Monday, April 13, 2009

ವೈವಿಧ್ಯಮಯ ದೃಷ್ಟಿಬೊಂಬೆಗಳು

"ಸ್ವಲ್ಪ ಇರಿ. ಇದಕ್ಕೆ ಸರಿಯಾಗಿ ನಿಲ್ಲೋದನ್ನು ಹೇಳಿಕೊಡ್ತೀನಿ" ಅಂತ ನನ್ನ ಸ್ನೇಹಿತ ರೆಡ್ಡಿ ತಾಲೀಮು ನಡೆಸಿದ್ದಾನೆ. (ಅವರೆ ಬೆಳೆ)
ತಮ್ಮ ಬೆಳೆಗೆ ರೋಗ ಬರದಿರಲಿ, ಜನರ ಕೆಟ್ಟ ದೃಷ್ಟಿ ಬೀಳದಿರಲಿ ಮತ್ತು ಬೆಳೆ ಚೆನ್ನಾಗಿ ಆಗಲೆಂದು ಕೋಲಾರ ಜಿಲ್ಲೆಯಲ್ಲಿ ರೈತರು ಬೆಳೆ ಅರ್ಧ ಹಂತದಲ್ಲಿದ್ದಾಗ "ಸೀಡುದ್ಯಾವರ" ಅಂತ ಮಾಡುತ್ತಾರೆ. ಗ್ರಂಥಿಕೆ ಅಂಗಡಿಯಲ್ಲಿ ಸಿಗುವ "ಪಚ್ಚೆಅಚ್ಚು" ಎಂಬ ಪೂಜಾಸಾಮಗ್ರಿಯನ್ನು ತಂದು ಏಳು ಕಲ್ಲು ಜೋಡಿಸಿ, ಪೂಜಿಸಿ, ಕೋಳಿ ಬಲಿಕೊಡುತ್ತಾರೆ. ದೃಷ್ಟಿಬೊಂಬೆಯನ್ನು ತಯಾರಿಸಿ ರಕ್ತದ ತಿಲಕವಿಡುತ್ತಾರೆ. ಗಾಳಿ ತಮ್ಮ ಬೆಳೆ ಕಡೆ ಬೀಸುವೆಡೆ ಕೋಳಿ ಸುಡುತ್ತಾರೆ.

ನನ್ನ ಸ್ಕರ್ಟ್ ಹೇಗಿದೆ?(ಅವರೆ ಬೆಳೆ)

ನನ್ನನ್ನ ಕಂಬಕ್ಕೆ ಕಟ್ಟಾಕವ್ರೆ ಬಿಡಿಸ್ರೀ ಸ್ವಾಮಿ.(ಅವರೆ ಬೆಳೆ)
ರೈತ ಅನ್ನದಾತನಾದರೂ, ಅವನದ್ದು ಮಾತ್ರ ಅನಿಶ್ಚಿತ ಬದುಕು. ಬೀಜ, ಗೊಬ್ಬರ, ಮಳೆ, ರೋಗಗಳು, ಔಷಧಗಳು... ಎಲ್ಲ ಅಡೆತಡೆಗಳನ್ನೂ ದಾಟಿ ಒಳ್ಳೆ ಬೆಳೆ ಬಂದರೆ, ಅದಕ್ಕೆ ತಕ್ಕ ಬೆಲೆ ಮಾರುಕಟ್ಟೆಯಲ್ಲಿ ಸಿಗಬೇಕು. ತನ್ನ ಹಿಡಿತಕ್ಕೆ ಮೀರಿದ ಕಂಟಕಗಳನ್ನು ಎದುರಿಸುವ ರೈತ ಅನೇಕ ನಂಬುಗೆಯ ಆಚರಣೆಗಳನ್ನು ಆಚರಿಸುವುದುಂಟು. ಈ ದೃಷ್ಟಿಬೊಂಬೆಯೂ ಅದರಲ್ಲೊಂದು. ಶ್ರಮಜೀವಿಯ ಸೃಜನಶೀಲತೆ ಈ ಬೊಂಬೆಗಳಲ್ಲಿ ಕಾಣಸಿಗುತ್ತದೆ.
ನನ್ನ ಹೊಟ್ಟೆಗಿಂತ ತಲೆನೇ ದಪ್ಪಮಾಡಿಟ್ಟವ್ರೆ!(ಟೊಮೆಟೊ)

ರುಂಡ ಒಂದು ಕಡೆ ಮುಂಡ ಒಂದು ಕಡೆ...

ಅಟೆನ್ಷನ್ ಪೊಸಿಷನ್!!(ಬೀಟ್ ರೂಟ್)

ಹೆಂಗಿದೆ ನನ್ನ ಸ್ಟೆಪ್ಪು!(ಮೆಣಸಿನಕಾಯಿ)

ಯೊವ್, ಸೀರೆ ಸೆರಗು ಸರಿಮಾಡ್ಕೊತೀನಿ ಇರಯ್ಯ.(ಆಲೂಗಡ್ಡೆ)
"ಬೆಳೆ ಎಷ್ಟು ಚೆನ್ನಾಗಿ ಬಂದಿದೆ!" ಅಂದುಕೊಂಡು ಹೋಗುವವರ ದೃಷ್ಟಿ ತಾಕದಿರಲಿ ಮತ್ತು ಬೆಳೆಗಳಿಗೆ ರೋಗ ಬಾರದಿರಲಿ ಎಂಬ ಕಾರಣಕ್ಕಾಗಿ ನಿಲ್ಲಿಸುವ ಈ ಬೊಂಬೆಯನ್ನು ಬೆಳೆ ಬಂದಾದ ಮೇಲೆ ಸುಟ್ಟುಬಿಡುತ್ತಾರೆ. ಬೆಳೆಗೆ ತಗುಲಬಹುದಾದ ಕೆಡುಕನ್ನೆಲ್ಲಾ ತನ್ನೊಡಲಲ್ಲಿರಿಸಿಕೊಂಡ ಬೊಂಬೆ ಸುಟ್ಟು ಬೂದಿಯಾಗುತ್ತದೆ.
ನನ್ನ ತಲೆ ಮೇಲೆ ಹಕ್ಕಿ ಗಲೀಜು ಮಾಡ್ತಾ ಇದೆ, ಓಡ್ಸಪ್ಪೋ.(ಮೆಣಸಿನಕಾಯಿ)

ನನ್ನ ಕೆಳಗೆ ಇಳ್ಸಿ, ನಾನೂ ದ್ರಾಕ್ಷಿ ನೋಡಿ ಖುಸಿ ಪಡ್ತೀನಿ.(ದ್ರಾಕ್ಷಿ)

