Monday, January 26, 2009

ದ್ವಾರಪಾಲಕನ ಹೊಟ್ಟೆಯಲ್ಲಿ ಬಸವ!

ಛಂದ ಪುಸ್ತಕ ಪ್ರಕಟಿಸಿರುವ ಡಾ.ಕ್.ಎನ್.ಗಣೇಶಯ್ಯ ಅವರ ಕಥಾಸಂಕಲನ "ಶಾಲಭಂಜಿಕೆ" ಯಲ್ಲಿ ಒಂದು ಕತೆಯಿದೆ. ಅದು "ಎದೆಯಾಳದಿಂದೆದ್ದ ಗೋವು".
ಸೋಮನಾಥಪುರದ ಚನ್ನಕೇಶವ ದೇವಾಲಯದಲ್ಲಿನ ಉತ್ತರಕ್ಕಿರುವ ಗರ್ಭಗುಡಿಯ ಒಳಗಿನ ಕೃಷ್ಣನ ಮೂರ್ತಿಯ ಹೊಟ್ಟೆಯಲ್ಲಿ ಬಸವನ ಮುಖ ಎದ್ದು ಕಾಣುತ್ತದೆ. ವಿಕಾಸವಾದದ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಈ ಶಿಲ್ಪವನ್ನು ಉದಾಹರಿಸುತ್ತಿದ್ದ ಲೇಖಕರಿಗೆ ಅದನ್ನು ಕೆತ್ತಿದ ಶಿಲ್ಪಿಯ ಮೂಲ ತಿಳಿದುಬರುತ್ತದೆ. ಗೊಲ್ಲರವನಾದ ಶಿಲ್ಪಿ ತನ್ನ ಮೂಲವಂಶದ ಕಸುಬಿನ ಗುರುತಾದ ಗೋವನ್ನು ಕೃಷ್ಣನ ಎದೆಯಲ್ಲಿ ಅಡಗಿಸಿಟ್ಟಿರುವನು. 'ಆ ಶಿಲ್ಪ ನೋಡಿ ದೇವಾಲಯದ ಯಾವುದೇ ಗಂಡಸಿನ ಮೂರ್ತಿ ಮುಂದೆ ನಿಂತರೂ ಅವುಗಳ ಹೊಟ್ಟೆ ಮತ್ತು ಎದೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಸವನ ಮುಖ ಕಾಣಲು ಪ್ರಾರಂಭವಾಗುತ್ತದೆ' ಎಂದು ಹೇಳಿ ಲೇಖಕರು ನಮಗೆ ಯೋಚಿಸಲು ಹಚ್ಚುತ್ತಾರೆ.
ಗಣೇಶಯ್ಯನವರ ಕಥೆ ಓದಿ ನನ್ನ ಸಂಗ್ರಹದಲ್ಲಿದ್ದ ಹಳೆಯ ಚಿತ್ರವೊಂದನ್ನು ತೆಗೆದೆ. ಅದು ತಲಕಾಡಿನ ದೇವಾಲಯದ ದ್ವಾರಪಾಲಕನ ಚಿತ್ರ. ಅದರಲ್ಲೂ ಬಸವ ಹೊಟ್ಟೆಯಲ್ಲಿ ಪಡಿಮೂಡಿದ್ದಾನೆ. ಅದರ ಬಗ್ಗೆ ಯಾರಿಗಾದರೂ ತಿಳಿದರೆ, ತಿಳಿದಿದ್ದರೆ ದಯವಿಟ್ಟು ತಿಳಿಸಿ.

