Sunday, January 30, 2011

"ಅರೆಕ್ಷಣದ ಅದೃಷ್ಟ" ಪುಸ್ತಕ ಬಿಡುಗಡೆ ಸಮಾರಂಭದ ಚಿತ್ರಗಳು

ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ ನನ್ನ "ಅರೆಕ್ಷಣದ ಅದೃಷ್ಟ" ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹಾರೈಸಿ, ಪ್ರೋತ್ಸಾಹ ನೀಡಿದ ಎಲ್ಲ ಸಹೃದಯವಂತ ಗೆಳೆಯರಿಗೂ ನನ್ನ ಹೃದಯಪೂರ್ವಕ ವಂದನೆಗಳು. ಆ ದಿನದ ಈ ಫೋಟೋಗಳನ್ನು ಶಿವು.ಕೆ.,ಪ್ರಕಾಶ್ ಹೆಗಡೆ ಮತ್ತು ರಾಜೇಶ ತೆಗೆದಿದ್ದಾರೆ.

ವಸುಧೇಂದ್ರರ ಅಪ್ಪುಗೆ.


ಹಿರಿಯ ಛಾಯಾಗ್ರಾಹಕರಾದ ಎಂ.ವಿಶ್ವನಾಥ್‌ರೊಂದಿಗೆ.


ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕಲಾಧರ್, ದೇವರಾಜ್ ಮತ್ತು ವರದನಾಯಕನಹಳ್ಳಿ ಶಾಲೆಯ ಶಿಕ್ಷಕರಾದ ನಾಗಭೂಷಣ್.





ಡಾ.ಶೇಷಶಾಸ್ತ್ರಿಯವರು ಸದಾ ಅಧ್ಯಯನದಲ್ಲಿ ನಿರತರು.





ಹಿರಿಯ ಛಾಯಾಗ್ರಾಹಕರಾದ ಹೆಬ್ಬಾರ್‌, ವರದನಾಯಕನಹಳ್ಳಿ ಶಾಲೆಯ ಶಿಕ್ಷಕರಾದ ವೆಂಕಟರೆಡ್ಡಿ, ಶಿಡ್ಲಘಟ್ಟ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಕಂಠ, ತರಬಳ್ಳಿ ಭಾಸ್ಕರರೆಡ್ಡಿ






































































































































































Saturday, January 22, 2011

ಅರೆಕ್ಷಣದ ಅದೃಷ್ಟ

ಆತ್ಮೀಯ ಬ್ಲಾಗ್ ಸ್ನೇಹಿತರಿಗೆ ನನ್ನ ನಮಸ್ಕಾರಗಳು.
ನವಕರ್ನಾಟಕ ಪ್ರಕಾಶನ ಸಂಸ್ಥೆಯವರು ಪ್ರಕಟಿಸುತ್ತಿರುವ ನನ್ನ ಪುಸ್ತಕ "ಅರೆಕ್ಷಣದ ಅದೃಷ್ಟ" ಭಾನುವಾರ ದಿನಾಂಕ ೨೩-೦೧-೨೦೧೧ ರಂದು ಬೆಳಿಗ್ಗೆ ೧೦ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ.ಪತ್ರಕರ್ತರು ಹಾಗೂ ಪರಿಸರವಾದಿಗಳೂ ಆದ ನಾಗೇಶ್ ಹೆಗಡೆ ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಎಸ್.ರಾಜಾರಾಮ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಯಮಾಡಿ ಬನ್ನಿ. ಶುಭ ಹಾರೈಸಿ.



ಉದ್ದನೆಯ ಹುಳು ನಿಧಾನವಾಗಿ ಪಾತರಗಿತ್ತಿಯ ರೂಪ ಆಗುವುದಾದರೂ ಹೇಗೆ? ಗೂಡಿನಲ್ಲಿ ಬೆಚ್ಚಗಿರುವ ಪುಟಾಣಿ ಹಕ್ಕಿಗಳಿಗೆ ಕಾಳುಗಳನ್ನು ತಂದುಕೊಡಲು ಹಕ್ಕಿಗಳು ಪಡುವ ಪ್ರಯಾಸವೇನು? ಕೀಟಗಳು ಕಡ್ಡಿಯ ಮೇಲೆ ಸರ್ಕಸ್ ಮಾಡುತ್ತ ಮುಂದೆ ಸಾಗುತ್ತಿದ್ದರೆ, ಅದರ ಮೇಲೆ ನಿಗಾ ಇಡುವ ಹಕ್ಕಿ ಮುಂದಿನ ತಂತ್ರವೇನು?....ಇನ್ನೂ ಮುಂತಾದ ಪ್ರಶ್ನೆಗಳಿಗೆ ಚಿತ್ರಗಳೊಂದಿಗೆ ಉತ್ತರಿಸಲು ಪ್ರಯತ್ನಿಸಿದ್ದೇನೆ. ದಯವಿಟ್ಟು ಓದಿ. ಮಕ್ಕಳಿಗೂ ಕೊಡಿ. ನಿಮ್ಮ ಅನಿಸಿಕೆಯನ್ನು ತಿಳಿಸಿ.