Monday, April 6, 2009

ಪುಟ್ಟಜೀವಿಯ ದೊಡ್ಡ ಮನೆ

"ಅರೆ! ಇದೇನಿದು ಮರಕ್ಕೇನೋ ಕಟ್ಟಿದ ಹಾಗಿದೆ?"ನನ್ನ ಹೆಂಡತಿ ಕೈತೋರಿದತ್ತ ನೋಡಿದಾಗ ಅಲ್ಲಿ ಕಂಡದ್ದು, ಕೈ ಚಾಚಿ ತಬ್ಬಿಕೊಳ್ಳಬಹುದಾದಷ್ಟು ದೊಡ್ಡದಾದ ಮಣ್ಣಿನ ಹೆಂಟೆ. ಹಲಸಿನ ಮರದ ಕೊಂಬೆಯಿಂದ ಆ ಹೆಂಟೆ ನೇತಾಡುತ್ತಿತ್ತು. ತಕ್ಷಣವೇ ಹೊಳೆಯಿತು - ಅದು ಕಣಜದ ಗೂಡೆಂದು. ನಿಧಾನವಾಗಿ ಹತ್ತಿರ ಹೋಗುತ್ತಿದ್ದಂತೆಯೇ, "ಅಲ್ಲಿಗೆ ಹೋಗ್ಬೇಡ್ರೀ, ಹುಳ ಕಚ್ತವೆ" ಎಂದು ಅಲ್ಲಿಯೇ ಸಮೀಪದಲ್ಲಿದ್ದ ಒಬ್ಬ ಮಹಿಳೆ ಕೂಗಿಕೊಂಡರು. ದೂರದಿಂದಲೇ ನೋಡುವುದಷ್ಟಕ್ಕೇ ನಾವು ತೃಪ್ತಿಪಡಬೇಕಾಯಿತು.
ಅಂದಹಾಗೆ, ಶಿಡ್ಲಘಟ್ಟದಿಂದ ಎರಡು ಕಿ.ಮೀ. ದೂರದಲ್ಲಿರುವ ಗವಿಗುಟ್ಟವೆಂಬ ಗವಿಯಲ್ಲಿರುವ ಶಿವನ ದೇವಸ್ಥಾನಕ್ಕೆ ಹೋದಾಗ ನಮ್ಮ ಕಣ್ಣಿಗೆ ಈ ಅಪರೂಪದ ಗೂಡಿನ ದೃಶ್ಯ ಬಿದ್ದಿತ್ತು.
ದೇವಾಲಯದಲ್ಲಿನ ಅರ್ಚಕರನ್ನು ಕಣಜದ ಗೂಡಿನ ಬಗ್ಗೆ ವಿಚಾರಿಸಿದೆವು. ಅವರು ಹೇಳಿದ್ದಿಷ್ಟು: "ಸುಮಾರು ಮೂರು ತಿಂಗಳಿಂದ ಈ ಗೂಡು ಇಲ್ಲಿದೆ. ಹುಡುಗರ ತಂಟೆ ಇಲ್ಲಿ ಜಾಸ್ತಿ. ನಾವು ಆದಷ್ಟೂ ಯಾರನ್ನೂ ಗೂಡಿನ ಹತ್ತಿರಕ್ಕೆ ಬಿಡೊಲ್ಲ. ಅಕಸ್ಮಾತ್ ಯಾರನ್ನಾದ್ರೂ ಹುಳಗಳು ಕಚ್ಚಿ ಏನಾದ್ರೂ ಅನಾಹುತ ಆದ್ರೆ..."
ಸೊಳ್ಳೆಗಳಂತೆ ಕಣಜಗಳಲ್ಲೂ ಹೆಣ್ಣುಗಳಿಗೆ ಮಾತ್ರ ಮುಳ್ಳಿರುತ್ತದೆ. ಈ ಮುಳ್ಳಿರುವ ಕಣಜಗಳು ಮಾತ್ರ ಕಚ್ಚುತ್ತವೆ. ತಮ್ಮನ್ನು ರಕ್ಷಿಸಿಕೊಳ್ಳಲು ಇವು ಕುಟುಕುತ್ತವೆಯೇ ಹೊರತು, ಸುಮ್ಮಸುಮ್ಮನೆ ಮನುಷ್ಯನ ಮೇಲೇರಿ ಹೋಗುವುದಿಲ್ಲ. ಗುಂಪಿನಲ್ಲಿ ವಾಸಿಸುವ ಕಣಜಗಳಲ್ಲಿ ತಮ್ಮ ದೊಡ್ಡ ಮನೆಯ ರಕ್ಷಣೆಗಾಗಿಯೇ ಮುಳ್ಳುಗಳನ್ನು ಹೊಂದಿರುವ ಸೈನಿಕರ ಪಡೆ ಇರುತ್ತದೆ. ಇವುಗಳ ಕೊಂಡಿ ಅಥವಾ ಮುಳ್ಳು ವಿಷಕಾರಿ. ಈ ಮುಳ್ಳುಗಳಲ್ಲಿ ಕೆಂಪು ರಕ್ತ ಕಣಗಳನ್ನು ಕರಗಿಸುವ ಹಿಸ್ಟಮಿನ್ ರಾಸಾಯನಿಕವನ್ನು ಬಿಡುಗಡೆ ಮಾಡುವ ಕೋಶಗಳಿರುತ್ತವೆ. ಕಣಜಗಳ ಗುಂಪು ದಾಳಿಯಲ್ಲಿ ಕಡಿತಕ್ಕೊಳಗಾದ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆಯೂ ಇದೆ.
ಕಣಜದ ಬಗೆಗಿನ ಧ್ಯಾನದಲ್ಲೇ ಪೂಜೆ ಮುಗಿಸಿ ಮನೆಗೆ ಬಂದವನೇ ಕ್ಯಾಮೆರಾದೊಂದಿಗೆ ಮರಳಿ ದೇಗುಲದ ಬಳಿ ಹೋದೆ. ಸದ್ದು ಮಾಡದೆ ಪೋಟೋಗಳನ್ನು ಕ್ಲಿಕ್ಕಿಸಿಕೊಂಡು ಬಂದೆ.
ಇಂಗ್ಲಿಷ್ ನಲ್ಲಿ ಹಾರ್ನೆಟ್ ಎಂದು ಕರೆಯುವ ಗುಂಪಿನ ಕಣಜಗಳು ತಮ್ಮ ಗೂಡಿನ ಸುತ್ತಲೂ ಚೆಂಡಿನಂತಹ ಗುಂಡಗಿನ ಹೊದಿಕೆಯನ್ನು ರಕ್ಷಿಸಿಕೊಳ್ಳುತ್ತವೆ. ಈ ಗೂಡುಗಳಲ್ಲಿ ನೂರಾರು, ಕೆಲವೊಮ್ಮೆ ಸಾವಿರಾರು ಕಣಜಗಳು ಸಹಜೀವನ ನಡೆಸುತ್ತವೆ.
ರಾಣಿಯ ಆಡಳಿತ ಹೊಂದಿರುವ ಈ ಕಣಜಗಳು ಗೂಡು ಕಟ್ಟುವ ರೀತಿಯೇ ವಿಚಿತ್ರ. ಒಣ ಮರ ಮತ್ತು ತೊಗಟೆಗಳನ್ನು ಜಗಿದು ತಮ್ಮ ಜೊಲ್ಲಿನೊಂದಿಗೆ ಮಿಶ್ರಣ ಮಾಡಿಕೊಂಡು ಆರು ಮುಖಗಳಿರುವ ಮನೆಗಳನ್ನು ಕಟ್ಟುತ್ತಾ ಹೋಗುತ್ತವೆ. ಒಂದೇ ಅಳತೆಯ, ಒಂದರ ಪಕ್ಕ ಒಂದು, ಮೇಲೆ ಕೆಳಗೆ, ಸುತ್ತ ಮುತ್ತ, ಹೀಗೆ ಗೂಡು ಕಟ್ಟುವ ಇವುಗಳ ತಾಂತ್ರಿಕ ಕೌಶಲ್ಯಕ್ಕೆ ಯಾರಾದರೂ ತಲೆದೂಗಲೇಬೇಕು.
ಕೊಂಡಿ ಹೊಂದಿರುವ ಕಣಜವು ಜೀವಲೋಕದ ಮುಖ್ಯ ಕೊಂಡಿಯೂ ಹೌದು. ಕಣಜವನ್ನು ತಿನ್ನುವ ಜೀವಿಗಳಿರುವಂತೆ, ಕಣಜವು ತಿನ್ನುವ ಹಲವು ಜೀವಿಗಳಿವೆ. ಬೆಳೆಗಳಿಗೆ ಮಾರಕವಾದ ಹಲವು ಕ್ರಿಮಿಕೀಟಗಳನ್ನು ತಿನ್ನುವ ಕಣಜ ರೈತರಿಗೆ ಉಪಕಾರಿ. ಹೂಗಳ ಮಕರಂದವನ್ನು ಹೀರುತ್ತಾ ಪರಾಗ ಸ್ಪರ್ಶದ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ.
ಸ್ವಲ್ಪ ದಿನಗಳ ನಂತರ ಊರಿನಲ್ಲಿ ಭೇಟಿಯಾದ ಗವಿಗುಟ್ಟದ ಅರ್ಚಕರು ಸೂತಕದ ಸಮಾಚಾರ ತಂದಿದ್ದರು. "ನಾವಿಲ್ಲದ ಹೊತ್ತಿನಲ್ಲಿ ಯಾರೋ ಹುಡುಗರು ಆ ಗೂಡನ್ನು ಒಡೆದು ಹಾಕಿದ್ದಾರಪ್ಪ" ಅಂದರು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅಂತಾರಲ್ಲ, ಹಾಗಾಗಿತ್ತು. ತಕ್ಷಣವೇ ಹೋಗಿ ನೋಡಿದೆ. ಗೂಡಿನ ಅರ್ಧಕ್ಕೂ ಹೆಚ್ಚು ಭಾಗ ಕಳಚಿ ಬಿದ್ದಿತ್ತು. ಗೂಡಿನ ಒಳಭಾಗ ಅನಾವರಣಗೊಂಡಿತ್ತು. ಕೆಳಗೆ ಬಿದ್ದಿದ್ದ ಗೂಡಿನ ಅವಶೇಷಗಳನ್ನು ನೋಡಿ ಮನಸ್ಸಿಗೆ ಪಿಚ್ಚೆನ್ನಿಸಿತು. ಕಣಜಗಳು ಕಾಣಲಿಲ್ಲ. ಎಲ್ಲಿ ಹೋದವೋ? ಅವು ಎಷ್ಟು ಕಷ್ಟಪಟ್ಟು ಈ ಗೂಡು ಕಟ್ಟಿದ್ದವೋ?
ನಮ್ಮಲ್ಲಂತೂ ಒಟ್ಟು ಕುಟುಂಬಗಳು, ದೊಡ್ಡ ಕುಟುಂಬಗಳು ಅಪರೂಪವಾಗುತ್ತಿವೆ. ಸಹಜೀವನದ ಉದಾಹರಣೆಗಾಗಿ ಕಣಜಗಳಂಥ ಜೀವಿಗಳತ್ತ ನೋಡುವ ಸಂದರ್ಭ ಬಂದಿದೆ. ಆದರೆ ಕಲಾತ್ಮಕ ಗೂಡನ್ನು ಹೊಡೆದು ಬಡಿದು ಬೀಳಿಸುವ ವಿಕೃತಿಗೆ ಏನನ್ನುವುದು?