Monday, January 19, 2009

ಕೆಮ್ಮಣ್ಣುಗುಂಡಿಯ ಉಸಿರು - ಹಸಿರು ಶೋಲಾ

ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ ನಮ್ಮ ಪ್ರಮುಖ ಗಿರಿಧಾಮಗಳಲ್ಲೊಂದು. ರಮ್ಯನೋಟಗಳ ದರ್ಶನ ಮಾಡಿಸುವ ಗಿರಿಶಿಖರಗಳು, ನಿತ್ಯಹರಿದ್ವರ್ಣ ಶೋಲಾ ಅರಣ್ಯಗಳು ಮತ್ತು ಜಲಪಾತಗಳು ಇಲ್ಲಿನ ಪ್ರಮುಖ ಆಕರ್ಷಣೆ.
ಶೋಲಾಕಾಡುಗಳು ಹುಲ್ಲುಗಾವಲಿನಿಂದ ಸುತ್ತುವರಿದ ದ್ವೀಪಗಳು. ತಮ್ಮದೇ ಆದ ಜೀವವೈವಿಧ್ಯದಿಂದ ತುಂಬಿರುವ ಶೋಲಾ ಕಾಡುಗಳು ಪಶ್ಚಿಮ ಘಟ್ಟಗಳ ವಿಶಿಷ್ಟ ಜೀವಾಶ್ರಯ.
ಕೆಮ್ಮಣ್ಣುಗುಂಡಿಯಲ್ಲಿರುವ "ಶಂಕರ ಶೋಲಾ" ಅತ್ಯುತ್ತಮ ಶೋಲಾ ಕಾಡೆಂಬ ಕೀರ್ತಿಗೆ ಪಾತ್ರವಾಗಿದೆ. ಸದಾ ಹಸಿರಿರುವ ಈ ಕಾಡಿನಲ್ಲಿ ಗಗನಚುಂಬಿ ವೃಕ್ಷಗಳು ಅಷ್ಟಾಗಿರುವುದಿಲ್ಲ. ಚಿಕ್ಕಚಿಕ್ಕ ಮರಗಳು ಕೊಂಬೆಗಳನ್ನು ಚಾಚಿ ಕೊಡೆಯಂತೆ ಹರಡಿದ ಮೇಲ್ಚಾವಣಿ ಈ ಕಾಡಿನ ಮುಖ್ಯ ಲಕ್ಷಣ.
ಮಾನವನ ದುರಾಸೆಯ ಫಲವಾಗಿ ಇತರೆ ಕಾಡುಗಳಂತೆ ಹಿಂದೊಮ್ಮೆ ದಟ್ಟವಾಗಿ ಹರಡಿದ್ದ ಶೋಲಾ ಕಾಡುಗಳೂ ಕ್ಷೀಣಿಸತೊಡಗಿವೆ. ಗಣಿಗಾರಿಕೆಯಿಂದ ಸಮೃದ್ಢ ಶೋಲಾ ಅರಣ್ಯಕ್ಕೆ ಈಗಾಗಲೇ ಸಾಕಷ್ಟು ಪೆಟ್ಟುಬಿದ್ದಿದೆ. ಅಗ್ನಿಯ ಕೆನ್ನಾಲಿಗೆಗೆ ಪ್ರತಿವರ್ಷ ಶೋಲಾ ಅರಣ್ಯ ಬಲಿಯಾಗುತ್ತಿದೆ.
ಶೋಲಾ ಅರಣ್ಯದ ನಾಶದಿಂದ ಹವಾಮಾನದ ಮೇಲೆ ಗಂಭೀರ ಪರಿಣಾಮ ಬೀರುವುದರ ಜೊತೆಗೆ ನೀರಿನ ಆಸರೆಗೆ ತೀವ್ರ ಪೆಟ್ಟುಬೀಳುತ್ತದೆ.
ವೈವಿಧ್ಯಮಯ ಜೀವರಾಶಿಗೆ ನೆಲೆಯಾದ ನಿಸರ್ಗದ ವಿಶಿಷ್ಟ ಕೊಡುಗೆಗಳಲ್ಲಿ ಒಂದಾದ ಶೋಲಾ ಅರಣ್ಯದ ರಕ್ಷಣೆ ಮಾಡಬೇಕಾದುದು ಅತ್ಯಗತ್ಯ.
ಹಸಿರನ್ನು ಉಳಿಸುವತ್ತ ನಮ್ಮೆಲ್ಲರ ಹೆಜ್ಜೆ ಸಾಗಲಿ...

Tuesday, January 13, 2009

ಮುತ್ತಿನ ಮಣಿಗಳು

ಮುತ್ತು ಅಷ್ಟು ಸುಲಭದ ತುತ್ತಲ್ಲ! ಇದರ ಸೃಷ್ಟಿಯಾಗುವುದೇ ಬಲು ವಿಶಿಷ್ಟವಾಗಿ. ನೀರಿನಲ್ಲಿರುವ ಕಪ್ಪೆಚಿಪ್ಪಿನೊಳಗೆ ಕೆಲವೊಮ್ಮೆ ಯಾವುದಾದರೂ ಪರೋಪಜೀವಿ ಅಥವಾ ಇನ್ನೇನಾದರೂ ಮರಳಿನಂಥ ಹೊರ ಪದಾರ್ಥ ಸೇರಿಕೊಂಡುಬಿಡುತ್ತದೆ. ಅದರ ಮೇಲೆ ಆ ಚಿಪ್ಪಿನ ಜೀವಿ ಸ್ರವಿಸುವ ಸುಣ್ಣವೇ ಕಾಲಕ್ರಮದಲ್ಲಿ ಮುತ್ತಾಗುತ್ತದೆ.
ಚಳಿಗಾಲದಲ್ಲಿ ಮುತ್ತಿನ ಹಾರ ಸೃಷ್ಟಿಯಾಗುವುದು ಇನ್ನೊಂದು ವೈಶಿಷ್ಟ್ಯ. ಆದರೆ ಇದು ನೀರ ಹನಿಯ ಮುತ್ತು. ಜೇಡರ ಬಲೆ ಇಬ್ಬನಿಯಲ್ಲಿ ಮಿಂದು ಮುತ್ತಿನ ಪದಕವಾಗುತ್ತದೆ.
ಒಣಹವೆಯ ರಾತ್ರಿಗಳಲ್ಲಿ ಮಣ್ಣು, ಬಂಡೆಗಳು ತಂಪುಗೊಳ್ಳಲಾರಂಭಿಸಿದಾಗ ನೆಲದ ಅತಿ ಸಮೀಪದ ಗಾಳಿಯೂ ತಂಪಾಗುತ್ತದೆ. ಅದರಲ್ಲಿನ ನೀರಾವಿ ತಣ್ಣನೆಯ ನೆಲ ಬಂಡೆಗಳ ಸಂಪರ್ಕ ಹೊಂದಿ ಸಾಂದ್ರೀಕರಿಸಿ ಸಸ್ಯಗಳ, ಜೇಡರಬಲೆಯ ಮೇಲೆ ಸೂಕ್ಷ್ಮ ಹನಿಗಳಂತೆ ಕೂರುತ್ತದೆ. ನೀರಾವಿ ಹೀಗೆ ಹನಿಗಳಾಗುವ ಉಷ್ಣತೆಗೆ ತುಷಾರಬಿಂದು(ಡಿವ್ ಪಾಯಿಂಟ್) ಎಂದು ಹೆಸರು.
ಮುತ್ತಿನ ಸೇತುವೆ...

Wednesday, January 7, 2009

ಮಂಜಿನ ಮುಂಜಾವಿನ ಅನುಭವ

ಚುಮುಚುಮು ಚಳಿಯ ಮುಂಜಾವಿನಲ್ಲಿ ವಾಕಿಂಗು ಹೊರಟಾಗ ದಟ್ಟ ಮಂಜು ಕವಿದಿತ್ತು. ವಾಹನಗಳು ದೀಪ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ. ಶಾಲು, ಸ್ವೆಟರ್, ಟೊಪ್ಪಿಗಳಿಂದ ಬಂಧಿತರಾಗದಿದ್ದರೆ ಚಳಿ ತರುವ ನಡುಕ ನಿಲ್ಲುವುದಿಲ್ಲ!

ದೂರದಲ್ಲಿ ಹೋಗುತ್ತಿರುವ ಎತ್ತಿನಗಾಡಿ ಮಂಜನ್ನು ಸಾಗಿಸುತ್ತಿರುವಂತೆ ಭಾಸವಾಗುತ್ತದೆ.