ನಿಮ್ಮೆಲ್ಲರ ಹಾರೈಕೆಗಳನ್ನು ಆಶಿಸುವ,
ಇಂತಿ,
ಮಲ್ಲಿಕಾರ್ಜುನ.ಡಿ.ಜಿ.ಶಿಡ್ಲಘಟ್ಟ

Tuesday, January 18, 2011

ಉಣಿಸೆ ಮೀನಿಗಾಗಿ ಪಕ್ಷಿ, ಮನುಷ್ಯರ ಸ್ಪರ್ಧೆ - ಕೆಸರಿನಲ್ಲಿ ನಡೆಯುವ ಜುಗಲಬಂದಿ

ಅಗಲವಾದ ರಕ್ಕೆ ಬಿಚ್ಚಿಕೊಂಡು ಗಿಡುಗ ಆಹಾರಕ್ಕಾಗಿ ಅತ್ತ ಹೊಂಚು ಹಾಕುತ್ತಿದ್ದರೆ, ಇತ್ತ ಅದೇ ಆಹಾರಕ್ಕಾಗಿ ಕೆಲ ಮಂದಿ ಶ್ರಮಿಸುತ್ತಿದ್ದರು. ಅಹಾರ ತನಗೆ ಸಿಕ್ಕೀತು ಎಂದು ದೊಡ್ಡ ಸುತ್ತುಗಳನ್ನು ಹಾಕುತ್ತ ಗಿಡುಗ ನಿಗಾವಹಿಸಿದ್ದರೆ, ಇದ್ದಬದ್ದ ಎಲ್ಲವನ್ನೂ ಒಯ್ದುಬಿಡಬೇಕು ಎಂಬ ಉಮೇದು ಕೆಲ ಮಂದಿಯದ್ದು. ಆಹಾರ ಒಂದು, ಬೇಟೆಗಾರರು ಹಲವರು ಎಂಬಂತೆ ನಡೆದಿತ್ತು ಜುಗಲಬಂದಿ.

ಪಕ್ಷಿ ಮತ್ತು ಮನುಷ್ಯರ ನಡುವಿನ ಆಹಾರ ಸಂಘರ್ಷ ಕಂಡು ಬಂದದ್ದು ಶಿಡ್ಲಘಟ್ಟದ ಕೈವಾರ ರಸ್ತೆಯಲ್ಲಿರುವ ತಮ್ಮನಹಳ್ಳಿ ಕೆರೆಯ ಬಳಿ. ಆಹಾರದ ರೂಪದಲ್ಲಿ ಇದ್ದದ್ದು ಬೃಹತ್ ಪ್ರಾಣಿಯೇನಲ್ಲ, ಪುಟ್ಟ ಪುಟ್ಟ ಆಕಾರದ ‘ಉಣಿಸೆ ಮೀನು’.


ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಕೆರೆಯಲ್ಲಿ ಉಣಿಸೆ ಮೀನು ಹಿಡಿಯುತ್ತಿರುವ ಗ್ರಾಮಸ್ಥರು.

