ್ಮಲಿನ್ ದ್ರಾವಣದಿಂದ ರೈತರಿಗೆ ಆಗುತ್ತಿದ್ದ ಆರೋಗ್ಯ ತೊಂದರೆಗಳು, ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ಗ್ರೇನೇಜ್‌ನಿಂದ ಪಡೆಯುವುದರ ಬಗ್ಗೆ ಆ ದಿನ ಚರ್ಚಿಸಿದೆವು. ಈಗಿನಂತೆ ಸರ್ಕಾರಿ ಗೂಡಿನ ಮಾರುಕಟ್ಟೆ ಆಗ ಇರಲಿಲ್ಲ. ರೀಲರುಗಳು ಸಾಲ, ಲಾಭದ ಗೂಡು ಎಂದು ರೈತರ ಶೋಷಣೆ ನಡೆಸುತ್ತಿದ್ದ ಕಾಲವದು. ಅದರ ವಿರುದ್ಧವೂ ದನಿ ಎತ್ತಿ ಮುನೇಗೌಡರು ಮಾತನಾಡಿದರು. ನಾನು ನಮ್ಮ ಹಳ್ಳಿಯಿಂದ ಎತ್ತಿನ ಗಾಡಿಯಲ್ಲಿ ರೇಷ್ಮೆಗೂಡನ್ನು ಶಿಡ್ಲಘಟ್ಟಕ್ಕೆ ಸಾಗಿಸುತ್ತಿದ್ದೆ. ತಮಾಷೆಯೆಂದರೆ, ರೀಲರುಗಳ ವಿರುದ್ಧ ಮಾತನಾಡಿದೆನೆಂದು ಕೆಲಕಾಲ ನನ್ನ ಗೂಡನ್ನು ಯಾರೂ ಕೊಳ್ಳುತ್ತಿರಲಿಲ್ಲ. ಬೇರೆಯವರನ್ನು ಕಳಿಸಿ ಮಾರಿಸುತ್ತಿದ್ದೆ" ಎಂದು ಮುನೇಗೌಡರೊಂದಿಗಿನ ದಿನಗಳನ್ನು ಡಾ.ಶೇಷಶಾಸ್ತ್ರಿ ನೆನೆಯುತ್ತಾರೆ.

Tuesday, August 13, 2013

ಶಿಡ್ಲಘಟ್ಟದ ವಿರೂಪಾಕ್ಷಪ್ಪ ಹೈಸ್ಕೂಲಿನ ದಿನಗಳು...


 ಶಿಡ್ಲಘಟ್ಟದ ಪ್ರಥಮ ಪುರಸಭಾ ಅಧ್ಯಕ್ಷ ಬಿ.ವಿರೂಪಾಕ್ಷಪ್ಪ ಅವರು ಪಟ್ಟಣದಲ್ಲಿ ಹೈಸ್ಕೂಲು ಕಟ್ಟಡದ ಅಡಿಗಲ್ಲು ಸ್ಥಾಪನಾ ಮಹೋತ್ಸವವನ್ನು ನೆರವೇರಿಸಲು ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಸಮ್ಮತಿಸಿದ್ದಕ್ಕೆ ವಂದನೆಯ ರೂಪದಲ್ಲಿ ಅರ್ಪಿಸಿದ್ದ ಬಿನ್ನವತ್ತಳೆ.