ಬಿಳಲುಗಳನ್ನು ಚಾಚಿನಿಂತ ಆಲದಮರ ಮಂಜಿನ ಮರದಂತೆ ಕಾಣುವುದು ಒಂದು ದೃಶ್ಯಕಾವ್ಯ.

ಈ ಮಂಜನ್ನು ಭೂಮಟ್ಟದ ಮೋಡವೆನ್ನಬಹುದು. ಈ ಚಳಿಗಾಲದ ರಾತ್ರಿಗಳಲ್ಲಿ ಭೂಮಿಯ ಉಷ್ಣತೆಯನ್ನು ರಕ್ಷಿಸುವ ಮೋಡದ ಮುಸುಕು ಇರುವುದಿಲ್ಲ. ಆಗ ಭೂಮಿಯಿಂದ ಹೊರಬಿದ್ದ ಶಾಖ ವಾತಾವರಣದಲ್ಲಿ ಸೇರಿಹೋಗುತ್ತದೆ. ಭೂಮಿ ಬೇಗ ಬೇಗ ತಂಪುಗೊಂಡು ತನಗೆ ಹತ್ತಿರದ ಗಾಳಿಯನ್ನೂ ತಂಪುಮಾಡುತ್ತದೆ. ಮಂಜುಂಟಾಗುವುದು ಹೀಗೆ.

ಮಂಜಿನ ಮುಂಜಾವನ್ನು ಅನುಭವಿಸುತ್ತ ನಡೆಯುವುದೆಂದರೆ ಚಳಿಗೆ ಸೆಡ್ಡು ಹೊಡೆದಂತೆ ಅನ್ನಿಸುತ್ತದೆ. ಚಳಿಗೆ ಮುದುಡದೆ ಮಂಜಿನೊಂದಿಗೆ ಮೌನವಾಗಿ ಮಾತನಾಡುತ್ತ ಅದನ್ನು ಅನುಭವಿಸದಿದ್ದರೆ ಚೈತ್ರ ಮುನಿದೀತೇನೊ?

Monday, December 29, 2008

ಮಲಗಿದ್ದಾನೆ ಕುಂಭಕರ್ಣ!