ಸಾಮಾನ್ಯವಾಗಿ ಕೆರೆಯಲ್ಲಿ ನೀರು ಕಡಿಮೆಯಾದಾಗ. ಅಳಿದುಳಿದ ಸ್ವಲ್ಪ ನೀರಿನಲ್ಲಿ ಉಣಿಸೆ ಮೀನು ಸಿಗುತ್ತವೆ. ನಾಟಿ ಮೀನುಗಳಲ್ಲಿಯೇ ಅತ್ಯಂತ ಸಣ್ಣ ಮೀನುಗಳು ಕೆರೆಗಳಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಚಿಮ್ಮತೊಡಗುತ್ತವೆ. ಈ ಒಂದು ಕ್ಷಣಕ್ಕಾಗಿ ಕಾಯುವ ನೀರು ಹಕ್ಕಿಗಳು ಮತ್ತು ಇತರ ಪಕ್ಷಿಗಳು ಗುಂಪುಗುಂಪಾಗಿ ಕೆರೆ ಬಳಿ ಬರುತ್ತವೆ. ಗ್ರಾಮಸ್ಥರು, ‘ಉಣಿಸಲೆದ್ದವೆ ಹಿಡಿಯೋಕೋಗೋಣ ಬರ್ರೋ’ ಎನ್ನುತ್ತಾ ಸಂಭ್ರಮದಿಂದ ಕೆರೆಗಳತ್ತ ಹೋಗುತ್ತಾರೆ. ಗದ್ದೆಗಳಲ್ಲಿ ಹಾಕುವ ರೀತಿ ಟಾಕುಗಳನ್ನು ಕೆರೆಯಲ್ಲಿ ಹಾಕಿ ಉಣಿಸೆ ಮೀನುಗಳನ್ನು ಹಿಡಿಯುತ್ತಾರೆ.


ಮೀನುಹಿಡಿಯಲು ಬಂದ ಬಿಳಿಗರುಡ.

ಉಣಿಸೆ ಮೀನುಗಳು ನೋಡಲಿಕ್ಕೂ ಚೆಂದ, ತಿನ್ನಲು ಸಹ ರುಚಿಕಟ್ಟು. ಆದರೆ ಅವುಗಳನ್ನು ಪಡೆಯಲು ಮೈಕೈ ಎಲ್ಲವೂ ಕೆಸರು ಮಾಡಿಕೊಳ್ಳಬೇಕು. ಗೊಜ್ಜು ಗೊಜ್ಜಾದ ನೀರಿನಲ್ಲಿ ಜರಡಿ ಹಿಡಿದು ಶೋಧಿಸಿ, ಕಪ್ಪೆ, ಏಡಿ ಮುಂತಾದವುಗಳನ್ನು ಬದಿಗಿರಿಸಿ, ಮಣ್ಣಿನಲ್ಲಿ ತೊಳೆದು ಶುದ್ಧೀಕರಿಸಿದಾಗ ಮೀನುಗಳು ಕೈಗೆ ಸಿಗುತ್ತವೆ. ಇಷ್ಟೆಲ್ಲ ಕಷ್ಟಪಟ್ಟು ಮೀನುಗಳನ್ನು ಕೆರೆಯಿಂದ ತೆಗೆದು ಪಕ್ಕಕ್ಕೆ ಇರಿಸಿದರೆ ಸಾಕು, ರೊಂಯ್ಯನೇ ಬರುವ ಗಿಡುಗಗಳು ತಮ್ಮ ಪಂಜದಲ್ಲಿ ಮೀನನ್ನು ಹಿಡಿದು ಹಾರಿಬಿಡುತ್ತವೆ. ಇಷ್ಟಕ್ಕೆ ತೃಪ್ತಿಪಡದ ಹದ್ದು ಮತ್ತು ಗಿಡುಗಗಳು ಹೊಂಚು ಹಾಕುತ್ತ ಆಕಾಶಪೂರ್ತಿ ಸುತ್ತುತ್ತ ಇರುತ್ತವೆ.

ಬೇಕಾದ ಮೀನುಗಳನ್ನು ಒಯ್ಯುವ ಜನರು ಕೆರೆಯಂಚಿನಲ್ಲಿ ಬೇಡದ ಮೀನುಗಳನ್ನು, ಕಪ್ಪೆಗಳನ್ನು, ಏಡಿಗಳನ್ನು ಎಸೆದು ಹೋಗುತ್ತಾರೆ. ಇದರಿಂದ ಕೆರೆ ಪರಿಸರ ಮಲಿನಗೊಳ್ಳುತ್ತದೆ. ಮತ್ತವೇ ಹದ್ದು ಮತ್ತು ಗಿಡುಗಗಳು ಬಂದು ಅವುಗಳನ್ನು ತಮ್ಮ ಪಂಜದಲ್ಲಿ ಹಿಡಿದುಕೊಂಡು ಆ ಸ್ಥಳದಿಂದ ದೂರದೂರಕ್ಕೆ ಹೋಗುತ್ತವೆ. ಇದನ್ನೆಲ್ಲ ನೋಡುವ ಜನರು, ‘ಹದ್ದುಗಳು ನಿಸರ್ಗದ ಪೌರ ಕಾರ್ಮಿಕರು’ ಎಂದು ತಮಾಷೆ ಕೂಡ ಮಾಡುತ್ತಾರೆ.


