ಈ ಬೆಲೆಕಟ್ಟಲಾಗದ ಮಿಲಿಯನ್ ಡಾಲರ್ ಸ್ಮೈಲ್ ಬಗ್ಗೆ ಬರೆಯುವುದಕ್ಕಿಂತ ಚಿತ್ರಗಳನ್ನು ನೋಡಿ ನಕ್ಕು ಹಗುರಾಗೋಣ. ಏನಂತೀರ?
ಮಗುವೆ ನಿನ್ನ ಹೂನಗೆ ಒಡವೆ ನನ್ನ ಬಾಳಿಗೆ
ಮಗುವೆ ನಿನ್ನ ಹೂನಗೆ ಒಡವೆ ನನ್ನ ಬಾಳಿಗೆ
ತಕ್ಷಣ ಮಣಿಕಾಂತ್, "ಇದು ಬೇಡ. ತಾಯಿ ಮಗು ಇರುವ ಚಿತ್ರ ಬೇಕು. ಸಾಧ್ಯವಾದರೆ ತೆಗೆದು ಕಳಿಸಿ" ಎಂದು ಮೆಸೇಜ್ ಮಾಡಿದರು.
"ಇದಲ್ಲ ಮಲ್ಲಿಕ್. ನನ್ನ ಲೇಖನದಲ್ಲಿ ಬರೋದು ಗಂಡುಮಗು. ಆ ಲೇಖನ ನನ್ನ ಬ್ಲಾಗಲ್ಲಿದೆ, ಓದಿ" ಎಂಬ ಮೆಸೇಜ್ ಬಂತು.
"ಚೆನ್ನಾಗಿದೆ ಮಲ್ಲಿಕ್. ಇನ್ನೂ ಸ್ವಲ್ಪ ಇಂಪ್ರೂವ್ ಮಾಡೋಕಾಗುತ್ತ ನೋಡಿ. ಯಾರು ನೋಡಿದರೂ ತಮ್ಮ ತಾಯಿ ತಿನ್ನಿಸಿದ್ದು ನೆನಪಾಗಬೇಕು. ತಾಯಿಯ ಮುಖವೂ ಸ್ವಲ್ಪ ಕಾಣುವಂತಿರಲಿ. ಭಾವನೆಗಳು ಮುಖ್ಯ" ಎಂಬ ಮೆಸೇಜ್ ಬಂತು.
"ಸ್ವಲ್ಪ ಇರಿ. ಇದಕ್ಕೆ ಸರಿಯಾಗಿ ನಿಲ್ಲೋದನ್ನು ಹೇಳಿಕೊಡ್ತೀನಿ" ಅಂತ ನನ್ನ ಸ್ನೇಹಿತ ರೆಡ್ಡಿ ತಾಲೀಮು ನಡೆಸಿದ್ದಾನೆ. (ಅವರೆ ಬೆಳೆ)
ರುಂಡ ಒಂದು ಕಡೆ ಮುಂಡ ಒಂದು ಕಡೆ...
ಅಟೆನ್ಷನ್ ಪೊಸಿಷನ್!!(ಬೀಟ್ ರೂಟ್)
"ಅರೆ! ಇದೇನಿದು ಮರಕ್ಕೇನೋ ಕಟ್ಟಿದ ಹಾಗಿದೆ?"ನನ್ನ ಹೆಂಡತಿ ಕೈತೋರಿದತ್ತ ನೋಡಿದಾಗ ಅಲ್ಲಿ ಕಂಡದ್ದು, ಕೈ ಚಾಚಿ ತಬ್ಬಿಕೊಳ್ಳಬಹುದಾದಷ್ಟು ದೊಡ್ಡದಾದ ಮಣ್ಣಿನ ಹೆಂಟೆ. ಹಲಸಿನ ಮರದ ಕೊಂಬೆಯಿಂದ ಆ ಹೆಂಟೆ ನೇತಾಡುತ್ತಿತ್ತು. ತಕ್ಷಣವೇ ಹೊಳೆಯಿತು - ಅದು ಕಣಜದ ಗೂಡೆಂದು. ನಿಧಾನವಾಗಿ ಹತ್ತಿರ ಹೋಗುತ್ತಿದ್ದಂತೆಯೇ, "ಅಲ್ಲಿಗೆ ಹೋಗ್ಬೇಡ್ರೀ, ಹುಳ ಕಚ್ತವೆ" ಎಂದು ಅಲ್ಲಿಯೇ ಸಮೀಪದಲ್ಲಿದ್ದ ಒಬ್ಬ ಮಹಿಳೆ ಕೂಗಿಕೊಂಡರು. ದೂರದಿಂದಲೇ ನೋಡುವುದಷ್ಟಕ್ಕೇ ನಾವು ತೃಪ್ತಿಪಡಬೇಕಾಯಿತು.
