ಈ ಚಿತ್ರ ನೋಡಿದ ಮೇಲೆ ನಿಮಗೆ ಮೇಲಿನ ಅನುಮಾನ ಶುರುವಾದ್ರೆ ಅದಕ್ಕೆ ನಾನಂತೂ ಕಾರಣನಲ್ಲ. ಯಾಕಂದ್ರೆ ಕೆಲ ತಿಂಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದ ಕರ್ನಾಟಕ ಕಾರ್ ರೇಸ್ ನಲ್ಲಿ ಪಾಲ್ಗೊಂಡಿದ್ದ ಎಲ್ಲ ಕಾರುಗಳೂ ಹೀಗೆಯೇ ಕುಪ್ಪಳಿಸಿದ್ದು...!
ನೇರಳೆ ಹಣ್ಣು
19 hours ago
ಎಲೆಗಳ ಬಣ್ಣವನ್ನೇ ಪಡೆದು ಒಂದೇ ಸಮನೆ ಎಲೆಗಳನ್ನು ಸ್ವಾಹಾ ಮಾಡುವ ಈ ಹುಳಗಳನ್ನು ಕಂಡುಹಿಡಿಯುವುದು ಸುಲಭವಲ್ಲ. ಆದರೆ ಶಿಡ್ಲಘಟ್ಟದ ರೇಷ್ಮೆ ಬೆಳೆಗಾರರಿಗೆ ಇಂಥ ಸೂಕ್ಷ್ಮಗಳೆಲ್ಲ ಬಾಲ್ಯದಲ್ಲೇ ಗೊತ್ತಾಗುತ್ತವೆ. ನೆಲದಲ್ಲಿ ಅವುಗಳ ಹಸಿ ಹಿಕ್ಕೆ ಬಿದ್ದಲ್ಲಿ ಸರಿಯಾಗಿ ನಿಂತು ತಲೆಯ ಮೇಲ್ಗಡೆ ಇರುವ ಎಲೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಬೇಕು. ತಲೆಯ ಮೇಲೂ ಒಂದೆರಡು ಹಿಕ್ಕೆ ಬಿದ್ದರೆ ನಿಮ್ಮ ಅದೃಷ್ಟ. ಹುಳು ಸಿಕ್ಕೇ ಸಿಗುತ್ತದೆ. ನನಗೂ ಸಿಕ್ಕಿತು. ಅದರ ಮೈಮೇಲೊಂದು ಬಿಳಿಯ ಗೆರೆಯೂ, ಅಲ್ಲಲ್ಲಿ ಬಿಳಿ ಚುಕ್ಕೆಗಳೂ, ಹಳದಿಯ ಪುಟ್ಟ ಬಾಲವೂ ಇರುತ್ತದೆ. ಇತರೇ ಜೀವಿಗಳನ್ನು ಹೆದರಿಸಲೋ ಏನೋ ದೊಡ್ಡ ಕಣ್ಣುಗಳಿರುವಂತೆ ಕಾಣುವ ನೀಲಿ ಬಣ್ಣದ ಮಚ್ಚೆಗಳಿವೆ.
ರಾತ್ರಿ ನನ್ನ ತಮ್ಮ, "ಆ ಹುಳಗಳಲ್ಲಿ ಒಂದು ಸತ್ತಿತ್ತು, ಬಿಸಾಡಿದೆ. ಇನ್ನೊಂದು ಸಾಯುವ ಸ್ಥಿತಿಯಲ್ಲಿದೆ ನೋಡು" ಅಂದ. ಒಂದು ಹುಳವಂತೂ ಕಂದು ಬಣ್ಣವಾಗಿಬಿಟ್ಟಿತ್ತು. ಉಳಿದೆರಡೂ ನಿಸ್ತೇಜವಾಗಿದ್ದವು.