Wednesday, April 1, 2009

"ತೇಜಸ್ವಿ" ಎಂಬ ಸ್ಫೂರ್ತಿ

"ಅಲ್ರೀ, ನಾನೂ ನಿಮ್ಮಂತೆ ಮನುಷ್ಯ. ಕಷ್ಟಪಟ್ರೆ ನೀವು ಕೂಡ ಈ ರೀತಿ ಫೋಟೋ ತೆಗೀಬಹುದು" ಎಂದು ತೇಜಸ್ವಿಯವರು ಅಂದು ಹೇಳಿದ್ದು ಈಗ ಹೇಳಿದಂತಿದೆ. ಅವರ ಮನೆಯಲ್ಲಿ ಟೀಪಾಯ್ ಮೇಲೆಲ್ಲಾ ನಾನಾ ವಿಧದ ಹಕ್ಕಿಚಿತ್ರಗಳು. ಕೆಲವೊಂದಂತೂ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನೋಡುತ್ತಿರುವುದು. ತೇಜಸ್ವಿಯವರು ತೆಗೆದಿದ್ದ ಚಿತ್ರಗಳನ್ನೆಲ್ಲಾ ನೋಡುತ್ತಾ ಬೆಕ್ಕಸಬೆರಗಾಗಿ,"ಇವೆಲ್ಲಾ ನಮ್ಮ ಕೈಲಿ ತೆಗೆಯೊಕಾಗಲ್ಲ" ಎಂದುಬಿಟ್ಟೆ. ತಕ್ಷಣ ಗುಂಡಿನಂತೆ ಬಂದ ತೇಜಸ್ವಿಯವರ ಮಾತು ನನ್ನೊಬ್ಬನಿಗೇ ಅಲ್ಲ ಎಲ್ಲರಿಗೂ ಎಲ್ಲಾ ಕೆಲಸಕ್ಕೂ ಅನ್ವಯಿಸುತ್ತದೆ.
ಅಂದು ೨೦೦೨ರ ಏಪ್ರಿಲ್ ೨೬. ತೇಜಸ್ವಿಯವರ ತೋಟದೊಳಗೆ ಗೇಟಿಗೆ ಸುತ್ತಿದ್ದ ಚೈನ್ ಬಿಡಿಸಿಕೊಂಡು ಒಳಗಡೆ ಹೋದೆವು. ಅಕ್ಕಪಕ್ಕ ಬರಿ ಕಾಫಿ ಗಿಡಗಳು. ಮುಂದೆ ಕಾಲುದಾರಿ. ಆಹ್ಲಾದಕರವಾದ ಮಲೆನಾಡ ವಾತಾವರಣ. ಎಲ್ಲೆಲ್ಲೂ ಮರಗಿಡಗಳು. ಸ್ವಲ್ಪ ದೂರ ಹೋದ ನಂತರ ಅವರ ಮನೆ "ನಿರುತ್ತರ"ದ ಹೆಂಚು ಕಾಣಿಸಿತು. ಮನೆಯ ಸುತ್ತ ನಾನಾ ಬಗೆಯ ಹೂಗಿಡಗಳು. ಮುಂದೆ ಹುಲ್ಲುಹಾಸು, ಆಕರ್ಷಕ ಸಸ್ಯ ವೈವಿಧ್ಯ.
ಅಂಜುತ್ತಲೇ ಬೆಲ್ ಮಾಡಿದೆವು. ತೇಜಸ್ವಿಯವರು ಬಂದರು. ಸ್ವಲ್ಪ ಮಡಿಸಿದ ಜೀನ್ಸ್ ಪ್ಯಾಂಟ್, ಕಾಟನ್ ಶರ್ಟ್, ಬಿಳಿಗಡ್ಡ, ಕನ್ನಡಕ. ಒಳಕರೆದು ಕುಳಿತುಕೊಳ್ಳಿ ಅಂದರು. ಆಗಲೇ ನಾವು ನೋಡಿದ್ದು ಟೀಪಾಯ್ ಮೇಲೆ ನೂರಾರು ಪಕ್ಷಿಗಳು. "ಇವು ನನ್ನ ೩೦ಕ್ಕೂ ಹೆಚ್ಚು ವರ್ಷಗಳ ಅನುಭವ ಮತ್ತು ಪರಿಶ್ರಮದಿಂದ ತೆಗೆದ ಚಿತ್ರಗಳು" ಅಂದರು.
ಅವರ ಪತ್ನಿ ರಾಜೇಶ್ವರಿಯವರು ಕೊಟ್ಟ ಕಾಫಿ, ಬಿಸ್ಕತ್ ಸೇವಿಸಿ ಮಾತನಾಡುತ್ತ ಕುಳಿತೆವು. ಅವರು ಮಾಡಿರುವ ಪೇಂಟಿಂಗ್ ಗೋಡೆಯ ಮೇಲಿತ್ತು. ಕೇಳಿದ್ದಕ್ಕೆ, "ಐ ಯಾಮ್ ಎ ಪೇಂಟರ್. ಮೈಸೂರಿನಲ್ಲಿ ತಿಪ್ಪೇಸ್ವಾಮಿಯವರ ಬಳಿ ಕಲಿತಿರುವೆ. ಅದಕ್ಕೂ ಮುಖ್ಯವಾಗಿ ನಾನೊಬ್ಬ ಮ್ಯುಸಿಷಿಯನ್. ಪಂಡಿತ್ ರವಿಶಂಕರರ ಬಳಿ ಸಿತಾರ್ ಕಲಿತಿರುವೆ" ಅಂದರು.
ಮನೆಯ ಹಿಂದೆ ಇರುವ ನೀರಿನ ಪುಟ್ಟ ತೊರೆಯಲ್ಲಿ ತೇಜಸ್ವಿ ಮೀನುಗಳನ್ನು ಸಾಕಿದ್ದರು. ನನ್ನ ಜೊತೆ ಬಂದಿದ್ದ ನನ್ನಕ್ಕನ ಮಗಳ ಕೈಲಿ ಅವಕ್ಕೆ ಬ್ರೆಡ್ ಹಾಕಿಸಿದರು. ಅವರ ಫೋಟೋ ತೆಗೆದಾಗ "ಯಾಕ್ರೀ ಇಷ್ಟೊಂದು ಫೋಟೋ ತೆಗೆಯುತ್ತೀರಿ. ನಾನೂ ಕೂಡ ನಿಮ್ಮಂತೆಯೇ ಮನುಷ್ಯ" ಅಂದರು. ತಮ್ಮನ ಜೊತೆ ರೇಷ್ಮೆ ಹುಳು ಸಾಕಲು ಅವರ ಮೈಸೂರಿನ ಮನೆಯಲ್ಲಿ ಪ್ರಯತ್ನಿಸಿದ್ದು ಮತ್ತು ಹಿಪ್ಪುನೇರಳೆ ಸೊಪ್ಪಿಗಾಗಿ ಅಲೆದದ್ದು ಎಲ್ಲಾ ನೆನಪಿಸಿಕೊಂಡು ನಕ್ಕರು. ಚೀನಾ ರೇಷ್ಮೆಯಿಂದ ನಮ್ಮ ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೇಳಿದಾಗ, "ಚೀನಾ ದೇಶದವನು ತಿನ್ನುವುದೂ ಅನ್ನವೇ, ನಮ್ಮ ದೇಶದವನು ತಿನ್ನುವುದೂ ಅನ್ನವೇ. ಅವರು ಕಡಿಮೆ ಬೆಲೆಗೆ ರೇಷ್ಮೆ ಇಲ್ಲಿಗೆ ತಂದು ಮಾರುತ್ತಿದ್ದಾರೆಂದರೆ ನಾವು ಏಕೆ ಅಷ್ಟು ಕಡಿಮೆ ಬೆಲೆಗೆ ರೇಷ್ಮೆ ತಯಾರಿಸಲಾಗುತ್ತಿಲ್ಲವೆಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಸರಕಾರದಿಂದ ಸಬ್ಸಿಡಿ ಪಡೆದು ನೆಮ್ಮದಿಯ ಜೀವನ ನಡೆಸಿದರೆ ಬುದ್ಧಿ ಮಂದವಾಗುತ್ತದೆ. ಚಾಲೆಂಜುಗಳನ್ನು ಎದುರಿಸಬೇಕು" ಅಂದರು.
ಅವರು ಭಾವಾನುವಾದ ಮಾಡಿರುವ ಕೆನೆತ್ ಆಂಡರ್ಸನ್, ಜಿಮ್ ಕಾರ್ಬೆಟ್ ರ ಕಥೆಗಳು, ಹೆನ್ರಿಶಾರೇರೆ ಬರೆದಿರುವ ಪ್ಯಾಪಿಲಾನ್ ಕೃತಿಗಳಂಥ ರೋಮಾಂಚಕಾರಿ ಕಥೆಗಳ ಬಗ್ಗೆ ಕೇಳಿದೆವು. "ಈ ಪುಸ್ತಕಗಳನ್ನೆಲ್ಲಾ ನಾವು ಹೈಸ್ಕೂಲಿನಲ್ಲಿದ್ದಾಗಲೇ ಓದಿದ್ದೆವು. ೪೦ ವರ್ಷಗಳ ನಂತರ ಅನುವಾದ ಮಾಡಿರುವೆನಷ್ಟೆ. ನಮ್ಮ ಸ್ನೇಹಿತರ ಗುಂಪು ಹಾಗಿತ್ತು. ಬರೀ ಓದಿದ್ದರೆ ಮರೆತುಬಿಡುತ್ತಿದ್ದೆವು. ನಾವುಗಳು ಚರ್ಚೆ-ವಿಮರ್ಶೆ ಮಾಡುತ್ತಿದ್ದುದರಿಂದ ಇನ್ನೂ ನೆನಪಿನಲ್ಲಿವೆ" ಎಂದರು ತೇಜಸ್ವಿ.
"ನಿಮ್ಮ ಮಿಲೇನಿಯಂ ಸರಣಿಯನ್ನು ಮುಂದುವರೆಸಿ" ಎಂದು ಹೇಳಿದಾಗ ಅವರು ನಕ್ಕರು. "ಈ ರೀತಿ ಮಾಹಿತಿ ಸಾಹಿತ್ಯದ ಪುಸ್ತಕಗಳನ್ನು ಬರೆದರೆ ಕಥೆ ಕಾದಂಬರಿ ಬರೆಯಿರಿ ಅನ್ನುತ್ತಾರೆ. ಅದನ್ನು ಬರೆದರೆ ಇದನ್ನು ಬರೆಯಿರಿ ಅನ್ನುತ್ತಾರೆ. ಒಮ್ಮೆ ಶಿವರಾಮ ಕಾರಂತರು ಈ ರೀತಿ ಮಕ್ಕಳಿಗೆ ಜ್ಞಾನದಾಯಕವಾದಂತಹ ಪುಸ್ತಕಗಳನ್ನೇ ಬರೆಯಲು ಹೇಳಿದ್ದರು. ಏಕೆಂದರೆ ಮಕ್ಕಳು ಮುಂದಿನ ಭವಿಷ್ಯ, ಅವರನ್ನು ತಿದ್ದಬೇಕು. ಬೆಳೆದವರನ್ನು ಏನು ತಿದ್ದುವುದು?" ಎಂದರು.
"ಸಣ್ಣವರಿದ್ದಾಗ ಎಷ್ಟೊಂದು ಗಲಾಟೆ, ತಂಟೆ ಮಾಡುತ್ತಿದ್ದೆವೆಂದರೆ, ನಮ್ಮಮ್ಮ ಇವರು ಶಾಲೆಗೆ ಹೋದರೆ ಸಾಕಪ್ಪ ಎಂದು ಶಾಲೆಗೆ ಅಟ್ಟುತ್ತಿದ್ದರು. ಶಾಲೆಗಾದರೋ ಒಂದು ಪುಸ್ತಕ ಹಿಡಿದು ಹೋಗುತ್ತಿದ್ದೆವು. ಈಗಿನ ಮಕ್ಕಳನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ. ನಾವು ಗುರುಗಳ ಪಾಠದ ಶೈಲಿಯಿಂದಲ್ಲ, ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದೆವು" ಎಂದರು.
ಏಪ್ರಿಲ್ ೫ಕ್ಕೆ ಅವರು ನಮ್ಮನ್ನಗಲಿ ಎರಡು ವರ್ಷಗಳಾಯ್ತು. ಅವರಿನ್ನೂ ಇರಬೇಕಿತ್ತು. ನಮ್ಮೆಲ್ಲರ ಚೈತನ್ಯದ ಭಾಗವಾಗಿರುವ ಅವರು ನಮ್ಮನ್ನು ಪೊರೆಯಲಿ.

