Tuesday, August 31, 2010

ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರ ಕಮಾಲ್

"ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ನಾಳೆ ಚಿಕ್ಕಬಳ್ಳಾಪುರಕ್ಕೆ ಸ್ವಾಮೀಜಿಗಳ ಇಂಜಿನೀರಿಂಗ್ ಕಾಲೇಜಿಗೆ ಬರ್ತಾರೆ" ಎಂದು ಮನೆಯಲ್ಲಿ ಹೇಳಿದೆ. ನನ್ನ ಹೆಂಡತಿ ಸೌಮ್ಯ ನಾನೂ ಬರ್ತೀನಿ ಎಂದಳು. "ಬೇಡ, ನಾವೆಲ್ಲಾ ಪ್ರೆಸ್ಸಿನವರು ಒಟ್ಟಿಗೇ ಹೋಗುತ್ತೇವೆ. ಅಷ್ಟು ಜನಗಳ ಮಧ್ಯೆ ಕಷ್ಟ ಆಗುತ್ತೆ" ಎಂದು ಹೇಳಿದೆ. ಆದರೆ ಅವಳದ್ದು ಒಂದೇ ಹಠ. "ನಾನು ಅವರ ಆತ್ಮಚರಿತ್ರೆ ವಿಂಗ್ಸ್ ಆಫ್ ಫೈರ್ ಪುಸ್ತಕದ ಮೇಲೆ ಹಸ್ತಾಕ್ಷರ ಪಡೆಯಬೇಕು" ಎಂದು.

ಅದೃಷ್ಟವೋ ಅಥವಾ ಸೌಮ್ಯಳ ಛಲವೋ ಅಷ್ಟು ಸಾವಿರ ಜನರ ಮಧ್ಯೆ ಡಾ.ಕಲಾಂ ಅವರಿಂದ ಹಸ್ತಾಕ್ಷರ ಸಿಕ್ಕಿದ್ದು ಇವಳೊಬ್ಬಳಿಗೇ!




ಡಾ.ಕಲಾಂ ಅವರ ನುಡಿ ಹಾಗೂ ಚಿತ್ರಗಳನ್ನು ಆಸ್ವಾದಿಸಿ...




"ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ. ಹೀಗಾಗಿ ಕಷ್ಟ, ಸಂಕಷ್ಟ, ಕೋಟಲೆಗಳ ಭಯವೇಕೆ? ಸಂಕಷ್ಟ ಬಂದರೆ ಅದರ ಹಿನ್ನೆಲೆಯನ್ನು ಅರಿತುಕೊಳ್ಳಬೇಕು"




"ವಿದ್ಯಾಭ್ಯಾಸದ ವಿಷಯದ ಆಯ್ಕೆಯ ವೇಳೆ ಗಮನಹರಿಸಬೇಕಾದ ಮುಖ್ಯವಾದ ಅಂಶವೆಂದರೆ, ಈ ಆಯ್ಕೆಯಿಂದಾಗಿ ಅವರೊಳಗಿನ ಭಾವನೆ ಮತ್ತು ಆಶೋತ್ತರಗಳು ಪುಷ್ಟಿಗೊಳ್ಳುತ್ತವೆಯೋ ಎಂಬುದು"




"ಸತ್ಯದ ಅನ್ವೇಷಣೆಯನ್ನು ಮಾಡು. ಸತ್ಯವೇ ನಿನಗೆ ಸ್ವಾತಂತ್ರ್ಯ ಕೊಡಿಸುತ್ತದೆ"




"ಯಾವ ವಿಷಯಗಳು ನಿಮ್ಮನ್ನು ಘಾಸಿಗೊಳಿಸುವವೋ ಅವು ನಿಮಗೆ ಶಿಕ್ಷಣವನ್ನೂ ಕೊಡುತ್ತವೆ"