ನಿದ್ರೆಗೆ ಪರ್ಯಾಯ ಪದವೇ ಕುಂಭಕರ್ಣ. ಜೊತೆಯಲ್ಲಿ ತಿನ್ನುವುದಕ್ಕೂ. ಚೆನ್ನಾಗಿ ತಿಂದು ಮಲಗುವವನಿಗೆ ಕುಂಭಕರ್ಣ ಎಂದೇ ಕರೆಯುವುದು. ಆದರೆ ರಾವಣನ ತಮ್ಮ ಕುಂಭಕರ್ಣ ಮಹಾಪರಾಕ್ರಮಿ. ಅವನಿಗೆ ಬ್ರಹ್ಮನ ಶಾಪವಿತ್ತು. ಒಂದು ಬಾರಿ ಮಲಗಿದರೆ, ಆರು ತಿಂಗಳು ನಿದ್ದೆಯಲ್ಲಿ ತೊಡಗಿರುತ್ತಿದ್ದ. ಮತ್ತೆ ಎದ್ದರೆ ಒಂದು ದಿನ ಮಾತ್ರ ಎಚ್ಚರ. ಪುನಃ ಆರು ತಿಂಗಳು ನಿದ್ದೆ. ಕುಂಭಕರ್ಣ ತನ್ನ ಶಕ್ತಿಗೆ ತಕ್ಕಂತೆ ಬಹು ದೊಡ್ಡ ಹೊಟ್ಟೆಯನ್ನು ಹೊಂದಿದ್ದ. ಒಂದು ಲಕ್ಷ ಜನಕ್ಕೆ ಆಗುವ ಆಹಾರವನ್ನು ಅವನೊಬ್ಬನೆ ಮುಗಿಸುತ್ತಿದ್ದ.
ರಾಮರಾವಣರ ಯುದ್ಧದ ಸಮಯದಲ್ಲಿ ಕುಂಭಕರ್ಣನ ಅವಶ್ಯಕತೆ ಬಂದು, ಅವನನ್ನು ನಿದ್ರೆಯಿಂದ ಎಬ್ಬಿಸಲು ರಾವಣ ತನ್ನ ಮಂತ್ರಿಗಳಿಗೆ ಹೇಳಿದ. ಅವರೆಲ್ಲ ಕುಂಭಕರ್ಣನನ್ನು ಎಬ್ಬಿಸಲು ಮಾಡಿದ ಪ್ರಯತ್ನವೇ ರೋಚಕ ಕಥೆ. ಅನ್ನ ಮತ್ತು ಮಾಂಸದ ರಾಶಿ ಹಾಕಿ, ಚಂಡೆ ಮದ್ದಳೆಗಳನ್ನು ಬಾರಿಸಿ, ಹಗ್ಗ ಹಾಕಿ ಎಳೆದು, ಮೂಗಿಗೆ ಕಟ್ಟಿಗೆ ಹಾಕಿ ತಿರುಚಿ, ಕೂದಲು ಕಿತ್ತರೂ ಅವನು ಜಪ್ಪೆನ್ನಲಿಲ್ಲ. ಆನೆಗಳ ಕೈಲಿ ಎಳೆಸಿ , ತುಳಿಸಿ ಅವನನ್ನು ಎಬ್ಬಿಸುವಷ್ಟರಲ್ಲಿ ಅವರಿಗೆ ಅರ್ಧ ಜೀವವಾಗಿತ್ತು. ಎದ್ದವನ ಮುಂದಿದ್ದ ರಾಶಿ ರಾಶಿ ಆಹಾರವನ್ನು ಸ್ವಲ್ಪ ಹೊತ್ತಿನಲ್ಲೇ ಖಾಲಿ ಮಾಡಿಬಿಟ್ಟ. ಲಂಕೆಗೆ ಸಂಕಷ್ಟ ಬಂದಿದೆ ಎಂದು ಅಸುರರು ಕೈಮುಗಿದಾಗ ತನ್ನ ಅಣ್ಣನ ಬಳಿ ಹೋದನು. ನಡೆದ ವಿಷಯವನ್ನು ತಿಳಿದ ಕುಂಭಕರ್ಣ, "ಅಣ್ಣಾ, ಕೆಟ್ಟ ಕೆಲಸ ಮಾಡುವಾಗ ಇತರರ ಅಭಿಪ್ರಾಯ ಪಡೆಯದೆ, ಕಷ್ಟ ಬಂದಾಗ ಮಾತ್ರ ಬೇರೆಯವರಿಂದ ಸಹಾಯ ಪಡೆಯುವ ನಿನ್ನ ನೀತಿ ಸರಿಯಲ್ಲ" ಎಂದು ರಾವಣನನ್ನು ಖಂಡಿಸಿದ. ಆದರೂ ಲಂಕೆಯ ಮಾನ ಕಾಪಾಡುತ್ತೇನೆಂದು ಹೇಳಿ ರಣರಂಗಕ್ಕೆ ಹೋದನು.