Tuesday, March 24, 2009

ಆಟೋಗ್ರಾಫ್-ಫೋಟೋಗ್ರಾಫ್ ಭಾಗ ಎರಡು

ಗೋಕರ್ಣದಲ್ಲಿ 'ಸ್ಟಡಿ ಸರ್ಕಲ್' ಸಂಸ್ಥೆಯನ್ನು ಹುಟ್ಟುಹಾಕಿ, ಒಂದು ಲಕ್ಷಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳನ್ನು ಸಂಗ್ರಹಿಸಿ, ಗ್ರಂಥಭಂಡಾರವನ್ನು ಸ್ಥಾಪಿಸಿರುವವರು ಜಿ.ಎಂ.ವೇದೇಶ್ವರ್. ಅವರು ಜೀವನ ಕುರಿತಾದ ಮೂಲಭೂತ ಪ್ರಶ್ನೆಗಳಿಗೆ ನಾಡಿನಾದ್ಯಂತ ಹಿರಿಯರಿಂದ, ವಿದ್ವಜ್ಜನರಿಂದ ಉತ್ತರ ತರಿಸಿಕೊಂಡು, ಆ ಮೂಲ ಪ್ರತಿಗಳನ್ನು ೪೦-೫೦ ವರ್ಷಗಳಿಂದ ಜೋಪಾನ ಮಾಡಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ.ಸರ್.ಸಿ.ವಿ.ರಾಮನ್, ಡಾ.ಎಸ್.ರಾಧಾಕೃಷ್ಣನ್, ದ.ರಾ.ಬೇಂದ್ರೆ, ಶಿವರಾಮ ಕಾರಂತರು, ಡಿ.ವಿ.ಜಿ..... ಸುಮಾರು ೬೦ ಜನರ ಹಸ್ತಾಕ್ಷರದ ಪತ್ರಗಳು, ಫೋಟೋಗಳು ನೋಡಲು ಮುದನೀಡುತ್ತವೆ. ಅಷ್ಟೂ ಜನರ ಮಧ್ಯೆ ಕುಳಿತಂತೆ ಭಾಸವಾಗುತ್ತದೆ.
* * * * *
ಸುಮಾರು ೧೯೯೪-೧೯೯೫ ರಲ್ಲಿ "ಸುಧಾ" ವಾರಪತ್ರಿಕೆಯಲ್ಲಿ "ಸಮಕ್ಷಮ" ಎಂಬ ಲೇಖನಮಾಲೆ ಪ್ರಕಟವಾಗುತ್ತಿತ್ತು. ಅದು ಕನ್ನಡದ ಸುಪ್ರಸಿದ್ಧ ಸಾಹಿತಿಗಳನ್ನು ಪರಿಚಯಿಸುವ ಲೇಖನಮಾಲೆ. ಲೇಖಕರ ಚಿತ್ರ, ಹಸ್ತಾಕ್ಷರ ಮತ್ತು ಮಾಹಿತಿ ಎರಡು ಪುಟಗಳಲ್ಲಿ ಪ್ರಕಟವಾಗುತ್ತಿತ್ತು. ಅದನ್ನೆಲ್ಲಾ ಈಗ ನೋಡುವಾಗ ಏನೋ ಖುಷಿ, ಸಂಭ್ರಮ, ಸಂತೋಷ...
* * * *
ಕೆ.ಜಿ.ಸೋಮಶೇಖರ್ ನಮ್ಮ ನಾಡಿನ ಅಪೂರ್ವ ಛಾಯಾಚಿತ್ರಗಾರರು. ತಮ್ಮ ಕ್ಯಾಮೆರಾ ಕಣ್ಣಿನಿಂದ ವಿಶ್ವವಿಖ್ಯಾತ ಸಾಹಿತಿ, ಕಲಾವಿದ, ನಟ, ನಿರ್ದೇಶಕರ ಕ್ರಿಯಾಶೀಲ ಭಾವಭಂಗಿಗಳನ್ನು ದಾಖಲಿಸಿದ್ದಾರೆ. "ತರಂಗ"ದಲ್ಲಿ ೧೯೯೬ ರಲ್ಲಿ "ಚಿತ್ರ-ಚಿತ್ರಣ" ಎಂಬ ಲೇಖನಮಾಲೆ ಪ್ರಕಟವಾಗುತ್ತಿತ್ತು. ಇದರಲ್ಲಿ ಕೆ.ಜಿ.ಸೋಮಶೇಖರ್ ಸಂಗ್ರಹದ ಪ್ರತಿಭಾವಂತರ ಚಿತ್ರದ ಜೊತೆ ಅವರ ಹೃದಯಸ್ಪರ್ಶಿ ನೆನಪಿಗೆ ಬರಹದ ರೂಪ ಕೊಟ್ಟವರು ನಾ.ಡಿಸೋಜ.
* * * *
"ಆಟೋಗ್ರಾಫ್-ಫೋಟೋಗ್ರಾಫ್" ಗೆ ಪ್ರೇರಣೆ ನೀಡಿದ ನನ್ನಲ್ಲಿನ ಸಂಗ್ರಹದ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಈ ಬಾರಿಯ "ಸಹಿ-ಚಿತ್ರ"ಗಳನ್ನು ಪ್ರಸ್ತುತಪಡಿಸುತ್ತಿರುವೆ.

ಭಾರತದ ಅತಿದೊಡ್ಡ ಸಾಹಿತ್ಯ ಪುರಸ್ಕಾರ "ಜ್ಞಾನಪೀಠ ಪ್ರಶಸ್ತಿ" ಪಡೆದ ಏಳು ಮಂದಿ ಕನ್ನಡಿಗರಲ್ಲಿ ಒಬ್ಬರಾದ ಡಾ.ಯು.ಆರ್.ಅನಂತಮೂರ್ತಿಯವರು ನಮ್ಮ ದೇಶದ ಹಿರಿಯ ಲೇಖಕರಲ್ಲೊಬ್ಬರು. ಇವರ "ಸಂಸ್ಕಾರ"ದಿಂದಲೂ ನಮಗೆಲ್ಲ ಇಷ್ಟವಾಗುತ್ತಾರೆ.

ನಡೆದಾಡುವ "ಜೀವಂತ ಕಥಾಕೋಶ" ಎಂದು ಎಲ್ಲರಿಂದಲೂ ಕರೆಯಿಸಿಕೊಳ್ಳುವ ದೈತ್ಯ ಪ್ರತಿಭೆ - ನಮ್ಮೆಲ್ಲರ ಪ್ರೀತಿಯ ಕುಂ ವೀರಭದ್ರಪ್ಪನವರು.

'ತರಂಗ'ದ ಸಂಪಾದಕರಾಗಿದ್ದ ಸಂತೋಷಕುಮಾರ್ ಗುಲ್ವಾಡಿಯವರು ನನಗೆ ಓದುವ ಗೀಳನ್ನು ಹೆಚ್ಚಿಸಿದವರು. ತಮ್ಮ 'ಅಂತರಂಗ'ದ ಮಾತುಗಳನ್ನು 'ಬಹಿರಂಗ'ವಾಗಿ ಬರೆದು ನಮ್ಮ ಜ್ಞಾನ ವೃದ್ಧಿಸಿದವರು.

ನಾಡಿನ ಅಚ್ಚು ಮೆಚ್ಚಿನ ತುಂಟಕವಿ ಬಿ.ಆರ್.ಲಕ್ಷ್ಮಣರಾವ್. ನಮ್ಮ ಶಿಡ್ಲಘಟ್ಟ ತಾಲೂಕಿನ ಚೀಮಂಗಲದಲ್ಲಿ ಹುಟ್ಟಿದ ಇವರು ನಮ್ಮ ಪಕ್ಕದೂರು ಚಿಂತಾಮಣಿಯಲ್ಲಿದ್ದಾರೆ.
"ಬಿಳಿಗಿರಿಯಷ್ಟು ಪೋಲಿಯೂ ಅಲ್ಲದ ಶಿವರುದ್ರಪ್ಪನವರಂತೆ 'ಸಾದ್ವಿ'ಯೂ ಅಲ್ಲದ 'ನಡು'ಗನ್ನಡದ ಕವಿ ಬಿ.ಆರ್.ಎಲ್" -
ಜೋಗಿ
"ಬುಗುರಿ"ಯಂತೆ ಮೊಗಳ್ಳಿ ಗಣೇಶ್ ಅವರ ಕಥೆಗಳು ನಮ್ಮನ್ನು ಆಡಿಸುತ್ತ, ಕಾಡಿಸುತ್ತವೆ.
ಕಬ್ಬಿಣದ ಕಡಲೆಯಾದ ವಿಜ್ಞಾನವನ್ನು ಸರಳವಾಗಿ ಕಸ್ತೂರಿ ಕನ್ನಡದಲ್ಲಿ ಸಾದರಪಡಿಸುವ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಅವರು.

ನಾನು ಡಾ.ಕೃಷ್ಣಾನಂದ ಕಾಮತರನ್ನು ನೋಡಲಾಗಲಿಲ್ಲ. ಆದರೆ ಅವರನ್ನು ಮಾತೃಸ್ವರೂಪರಾದ ಡಾ.ಜ್ಯೋತ್ಸ್ನಾಕಾಮತರಲ್ಲಿ ಕಂಡೆ. ಬೆಂಗಳೂರಿನ ಆಕಾಶವಾಣಿಯ ನಿರ್ದೇಶಕರಾಗಿ ನಿವೃತ್ತರಾಗಿರುವ ಇವರು ಈಗಲೂ ಅಧ್ಯಯನ ಮಾಡುತ್ತಲೇ ತಮ್ಮ ಪತಿ ಡಾ.ಕೃಷ್ಣಾನಂದ ಕಾಮತರ ನೆನಪಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ.

ನಮ್ಮೆಲ್ಲರ ಮೆಚ್ಚಿನ ಕವಯತ್ರಿ ಪ್ರತಿಭಾ ನಂದಕುಮಾರ್.

