Monday, June 24, 2013

ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಿತಿಗಳು

 ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹಶಾಸ್ತ್ರಿ.

 ಶಿಕ್ಷಣತಜ್ಞ  ಡಾ.ಎಚ್.ನರಸಿಂಹಯ್ಯ.

 ಶಾಸನತಜ್ಞ ಸಂತೇಕಲ್ಲಹಳ್ಳಿಯ ಡಾ.ಆರ್.ಶೇಷಶಾಸ್ತ್ರಿ.

ಚಿ.ಶ್ರೀನಿವಾಸರಾಜು.


 ದ್ವಿಭಾಷಾ ಪ್ರಾಂತ್ಯವೆಂದೇ ಹೆಸರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಭಾಷೆಯನ್ನು ಕೆಲವರು ಕಂದೆಲುಗು ಎನ್ನುತ್ತಾರೆ. ಇಲ್ಲಿನವರು ಇಬ್ಬರು ತಾಯಂದಿರ ಮುದ್ದು ಕಂದಮ್ಮಗಳು. ಇಲ್ಲಿನ ಭಾಷಾ ಸೊಗಡು ವಿಶಿಷ್ಟವಾದುದು, ಸಾಹಿತ್ಯ ಅನನ್ಯವಾದುದು. ಇಲ್ಲಿ ನಡೆದಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೃಷಿ ಸಮೃದ್ಧವಾದುದು. ಇಲ್ಲಿನ ಜನ ಉರ್ದು, ತೆಲುಗನ್ನು ವ್ಯವಹಾರಿಕ ಭಾಷೆಯಾಗಿ ಬಳಸಿದರೂ ಕನ್ನಡ ನುಡಿಯನ್ನು ಉಳಿಸಿ ಬೆಳೆಸಿದ್ದಾರೆ.
  ಜನಪದ ಸಾಹಿತ್ಯ, ಮಹಿಳಾ ಸಾಹಿತ್ಯ, ಇಂಗ್ಲೀಷ್ ಸಾಹಿತ್ಯ, ಚಲನಚಿತ್ರ ಸಾಹಿತ್ಯ, ರಂಗಭೂಮಿ ಕಲೆ, ಕಲಾವಿದರು, ವಾಸ್ತುಶಿಲ್ಪ, ಚಿತ್ರಕಲೆ, ಛಾಯಾಚಿತ್ರ, ಸಂಗೀತ, ನೃತ್ಯ ಮುಂತಾದ ವಿವಿಧ ಕ್ಷೇತ್ರಗಳ ಸಾಹಿತಿ ಕಲಾವಿದರು ಜಿಲ್ಲೆಯಲ್ಲಿದ್ದಾರೆ. ಇಲ್ಲಿ ಜನಪದ ಕಲೆಗಳು ಹೇರಳವಾಗಿವೆ. ಶಿಲ್ಪ ಸೌಂದರ್ಯದ ದೇವಾಲಯ, ಚರ್ಚು, ಮಸೀದಿಗಳಿವೆ.
 ಜಿಲ್ಲೆಯಲ್ಲಿ ಹಲವು ಪ್ರಾಚೀನ ಶಾಸನ ಕವಿಗಳ ಉಲ್ಲೇಖವಿದೆ. ಪ್ರಾಚೀನ ಕವಿ ಚಿಂತಾಮಣಿಯ ಕಬ್ಜದ ನಾಗಮಯ್ಯ ಬರೆದ ಶಾಸನ, ಗೌರಿಬಿದನೂರಿನ ಮಲ್ಲಣಾರಾಧ್ಯ ಬರೆದಿರುವ ತಾಮ್ರ ಶಾಸನ, ಚಿಂತಾಮಣಿಯ ನೀಲಪ್ಪರ್, ಗೌರಿಬಿದನೂರು ನರಸಿಂಹಾಚಾರ್ಯ, ಚಿಂತಾಮಣಿಯ ಸ್ವಯಂಭೂ ಮತ್ತಿತರರ ಶಾಸನ ರಚನೆಗಳು ಇತಿಹಾಸದಲ್ಲಿ ದಾಖಲಾಗಿವೆ.