ಸೊಳ್ಳೆಗಳಂತೆ ಕಣಜಗಳಲ್ಲೂ ಹೆಣ್ಣುಗಳಿಗೆ ಮಾತ್ರ ಮುಳ್ಳಿರುತ್ತದೆ. ಈ ಮುಳ್ಳಿರುವ ಕಣಜಗಳು ಮಾತ್ರ ಕಚ್ಚುತ್ತವೆ. ತಮ್ಮನ್ನು ರಕ್ಷಿಸಿಕೊಳ್ಳಲು ಇವು ಕುಟುಕುತ್ತವೆಯೇ ಹೊರತು, ಸುಮ್ಮಸುಮ್ಮನೆ ಮನುಷ್ಯನ ಮೇಲೇರಿ ಹೋಗುವುದಿಲ್ಲ. ಗುಂಪಿನಲ್ಲಿ ವಾಸಿಸುವ ಕಣಜಗಳಲ್ಲಿ ತಮ್ಮ ದೊಡ್ಡ ಮನೆಯ ರಕ್ಷಣೆಗಾಗಿಯೇ ಮುಳ್ಳುಗಳನ್ನು ಹೊಂದಿರುವ ಸೈನಿಕರ ಪಡೆ ಇರುತ್ತದೆ. ಇವುಗಳ ಕೊಂಡಿ ಅಥವಾ ಮುಳ್ಳು ವಿಷಕಾರಿ. ಈ ಮುಳ್ಳುಗಳಲ್ಲಿ ಕೆಂಪು ರಕ್ತ ಕಣಗಳನ್ನು ಕರಗಿಸುವ ಹಿಸ್ಟಮಿನ್ ರಾಸಾಯನಿಕವನ್ನು ಬಿಡುಗಡೆ ಮಾಡುವ ಕೋಶಗಳಿರುತ್ತವೆ. ಕಣಜಗಳ ಗುಂಪು ದಾಳಿಯಲ್ಲಿ ಕಡಿತಕ್ಕೊಳಗಾದ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆಯೂ ಇದೆ.
ಇಂಗ್ಲಿಷ್ ನಲ್ಲಿ ಹಾರ್ನೆಟ್ ಎಂದು ಕರೆಯುವ ಗುಂಪಿನ ಕಣಜಗಳು ತಮ್ಮ ಗೂಡಿನ ಸುತ್ತಲೂ ಚೆಂಡಿನಂತಹ ಗುಂಡಗಿನ ಹೊದಿಕೆಯನ್ನು ರಕ್ಷಿಸಿಕೊಳ್ಳುತ್ತವೆ. ಈ ಗೂಡುಗಳಲ್ಲಿ ನೂರಾರು, ಕೆಲವೊಮ್ಮೆ ಸಾವಿರಾರು ಕಣಜಗಳು ಸಹಜೀವನ ನಡೆಸುತ್ತವೆ.