ನಮ್ಮ ಕೋಲಾರ ಜಿಲ್ಲೆಯವರಾದ ಕೃಷಿ ವಿಜ್ಞಾನಿ ಡಾ.ಕೆ.ಎನ್.ಗಣೇಶಯ್ಯ ಕಥೆ ಹೇಳುವುದರಲ್ಲಿ ಸಿದ್ಧಹಸ್ತರು. ಚರಿತ್ರೆಯ ಬಗ್ಗೆ ಆಸಕ್ತಿ ಹುಟ್ಟಿಸುವುದಲ್ಲದೆ ಐತಿಹಾಸಿಕ ಸ್ಥಳಗಳನ್ನು ಹೊಸ ರೀತಿಯಲ್ಲಿ ನೋಡಲು ಪ್ರೇರೇಪಿಸುತ್ತವೆ ಇವರ ಕೃತಿಗಳು.

ಕುವೆಂಪು ನಂತರದ ಮಲೆನಾಡಿನ ಲೇಖಕರಲ್ಲಿ ಪ್ರಮುಖರು ಬಿಳುಮನೆ ರಾಮದಾಸ್. ಇವರ ಕಾದಂಬರಿಯಲ್ಲಿ ಬರುವ ಪಾತ್ರ ಮತ್ತು ಚಿತ್ರಣ ಮಲೆನಾಡಿನ ಜೀವನದ ಇನ್ನೊಂದು ಮಗ್ಗುಲನ್ನು ಸ್ಪರ್ಶಿಸುತ್ತದೆ.

ನಿವೃತ್ತ ನ್ಯಾಯಾಧೀಶರು, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರೂ ಆದ ಕೋ.ಚನ್ನಬಸಪ್ಪನವರು ಪ್ರಬುದ್ಧ ಸಾಹಿತ್ಯ ಶಕ್ತಿಯೂ ಹೌದು.

ಬರುಗೂರು ರಾಮಚಂದ್ರಪ್ಪ ಬಹುರೂಪಿ. ಬಂಡಾಯಗಾರರು, ಕನ್ನಡ ಹೋರಾಟಗಾರರು, ಸಾಹಿತಿ, ಸಿನಿಮಾ ನಿರ್ದೇಶಕ, ರಾಜಕೀಯ...

ನೀರಿನ ಮಹತ್ವ ಮತ್ತು ಸದುಪಯೋಗ ತಿಳಿಸುತ್ತಾ ಜಲಸಾಕ್ಷರತೆ ಮೂಡಿಸುತ್ತಿರುವವರು ಶ್ರೀಪಡ್ರೆ.

Tuesday, March 17, 2009

ದೇವರು ಹೀಗೂ ಕಾಣಿಸಬಹುದು!

ದೊಡ್ಡಬಳ್ಳಾಪುರ ಹತ್ತಿರವಾಗುತ್ತಿತ್ತು. ಕಿರ್ ಕಿರ್ರೋ ಎಂದು ಶಬ್ದ ಮಾಡುತ್ತಾ ಹಕ್ಕಿಗಳು ಹಾರಿ ರಸ್ತೆಯ ಎಡದ ಮರದಿಂದ ಬಲದ ಮರಕ್ಕೆ ಹಾರಿದ್ದು ಕಾಣಿಸಿತು. ತಕ್ಷಣ ಕಾರನ್ನು ರಸ್ತೆ ಬದಿ ನಿಲ್ಲಿಸಿದೆ. ನೋಡಿದರೆ ಮರದ ಮೇಲೆ ಜೋಡಿ ಹಕ್ಕಿಗಳು ಕೂತಿವೆ.
ಇದರ ಹೆಸರು ನೀಲಕಂಠ. ಇಂಗ್ಲೀಷಿನಲ್ಲಿ ಇದಕ್ಕೆ ಎರಡು ಹೆಸರುಗಳಿವೆ. ಬ್ಲೂ ಜೇ(ಬಣ್ಣದಿಂದ) ಮತ್ತು ಇಂಡಿಯನ್ ರೋಲರ್(ಹಾರಾಡುವಾಗ ಪಲ್ಟಿ ಹೊಡೆಯುವುದರಿಂದ). ಇನ್ನೊಂದು ವಿಶೇಷವೆಂದರೆ ಇದು ನಮ್ಮ ಕರ್ನಾಟಕದ ರಾಜ್ಯ ಪಕ್ಷಿ. ನಮ್ಮ ರಾಜ್ಯ ಮತ್ತು ಭಾಷೆಯಷ್ಟೇ ಸುಂದರವಾದ ಹಕ್ಕಿ.
ಆ ಮರದಲ್ಲೇ ಇದ್ದ ಪೊಟರೆಯಲ್ಲಿ ಗೂಡು ಮಾಡುತ್ತಿದ್ದಿರಬಹುದು. ಇಣುಕುತ್ತಿತ್ತು. ಫೋಟೋ ತೆಗೆದು ದೇವಸ್ಥಾನದ ಬಾಗಿಲು ಹಾಕಿದರೆ ಕಷ್ಟ ಎಂದುಕೊಂಡು ಹೊರಟೆವು.
ಚಂದವಾದ.. ನೀಲಿ..
ರೇಷ್ಮೆಸೀರೆಯುಟ್ಟ ನಾರಿಯಂತೆ..
ಬೆಡಗು ಬಿನ್ನಾಣ..
ನಾಚಿಕೆಯೇ.. ಬಡಿವಾರ..!
ಈ ಹಕ್ಕಿಯ ಫೋಟೋ ನೋಡಿ ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ್ ಹೆಗಡೆಯವರ ಉದ್ಘಾರವಿದು.
ನಾವು ಹೋಗುತ್ತಿದ್ದುದು ಘಾಟಿಗೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬಹ್ಮಣ್ಯಸ್ವಾಮಿ ದೇವಾಲಯವಿರುವುದು ಕಣಿವೆಯಲ್ಲಿ. ಹಾವಿನಂತೆ ಬಳುಕುವ ಹಾದಿಯಲ್ಲಿ ಬೆಟ್ಟಗಳ ನಡುವಿರುವ ಕಣಿವೆಯೊಳಕ್ಕೆ ಇಳಿಯಬೇಕು.
ಇಲ್ಲಿ ಸುಬ್ರಹ್ಮಣ್ಯ ತಪಸ್ಸನ್ನು ಮಾಡಿದನೆಂಬ ಪ್ರತೀತಿಯಿದೆ. ಇಲ್ಲಿನ ದೇವರ ಮೂರ್ತಿಗೆ ಎರಡು ರೂಪ. ಒಂದುಕಡೆಯಿಂದ ಸುಬ್ರಹ್ಮಣ್ಯ ಮತ್ತೊಂದು ಕಡೆಯಿಂದ ಲಕ್ಷ್ಮೀನರಸಿಂಹ ಕಾಣುತ್ತಾರೆ.
ದಾರಿಯಲ್ಲಿ ಬರುವಾಗ ನಾಗ ಗಣಪತಿ ದೇವಾಲಯವಿತ್ತು. ಅಲ್ಲಿ ಗಣೇಶನ ಎತ್ತರದ ಸುಂದರವಾದ ಮೂರ್ತಿಯನ್ನು ನೋಡಲು ಹೋದೆವು.
ಆ ದೇವಾಲಯದಲ್ಲಿದ್ದ ಬಿಳಿ ಎಕ್ಕದ ಹೂಗಳ ಮಕರಂದವನ್ನು ಸೂರಕ್ಕಿಯು ಹೀರುತ್ತಿತ್ತು. ಅದನ್ನು ನೋಡುವುದೇ ಚಂದ. ಗಾಳಿಯಲ್ಲಿ ರೆಕ್ಕೆ ಪಟಪಟಿಸುತ್ತಲೇ ಸ್ಟ್ರಾ ತರಹದ ತನ್ನ ಕೊಕ್ಕನ್ನು ಹೂವಿನೊಳಗೆ ತೂರಿಸಿ ಮಕರಂದ ಹೀರುತ್ತದೆ
ದಾರಿಯಲ್ಲಿ ವಾಪಸಾಗುವಾಗ ನನ್ನ ಹೆಂಡತಿ ಮತ್ತು ಮಗ ಎಷ್ಟು ದೇವರುಗಳನ್ನು ನೋಡಿದೆವೆಂದು ಲೆಕ್ಕಹಾಕುತ್ತಿದ್ದರು. ನಾನೂ ಮನಸ್ಸಿನಲ್ಲಿ ಲೆಕ್ಕಹಾಕತೊಡಗಿದೆ!