 ಮೈಸೂರು ಸಂಸ್ಥಾನದ ಶ್ರೀಮನ್‌ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್, ಜಿ.ಸಿ.ಬಿ., ಜಿ.ಸಿ.ಎಸ್.ಐ., ಅವರ ದಿವ್ಯಸನ್ನಿಧಾನಂಗಳಲ್ಲಿ ಶಿಡ್ಲಘಟ್ಟ ಬೇವಿನಮರದ ಬಸಪ್ಪನವರ ಮಗ ವಿರೂಪಾಕ್ಷಪ್ಪ ಸಮರ್ಪಿಸಿದ ... ಎಂದು ಆರಂಭವಾಗುವ ರೇಷ್ಮೆಯ ಬಟ್ಟೆಯ ಮೇಲೆ ಮುದ್ರಿಸಲಾದ ಬಿನ್ನವತ್ತಳೆ ಶಿಡ್ಲಘಟ್ಟದ ಇತಿಹಾಸವನ್ನು ಮೈಸೂರು ಸಂಸ್ಥಾನದ ಆಡಳಿತಾವಧಿಗೆ ಕೊಂಡೊಯ್ಯುತ್ತದೆ. ಜೊತೆಯಲ್ಲಿ ಶಿಡ್ಲಘಟ್ಟದಲ್ಲಿ ಮೊದಲ ಪ್ರೌಢಶಾಲೆ ಸ್ಥಾಪನೆಯಾದ ಬಗ್ಗೆ ವಿವರಗಳೂ ಸಿಗುತ್ತದೆ.
 ಶಿಡ್ಲಘಟ್ಟ ತಾಲ್ಲೂಕಿನ ಪ್ರಪ್ರಥಮ ಪ್ರೌಢಶಾಲೆ ಕಟ್ಟಡ ಅಡಿಗಲ್ಲು ಸ್ಥಾಪನಾ ಮಹೋತ್ಸವವನ್ನು ನೆರವೇರಿಸಲು ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಸಮ್ಮತಿಸಿದ್ದಕ್ಕೆ ಶಿಡ್ಲಘಟ್ಟ ಪುರಸಭೆಯ ಪ್ರಥಮ ಅಧ್ಯಕ್ಷ ಬಿ.ವಿರೂಪಾಕ್ಷಪ್ಪ ಅವರು ವಂದನೆಯ ರೂಪದಲ್ಲಿ ಅರ್ಪಿಸಿದ್ದ ಬಿನ್ನವತ್ತಳೆಯಿದು.


 ಶಿಡ್ಲಘಟ್ಟದ ಪ್ರಥಮ ಪುರಸಭಾ ಅಧ್ಯಕ್ಷ ಬಿ.ವಿರೂಪಾಕ್ಷಪ್ಪ.

 ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಬಹುತೇಕ ಮಂದಿ ಶಿಕ್ಷಣಕ್ಕೆ ಚಿಕ್ಕಬಳ್ಳಾಪುರಕ್ಕೆ ಹೋಗಬೇಕಾಗಿತ್ತು. ಒಪ್ಪೊತ್ತಿನ ಊಟ ಮಾಡಿಕೊಂಡು ರೈಲನ್ನೇರಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ರಾತ್ರಿ ನಂತರವಷ್ಟೇ ಹಿಂತಿರುಗುತ್ತಿದ್ದರು.  ಒಮ್ಮೆ ರೈಲಿಗೆ ಹತ್ತುವ ವೇಳೆ ವಿದ್ಯಾರ್ಥಿಯೊಬ್ಬ ರೈಲಿನಡಿ ಸಿಲ್ಲುಕಿ ಮೃತಪಟ್ಟಾಗ, "ನಮ್ಮೂರಿನಲ್ಲಿ ಪ್ರೌಢಶಾಲೆ ಇದ್ದಿದ್ದರೆ ಈ ಅನಾಹುತವೇ ಸಂಭವಿಸುತ್ತಿರಲಿಲ್ಲ್" ಎಂಬ ಮಾತು ಹಲವರಿಂದ ಕೇಳಿ ಬಂತು. ಹೇಗಾದರೂ ಮಾಡಿ ಶಿಡ್ಲಘಟ್ಟದಲ್ಲಿ  ಪ್ರೌಢಶಾಲೆಯೊಂದನ್ನು ಸ್ಥಾಪಿಸಲೇಬೇಕು ಎಂದು ಪಣತೊಟ್ಟ ಬ್ರಿಟಿಷ್ ಆಡಳಿತದ ಪುರಸಭೆಯ ಉಪಾಧ್ಯಕ್ಷರಾಗಿದ್ದ ಬಿ.ವಿರೂಪಾಕ್ಷಪ್ಪ ಅವರು ಪ್ರೌಢಶಾಲೆ ಕಟ್ಟಡಕ್ಕಾಗಿ ೩೦ ಸಾವಿರ ರೂಪಾಯಿ ದಾನ ನೀಡಿದರು. ಕೋಲಾರ ಜಿಲ್ಲಾ ಬೋರ್ಡ್ ಕೂಡ ೧೦ ಸಾವಿರ ರೂಪಾಯಿ ನೀಡಿತ್ತು.
 ದೇಶ ಸ್ವಾತಂತ್ರ್ಯಗೊಳ್ಳಲು ಇನ್ನೂ ಎರಡು ತಿಂಗಳು ಬಾಕಿಯಿರುವಾಗಲೇ ಶಿಡ್ಲಘಟ್ಟದ ಮೊದಲ ಪ್ರೌಢಶಾಲೆ ಆರಂಭಗೊಂಡಿತು. ೧೯೪೭ ರ  ಜೂನ್ ೧೧ ರಂದು ಆರಂಭಗೊಂಡ ಪ್ರೌಢಶಾಲೆ ನಡೆಸಲು ಬಿ.ವಿರೂಪಾಕ್ಷಪ್ಪ ಅವರು ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ಅದಕ್ಕೆ ಸರ್ಕಾರ "ವಿರೂಪಾಕ್ಷಪ್ಪ ಹೈಸ್ಕೂಲ್" ಎಂದೇ ಹೆಸರಿಸಿತ್ತು. ಸುಮಾರು ನಾಲ್ಕು ವರ್ಷಗಳ ಕಾಲ ಅವರ ಮನೆಯಲ್ಲೇ ಪ್ರೌಢಶಾಲೆ ನಡೆಯಿತು. ಬಿನ್ನವತ್ತಳೆಯಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ ೧೯೫೧ ರಲ್ಲಿ ಅವರ ಮನೆಯಲ್ಲಿ ನಡೆಯುತ್ತಿದ್ದ ಪ್ರೌಢಶಾಲೆಯಲ್ಲಿ ೧೬೯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.
  ಕೆಲ ದಾನಿಗಳ ಸಹಾಯ ಪಡೆದು ೧೩ ಎಕರೆ ಒಂದು ಗುಂಟೆ ಜಮೀನನ್ನು ಖರೀದಿಸಿ ಅದನನ್ನು ದಾನ ಮಾಡಿದ ಬಿ.ವಿರೂಪಾಕ್ಷಪ್ಪ ಅವರು ಮೈಸೂರು ಮಹಾರಾಜರಿಂದ ೧೯೫೧ ರ ಆಗಸ್ಟ್ ೧೩ ರಂದು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿ.ವಿರೂಪಾಕ್ಷಪ್ಪ ಅವರು ತಮ್ಮ ಪತ್ನಿ ಸೂಗಮ್ಮ ಹೆಸರಿನಲ್ಲಿ ಪಟ್ಟಣದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಕ್ಕೆ ೧೦ ಸಾವಿರ ರೂಪಾಯಿ ನೀಡಿದ್ದರು.