ಹಾರುವಾಗಲೇ ಕೆಳಗಿರುವ ಮೀನನ್ನು ಅಂದಾಜಿಸಿ ವೇಗ ಮತ್ತು ಗಾಳಿಯದಿಕ್ಕನ್ನು ಲೆಕ್ಕ ಹಾಕಿಕೊಂಡು ಮೀನನ್ನು ಹಿಡಿಯುವ ಗರುಡ.

‘ಉಣಿಸೆ ಮೀನಿನ ಸಾರು ರುಚಿಕಟ್ಟಾದದ್ದು. ಅತ್ಯಂತ ಸಣ್ಣದಾಗಿರುವ ಈ ಮೀನುಗಳನ್ನು ಬೂದಿ, ರಾಗಿ ಹಿಟ್ಟು, ಹುಣಸೆಹಣ್ಣು ಮತ್ತು ಉಪ್ಪಿನಲ್ಲಿ ಬಳಸಿ ಗುಡ್ಡೆ ಹಾಕಿಕೊಂಡು ತೊಳೆಯುತ್ತಾರೆ. ಕೆಲವರು ಗಟ್ಟಿಯಾಗಿ ಸಾರು ಮಾಡಿದರೆ, ಇನ್ನು ಕೆಲವರು ಬಸಿದು ಸಾರು (ಬಸ್ಸಾರು) ಮಾಡುತ್ತಾರೆ. ಜನ ಹೆಚ್ಚು ಇಷ್ಟಪಡುವುದು ರಾಗಿ ಮುದ್ದೆ ಮತ್ತು ತಂಗಳು ಸಾರು. ಈ ಮೀನುಗಳು ತಿನ್ನುವುದರಿಂದ ದೇಹಕ್ಕೆ ಪೌಷ್ಠಿಕತೆ ಸಿಗುತ್ತದೆ. ಮುಳ್ಳು ಚುಚ್ಚುವ ಭಯವಿರುವುದಿಲ್ಲ. ಆದರಿಂದ ಮಕ್ಕಳಿಂದ ಮುದುಕರವರೆಗೂ ಇದು ಉತ್ತಮ ಹಾಗೂ ರುಚಿಕಟ್ಟಾದ ಆಹಾರ’ ಎನ್ನುತ್ತಾರೆ ಪಾಕಪ್ರವೀಣರು.


ಹಾರುವ ಬಿಳಿಗರುಡನ ತೀಕ್ಷ್ಣ ನೋಟ.