ವಾನರ ಹಿಂಡು ಅವನಿಗೆ ಲೆಕ್ಕಕ್ಕೇ ಇಲ್ಲ. ಹಿಡಿದಿಡಿದು ಬಾಯಿಯೊಳಗೆ ತುಂಬಿಕೊಳ್ಳತೊಡಗಿದ. ಅಂಥ ಹನುಮಂತನೇ ಅವನಿಂದ ಪೆಟ್ಟು ತಿಂದುಬಿಟ್ಟ. ಸಾಕ್ಷಾತ್ ಯಮನಂತೆ ರಣರಂಗದಲ್ಲಿ ಅಬ್ಬರಿಸಿದ ಕುಂಭಕರ್ಣ. ಕಡೆಗೆ ಶ್ರೀರಾಮನು ವಾಯುವ್ಯಾಸ್ತ್ರಗಳಿಂದ ಅವನ ತೋಳುಗಳನ್ನು, ಅರ್ಧಚಂದ್ರಾಸ್ತ್ರಗಳಿಂದ ಅವನ ಕಾಲುಗಳನ್ನೂ ಕತ್ತರಿಸಿಹಾಕಿದನು. ನಂತರ ಇಂದ್ರಾಸ್ತ್ರದಿಂದ ಅವನ ತಲೆ ತತ್ತರಿಸಿ ಕೊಂದನು.
ಕರ್ಣಾಟಕದ ಬಾಗೇಪಲ್ಲಿ, ಪೆನುಗೊಂಡ ಮಾರ್ಗವಾಗಿ ಅನಂತಪುರಕ್ಕೆ ಹೋಗುವ ದಾರಿಯಲ್ಲಿ, ಪೆನುಗೊಂಡದಿಂದ ೫ ಕಿ.ಮೀ. ಮುಂದೆ ಎಡಕ್ಕೆ ಕುಂಭಕರ್ಣ ಎಂಬ ಕ್ಷೇತ್ರವಿದೆ. ಅಲ್ಲಿ ಮೇಲಿನ ಚಿತ್ರದಲ್ಲಿರುವ ನಿದ್ರಾಭಂಗಿಯಲ್ಲಿರುವ ಕುಂಭಕರ್ಣನ ವಿಗ್ರಹವಿದೆ. ಎಷ್ಟು ದೊಡ್ಡದಾಗಿದೆಯೆಂದರೆ ಕುಂಭಕರ್ಣನ ಹೊಟ್ಟೆಯೊಳಗೆಲ್ಲಾ ನಾವು ಓಡಾಡಬಹುದು. ಅವನನ್ನು ಎಬ್ಬಿಸುವ ಪ್ರಯತ್ನದಲ್ಲಿರುವ ಅಸುರರು ಅವನ ಮೂಗಿನೊಳಗೆ ಕೋಲು ತೂರಿಸುವುದು, ನಗಾರಿ ಬಾರಿಸುವುದು, ಮಾಂಸದ ಅಡುಗೆಯಿಟ್ಟು ಆಕರ್ಷಿಸುವುದು, ತಿವಿಯುವುದು.... ಇವೆಲ್ಲಾ ನೋಡಲು ಸೊಗಸಾಗಿದೆ.
ಕುಂಭಕರ್ಣನ ಆಭರಣಗಳು, ಚಿಂತಾಕ್ರಾಂತನಾಗಿ ಕುಳಿತ ರಾವಣ, ಕುಂಭಕರ್ಣನನ್ನು ಎಬ್ಬಿಸಲು ಪ್ರಯತ್ನಿಸಿ ಧಣಿದ ರಾಕ್ಷಸರು ಅವನಿಗೆ ಕೊಡಲು ತಂದಿದ್ದ ಮಾಂಸವನ್ನು ಉಣ್ಣುತ್ತಿರುವುದು ಮನಸೆಳೆಯುತ್ತದೆ.
ಇನ್ನೇಕೆ ತಡ, ನೀವೂ ಕುಂಭಕರ್ಣ ನಿದ್ದೆಯಿಂದ ಮೇಲೆದ್ದು ನೋಡಲು ನಡೆಯಿರಿ ಕುಂಭಕರ್ಣನನ್ನು!