 ಬಿ.ವಿರೂಪಾಕ್ಷಪ್ಪ ಅವರ ಸಮಾಜ ಸೇವೆಗಾಗಿ ಮೈಸೂರು ಸಂಸ್ಥಾನದ ವತಿಯಿಂದ ಜಯಚಾಮರಾಜ ಒಡೆಯರ್ ಅವರು ನೀಡಿದ್ದ ಗಂಡುಬೇರುಂಡ ಲಾಂಛನವಿರುವ ಬಂಗಾರದ ಪದಕ.

ಬಿ.ವಿರೂಪಾಕ್ಷಪ್ಪ ಅವರ ಸಮಾಜ ಸೇವೆಗಾಗಿ ಮೈಸೂರು ಸಂಸ್ಥಾನದ ವತಿಯಿಂದ ಜಯಚಾಮರಾಜ ಒಡೆಯರ್ ಅವರು ಗಂಡುಬೇರುಂಡ ಲಾಂಛನವಿರುವ ನಾಲ್ಕೂವರೆ ತೊಲದ ಬಂಗಾರದ ಪದಕ ಮತ್ತು ಒಂದೂವರೆ ಕೆಜಿ ತೂಕದ ಮೈಸೂರು ಸಂಸ್ಥಾನದ ಲಾಂಛನವಿರುವ ಬೆಳ್ಳಿತಟ್ಟೆಯನ್ನು ನೀಡಿ ಗೌರವಿಸಿದ್ದರು.
ಪ್ರೌಢಶಾಲೆ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಯಾಗುವ ವೇಳೆಗೆ ಮೈಸೂರು ಸಂಸ್ಥಾನ ತನ್ನ ಅಧಿಕಾರವನ್ನು ಕಳೆದುಕೊಂಡಿತ್ತು. ವಿಧಾನಸಭೆ ಚುನಾವಣೆಗಳು ನಡೆದವು. ಆಗಿನ ಮುಖ್ಯಮಂತ್ರಿ ಕೆ.ಹನುಮಂತಯ್ಯ ಅವರು ೧೯೫೪ರ  ಜೂನ್ ೫ ರಂದು ಪಟ್ಟಣದ "ವಿರೂಪಾಕ್ಷಪ್ಪ ಹೈಸ್ಕೂಲ್" ಕಟ್ಟಡವನ್ನು ಉದ್ಘಾಟಿಸಿದರು.