‘ಉಣಿಸೆ ಮೀನು ನೋಡಿದರೆ, ಅನೇಕರ ಬಾಯಲ್ಲಿ ನೀರು ಒಸರುತ್ತದೆ. ಇದರ ರುಚಿ ತಿಳಿದವರು ಹಣಕ್ಕೆ ಪ್ರಾಮುಖ್ಯತೆ ನೀಡದೇ ಎಷ್ಟಾದರೂ ಕೊಳ್ಳುತ್ತಾರೆ. ನಮ್ಮ ಮನೆಗಾಗಿ ನಾವು ಇಲ್ಲಿ ಮೀನುಗಳನ್ನು ಹಿಡಿಯುತ್ತೇವೆ. ಆದರೆ ಇಲ್ಲಿ ಕೆಲವರು ಒಂದು ಕೆಜಿಗೆ ೨೫೦ ರೂಪಾಯಿಯಂತೆ ಮೀನುಗಳನ್ನು ಮಾರುತ್ತಾರೆ. ಕೆಸರಿನಲ್ಲಿ ಇಡೀ ದಿನ ನಿಂತು ಮೀನು ಹಿಡಿಯುವ ಶ್ರಮ ಮೀನುಸಾರು ತಿನ್ನುವಾಗ ಸಾರ್ಥಕವಾಯಿತು ಅನ್ನಿಸುತ್ತದೆ’ ಎಂದು ತಮ್ಮನಹಳ್ಳಿಯ ನಾರಾಯಣಸ್ವಾಮಿ ತಿಳಿಸಿದರು.
‘ಕೆರೆಗಳಲ್ಲಿ ನೀರು ನಿಲ್ಲದೇ ಬಟಾಬಯಲಾಗುತ್ತಿದೆ. ದೊಡ್ಡ ಮಾವಿನ ತೋಪುಗಳು, ಕೋಸು ಮುಂತಾದ ಬೆಳೆಗಳಿಗೆ ಸಿಂಪಡಿಸುವ ವಿಷಕಾರಿ ಕ್ರಿಮಿನಾಶಕ ಬಳಸಿದ ಪಂಪ್ ಮತ್ತು ಡ್ರಮ್‌ಗಳನ್ನು ಕೆರೆಯಲ್ಲಿ ತೊಳೆಯುತ್ತಾರೆ. ಲಾರಿ, ಟೆಂಪೋ ಮುಂತಾದ ದೊಡ್ಡ ವಾಹನಗಳನ್ನು ಕೆರೆಯಲ್ಲಿ ತೊಳೆದು ಡೀಸಲ್, ಆಯಿಲ್ ಕೆರೆಯ ನೀರಿಗೆ ಸೇರುತ್ತಿದೆ. ಔಷಧಿ ಸಿಂಪಡಿಸಿರುವ ಗಡ್ಡೆ ತರಕಾರಿಗಳನ್ನು ತೊಳೆಯಲು ರೈತರು ಕೆರೆಯನ್ನೇ ಅವಲಂಬಿಸುತ್ತಾರೆ. ಕೆರೆಯಲ್ಲಿ ಮೀನುಭಕ್ಷಕ ಮೀನುಸಾಕಾಣಿಕೆ ಮುಂತಾದ ಕಾರಣಗಳಿಂದ ಈಗ ಉಣಿಸೆ ಮೀನುಗಳು ಅಪರೂಪವಾಗುತ್ತಿವೆ. ಸ್ಥಳೀಯ ಮೀನುಗಳಲ್ಲಿ ಪ್ರಸಿದ್ಧವಾದ ಉಣಿಸೆ ಮೀನುಗಳನ್ನು ಉಳಿಸುವುದರಿಂದ ಕೆರೆಗಳ ಅಭಿವೃದ್ಧಿಯೂ ಆಗುತ್ತದೆ, ಇದರ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಅವರು ತಿಳಿಸಿದರು.


ಬಿಳಿಗರುಡ ಪಕ್ಷಿಯ ಹರವಿಕೊಂಡ ರೆಕ್ಕೆಗಳ ಮೇಲಿನ ಚಿತ್ತಾರ ನೋಡಲು ಬಲು ಸುಂದರ.

Monday, December 6, 2010

ಮನೆಮನೆಗೂ ಆವರಿಸಿದ ಅಮೃತಬಳ್ಳಿ


ಶಿಡ್ಲಘಟ್ಟದ ಗೌಡರಬೀದಿಯ ಗೃಹಿಣಿ ಶಿವಲೀಲಮ್ಮ ರಾಜಣ್ಣ ತಮ್ಮ ಕಾಂಪೌಂಡಿಗೆ ಹಬ್ಬಿಸಿರುವ ಅಮೃತಬಳ್ಳಿ ಸಸ್ಯ.


ಕಳೆದ ವರ್ಷ ಹೆಚ್೧ಎನ್೧ ಸೋಂಕು ತೀವ್ರ ಸ್ವರೂಪದಲ್ಲಿ ವ್ಯಾಪಿಸಿದ್ದ ಸಂದರ್ಭದಲ್ಲಿ ಬಹುತೇಕ ಮಂದಿ ಆಯುರ್ವೇದ, ಹೋಮಿಯೋಪಥಿ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳ ಜೊತೆಗೆ ಗಿಡಮೂಲಿಕೆ ಔಷಧಿಗಳ ಬಗ್ಗೆಯೂ ಚರ್ಚಿಸುತ್ತಿದ್ದರು. ಅವುಗಳಲ್ಲಿ ಅಮೃತಬಳ್ಳಿ ಕೂಡ ಒಂದು. ಅಮೃತಬಳ್ಳಿ ಬಗ್ಗೆ ನಂಬಿಕೆ ಮೂಡಿಸಿಕೊಂಡಿದ್ದ ಕೆಲವರು ಅದರ ಬಗ್ಗೆ ಮೊಬೈಲ್‌ನಲ್ಲಿ ಎಸ್ಎಂಎಸ್ ಮತ್ತು ಇಮೇಲ್ ಸಂದೇಶಗಳನ್ನೂ ಸಹ ರವಾನಿಸಿದ್ದರು.

