"ಟೆನ್ ಪ್ಯಾಕೆಟ್ಸ್ ಗ್ಲೂಕೋಸ್" ಎಂದು ಗಡುಸು ಧ್ವನಿ ಕೇಳಿತು. "ಯಾರಪ್ಪ ಇದು... ಪೆಹೆಲಾ ಬೋಣಿ ಪಂಚಕಲ್ಯಾಣಿ..." ಅಂದುಕೊಳ್ಳುತ್ತಾ ನೋಡಿದೆ.
ಎತ್ತರದ ವ್ಯಕ್ತಿ. ಜೀನ್ಸ್ ಟೀಶರ್ಟ್. ಊರಿಗೆ ಹೊಸಬನ್ಂತಿದ್ದಾನೆ. ರಸ್ತೆಯಲ್ಲಿ ಕಾರನ್ನೂ ನಿಲ್ಲಿಸಿದ್ದಾನೆ. ಅದು ರೇಸ್ ಕಾರು!
ಗ್ಲೂಕೋಸ್ ಕವರಿನಲ್ಲಿ ಜೋಡಿಸುತ್ತಿದ್ದೆ. ಆಗವನು, "ಅರ್ಜೆಂಟ್, ಅರ್ಜೆಂಟ್.." ಅಂದ.
"ಕಾರ್ rally...?" ಎಂದು ಪ್ರಶ್ನಿಸಿದೆ.
"ಎಸ್ ಎಸ್ ಕೆ-೧೦೦೦ rally" ಅಂದ.
* * * *
ಶನಿವಾರ. ಕೆ-೧೦೦೦ rallyಯ ಮೂರನೆ ದಿನ ಹಾಗೂ ಕಡೆಯ ದಿನ. ಎರಡು ದಿನದಿಂದಲೂ ಸಂಜೆ ವೇಳೆ ಮಳೆ ಬಿದ್ದಿತ್ತು. ಮೋಡ ಮುಸುಕಿತ್ತು. ಫೋಟೋ ತೆಗೆಯಲಾಗದಿದ್ರೂ ನೋಡಿಯಾದ್ರೂ ಬರೋಣವೆಂದು ಅಜಿತ್ ಜೊತೆ ಹೊರಟೆ.
ಅವರ ಕ್ಯಾಂಪ್ ಇದ್ದದ್ದು ದ್ಯಾವಪ್ಪನ ಗುಡಿ ಬಳಿ. ಆಗಲೇ ಶುರುವಾಗಿದ್ದರಿಂದ ಅಲ್ಲೆಲ್ಲಾ ಖಾಲಿ ಇತ್ತು. ಎಂಡ್ ಪಾಯಿಂಟ್ಗೆ ಹೋಗೋಣವೆಂದುಕೊಂಡು ಅಬ್ಲೂಡು ಬಳಿ ಹೋದರೆ ಪೋಲೀಸರು ಬಿಡಲಿಲ್ಲ. ನನ್ನ ಕ್ಯಾಮೆರಾ ನೋಡಿ ಎಸ್.ಐ., "ಇಲ್ಲಿ ಬೇಡ್ರೀ. ನಿಮ್ಮೊಬ್ಬರನ್ನು ಬಿಟ್ರೆ ಬೇರೆಯವರನ್ನೂ ಬಿಡಬೇಕಾಗುತ್ತೆ. ಶೆಟ್ಟಳ್ಳಿ ಹತ್ರ ಹೋಗಿ. ಅಲ್ಲಿ ಚೆನ್ನಾಗಿ ತೆಗೀಬಹುದು" ಅಂದರು.