ಮೈಸೂರು ಮಹಾರಾಜರಿಂದ ಅಡಿಗಲ್ಲು ಹಾಕಲ್ಪಟ್ಟ ತಾಲ್ಲೂಕಿನಲ್ಲಿ ಮೊದಲ ಪ್ರೌಢಶಾಲೆ ಕಟ್ಟಡದ ಶಂಕುಸ್ಥಾಪನಾ ಕಲ್ಲು.

 "ಆಗಿನ ಹಿರಿಯರ ಸಾಮಾಜಿಕ ಕಳಕಳಿಯಿಂದ ಪಟ್ಟಣದಲ್ಲಿ ಪ್ರಾರಂಭಗೊಂಡ ಏಕೈಕ ಪೌಢಶಾಲೆಯಲ್ಲಿ ಓದಿ ಹಲವಾರು ಮಂದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದೇ ಸ್ಥಳದಲ್ಲಿ ಈಗ ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ನೆಹರೂ ಕ್ರೀಡಾಂಗಣ ಮತ್ತು ಪುರಸಭೆಗೆ ಆದಾಯ ತರುವ ಅಂಗಡಿ ಮಳಿಗೆಗಳು ನಿರ್ಮಾಣಗೊಂಡಿವೆ. 
ಮೊದಲಿದ್ದ "ಶ್ರೀ ವಿರೂಪಾಕ್ಷಪ್ಪ ಹೈಸ್ಕೂಲ್" ಎಂಬ ಹೆಸರು ಪ್ರೌಢಶಾಲೆಯ ಪ್ರಾಂಶುಪಾಲರ ಕೊಠಡಿಯ ಗೋಡೆಯಲ್ಲಿ ಶಂಕುಸ್ಥಾಪನಾ ಫಲಕದಲ್ಲಿ ಮಾತ್ರ ಉಳಿದಿದೆ. ಈಗ ತಾಲ್ಲೂಕಿನಲ್ಲಿ ಹಲವಾರು ಪ್ರೌಢಶಾಲೆಗಳಿವೆ, ಕಾಲೇಜುಗಳಿವೆ, ವಾಹನ ಸೌಕರ್ಯಗಳಿವೆ. ವಿದ್ಯೆ, ಆರೋಗ್ಯ ಮತ್ತು ಆಹಾರದ ಕೊರತೆಯಿದ್ದ ಕಾಲದಲ್ಲಿ ತಾಲ್ಲೂಕಿನ ಏಳ್ಗೆಗಾಗಿ ಶ್ರಮಿಸಿದವರನ್ನು ನೆನೆಯಬೇಕು" ಎಂದು ವಿರೂಪಾಕ್ಷಪ್ಪ ಹೈಸ್ಕೂಲ್‌ನ ವಿದ್ಯಾರ್ಥಿ ಮತ್ತು ನಿವೃತ್ತ ಪ್ರಾಧ್ಯಾಪಕ ಆರ್.ಆಂಜನೇಯ ಹೇಳುತ್ತಾರೆ.


 ಮೈಸೂರು ಸಂಸ್ಥಾನದ ವತಿಯಿಂದ ಜಯಚಾಮರಾಜ ಒಡೆಯರ್ ಅವರು  ಒಂದೂವರೆ ಕೆಜಿ ತೂಕದ ಮೈಸೂರು ಸಂಸ್ಥಾನದ ಗಂಡುಬೇರುಂಡ ಲಾಂಛನವಿರುವ ಬೆಳ್ಳಿತಟ್ಟೆ.
 

 

Sunday, July 7, 2013

ಅಪರೂಪದ ಅಂಚೆ ಚೀಟಿ


ಮೇಲೂರು ಎಂ.ಆರ್.ಪ್ರಭಾಕರ್.