ಪ್ರಚಾರದ ಪ್ರಭಾವವೋ ಅಥವಾ ಬೇರೆ ಕಾರಣವೋ ನಿಖರವಾಗಿ ಗೊತ್ತಿಲ್ಲ. ಆದರೆ ನಮ್ಮೂರಿನ ಬಹುತೇಕ ಮನೆಗಳಲ್ಲಿ ಅಮೃತಬಳ್ಳಿಯನ್ನು ಬೆಳೆಸಲಾಗುತ್ತಿದೆ. ಸುಂದರ ಚಪ್ಪರದ ರೂಪದಲ್ಲಿ ಮನೆ ಸುತ್ತಮುತ್ತಲೂ ಅದು ಬೆಳೆಯುತ್ತಿದೆ.


ಶಿಡ್ಲಘಟ್ಟದ ಗೌಡರಬೀದಿಯ ಗೃಹಿಣಿ ಶಾಂತಮ್ಮಮುನಿಕೃಷ್ಣಪ್ಪ ಅವರ ಮನೆಯ ಮೇಲೆಲ್ಲಾ ಹಬ್ಬಿರುವ ಅಮೃತಬಳ್ಳಿ ಸಸ್ಯ.

ಗೌಡರ ಬೀದಿಯಲ್ಲಿರುವ ಶಿವಲೀಲಮ್ಮ ರಾಜಣ್ಣ ತಮ್ಮ ಮನೆ ಎದುರಿನ ಕಾಂಪೌಂಡ್ ಮೇಲೆ ಅಮೃತಬಳ್ಳಿ ಬೆಳೆಸಿದ್ದರೆ, ಅದೇ ಬೀದಿಯ ಶಾಂತಮ್ಮಮುನಿಕೃಷ್ಣಪ್ಪ ಮನೆ ಮೇಲೆಲ್ಲಾ ಪಸರಿಸುವಂತೆ ಬೆಳೆಸಿದ್ದಾರೆ. ಷರಾಫ್ ಬೀದಿಯ ಮುರಳಿ ಮನೆಯ ಎರಡು ಅಂತಸ್ತುಗಳಲ್ಲೂ ಅಮೃತಬಳ್ಳಿ ಹರಡಿದ್ದು ಆಕರ್ಷಕವಾಗಿದೆ. ಹೀಗೆ ಪಟ್ಟಣದ ರಾಘವೇಂದ್ರಸ್ವಾಮಿ ಗುಡಿ ಬೀದಿ, ವಾಸವಿ ರಸ್ತೆ, ಹೌಸಿಂಗ್ ಬೋರ್ಡ್ ಮುಂತಾದ ಕಡೆ ಅಮೃತಬಳ್ಳಿ ಬೆಳೆಸಿದ್ದಾರೆ.


ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯ ಗೋವಪ್ಪನವರ ವೆಂಕಟರಾಯಪ್ಪನವರ ಕಾಂಪೋಂಡಿಗೆ ಹಬ್ಬಿರುವ ಅಮೃತಬಳ್ಳಿ ಸಸ್ಯ.