ಸ್ವಲ್ಪ ದಿನಗಳ ನಂತರ ಊರಿನಲ್ಲಿ ಭೇಟಿಯಾದ ಗವಿಗುಟ್ಟದ ಅರ್ಚಕರು ಸೂತಕದ ಸಮಾಚಾರ ತಂದಿದ್ದರು. "ನಾವಿಲ್ಲದ ಹೊತ್ತಿನಲ್ಲಿ ಯಾರೋ ಹುಡುಗರು ಆ ಗೂಡನ್ನು ಒಡೆದು ಹಾಕಿದ್ದಾರಪ್ಪ" ಅಂದರು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅಂತಾರಲ್ಲ, ಹಾಗಾಗಿತ್ತು. ತಕ್ಷಣವೇ ಹೋಗಿ ನೋಡಿದೆ. ಗೂಡಿನ ಅರ್ಧಕ್ಕೂ ಹೆಚ್ಚು ಭಾಗ ಕಳಚಿ ಬಿದ್ದಿತ್ತು. ಗೂಡಿನ ಒಳಭಾಗ ಅನಾವರಣಗೊಂಡಿತ್ತು. ಕೆಳಗೆ ಬಿದ್ದಿದ್ದ ಗೂಡಿನ ಅವಶೇಷಗಳನ್ನು ನೋಡಿ ಮನಸ್ಸಿಗೆ ಪಿಚ್ಚೆನ್ನಿಸಿತು. ಕಣಜಗಳು ಕಾಣಲಿಲ್ಲ. ಎಲ್ಲಿ ಹೋದವೋ? ಅವು ಎಷ್ಟು ಕಷ್ಟಪಟ್ಟು ಈ ಗೂಡು ಕಟ್ಟಿದ್ದವೋ?
"ಅಲ್ರೀ, ನಾನೂ ನಿಮ್ಮಂತೆ ಮನುಷ್ಯ. ಕಷ್ಟಪಟ್ರೆ ನೀವು ಕೂಡ ಈ ರೀತಿ ಫೋಟೋ ತೆಗೀಬಹುದು" ಎಂದು ತೇಜಸ್ವಿಯವರು ಅಂದು ಹೇಳಿದ್ದು ಈಗ ಹೇಳಿದಂತಿದೆ. ಅವರ ಮನೆಯಲ್ಲಿ ಟೀಪಾಯ್ ಮೇಲೆಲ್ಲಾ ನಾನಾ ವಿಧದ ಹಕ್ಕಿಚಿತ್ರಗಳು. ಕೆಲವೊಂದಂತೂ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನೋಡುತ್ತಿರುವುದು. ತೇಜಸ್ವಿಯವರು ತೆಗೆದಿದ್ದ ಚಿತ್ರಗಳನ್ನೆಲ್ಲಾ ನೋಡುತ್ತಾ ಬೆಕ್ಕಸಬೆರಗಾಗಿ,"ಇವೆಲ್ಲಾ ನಮ್ಮ ಕೈಲಿ ತೆಗೆಯೊಕಾಗಲ್ಲ" ಎಂದುಬಿಟ್ಟೆ. ತಕ್ಷಣ ಗುಂಡಿನಂತೆ ಬಂದ ತೇಜಸ್ವಿಯವರ ಮಾತು ನನ್ನೊಬ್ಬನಿಗೇ ಅಲ್ಲ ಎಲ್ಲರಿಗೂ ಎಲ್ಲಾ ಕೆಲಸಕ್ಕೂ ಅನ್ವಯಿಸುತ್ತದೆ.