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಅಪರೂಪದ ಅಂಚೆ ಚೀಟಿ ಸಂಗ್ರಹಕಾರರೊಬ್ಬರು ಇದ್ದಾರೆ. ವಿಭಿನ್ನ ಮತ್ತು ವಿಶಿಷ್ಟ ಬಗೆಯ ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದರಿಂದಲೇ ಅವರು ದೇಶ ವಿದೇಶಗಳಲ್ಲಿ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
ಅವರ ಹೆಸರು ಮೇಲೂರು ಎಂ.ಆರ್.ಪ್ರಭಾಕರ್. ಅಂಚೆ ಚೀಟಿ ಸಂಗ್ರಹಣೆ ವಿಷಯ ಪ್ರಸ್ತಾಪಿಸಿದರೆ ಸಾಕು, ಅಂಚೆ ಚೀಟಿಗಳೊಂದಿಗೆ ತಾವು ಹೊಂದಿರುವ ನಂಟನ್ನೇ ಅವರು ಬಿಚ್ಚಿಡುತ್ತಾರೆ.
ಪುರಾತನ ಕಾಲದ ನೀರಾವರಿ ಪದ್ಧತಿ, ಬೇಸಾಯದ ವಿಧಾನ, ಸುಮಾರು ೧೨೦ ವರ್ಷಗಳ ಹಿಂದೆ ನೀರೆತ್ತಲು ಸ್ವಯಂ ಚಾಲಿತ ಯಂತ್ರ, ಕೃಷಿ ಪರಿಕರಗಳು ಸೇರಿದಂತೆ ಕಾಲಾನುಕ್ರಮದಲ್ಲಿ ವಿಶ್ವದ ಕೃಷಿ ಚರಿತ್ರೆ ಮತ್ತು ವರ್ತಮಾನವನ್ನು ಅಂಚೆ ಚೀಟಿಗಳ ಮೂಲಕ ವಿವರಣೆಗಳೊಂದಿಗೆ ಪ್ರದರ್ಶಿಸಿ ಸಿಂಗಾಪೂರ್, ಜಪಾನ್ ಮತ್ತು ಥಾಯ್ಲಾಂಡ್ ದೇಶಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಪ್ರಭಾಕರ್‌ ಅವರು ಅಂಚೆ ಚೀಟಿ ಸಂಗ್ರಹಣೆ ಜೊತೆ ನಾಣ್ಯ ನೋಟುಗಳ ಸಂಗ್ರಹಣೆ, ಸುಂದರ ಹಸ್ತಾಕ್ಷರ ಕಲೆ ಕ್ಯಾಲಿಗ್ರಫಿ ಮತ್ತು ಅಂಚೆ ಚೀಟಿಗಳನ್ನು ಬಳಸಿ ಕೊಲಾಜ್ ಚಿತ್ರಣಗಳ ವೈವಿದ್ಯಮಯ ಹವ್ಯಾಸವನ್ನು ಹೊಂದಿದ್ದಾರೆ.
 ೧೨೫೦ ಕ್ಕೂ ಹೆಚ್ಚು ಬಾರಿ ತಮ್ಮ ಸಂಗ್ರಹಣೆ ಪ್ರದರ್ಶಿಸಿದ್ದಾರೆ. ಎಸ್‌ಎಸ್‌ಎಲ್‌ಸಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಅವರು  ಹಿಂದೂಸ್ಥಾನ ವಿಮಾನ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಲೇ ಅಂಚೆ ಚೀಟಿಗಳ ಪ್ರದರ್ಶನಕ್ಕಾಗಿ ವಿದೇಶಗಳಿಗೂ ಹೋಗಿ ಬಂದಿದ್ದಾರೆ.
ವಿಶ್ವಶಾಂತಿ, ಸ್ನೇಹ ಸೌಹಾರ್ಧ ಮತ್ತು ಭಾವೈಕ್ಯದ ಸಂದೇಶವನ್ನೂ ಅಂಚೆ ಚೀಟಿಗಳ ಮೂಲಕ ನೀಡಿದ್ದಾರೆ. ಇದಲ್ಲದೇ ಸೈಕಲ್‌ನಲ್ಲಿ ಒಮ್ಮೆ ಭಾರತ ಪ್ರವಾಸ, ಮತ್ತೊಮ್ಮೆ ಕರ್ನಾಟಕ ಪರ್ಯಟನೆ ಮಾಡಿದ್ದಾರೆ. ಅಖಂಡ ಕೋಲಾರ ಜಿಲ್ಲೆಯನ್ನು ಪಾದಯಾತ್ರೆ ಮೂಲಕ ಸುತ್ತಿದ್ದಾರೆ.
 ಡಾ.ರಾಜ್‌ಕುಮಾರ್ ಅವರೊಂದಿಗೆ ಮೇಲೂರು ಎಂ.ಆರ್.ಪ್ರಭಾಕರ್.