ಹೃದಯಾಕಾರದ ಎಲೆ ಹೊಂದಿರುವ ಅಮೃತಬಳ್ಳಿಯ ಸಸ್ಯಶಾಸ್ತ್ರೀಯ ಹೆಸರು ಟೈನೋಸ್ಪೋರಾ ಕಾರ್ಡಿಫೋಲಿಯಾ. ಎಲ್ಲಾ ವಾತಾವರಣದಲ್ಲೂ ಹುಲುಸಾಗಿ ಬೆಳೆಯುವ ಇದಕ್ಕೆ ಸಂಸ್ಕೃತದಲ್ಲಿ ಗುಡುಚಿ, ಮಧುಪುರಾನಿ, ಅಮ್ರಿತಾ, ಕುಂಡಲಿನಿ, ಚಾಕ್ರಲಕ್ಷನಿಕಾ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.
"ಜ್ವರ, ಶೀತ, ಅಧಿಕ ರಕ್ತದೊತ್ತಡ, ನೋವು, ವಾತ, ಮೈಕೈನೋವು, ಕಾಮಾಲೆ, ರಕ್ತಹೀನತೆ, ಹೃದ್ರೋಗ, ದಡಾರ, ಉಗುರುಸುತ್ತು, ಅಲರ್ಜಿ, ಸುಟ್ಟಗಾಯ, ಋತುಸ್ರಾವದ ತೊಂದರೆ, ಎದೆ ಹಾಲು ಕೊರತೆ, ಗರ್ಭಿಣಿಯರ ನಂಜು, ಚರ್ಮರೋಗ ಮುಂತಾದ ಅನೇಕ ಕಾಯಿಲೆಗಳಿಗೆ ಔಷಧಿ ಅಮೃತಬಳ್ಳಿ. ಸಕ್ಕರೆ ಖಾಯಿಲೆಗೆ ಅಮೃತಬಳ್ಳಿ ಎಲೆ, ಬೇವಿನ ಎಲೆ, ಬಿಲ್ವಪತ್ರೆಗಳನ್ನು ಒಣಗಿಸಿ ಪುಡಿಮಾಡಿ ಪ್ರತಿದಿನ ಬೆಳಿಗ್ಗೆ ಒಂದು ಚಮಚ ನೀರಿನೊಂದಿಗೆ ಸೇವಿಸಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಇದರ ಕಾಂಡದ ಕಷಾಯ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಔಷಧಿ. ಹಾವು, ಚೇಳುಗಳ ಕಡಿತಕ್ಕೆ ಇದರ ಕಾಂಡವನ್ನು ತೇಯ್ದು ಹಚ್ಚಿದರೆ ವಿಷ ಕಡಿಮೆಯಾಗುತ್ತದೆ" ಎಂದು ವನ ಔಷಧಿಗಳ ಬಗ್ಗೆ ಅರಿವಿರುವ ಸ.ರಘುನಾಥ ತಿಳಿಸಿದರು.


ಶಿಡ್ಲಘಟ್ಟದ ಷರಾಫ್ ಬೀದಿಯ ಮುರಳಿಯವರ ಮನೆಯ ಎರಡು ಮಹಡಿಗೂ ಹಬ್ಬಿರುವ ಅಮೃತಬಳ್ಳಿ ಸಸ್ಯ.

"ನಾವು ಮೂರು ವರ್ಷಗಳಿಂದ ಅಮೃತಬಳ್ಳಿ ಬೆಳೆಸುತ್ತಿದ್ದೇವೆ. ಮನೆ ಬಳಿ ಅಥವಾ ಹೂತೋಟಗಳಲ್ಲಿ ಈ ಸಸ್ಯವನ್ನು ಬೆಳೆಸುವುದರಿಂದ ಹಾವು ಬರುವುದಿಲ್ಲ. ಇದು ಮನೆಮದ್ದಾಗಿ ಸದಾಕಾಲ ಬಳಕೆಗೆ ಬರುತ್ತದೆ. ನಮ್ಮ ಯಜಮಾನರಿಗೆ ಸಕ್ಕರೆ ಖಾಯಿಲೆಯಿರುವುದರಿಂದ ಅವರು ಪ್ರತಿನಿತ್ಯ ಬೆಳಿಗ್ಗೆ ನಾಲ್ಕು ಎಲೆಗಳನ್ನು ತಿನ್ನುತ್ತಾರೆ. ಸಣ್ಣ ಪುಟ್ಟ ಖಾಯಿಲೆಗಳಿಗೆ ನಾವು ಔಷಧಿ ಅಂಗಡಿಗೆ ಹೋಗುವುದೇ ಇಲ್ಲ. ಇದರ ಚಿಕ್ಕ ಕಾಂಡವನ್ನು ನೆಟ್ಟರೆ ಸಾಕು ಬೆಳೆಯುತ್ತದೆ. ನಮ್ಮಿಂದ ಅನೇಕರು ತೆಗೆದುಕೊಂಡು ಹೋಗಿ ಬೆಳೆಸುತ್ತಿದ್ದಾರೆ” ಎಂದು ಗೌಡರಬೀದಿಯ ಗೃಹಿಣಿ ಶಿವಲೀಲಮ್ಮ ರಾಜಣ್ಣ ತಿಳಿಸಿದರು.