 ಜೈನ ಸಾಹಿತ್ಯಕ್ಕೆ ಸಂಬಂಧಿಸಿದ ’ಸಿರಿಭೂವಲಯ’ ಕೃತಿಯ ಕರ್ತೃ ಕುಮುದೇಂದು ನಂದಿ ಬಳಿಯ ಯಲುವಹಳ್ಳಿಯವರು. ಚಿಕ್ಕಬಳ್ಳಾಪುರದ ಬಾಡಾಲ ಸುಬ್ರಮಣ್ಯ ’ತಾರಾಶಶಾಂಕ’ ನಾಟಕದ ಕರ್ತೃವಾದರೆ, ಗೌರಿಬಿದನೂರು ಇಡಗೂರು ರುದ್ರಕವಿ ಕನ್ನಡದಲ್ಲಿ ಶಿವನಾಟಕ, ಮಾರ್ಕಂಡೇಯ ವಿಜಯ, ಹೊನ್ನಾವರದ ಹೊನ್ನೇಗೌಡನ ವಂಶಾವಳಿಯನ್ನು ರಚಿಸಿದ್ದಾರೆ. ಬಾಗೇಪಲ್ಲಿಯ ಸೋಮೇನಹಳ್ಳಿಯ ವೇದಾಂತಂ ರಾಘವಾಚಾರ್ಯಸ್ವಾಮಿ ’ಪಂಚವಿಂಶಧಿ ಪದ್ಧತಿ’ಗೆ ವ್ಯಾಖ್ಯೆ ಬರೆದಿದ್ದಾರೆ. ಗೌರಿಬಿದನೂರಿನ ಎಂ.ರಾಮರಾವ್ ಋಗ್ವೇದದ ಕೆಲವು ಭಾಗಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ಚಿಕ್ಕಬಳ್ಳಾಪುರದ ಮಂಡಿಗಲ್ಲಿನ ರಾಮಾಶಾಸ್ತ್ರಿ, ವರದಾಚಾರ್ಯ, ಶ್ರೀರಂಗಾಚಾರ್ಯ, ರಾಜಗೋಪಾಲಾಚಾರ್ಯ, ಎ.ಕೇಶವಯ್ಯ, ಪಡತಲ ಗಂಗಾಧರಶಾಸ್ತ್ರಿ,  ಗೌರಿಬಿದನೂರಿನ ಎಂ.ನಂಜುಂಡಾರಾಧ್ಯ,  ಹೊಸಹುಡ್ಯದ ನಾಗೇಶಚಾರ್ಯ, ವೆಂಕಟರಮಣಯ್ಯ ಜಿಲ್ಲೆಯ ಪ್ರಮುಖ ಸಂಸ್ಕೃತ ಸಾಹಿತಿಗಳು.
 ನಂದಿಗ್ರಾಮದ ನಂದಿಮಲ್ಲಯ್ಯ ಪ್ರಭೋದ ಚಂದ್ರೋದಯಂ ಎಂಬ ತೆಲುಗು ನಾಟಕದ ಕರ್ತೃ. ೧೮೦೦ ರಲ್ಲಿದ್ದ ಪುಲ್ಲಕವಿ ಗೌರಿಬಿದನೂರಿನ ಹೊಸೂರಿನವರು. ೧೮೩೦ ರಲ್ಲಿದ್ದ ಶಿಡ್ಲಘಟ್ಟದ ಕುಂದಲಗುರ್ಕಿಯ ಚಂದ್ರಕವಿ ’ಶ್ರೀಕೃಷ್ಣ ಭೂವಲಯಮು’ ಕೃತಿಯ ಕರ್ತೃ. ಕೈವಾರ ತಾತಯ್ಯನೆಂದೇ ಹೆಸರುವಾಸಿಯಾದ ಚಿಂತಾಮಣಿಯ ಕೈವಾರದ ನಾರಣಪ್ಪ ತೆಲುಗನ್ನಡದ ಕವಿ. ಚಿಂತಾಮಣಿಯ ಹೊಸಹುಡ್ಯದ ವೇದಾಂತಂ ವೆಂಕಟರೆಡ್ಡಿ ವೇದಾಂತ ಪ್ರಕಾಶ, ವಿವೇಕ ರತ್ನಮಾಲ ಮುಂತಾದ ಕೃತಿಗಳ ಕರ್ತೃ. ಆಂಧ್ರದ ಜನಪ್ರಿಯ ಆಯುರ್ವೇದದ ಆಕರ ಗ್ರಂಥ ಬಸವರಾಜೀಯಂ ಕೃತಿಯನ್ನು ರಚಿಸಿರುವವರು ಗೌರಿಬಿದನೂರು ಹೊಸೂರಿನ ಕೊಟ್ಟೂರು ಬಸವರಾಜು. ಚಿಂತಾಮಣಿ ತಾಲ್ಲೂಕಿನ ಕೊಮಾರ್‍ಲು ರಾಮಚಂದ್ರಯ್ಯ, ಚಿಲಕಲನೇರ್ಪು ರಾಜಯೋಗಿ ವಸಂತಯ್ಯ ಮುಂತಾದವರು ತೆಲುಗನ್ನಡ ಸಾಹಿತಿಗಳು.