 ಗಗನಯಾತ್ರಿ ರಾಕೇಶ್ ಶರ್ಮ ಅವರೊಂದಿಗೆ ಮೇಲೂರು ಎಂ.ಆರ್.ಪ್ರಭಾಕರ್.
 ಥಾಯ್‌ಲ್ಯಾಂಡ್, ಸಿಂಗಪೂರ್, ಕೊರಿಯಾ, ಕೆನಡಾ ದೇಶಗಳ ಪದಕಗಳು, ಕರ್ನಾಟಕ ಸಕಾರದ ಪರಿಸರ ಪ್ರಶಸ್ತಿ, ಬೆಳಗಾಂನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸೇರಿದಂತೆ ವಿವಿಧ ಪುರಸ್ಕಾರಗಳು ಪ್ರಭಾಕರ್ ಅವರ ಸಂಗ್ರಹಕ್ಕೆ ಸಂದಿವೆ.
 ಅವರ ಸಂಗ್ರಹದಲ್ಲಿನ ವಿವಿಧ ದೇಶಗಳ ನೂರಾರು ಅಂಚೆಚೀಟಿಗಳನ್ನು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿವರಣೆಗಳೊಂದಿಗೆ ಜೋಡಿಸಿಟ್ಟು ಕಥಾನಕವನ್ನಾಗಿಸಿದ್ದಾರೆ. 
 ವಿಮಾನಯಾನ, ಮಕ್ಕಳ ಚಿತ್ರಕಲೆ, ವಿಶ್ವಸಂಸ್ಥೆ, ಒಲಿಂಪಿಕ್ ಗೇಮ್ಸ್, ವಿಶ್ವ ಅಂಗವಿಕಲರ ಕಲ್ಯಾಣ, ಅಂಚೆ ಸಾಮಗ್ರಿ, ಪತ್ರಿಕೋದ್ಯಮ, ಅಂಚೆ ಚೀಟಿ ಅವಿಷ್ಕರಿಸಿದ್ದ ಸರ್.ರೊಲ್ಯಾಂಡ್‌ಹಿಲ್, ಸ್ಕೌಟ್ಸ್ ಮತ್ತು ಗೈಡ್ಸ್, ಮಾಹಿತಿ ತಂತ್ರಜ್ಞಾನ, ಪ್ರಕೃತಿ, ಪರಿಸರ, ನೃತ್ಯ, ಸಂಗೀತ, ಸಿನೆಮಾ, ವಿಶ್ವಶಾಂತಿದೂತ ಬಾಪು, ವಾಸ್ತುಶಿಲ್ಪ, ಆರೋಗ್ಯ, ವಜ್ರ ಮುತ್ತು ರತ್ನ, ಪರಿಸರ ಸಂರಕ್ಷಣೆ, ವ್ಯವಸಾಯ, ಹಣ್ಣು ತರಕಾರಿ, ಕ್ರಮಿ ಕೀಟಗಳು, ಪತಂಗ, ರಕ್ತದಾನ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅಂಚೆ ಚೀಟಿಗಳು ಮತ್ತು ಸುಂದರ ಅಕ್ಷರಗಳಲ್ಲಿ ವಿವರಣೆಯನ್ನು ಒದಗಿಸಿ ಮಾಹಿತಿ ಕೋಶವನ್ನಾಗಿಸಿದ್ದಾರೆ.
 ಮೈಸೂರ್ ಅರಸರು, ಟಿಪ್ಪೂ ಕಾಲದ ನಾಣ್ಯಗಳು, ಅಮೇರಿಕಾ, ರಶ್ಶಿಯಾ, ಫ್ರಾನ್ಸ್, ಇಂಗ್ಲಂಡ್, ಇಟಲಿ, ವಿಯಟ್ನಾಂ, ಜಕಸ್ಲೋವಿಯ, ಕೊಲಂಬಿಯ, ಬರ್ಮಾ, ಜಪಾನ್, ಕ್ರೋಷಿಯಾ, ಯಮೆನ್, ಗ್ರೀಸ್, ಬ್ರೆಜಿಲ್, ಸೌದಿ ಅರೆಬಿಯಾ ಸೇರಿದಂತೆ ವಿವಿಧ ದೇಶಗಳ ನಾಣ್ಯ ಮತ್ತು ನೋಟುಗಳ ವೈವಿಧ್ಯಮಯ ಸಂಗ್ರಹವೇ ಇವರಲ್ಲಿದೆ.