Saturday, December 20, 2008

ಚಿತ್ರ ಸರ(ಪ)ಣಿ!

ನಮ್ಮ ಫೋಟೋಗ್ರಫಿ ಇಂದು ಹೊಳೆ ದಂಡೆಯಲ್ಲಿ ಅಂದ ತಕ್ಷಣ ಮಕ್ಕಳೆಲ್ಲ ಚುರುಕಾಗಿಬಿಟ್ಟರು. ನೀರೆಂದರೆ ಯಾರಿಗೆ ಇಷ್ಟವಿಲ್ಲ, ಹೇಳಿ? ವಿಕಾಸ, ಸುಹಾಸ, ಸ್ವಾತಿ, ಅಶ್ವಿನಿ, ಭರತ... ಮಕ್ಕಳ ಮರಿಸೈನ್ಯದೊಂದಿಗೆ ಹೊರಟಾಗ ಮದ್ಯಾಹ್ನ ೩ ಗಂಟೆಯ ಚುರುಮುರಿ ಬಿಸಿಲು. ಹೊಳೆದಂಡೆ ಹತ್ತಿರವಾದಂತೆ ಹಣೆಯಲ್ಲಿ ಮುತ್ತಿನಂತೆ ಬೆವರು ಮೊಳೆತಿತ್ತು. ಆದರೆ ಮಕ್ಕಳಿಗೆ ಅದೆಲ್ಲಿ ಅಡಗಿರುತ್ತೋ ಆ ಚೈತನ್ಯ ಮತ್ತು ಉತ್ಸಾಹ. ನೀರು ಕಂಡೊಡನೆ 'ಓ...' ಎಂದು ಕೂಗುತ್ತಾ ಓಡತೊಡಗಿದರು. ಅರೆರೆ! ಅವರು ಓಡುವುದನ್ನೇ ಫೋಟೋ ತೆಗೆದರೆ ಹೇಗೆ ಎಂಬ ಐಡಿಯಾ ಹೊಳೆಯಿತು.
ಅಶ್ವಿನಿ, ಸುಹಾಸ, ಭರತ - ಮೂವರೂ 'ರೆಡಿ ಒನ್, ಟು, ತ್ರೀ...' ಅನ್ನುತ್ತಿದ್ದಂತೆ ರಭಸದಿಂದ ನುಗ್ಗಿಬಂದರು. ನಾನು ಕ್ಯಾಮೆರಾ ಕಂಟಿನ್ಯುಯಸ್ ಸ್ಪೀಡ್ ಗೆ ಹಾಕಿ ಬಟನ್ ಒತ್ತಿ ಹಿಡಿದೆ. ಅಂದುಕೊಳ್ಳುವುದೇ ಒಂದು ಆಗುವುದೇ ಒಂದು ಎನ್ನುವಂತೆ ಒಂದು ಆಕಸ್ಮಿಕ ಘಟಿಸಿತು. ಓಡುವಾಗ ಹೆಜ್ಜೆ ಜಾರಿ ಭರತ ಬಿದ್ದುಬಿಟ್ಟ. ಚಕಚಕನೆ ಕ್ಲಿಕ್ಕಿಸಿದ್ದರಿಂದ ಎಲ್ಲ ದಾಖಲಾಗಿಬಿಟ್ಟಿತು. ಪುನಃ ಮೂರ್ನಾಕು ಬಾರಿ ಅವರನ್ನು ಓಡಿಸಿದರೂ ಆ ಕ್ಷಣದಷ್ಟು ರೋಚಕವಾಗಿ ಮೂಡಿಬರಲಿಲ್ಲ.
ಇದು ಚಿತ್ರ ಸರಣಿಯೂ ಹೌದು, ಸರಪಣಿಯೂ ಹೌದು. ಪ್ರತಿಚಿತ್ರಗಳೂ ಪ್ರತ್ಯೇಕತೆಯನ್ನು ಉಳಿಸಿಕೊಂಡು ಒಂದಕ್ಕೊಂದು ಬಂಧವಿರಿಸಿಕೊಂಡಿವೆ.