 ಶಿಡ್ಲಘಟ್ಟದ ಅಬ್ದುಲ್ ಹಸನ್ ಅದೀಬ್ ಕವಿ, ಸಾಹಿತಿ, ವಿಮರ್ಶಕ ಮತ್ತು ಇತಿಹಾಸಕಾರ. ಜವಹರುಲ್ ಬಾಲಘತ್(ಛಂದೋಗ್ರಂಥ), ಜವಾಹಿರ್ ಎ ಉರ್ದು(ವ್ಯಾಕರಣ ಗ್ರಂಥ), ಫಾಜಿ ಎ ಅಜಮ್(ಹೈದರಲಿ ಕುರಿತ ಚಾರಿತ್ರಿಕ ಗ್ರಂಥ), ರಾಜ್‌ನಾಮ(ಮೈಸೂರು ಒಡೆಯರ ಚರಿತ್ರೆ) ಬರೆದಿದ್ದಾರೆ.
 ಚಿಂತಾಮಣಿ ತಾಲ್ಲೂಕಿನ ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹಶಾಸ್ತ್ರಿಗಳು, ಗೌರಿಬಿದನೂರು ಶ್ರಾವಂಡನಹಳ್ಳಿಯ ಓ.ಎನ್.ಲಿಂಗಯ್ಯ, ಎಂ.ಜಿ.ನಂಜುಂಡಾರಾಧ್ಯ, ಶಿಕ್ಷಣತಜ್ಞ  ಡಾ.ಎಚ್.ನರಸಿಂಹಯ್ಯ, ಡಾ.ಎಲ್.ಬಸವರಾಜು, ಪ್ರೊ.ಎನ್.ಬಸವಾರಾಧ್ಯ, ಬಾ.ರಾ.ಗೋಪಾಲ್, ವೈ.ಎಸ್.ಗುಂಡಪ್ಪ, ಹಂ.ಪಾ.ನಾಗರಾಜಯ್ಯ, ಡಾ.ಪ್ರಧಾನ ಗುರುದತ್ತ, ಕೈಪು ಲಕ್ಷ್ಮೀನರಸಿಂಹಶಾಸ್ತ್ರಿ, ಬಿ.ಜಿ.ಸತ್ಯಮೂರ್ತಿ, ಡಿ.ಪಾಳ್ಯದ ವಿ.ಗೋಪಾಲಕೃಷ್ಣ, ಜಿ.ಜ್ಞಾನಾನಂದ, ಚಿ.ಶ್ರೀನಿವಾಸರಾಜು, ಶಿಡ್ಲಘಟ್ಟದ ಚಾಗೆ ಕೃಷ್ಣಮೂರ್ತಿ, ಗೌರಿಬಿದನೂರು ಅನಂತಪದ್ಮನಾಭರಾವ್, ಕೆ.ನಾರಾಯಣಸ್ವಾಮಿ, ಪ್ರೊ.ಬಿ.ಗಂಗಾಧರಮೂರ್ತಿ, ಶಾಸನತಜ್ಞ ಚಿಂತಾಮಣಿಯ ಸಂತೇಕಲ್ಲಹಳ್ಳಿಯ ಡಾ.ಆರ್.ಶೇಷಶಾಸ್ತ್ರಿ, ಚಿಂತಾಮಣಿಯ ವೆಲ್ಲಾಸತ್ಯಂ, ಬಿ.ಆರ್.ಲಕ್ಷ್ಮಣರಾವ್, ಪ್ರೊ.ಎನ್.ಚಂದ್ರಪ್ಪ, ಗಂಜಿಗುಂಟೆ ನರಸಿಂಹಮೂರ್ತಿ, ಜಾನಪದ ತಜ್ಞ ಶಿಡ್ಲಘಟ್ಟದ ಜಿ.ಶ್ರೀನಿವಾಸಯ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕವಿ ಸಾಹಿತಿಗಳನ್ನು ಜಿಲ್ಲೆ ಒಳಗೊಂಡಿದೆ.

3 comments:

ಮನಸು said...

ಒಳ್ಳೆಯ ಮಾಹಿತಿ ಸರ್.. ಧನ್ಯವಾದಗಳು

Badarinath Palavalli said...

ನಮ್ಮ ಜಿಲ್ಲೆಯ ಸಾಹಿತಿಗಳ ಮಾಹಿತಿಗಾಗಿ ಧನ್ಯವಾದಗಳು.
http://www.badari-poems.blogspot.in

Unknown said...

ಧನ್ಯವಾದ ಸಾರ್