ಮೇಲೂರು ಎಂ.ಆರ್.ಪ್ರಭಾಕರ್ ಅವರು ತಮ್ಮ ಹಸ್ತಾಕ್ಷರದಲ್ಲಿ ರಚಿಸಿರುವ ’ಅಂಚೆ ಜಾನಪದ’ ಪುಸ್ತಕ.

’ಗ್ರಾಮಾಂತರ ಜನತೆಗಾಗಿ ಅಂಚೆ ಚೀಟಿ ಸಂಗ್ರಹಣೆ’ ಎಂಬ ಇವರ ಉಪಯುಕ್ತ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿದೆ. ಸ್ವತಃ ಅವರೇ ರಚಿಸಿರುವ ’ಅಂಚೆ ಜಾನಪದ’ ಪುಸ್ತಕವನ್ನು ಕರ್ನಾಟಕ ಜಾನಪದ ಅಕಾಡೆಮಿಯು ಪ್ರಕಟಿಸಿದೆ. ಜಾನಪದಕ್ಕೆ ಸಂಬಂಧಿಸಿದ ಅಂಚೆಚೀಟಿಗಳ ಸಂಗ್ರಹವುಳ್ಳ ಈ ಬಣ್ಣದ ಚಿತ್ರಗಳ ಪುಸ್ತಕವನ್ನು ಅವರ ಹಸ್ತಾಕ್ಷರ ಬಳಸಿಯೇ ಮುದ್ರಿಸಿರುವುದು ವಿಶೇಷವಾಗಿದೆ. ನಮ್ಮ ದೇಶದ ನೂರಾರು ಅಂಚೆಚೀಟಿಗಳನ್ನು ಜಾನಪದ ಪರಂಪರೆಗನುಗುಣವಾಗಿ ವರ್ಗೀಕರಿಸಿ ಪುಸ್ತಕದಲ್ಲಿ ಮುದ್ರಿಸಲಾಗಿದೆ.
 ’ಗ್ರಾಮೀಣ ಭಾಗದ ಜನರಿಗಾಗಿ ಅಂಚೆ ಚೀಟಿ ಮತ್ತು ನಾಣ್ಯ ನೋಟುಗಳ ಸಂಗ್ರಹದ ಮೂಲಕ  ಹಿರಿಮೆ ತಿಳಿಸಲೆಂದೇ ೧೯೭೮ರಲ್ಲಿ ಪ್ರಥಮ ಬಾರಿಗೆ ಮೇಲೂರಿನಲ್ಲಿ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಸ್ಥಾಪಿಸಿ ಪ್ರದರ್ಶನ ನಡೆಸಿದ್ದೆವು. ಈಗ ಈ ಸಂಘದಿಂದ ೧೨೫೦ ಪ್ರದರ್ಶನಗಳನ್ನು ಗ್ರಾಮೀಣ ಭಾಗಗಳಲ್ಲಿ ನಡೆಸಿದ್ದೇವೆ. ವಿಶ್ವಶಾಂತಿ, ಸ್ನೇಹ ಸೌಹಾರ್ಧತೆ, ಭಾವೈಕ್ಯದ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು, ಸಂಸ್ಕೃತಿ, ಪರಿಸರ ಪ್ರೇಮ ಹಾಗೂ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಅಂಚೆ ಚೀಟಿಗಳ ಮೂಲಕ ಪರಿಚಯಿಸುವುದು ನನ್ನ ಮುಖ್ಯ ಉದ್ದೇಶ’ ಎಂದು ಮೇಲೂರು ಎಂ.ಆರ್.ಪ್ರಭಾಕರ್ ತಿಳಿಸಿದರು.

ಮೇಲೂರು ಎಂ.ಆರ್.ಪ್ರಭಾಕರ್   ಫೋನ್ ನಂ. ೯೭೩೧೭೩೩೩೦೩