ಅಂದು ೨೦೦೨ರ ಏಪ್ರಿಲ್ ೨೬. ತೇಜಸ್ವಿಯವರ ತೋಟದೊಳಗೆ ಗೇಟಿಗೆ ಸುತ್ತಿದ್ದ ಚೈನ್ ಬಿಡಿಸಿಕೊಂಡು ಒಳಗಡೆ ಹೋದೆವು. ಅಕ್ಕಪಕ್ಕ ಬರಿ ಕಾಫಿ ಗಿಡಗಳು. ಮುಂದೆ ಕಾಲುದಾರಿ. ಆಹ್ಲಾದಕರವಾದ ಮಲೆನಾಡ ವಾತಾವರಣ. ಎಲ್ಲೆಲ್ಲೂ ಮರಗಿಡಗಳು. ಸ್ವಲ್ಪ ದೂರ ಹೋದ ನಂತರ ಅವರ ಮನೆ "ನಿರುತ್ತರ"ದ ಹೆಂಚು ಕಾಣಿಸಿತು. ಮನೆಯ ಸುತ್ತ ನಾನಾ ಬಗೆಯ ಹೂಗಿಡಗಳು. ಮುಂದೆ ಹುಲ್ಲುಹಾಸು, ಆಕರ್ಷಕ ಸಸ್ಯ ವೈವಿಧ್ಯ.
ಅವರ ಪತ್ನಿ ರಾಜೇಶ್ವರಿಯವರು ಕೊಟ್ಟ ಕಾಫಿ, ಬಿಸ್ಕತ್ ಸೇವಿಸಿ ಮಾತನಾಡುತ್ತ ಕುಳಿತೆವು. ಅವರು ಮಾಡಿರುವ ಪೇಂಟಿಂಗ್ ಗೋಡೆಯ ಮೇಲಿತ್ತು. ಕೇಳಿದ್ದಕ್ಕೆ, "ಐ ಯಾಮ್ ಎ ಪೇಂಟರ್. ಮೈಸೂರಿನಲ್ಲಿ ತಿಪ್ಪೇಸ್ವಾಮಿಯವರ ಬಳಿ ಕಲಿತಿರುವೆ. ಅದಕ್ಕೂ ಮುಖ್ಯವಾಗಿ ನಾನೊಬ್ಬ ಮ್ಯುಸಿಷಿಯನ್. ಪಂಡಿತ್ ರವಿಶಂಕರರ ಬಳಿ ಸಿತಾರ್ ಕಲಿತಿರುವೆ" ಅಂದರು.
ಮನೆಯ ಹಿಂದೆ ಇರುವ ನೀರಿನ ಪುಟ್ಟ ತೊರೆಯಲ್ಲಿ ತೇಜಸ್ವಿ ಮೀನುಗಳನ್ನು ಸಾಕಿದ್ದರು. ನನ್ನ ಜೊತೆ ಬಂದಿದ್ದ ನನ್ನಕ್ಕನ ಮಗಳ ಕೈಲಿ ಅವಕ್ಕೆ ಬ್ರೆಡ್ ಹಾಕಿಸಿದರು. ಅವರ ಫೋಟೋ ತೆಗೆದಾಗ "ಯಾಕ್ರೀ ಇಷ್ಟೊಂದು ಫೋಟೋ ತೆಗೆಯುತ್ತೀರಿ. ನಾನೂ ಕೂಡ ನಿಮ್ಮಂತೆಯೇ ಮನುಷ್ಯ" ಅಂದರು. ತಮ್ಮನ ಜೊತೆ ರೇಷ್ಮೆ ಹುಳು ಸಾಕಲು ಅವರ ಮೈಸೂರಿನ ಮನೆಯಲ್ಲಿ ಪ್ರಯತ್ನಿಸಿದ್ದು ಮತ್ತು ಹಿಪ್ಪುನೇರಳೆ ಸೊಪ್ಪಿಗಾಗಿ ಅಲೆದದ್ದು ಎಲ್ಲಾ ನೆನಪಿಸಿಕೊಂಡು ನಕ್ಕರು. ಚೀನಾ ರೇಷ್ಮೆಯಿಂದ ನಮ್ಮ ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೇಳಿದಾಗ, "ಚೀನಾ ದೇಶದವನು ತಿನ್ನುವುದೂ ಅನ್ನವೇ, ನಮ್ಮ ದೇಶದವನು ತಿನ್ನುವುದೂ ಅನ್ನವೇ. ಅವರು ಕಡಿಮೆ ಬೆಲೆಗೆ ರೇಷ್ಮೆ ಇಲ್ಲಿಗೆ ತಂದು ಮಾರುತ್ತಿದ್ದಾರೆಂದರೆ ನಾವು ಏಕೆ ಅಷ್ಟು ಕಡಿಮೆ ಬೆಲೆಗೆ ರೇಷ್ಮೆ ತಯಾರಿಸಲಾಗುತ್ತಿಲ್ಲವೆಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಸರಕಾರದಿಂದ ಸಬ್ಸಿಡಿ ಪಡೆದು ನೆಮ್ಮದಿಯ ಜೀವನ ನಡೆಸಿದರೆ ಬುದ್ಧಿ ಮಂದವಾಗುತ್ತದೆ. ಚಾಲೆಂಜುಗಳನ್ನು ಎದುರಿಸಬೇಕು" ಅಂದರು.