ಚಿಟ್ಟೆಗಳು ಮತ್ತು ಪತಂಗಗಳು ಒಂದೇ ಜಾತಿಯವು. ಆದರೆ ಕೆಲವು ವ್ಯತ್ಯಾಸಗಳಿವೆ. ಚಿಟ್ಟೆಗಳು ಹಗಲು ಜೀವಿಗಳಾದರೆ, ಪತಂಗಗಳು ನಿಶಾಚರಿಗಳು. ಚಿಟ್ಟೆಗಳು ರೆಕ್ಕೆಗಳನ್ನು ಮೇಲಕ್ಕೆ ಮಡಿಚುತ್ತವೆ. ಆದರೆ ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡ ಅಗಲಿಸಿರುತ್ತವೆ. ಚಿಟ್ಟೆಗಳ ಮೈ ಬಡಕಲು, ಮೀಸೆ ಅನ್ನೋದು ಬೆಂಕಿಕಡ್ಡಿ ಥರಾ. ಪತಂಗಗಳದ್ದು ಠೊಣಪರ ಮೈ. ಹಂಚಿಕಡ್ಡಿ ಮೀಸೆ. ನಿಶಾಚರ ಜೀವಿಗಳಾದ ಈ ಪತಂಗಗಳನ್ನು ನಾವು ನೋಡುವುದೇ ತೀರಾ ಕಡಿಮೆ. ಕಂಬಳಿ ಹುಳುಗಳು ಚೆನ್ನಾಗಿ ಎಲೆತಿಂದು ಬೆಳೆದ ಮೇಲೆ ಪ್ಯೂಪಾ ಆಗುವಾಗ ಮಣ್ಣಲ್ಲಿ ನೆಲದಲ್ಲಿ ಎಲೆಗಳ ಮರೆ ಸೇರಿಬಿಡುತ್ತವೆ.
ನಾನು ಅದನ್ನು ಮನೆಯೊಳಗೆ ತಂದ ಏಳನೇ ದಿನ ಪ್ಯೂಪಾ ಪೂರ್ತಿ ಕಪ್ಪುಬಣ್ಣಕ್ಕೆ ತಿರುಗಿತ್ತು. ಬೆಳೆಗ್ಗೆನೇ ಎದ್ದು ನೋಡಿದೆ. ಪ್ಯೂಪಾ ಒಡೆದಿದೆ. ಕೆಂಪು ಬಣ್ಣದ ದ್ರವವಿದೆ. ಆದರೆ ಪತಂಗವೇ ಇಲ್ಲ. ಸುತ್ತ ನೋಡಿದೆ. ನನ್ನ ಪುಣ್ಯ. ಕಿಟಕಿಯ ಗ್ರಿಲ್ ಚಿಕ್ಕದಾಗಿದ್ದು ಅದು ಹೊರ ಹೋಗಲಾಗದೇ ಅದರ ಮೇಲೆ ಕುಳಿತಿತ್ತು. ದಪ್ಪ ಹೊಟ್ಟೆ, ದೊಡ್ಡ ಕಣ್ಣುಗಳು, ಅಗಲವಾದ ರೆಕ್ಕೆ. ಪಾಚಿ ಬಣ್ಣದಲ್ಲಿ ಹಾಗೂ ರೆಕ್ಕೆಯ ಮೇಲೆ ಬಿಳಿ ಬಣ್ಣದಲ್ಲಿ ಕಣ್ಣುಗಳು ಮತ್ತು ವೀರಪ್ಪನ್ ಮೀಸೆ ಬರೆದಂತಿತ್ತು. ಬೆಳಕಾಗಿದ್ದರಿಂದ ಅದು ಕದಲದೇ ಹಾಗೆಯೇ ಕುಳಿತಿತ್ತು. ಅದನ್ನು ನಮ್ಮಜ್ಜಿಗೆ ತೋರಿಸಿದೆ. "ಎಷ್ಟು ಚೆನ್ನಾಗಿದೆ. ನೋಡಿದ್ಯಾ ನಂಗೊತ್ತೇ ಇರಲಿಲ್ಲ" ಎಂದು ಸಂತೋಷಿಸಿದರು. ಇದರ ಫೋಟೋ ತೆಗೆದು ಪುಸ್ತಕದಲ್ಲಿ ಹುಡುಕಿದೆ. ಇದರ ಹೆಸರು ಓಲಿಯಾಂಡರ್ ಹಾಕ್ ಮಾತ್ .
"ಏನ್ರೋ ಅದು?" ಮೇಸ್ಟ್ರು ಕೇಳಿದರು. "ಹಕ್ಕಿ ಸಾರ್", ಗುಂಪುಗೂಡಿದ್ದ ಹುಡುಗರು ಉತ್ತರಿಸಿದರು.