ಅಲ್ಲಿಂದ ಹೊರಟು ಮಲ್ಲಳ್ಳಿ ಮುಖಾಂತರ ಶೆಟ್ಟಳ್ಳಿಗೆ ಬಂದೆವು. ಅಲ್ಲಿ ಬೈಕ್ ಬಿಟ್ಟು ಅಡ್ಡ ದಾರಿ ಹಿಡಿದೆವು. ತೋಟಗಳ ಮುಖಾಂತರ ಹಾದು ರ್ಯಾಲಿಯ ರಸ್ತೆಗೆ ಬಂದೆವು. ಅಲ್ಲಿ ಆಗಲೇ ಸಾಕಷ್ಟು ಜನ ಜಮಾಯಿಸಿದ್ದರು.
* * * *
ಐಎನ್ಆರ್ಸಿ(ಇಂಡಿಯನ್ ನ್ಯಾಷನಲ್ rally ಚಾಂಪಿಯನ್ಷಿಪ್)ಯ ಎರಡನೇ ಲೆಗ್ ಆಗಿರುವ ಈ rallyಯನ್ನು ನಡೆಸಿದ ಸಂಘಟಕರು ಕರ್ನಾಟಕ ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್, ಐಎಂಜಿ ಹಾಗೂ ಪ್ರೋ ಸ್ಪೋರ್ಟ್ಸ್ ಪ್ರಮೋಷನ್.
ಚಿಕ್ಕಬಳ್ಳಾಪುರ ಜಿಲ್ಲೆಯ ನಮ್ಮೂರು ಶಿಡ್ಲಘಟ್ಟದಲ್ಲಿ ಮಲ್ಬರಿ, ಸಿಲ್ಕ್ ಮತ್ತು ಕ್ಲೇ ಎಂದು ಮೂರು ಸ್ಟೇಜ್ಗಳನ್ನು ನಿರ್ಮಿಸಲಾಗಿತ್ತು.
ಸುಮಾರು ೬೦ ಮಂದಿ rallyಯನ್ನು ಆರಂಭಿಸಿದರಾದರೂ, ಬಹುತೇಕ ಚಾಲಕರು ಇಲ್ಲಿ ಸವಾಲು ಎದುರಿಸಲು ವಿಫಲರಾದರು.
ಮಳೆ ಬಿದ್ದಿದ್ದರಿಂದ ಕಾರು ಓಡಿಸುವುದು ಅಷ್ಟು ಸುಲಭವಿರಲಿಲ್ಲ. ಚಕ್ರಗಳು ಸ್ಕಿಡ್ ಆಗುತ್ತಿತ್ತು.
ಆದರೂ ದೇಶದ ಹೆಸರಾಂತ ರೇಸಿಂಗ್ ತಂಡವಾದ ಟೀಮ್ ಎಂಆರ್ಎಫ್ ೩೫ನೇ ಕರ್ನಾಟಕ-೧೦೦೦ rallyಯಲ್ಲಿ ಮೆರೆಯಿತು.
ಎಂಆರ್ಎಫ್ ತಂಡದ ಅರ್ಜುನ್ ಬಾಲು ಹಾಗೂ ಸುಜಿತ್ಕುಮಾರ್ ಮೊದಲ ಸ್ಥಾನ ಪಡೆದರೆ, ಎಂಆರ್ಎಫ್ನವರೇ ಆದ ಗೌರವ್ಗಿಲ್ ಮತ್ತು ಮೂಸಾಶರೀಫ್ ಎರಡನೇ ಸ್ಥಾನ ಪಡೆದರು.
ಮಲಗಿ ಫೋಟೋ ತೆಗೆಯುವ ಪರಿ!
ಪ್ರಥಮ ಸ್ಥಾನ ಪಡೆದ ಅರ್ಜುನ್ಬಾಲು ಮತ್ತು ಸುಜಿತ್ಕುಮಾರ್ ಕಾರು.
ಎಷ್ಟು ಎತ್ತರ?
ದ್ವಿತೀಯ ಸ್ಥಾನ ಪಡೆದ ಗೌರವ್ಗಿಲ್ ಮತ್ತು ಮೂಸಾಶರೀಫ್ ಕಾರು.


























