ಅವರು ಭಾವಾನುವಾದ ಮಾಡಿರುವ ಕೆನೆತ್ ಆಂಡರ್ಸನ್, ಜಿಮ್ ಕಾರ್ಬೆಟ್ ರ ಕಥೆಗಳು, ಹೆನ್ರಿಶಾರೇರೆ ಬರೆದಿರುವ ಪ್ಯಾಪಿಲಾನ್ ಕೃತಿಗಳಂಥ ರೋಮಾಂಚಕಾರಿ ಕಥೆಗಳ ಬಗ್ಗೆ ಕೇಳಿದೆವು. "ಈ ಪುಸ್ತಕಗಳನ್ನೆಲ್ಲಾ ನಾವು ಹೈಸ್ಕೂಲಿನಲ್ಲಿದ್ದಾಗಲೇ ಓದಿದ್ದೆವು. ೪೦ ವರ್ಷಗಳ ನಂತರ ಅನುವಾದ ಮಾಡಿರುವೆನಷ್ಟೆ. ನಮ್ಮ ಸ್ನೇಹಿತರ ಗುಂಪು ಹಾಗಿತ್ತು. ಬರೀ ಓದಿದ್ದರೆ ಮರೆತುಬಿಡುತ್ತಿದ್ದೆವು. ನಾವುಗಳು ಚರ್ಚೆ-ವಿಮರ್ಶೆ ಮಾಡುತ್ತಿದ್ದುದರಿಂದ ಇನ್ನೂ ನೆನಪಿನಲ್ಲಿವೆ" ಎಂದರು ತೇಜಸ್ವಿ.
"ನಿಮ್ಮ ಮಿಲೇನಿಯಂ ಸರಣಿಯನ್ನು ಮುಂದುವರೆಸಿ" ಎಂದು ಹೇಳಿದಾಗ ಅವರು ನಕ್ಕರು. "ಈ ರೀತಿ ಮಾಹಿತಿ ಸಾಹಿತ್ಯದ ಪುಸ್ತಕಗಳನ್ನು ಬರೆದರೆ ಕಥೆ ಕಾದಂಬರಿ ಬರೆಯಿರಿ ಅನ್ನುತ್ತಾರೆ. ಅದನ್ನು ಬರೆದರೆ ಇದನ್ನು ಬರೆಯಿರಿ ಅನ್ನುತ್ತಾರೆ. ಒಮ್ಮೆ ಶಿವರಾಮ ಕಾರಂತರು ಈ ರೀತಿ ಮಕ್ಕಳಿಗೆ ಜ್ಞಾನದಾಯಕವಾದಂತಹ ಪುಸ್ತಕಗಳನ್ನೇ ಬರೆಯಲು ಹೇಳಿದ್ದರು. ಏಕೆಂದರೆ ಮಕ್ಕಳು ಮುಂದಿನ ಭವಿಷ್ಯ, ಅವರನ್ನು ತಿದ್ದಬೇಕು. ಬೆಳೆದವರನ್ನು ಏನು ತಿದ್ದುವುದು?" ಎಂದರು.