ಇಷ್ಟೆಲ್ಲಾ ಆದ ಮೇಲೆ ರಂಗಪ್ರವೇಶಿಸಿದ್ದು ನನ್ನ ಕ್ಯಾಮೆರಾ! ನಾಗಭೂಷಣ್ ಫೋನ್ ಮಾಡಿ ಮಿಂಚುಳ್ಳೀಯ ಫೋಟೋ ತೆಗೆಯಲು ಕರೆದರು. ನಾನಲ್ಲಿಗೆ ಹೋದಾಗ ಮೇಸ್ಟ್ರುಗಳಿಂದ ಮಕ್ಕಳಿಗೆ ಮಿಂಚುಳ್ಳಿಯ ಪಾಠ ನಡೆಯುತ್ತಿತ್ತು."ಅದು ಮೊಟ್ಟೆ ಎಲ್ಲಿಡ್ತದೆ?""ಮರಿಗೆ ಏನು ತಿನ್ನಿಸ್ತದೆ?""ಇದು ಗಂಡೋ, ಹೆಣ್ಣೋ?"ಯಕ್ಷಪ್ರಶ್ನೆಗಳು ಮಕ್ಕಳಿಂದ ತೂರಿ ಬರುತ್ತಿದ್ದರೆ, ಸಾವಧಾನದಿಂದ ಉಪಾಧ್ಯಾಯರು ಉತ್ತರಿಸುತ್ತಿದ್ದರು. ಮಿಂಚುಳ್ಳಿಗಳಲ್ಲಿ ಹಲವು ವಿಧಗಳಿವೆ. ಇಂಗ್ಲಿಷ್ ನಲ್ಲಿ ಇದಕ್ಕೆ WhiteBreastedKingfisher ಎನ್ನುತ್ತಾರೆ. ಗಂಡು ಹೆಣ್ಣು ಒಂದೇ ರೀತಿಯಿರುತ್ತವೆ. ನೀರಿರುವೆಡೆ ಮಣ್ಣಿನ ಎತ್ತರದ ಗೋಡೆಯಂತಹುದ್ದನ್ನು ಆಯ್ದುಕೊಂಡು ಅದರಲ್ಲಿ ಎತ್ತರದಲ್ಲಿ ತೂತು ಕೊರೆದು ಗೂಡು ಮಾಡಿ ಮೊಟ್ಟೆಯಿಟ್ಟು ಮರಿಮಾಡುತ್ತವೆ.
ನೀರಿನ ಸಂಪರ್ಕದಲ್ಲಿ ಎಲ್ಲರೂ ಮಕ್ಕಳಾಗಿಬಿಡುತ್ತಾರೆ. ಅದರಲ್ಲೂ ನದಿ, ಹೊಳೆಗಳ ಸಂಸರ್ಗದಲ್ಲಿ ಬೆಳೆಯುವ ಮಕ್ಕಳಿಗಂತೂ ನೀರೊಂದು ಆಟದ ವಸ್ತು. ನೀರಲ್ಲಿ ಬೀಳುವುದು, ಮುಳುಗೇಳುವುದು, ಈಜು, ನೀರೆರಚಾಟ, ಒಂದೆ ಎರಡೆ... ಕೊನೆ ಮೊದಲಿಲ್ಲದ ಚೆಲ್ಲಾಟ. ಮಕ್ಕಳಿಗೆ ದಣಿವೆನ್ನುವುದರ ಅರ್ಥವೇ ಗೊತ್ತಿಲ್ಲ. ಮನಸ್ಸು ಮತ್ತು ದೇಹ ಎರಡೂ ಪ್ರಫುಲ್ಲ ಮತ್ತು ಆರೋಗ್ಯಪೂರ್ಣ.
ಶ್ರೀರಂಗಪಟ್ಟಣದ ಹತ್ತಿರವಿರುವ ಒಂದು ಹಳ್ಳಿ ಪಕ್ಕದಲ್ಲಿ ಕಾವೇರಿ ನದಿ ಹೆಚ್ಚು ರಭಸವಿಲ್ಲದೆ ಹರಿಯುತ್ತದೆ. ಹಕ್ಕಿಯ ಫೋಟೋ ತೆಗೆಯಲು ಹೋಗಿದ್ದ ನನಗೆ ಈ ರೆಕ್ಕೆಯಿಲ್ಲದ ಹಕ್ಕಿಗಳು(ಮಕ್ಕಳು) ನೀರಿಗೆಗರುತ್ತ ಆಡುತ್ತಿದ್ದುದು ಕಾಣಿಸಿತು. ಕ್ಲಿಕ್ಕಿಸಿದೆ.