Tuesday, March 10, 2009

ಚಿತ್ತಾಕರ್ಷಕ ಚಿಟ್ಟೆ

"ಕಾರೆಹಣ್ಣುಗಳ ಫೋಟೋ ತೆಗೀತೀರಾ? ಹಾಗೇ ಒಂದಷ್ಟು ಮನೆಗೆ ತರೋಣ ಬನ್ನಿ" ಎಂದು ಸ್ನೇಹಿತ ನಾಗಭೂಷಣ್ ಅವರ ಹಳ್ಳಿ ಪಕ್ಕದಲ್ಲಿದ್ದ ಪೊದೆಗಳ ಮಧ್ಯೆ ನನ್ನನ್ನು ಕರೆದೊಯ್ದರು. ಕಾರೆ ಹಣ್ಣಿನ ಫೋಟೋ ತೆಗೆದು ಕವರಿನೊಳಕ್ಕೆ ಹಳದಿ ಹಣ್ಣುಗಳನ್ನು ತುಂಬುತ್ತಿದ್ದಾಗ, ಆ ಮುಳ್ಳಿನ ಗಿಡಕ್ಕೆ ಹಬ್ಬಿದ ಬಳ್ಳಿಯ ಮೇಲೆ ಹುಳುವೊಂದು ಕಾಣಿಸಿತು.
ಚಾಕೊಲೇಟ್ ಬಣ್ಣದಲ್ಲಿದ್ದ ಅದರ ಮೈಮೇಲೆ ಕೇಸರಿ ಬಣ್ಣದ ಆಂಟೆನಾಗಳು. "ಇದು ಯಾವುದೋ ಚಿಟ್ಟೆಯಾಗುತ್ತೆ. ಮನೆಗೆ ತೆಗೆದುಕೊಂಡು ಹೋಗ್ತೀನಿ" ಎಂದು ಹೇಳಿ ಹುಶಾರಾಗಿ ಬಳ್ಳಿ ಸಮೇತೆ ಕತ್ತರಿಸಿಕೊಂಡೆ. ಆ ಬಳ್ಳಿಯನ್ನು ನೋಡಿದ ನಾಗಭೂಷಣ್, "ಇದು ಈಶ್ವರೀಬಳ್ಳಿ ಕಣ್ರಿ. ಇದೊಂದು ಔಷಧೀಯ ಸಸ್ಯ. ಆದರೆ ಏತಕ್ಕೆ ಬಳಸುತ್ತಾರೆ ಅಂತ ಮಾತ್ರ ಗೊತ್ತಿಲ್ಲ" ಅಂದರು. ಅದನ್ನು ತಂದು ಡಬ್ಬದಲ್ಲಿಟ್ಟೆ. ಒಂದು ದಿನಕ್ಕೇ ಆ ಬಳ್ಳಿ, ಎಲೆ ಬಾಡಿದಂತಾಯಿತು. ಅದಕ್ಕಾಗಿ ಮಾರನೇ ದಿನವೂ ಹುಳಕ್ಕೆ ಮೇವು ತರಲು ಹೋದೆ.
ಆಗ ಇನ್ನೊಂದು ಹುಳ ಸಿಕ್ಕಿತು. ಪ್ರತಿ ದಿನವೂ ಎಲೆ ತರುವುದು ಮುಖ್ಯ ಕೆಲಸವಾಯಿತು.

ಒಂದು ದಿನ ನೋಡಿದರೆ, ಈ ಹುಳಗಳಲ್ಲಿ ಒಂದು ಕೋಶಾವಸ್ಥೆಗೆ ಹೋಗಿದೆ, ಇನ್ನೊಂದು ಕೋಶಾವಸ್ಥೆಗೆ ಹೋಗುವ ತಯಾರಿಯಲ್ಲಿದೆ. ಅದರ ಫೋಟೋ ತೆಗೆದೆ.
ನಂತರ ಒಂದು ವಾರಕ್ಕೆ ಅದರ ಹೆರಿಗೆ. ಕೋಶದಿಂದ ಹೊರಬಂದ ಮೇಲಷ್ಟೇ ನನಗೆ ತಿಳಿದದ್ದು ಅದು ಕ್ರಿಮ್ಸನ್ ರೋಸ್ ಚಿಟ್ಟೆಯೆಂದು.
ನಿರಂತರವಾಗಿ ಪ್ರಕೃತಿಯ ಸೆರಗಲ್ಲಿ ನಡೆಯುವ ಈ ರೂಪಾಂತರ ಕ್ರಿಯೆಯನ್ನು ನೋಡಿ ಅನುಭವಿಸುವುದು ರೋಚಕ. ಇದನ್ನು ಚಿತ್ರಗಳನ್ನಾಗಿಸುವುದು ಸವಾಲಿನ ಕೆಲಸ. ಅನೇಕ ಆಯುರ್ವೇದದ ಔಷಧಗಳ ಮೂಲವಸ್ತುವಾದ ಈ ಈಶ್ವರೀಬಳ್ಳಿಯನ್ನು ತಿಂದೇ ಜೀವಿಸುವುದರಿಂದ ಈ ಚಿಟ್ಟೆಗೆ ಇಷ್ಟೊಂದು ಬಣ್ಣಗಳಿವೆಯೋ ತಿಳಿಯದು. ಇಲ್ಲಿ ತಿಳಿದಿರುವುದು ಅಲ್ಪ. ತಿಳಿಯಬೇಕಿರುವುದು ಅಪಾರ.