Monday, December 15, 2008

ಹೈದರಾಬಾದ್ ಹೈಲೈಟ್ಸ್

ಪ್ರತಿ ನಗರವೂ ತನ್ನದೇ ಆದ ಸೊಗಸು, ಸೊಗಡು, ಸ್ವಾದ, ಸೆಳೆತ, ಭಾಷೆ, ಇತಿಹಾಸ, ಶೈಲಿ ಮತ್ತು ಮಾದಕತೆ ಹೊಂದಿರುತ್ತದೆ. ಇದಕ್ಕೆ ೪೦೦ ವರ್ಷ ವಯಸ್ಸಾದ ಹೈದರಾಬಾದ್ ಕೂಡ ಹೊರತಾಗಿಲ್ಲ.
ಚಾರ್ ಮಿನಾರ್, ಗೋಲ್ಕೊಂಡ ಕೋಟೆ, ಸಾಲಾರ್ಜಂಗ್ ವಸ್ತುಸಂಗ್ರಹಾಲಯ, ಬಿರ್ಲಾ ಮಂದಿರ, ಹುಸೇನ್ ಸಾಗರ್ ಇತ್ಯಾದಿ ನೋಡುವುದರೊಂದಿಗೆ ಇತರೇ ವೈವಿದ್ಯಗಳನ್ನು ಸವಿದಾಗಲೇ ಪ್ರವಾಸ ಚಂದವಾಗುವುದು.
ಸಮುದ್ರದಿಂದ ದೂರವಿದ್ದರೂ ಹೈದರಾಬಾದ್ ಭಾರತದ ಮುತ್ತಿನ ನಗರವೆಂದೇ ಪ್ರಸಿದ್ಢ. ಮುತ್ತುಗಳ ಪ್ರಿಯರಾದ ನಿಜಾಮರು ಇರಾಕ್, ಅರೇಬಿಯಾ, ಪರ್ಶಿಯಾಗಳಿಂದ ಮುತ್ತುಗಳನ್ನು ತರಿಸುತ್ತಿದ್ದರು. ನಿಜಾಮರ ಸ್ನೇಹದಿಂದ ಸೇಠ್ ಕೇದಾರ್ ನಾಥ್ ಜಿ ಮೋತಿವಾಲ ೧೯೦೬ರಲ್ಲಿ ಮೊಟ್ಟಮೊದಲ ಮುತ್ತಿನ ಅಂಗಡಿಯನ್ನು ಹೈದರಾಬಾದ್ ನಲ್ಲಿ ತೆಗೆದರು. ಮುತ್ತಿನ ಗಮ್ಮತ್ತೇ ಅಂತಹುದು. ಎಂಥವರನ್ನೂ ಆಕರ್ಷಿಸುತ್ತದೆ.
ಲಾಡ್ ಬಝಾರ್‍ - ಹೈದರಾಬಾದಿನ ಬಳೆಗಳ ಮಾರುಕಟ್ಟೆ. ೪೫೦ಕ್ಕೂ ಹೆಚ್ಚು ಬಳೆಗಳ ಅಂಗಡಿಗಳಿವೆ. ಬಣ್ಣಬಣ್ಣದ ಗಾಜಿನ ಚೂರುಗಳನ್ನು ಮಿಳಿತಗೊಳಿಸಿ ತಯಾರಿಸಿರುವ ಹೈದರಾಬಾದಿ ಬಳೆಗಳು ಲಲನೆಯರ ಕೈಗಳನ್ನು ಶೋಭಿಸುವ ಆಭರಣ.
ಆಟೋ ಟ್ಯಾಕ್ಸಿಗಳಲ್ಲಿ ಓಡಾಡುವುದು ಪಕ್ಕಕ್ಕೆ ಸರಿಸಿ ಇಲ್ಲಿನ ಮೂರು ಚಕ್ರದ ಸೈಕಲ್ ರಿಕ್ಷಾದಲ್ಲಿ ಕೂತು ಓಡಾಡಿ ನೋಡಿ. ಶ್ರಮದ ಮೋಡಿ ನಮ್ಮನ್ನು ಹೈದರಾಬಾದಿಗರನ್ನಾಗಿಸುತ್ತದೆ.
ಆಹಾರ ಪ್ರಿಯರಿಗಾಗಿ ಹೈದರಾಬಾದಿ ಬಿರ್ಯಾನಿ, ಪುಲ್ಲಾರೆಡ್ಡಿಯ ಸಿಹಿತಿಂಡಿಗಳು, ಕರಾಚಿ ಬೇಕರಿಯ ಹಣ್ಣಿನ ಬಿಸ್ಕತ್ ಗಳು ಬಾಯಲ್ಲಿ ನೀರುರಿಸುತ್ತವೆ. ಹೊಟ್ಟೆ ತುಂಬಿದ ಮೇಲೆ ಹೈದರಾಬಾದಿ ಪಾನ್ ಮೆಲ್ಲಿ ಅಥವಾ ಹೈದರಾಬಾದಿ ಇರಾನಿ ಛಾಯ್ ಸೇವಿಸಿ. ಆಗ ಪ್ರವಾಸ ಪರಿಪೂರ್ಣ ಒಳಗೂ ಹೊರಗೂ!