ಗೀಜಗ ಹಕ್ಕಿಗಳ ವೈಶಿಷ್ಟ್ಯವೇನೆಂದರೆ, ಗಂಡು ಹಕ್ಕಿ ಗೂಡನ್ನು ಅರ್ಧ ನೇಯ್ದು ಹೆಣ್ಣಿಗೆ ತೋರಿಸುತ್ತದೆ. ಅದು ಹೆಣ್ಣಿಗೆ ಇಷ್ಟವಾದರೆ ಅವೆರಡೂ ಜೋಡಿಯಾಗುತ್ತವೆ, ಗೂಡನ್ನು ಪೂರ್ತಿ ಮಾಡಿ ಸಂಸಾರ ಸಾಗಿಸುತ್ತವೆ. ಅಕಸ್ಮಾತ್ ಇಷ್ಟವಾಗಲಿಲ್ಲವೋ ಗಂಡು ಮತ್ತೊಂದು ಗೂಡು ನೇಯಲು ಶುರುಮಾಡುತ್ತದೆ. ನಮಗೆ ಹತ್ತು ಬೆರಳುಗಳಿದ್ದರೂ ನೇಯಲು ಅಸಾಧ್ಯವಾದಂತಹ ಗೂಡನ್ನು ಪುಟ್ಟ ಇಕ್ಕಳದಂತಹ ಕೊಕ್ಕಿನಿಂದಲೇ ಈ ಪುಟ್ಟ ಹಕ್ಕಿ ನೇಯುವುದನ್ನು ನೋಡಿದರೆ ಇದರ ಸಾಮರ್ಥ್ಯಕ್ಕೆ ತಲೆದೂಗಲೇಬೇಕು. ಅದಕ್ಕೇ ಇದನ್ನು ನೇಕಾರ ಹಕ್ಕಿ ಎಂದೂ ಕರೆಯುತ್ತಾರೆ.
ಹಕ್ಕಿಯು ನಾರನ್ನು ತಂದು ತಂದು ತನ್ನ ಕೊಕ್ಕಿನಿಂದ ಸುಲಲಿತವಾಗಿ ಗೂಡು ಕಟ್ಟುವುದನ್ನು ನೋಡುತ್ತಾ ಕ್ಲಿಕ್ಕಿಸತೊಡಗಿದೆ. ನನ್ನ ಬಳಿ ಇದ್ದ ರೋಲ್ ಪೂರಾ ಖಾಲಿಯಾಯ್ತು. ಇನ್ನು ಅಲ್ಲಿದ್ದು ಅವಕ್ಕೆ ತೊಂದರೆ ಕೊಡುವುದು ಬೇಡವೆಂದು ನಿಧಾನವಾಗಿ ಹೊರಬಂದೆ. ಮೂರು ಗಂಟೆ ಕದಲದೇ ಕುಳಿತಿದ್ದರಿಂದಾಗಿ ಕಾಲು ಜೋಮು ಹಿಡಿದಿತ್ತು. ನಾನು ಹೊರಬಂದದ್ದು ನೋಡಿ ದೂರದಲ್ಲಿದ್ದ ರಮೇಶ ಓಡಿ ಬಂದ. ಆ ಹಳೇ ಬಾವಿಯೊಳಗೆ ಮೆಟ್ಟಿಲುಗಳಿದ್ದವು. ಬಗ್ಗಿ ನೋಡಿದೆವು. ದೊಡ್ಡ ನಾಗರಹಾವೊಂದು ನಿಧಾನವಾಗಿ ಒಳಗಿಳಿಯುತ್ತಿತ್ತು. "ಅಣ್ಣ ಅದು ನಿಮ್ಮ ಪಕ್ಕದಿಂದಲೇ ಹೋಗಿರುತ್ತೆ" ಎಂದ ರಮೇಶ. ನನ್ನ ಕೈಕಾಲು ತಣ್ಣಗಾಗತೊಡಗಿತು!