Wednesday, March 4, 2009

ರೇಷ್ಮೆ ಉದ್ಯಮದಲ್ಲಿ ಹದ್ದುಗಳ ಸಹಭೋಜನ

ಶಿಡ್ಲಘಟ್ಟದ ಪ್ರಸಿದ್ಧ ರೇಷ್ಮೆ.
ಶಿಡ್ಲಘಟ್ಟದ ರೇಷ್ಮೆ ದಾರವು ಸೂರತ್ ನಲ್ಲಿ ಜರಿ ರೂಪ ಪಡೆಯುತ್ತೆ. ಕಂಚಿಯಲ್ಲಿ ರೇಷ್ಮೆ ಸೀರೆಯಾಗಿ ರೂಪಾಂತರ ಹೊಂದುತ್ತೆ ಎಂಬ ವಿಷಯ ಎಲ್ಲರಿಗೂ ತಿಳಿದದ್ದೇ. ಆದರೆ "ಕಾಮನ್ ಪರಯ ಕೈಟ್" ಅಥವಾ "ಕಪ್ಪು ಗರುಡ" ಎಂದು ಕರೆಯುವ ಹದ್ದುಗಳ ಭೋಜನಕ್ಕೂ ರೇಷ್ಮೆಗೂ ಏನು ಸಂಬಂಧ ಅನ್ನಿಸಿತೇ? ಇದೊಂಥರಾ ಬೆಟ್ಟದ ನೆಲ್ಲಿ ಮತ್ತು ಸಮುದ್ರದ ಉಪ್ಪಿನಂತೆ. ದಿನವೂ ನಡೆಯುವ ಹದ್ದುಗಳ ಸಹಭೋಜನ ವೀಕ್ಷಿಸಬೇಕೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟಕ್ಕೆ ಬನ್ನಿ. ಅಂದ ಹಾಗೆ, ಊರಿನ ಹೊರಗಿರುವ ಈ ಜಾಗಕ್ಕೆ ಮೂಗು ಮುಚ್ಚಿಕೊಂಡೇ ಹೋಗಬೇಕು.
ಎಲ್ಲೆಲ್ಲಿ ನೋಡಿದರೂ ಹದ್ದುಗಳೇ ಹದ್ದುಗಳು.
ರೇಷ್ಮೆ ಮೊಟ್ಟೆಯಿಂದ ಬಟ್ಟೆಯವರೆಗೆ ಸಾಗುವ ರೇಷ್ಮೆ ಉದ್ಯಮವನ್ನು ಕಲ್ಪವೃಕ್ಷಕ್ಕೆ ಹೋಲಿಸಬಹುದು. ಇಲ್ಲಿ ಎಲ್ಲವೂ ಉಪಯುಕ್ತವೇ. ಕುದಿಯುವ ನೀರಲ್ಲಿ ಗೂಡನ್ನು ಹಾಕಿ ಸೂಕ್ಷ್ಮವಾದ ರೇಷ್ಮೆ ನೂಲನ್ನು ತೆಗೆದ ಮೇಲೆ ಹುಳುಗಳ ತೆಳು ಪೊರೆಯಂತಹ ರೇಷ್ಮೆ ತ್ಯಾಜ್ಯವು ಉಳಿಯುತ್ತದೆ. ರೇಷ್ಮೆ ನೂಲು ತೆಗೆಯುವುದೇ ಒಂದು ಗೃಹ ಕೈಗಾರಿಕೆಯಾದರೆ, ಹುಳು ಮತ್ತು ರೇಷ್ಮೆ ತ್ಯಾಜ್ಯವನ್ನು ಸಂಗ್ರಹಿಸಿ ಬೇರ್ಪಡಿಸಿ, ಒಣಗಿಸುವುದೇ ಮತ್ತೊಂದು ಪುಟ್ಟ ಗುಡಿ ಕೈಗಾರಿಕೆ.
ರೇಷ್ಮೆ ಹುಳುಗಳನ್ನು ಹೆಕ್ಕಿ ತಿನ್ನಲು ನಾಮುಂದು ತಾಮುಂದು ಎನ್ನುತ್ತ ಕುಳಿತ ಹದ್ದುಗಳ ದಂಡು.
ತುಂಬಾ ದುರ್ಗಂಧ ಬೀರುವುದರಿಂದ ಈ ಹುಳುವಿನ ಕೆಲಸ ಊರ ಹೊರಗೆ ನಡೆಯುತ್ತದೆ. ಫಿಲೇಚರ್ ಗಳಲ್ಲಿ ಸಂಗ್ರಹಿಸಿದ ಹುಳುಗಳನ್ನು ತಂದು ನೀರಿನ ತೊಟ್ಟಿಯಲ್ಲಿ ಹಾಕಿ ಕಡ್ಡಿಯಲ್ಲಿ ತಿರುಗಿಸುತ್ತಾರೆ. "ಜಾಲ" ಎಂದು ಕರೆಯುವ ಈ ರೇಷ್ಮೆ ತ್ಯಾಜ್ಯವನ್ನು ಬೇರ್ಪಡಿಸಿ ಒಣಗಿಸುವರು. ಇಲ್ಲಿಂದ ಹುಳುಗಳನ್ನು ಎಣ್ಣೆ ತಯಾರಿಸಲು ತೆಗೆದುಕೊಂಡು ಹೋದರೆ, ಉಳಿದ 'ಜಾಲ'ವು ರೇಷ್ಮೆ ತಯಾರಿಕೆಗೆ ಹೋಗುತ್ತದೆ.
"ಎಷ್ಟೊತ್ತಿಗಪ್ಪಾ ಹುಳುಗಳನ್ನು ಎಸೆಯೋದು..." ಹದ್ದುಗಳ ಕಾತರ.
ಹದ್ದುಗಳೆಲ್ಲ ಬರುವುದೇ ಹುಳುಗಳಿಗಾಗಿ. ಒಣಗಲು ಹಾಕಿದ ಜಾಲದಲ್ಲಿರುವ ಹುಳುಗಳನ್ನು ಹದ್ದುಗಳು ತಂಡೋಪತಂಡವಾಗಿ ಬಂದು ಖಾಲಿ ಮಾಡುತ್ತವೆ. ಈ ರೀತಿ ಪಂಕ್ತಿಯಲ್ಲಿ ಕೂತು ಜಾಲವನ್ನು ಚೊಕ್ಕಟಗೊಳಿಸಲು ಹದ್ದುಗಳು ದುಡ್ಡುಕಾಸು ಕೇಳುವುದಿಲ್ಲ! ನೆಲ ಮುಗಿಲು ಎಲ್ಲೆಲ್ಲಿ ನೋಡಿದರೂ ಹದ್ದುಗಳೇ ಹದ್ದುಗಳು. ನಿಸರ್ಗದ ಪೌರಕಾರ್ಮಿಕರಾದಂತಹ ಹದ್ದುಗಳು ಆಹಾರ ಸರಪಣಿಯ ಮುಖ್ಯ ಕೊಂಡಿ. ಕೀಟನಾಶಕ ಮತ್ತು ಇತರೇ ಮಾನವ ಸೃಷ್ಟಿಸಿದ ವಿಷವಸ್ತುಗಳು ಸತ್ತ ಪ್ರಾಣಿಗಳ ಮುಖಾಂತರ ರಣಹದ್ದುಗಳನ್ನು ಆಕಾಶದಿಂದ ಮಾಯಮಾಡಿರುವ ಸಂಗತಿಯು ಇಲ್ಲಿ ನೆನಪಾಗುತ್ತದೆ. ಆದರೆ, ರೇಷ್ಮೆ ನೂಲು ತಯಾರಿಸುವಾಗ ಆಗಲಿ, ಹುಳು-ಜಾಲ ಬೇರ್ಪಡಿಸುವಾಗ ಆಗಲಿ ರಸಾಯನಿಕಗಳನ್ನು ಉಪಯೊಗಿಸದಿರುವುದು ಒಂದು ಸಂತಸದ ವಿಷಯ.
ಬಿಳಿ ಗರುಡನ ವೀಕ್ಷಣೆ.
ಇಲ್ಲಿ ಹದ್ದುಗಳಷ್ಟೇ ಅಲ್ಲ. ಕಾಗೆಗಳೂ ಇವೆ. ಆದರೆ ಹದ್ದುಗಳಿಂದ ದೂರವಿರುತ್ತವೆ. ಅಪರೂಪಕ್ಕೊಮ್ಮೊಮ್ಮೆ ಒಂದೊಂದು ಬಿಳಿ ಗರುಡ (ಬ್ರಾಮಿನಿ ಕೈಟ್)ಗಳು, ಒಂದೆರಡು ಜಾಡಮಾಲಿ ಹದ್ದು (ವೈಟ್ ಸ್ಕ್ಯಾವೆಂಜರ್ ವಲ್ಚರ್)ಗಳು ಕಾಣಸಿಗುತ್ತವೆ. ಕಪ್ಪು ಗರುಡಗಳಂತೆ ಇವು ಏಕೆ ಗುಂಪುಗುಂಪಲ್ಲಿ ಅಥವಾ ಹೆಚ್ಚಾಗಿ ಕಾಣಿಸುತ್ತಿಲ್ಲ ಎಂಬುದೊಂದು ಅಚ್ಚರಿಯ ಸಂಗತಿ. ಕಪ್ಪು ಗರುಡಗಳ ಗುಂಪು ಹೆಚ್ಚಾಗಿದ್ದು ಬೇರೆ ಹದ್ದುಗಳಿಗೆ ಜಾಗ ಕೊಡುತ್ತಿಲ್ಲವೋ ಏನೋ ಗೊತ್ತಿಲ್ಲ.
ಕಪ್ಪು ಗರುಡನ ತೇಗೋ ಅಥವಾ ಆಕಳಿಕೆಯೋ?!!
ಹುಳುಗಳನ್ನು ತಿನ್ನುತ್ತಾ ಹದ್ದುಗಳು ತಮ್ಮ ಬೃಹತ್ ಸಂತತಿಯೊಂದಿಗೆ ರೇಷ್ಮೆ ಉದ್ಯಮವೆಂಬ ದೊಡ್ಡ ವೃಕ್ಷದ ಪುಟ್ಟ ರೆಂಬೆಯಂತಾಗಿದೆ. ಈ ರೆಂಬೆಯು ಸದಾ ಹಸಿರಾಗಿ ನಳನಳಿಸುತ್ತಿರಲಿ ಎಂದು ಹಾರೈಸೋಣ.
ಹಾರುತ ದೂರಾ ದೂರಾ ಮೇಲೇರುತ ಬಾರಾ ಬಾರಾ...