ದೂರದ ಬೆಟ್ಟದ ಮೇಲೆ ಮನೆ. ಮನೆಯ ಹಿಂದೆ ಗೆರೆ ಎಳೆದಂತಿರುವ ನೀಲಗಿರಿ ಮರಗಳು. ಬೆಳಗಿನ ೬-೩೦. ಅರುಣನ ಹೊಂಗಿರಣ ಇವುಗಳ ಮೇಲೆ ಸಿಂಪಡಿಸಿದಂತಿದ್ದ ದೃಶ್ಯಕಾವ್ಯ. ಈ ನಿಸರ್ಗದ ಕಲಾಕೃತಿ ಸೆರೆಹಿಡಿಯಬೇಕೆಂದಿದ್ದರೆ ಕೇರಳದ ಮುನ್ನಾರ್ ಗೆ ಬನ್ನಿ. ಚುಮು ಚುಮು ನಸುಕಿನಲ್ಲಿ ಹಾಸಿಗೆ ಬಿಟ್ಟು ಮೇಲೇಳುವುದು ತುಸು ತಡವಾದರೆ ಸೂರ್ಯ ಮೇಲೆದ್ದು ಕೆಲಸ ಕೆಡಿಸಿಬಿಡುತ್ತಾನೆ. ಎಲ್ಲೆಲ್ಲೂ ಬೆಟ್ಟಂಬೆಳಗು. ಪ್ರಕೃತಿ ನೀಡುವ ಕೆಲವೇ ಕ್ಷಣಗಳಲ್ಲಿ ನಾವು ಹುಷಾರಾಗಿ ಬೇಗ ಬೇಗ ಕ್ಯಾಮೆರಾದಲ್ಲಿ ಸೆರೆ ಹಿಡಿದಿಡಬೇಕಷ್ಟೆ.
ಮುನ್ನಾರ್ ನಲ್ಲಿ ಮೋಡಗಳು ಟಾರ್ಚ್ ರೀತಿ ಕೆಲಸ ಮಾಡುತ್ತವೆ. ಒಮ್ಮೆ ಒಂದು ಬೆಟ್ಟದ ಮೇಲೆ ಇನ್ನೊಮ್ಮೆ ಇನ್ನೊಂದು ಬೆಟ್ಟದ ಮೇಲೆ ಟಾರ್ಚ್ ಲೈಟ್. ದೇವೀಕುಲಂ ಬೆಟ್ಟದ ಮೇಲಿನ ದೇವಸ್ಥಾನದ ಮೇಲೆ ಟಾರ್ಚ್ ಬೆಳಕು ಬೀಳಲೆಂದು ಕಾದಿದ್ದು ಸಾರ್ಥಕ ಕ್ಷಣ.
ಹಾಗೆಯೇ ಒಂದು ಚಿಕ್ಕ ಸಿಲ್ವರ್ ಮರದ ಮೇಲೆ ಬಿದ್ದಾಗ ಸಿಕ್ಕಿದ್ದು ಅದೃಷ್ಟದ ಕ್ಷಣ.
ಅಲ್ಲಿ ಲೋಕ್ಹಾರ್ಟ್ ಗ್ಯಾಪ್ ಮತ್ತು ರಾಕ್ ಕೇವ್ ಬಳಿ ನಿಂತಾಗ ದೂರದಲ್ಲೊಂದು ಸುಂದರ ಮನೆ ಕಾಣುತ್ತದೆ.
ವಾರೆವ್ಹಾ! ಟಾಟಾ ಟೀ ಎಸ್ಟೇಟ್ ನಲ್ಲೊಂದು ಒಣಗಿ ನಿಂತ ಒಂಟಿ ಮರವಿದೆ. ಇನ್ನೊಂದು ಕೋನ ಹುಡುಕುತ್ತ ಟೀ ಗಿಡದ ಮಧ್ಯೆ ನುಸುಳುವಷ್ಟರಲ್ಲಿ ಮೇಘರಾಜ ಆಗಸವನ್ನು ಮುಚ್ಚುವ ಹವಣಿಕೆಯಲ್ಲಿದ್ದ. ಸಿಕ್ಕಷ್ಟೇ ಭಾಗ್ಯ. ನೀಲಗಗನದಲ್ಲಿ ನನಗೆ ಸಿಕ್ಕ ಒಂಟಿ ಮರದ ಸಿಲೌಟ್ ಹೇಗಿದೆ ನೋಡಿ.
ಮುನ್ನಾರ್ ನ ಹವಾಮಾನ ಹೇಗೆಂದರೆ ಅಲ್ಲಿ ಮಳೆ ಬೀಳಲು ಋತು ಬೇಕಿಲ್ಲ. ಆದರೆ ಮಳೆಗಾಲ ಮುಗಿದ ಮೇಲೆ ಹೋಗುವುದೊಳ್ಳೆಯದು. ಆಗ ನೀಲಗಿರಿ ತಾಹ್ರ್(ಬೆಟ್ಟದ ಮೇಕೆ)ಗಳನ್ನೂ ಕ್ಯಾಮೆರಾದಲ್ಲಿ ಶೂಟ್ ಮಾಡಬಹುದು.