"ಜ್ಞಾನ ಎಂಬುದು ಎಂದಿಗೂ ನಿಂತ ನೀರಾಗಬಾರದು. ಸದಾ ಹೆಚ್ಚುತ್ತಲೇ ಇರಬೇಕು. ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಪಡೆಯಲು ಬೇಕಾದ ಪ್ರಮುಖ ಅಸ್ತ್ರ"




"ವೃತ್ತಿ ಜೀವನದ ತುತ್ತ ತುದಿಗೆ ಏರುವವರು ಯಾವತ್ತೂ ತಮ್ಮ ತಾದಾತ್ಮ್ಯವನ್ನು ಕೆಲಸದ ಮೇಲೆ ಕೇಂದ್ರಬಿಂದುವನ್ನಾಗಿಸಿ ದುಡಿಯುತ್ತಾರೆ. ಹೀಗೆ ಸಂಪೂರ್ಣ ತೊಡಗಿಸಿಕೊಂಡ ಬಳಿಕ ಯಾವುದೇ ಇನ್ನಿತರ ಇಚ್ಛೆಗಳಿಗೆ ಆಸ್ಪದ ಇಲ್ಲ"




"ಸಂತೋಷ, ತೃಪ್ತಿ, ಜಯ ಇವೆಲ್ಲಾ ಜೀವನದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳ ಮೇಲೆ ಹೊಂದಿಕೊಂಡಿದೆ"




"ನೀವು ಒಂದೇ ವಸ್ತುವನ್ನು ಹಿಡಿದು ಕುಳಿತರೆ ಬುದ್ಧಿ ಜಿಡ್ಡುಗಟ್ಟುತ್ತದೆ. ಆದುದರಿಂದ ಹೊಸ ಆಯಾಮಗಳನ್ನು ಕಂಡುಕೊಳ್ಳಬೇಕು"




"ದುರದೃಷ್ಟವಶಾತ್ ಶಾಲೆಗಳಲ್ಲಿ ನಾವು ಓದಿರಿ, ಬರೆಯಿರಿ, ಮಾತನಾಡಿರಿ ಎಂಬ ಕಾರ್ಯಗಳಲ್ಲಿ ತೊಡಗಿಕೊಂಡೆವೇ ಹೊರತು ಇನ್ನೊಬ್ಬರ ಅಭಿಪ್ರಾಯ ಕೇಳುವ ಪಾಠ ಕಲಿತಿಲ್ಲ"




"ದೊಡ್ಡ ಅವಕಾಶಗಳು ಲಭಿಸಿದಾಗ ನಾವು ದೊಡ್ಡ ಸವಾಲುಗಳನ್ನು ಎದುರಿಸಬೇಕಾದದ್ದು ಸಹಜ. ನಾವು ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಮತ್ತು ಸಮಸ್ಯೆಗಳು ನಮ್ಮ ಮೇಲೆ ಸವಾರಿ ಮಾಡಲೇಬಾರದು"





"ಕೇವಲ ತಾತ್ಕಾಲಿಕ ಅಥವಾ ಸುಲಭದಲ್ಲಿ ಸಿಗುವ ಯಶಸ್ಸಿಗೆ ಮರುಳಾಗದಿರಿ. ಶಾಶ್ವತ ಯಶಸ್ಸು ಪಡೆಯಲು ಸದಾ ನಿಷ್ಠೆಯಿಂದ ಪ್ರಯತ್ನ ಮಾಡಬೇಕು"




"ಆಚಾರ-ವಿಚಾರ, ಸಂಪ್ರದಾಯ, ಶಿಷ್ಟಾಚಾರ, ಶಿಸ್ತು ಆಚರಣೆ ಮುಂತಾದ ವಿಚಾರಗಳಲ್ಲಿ ಯುವಜನರು ಎಚ್ಚೆತ್ತು ನಡೆಯಬೇಕು. ಆತ್ಮತೃಪ್ತಿಯ ಬೆಲೆ ಅರಿತ ಬಳಿಕ ಯಾವುದೇ ಆಮಿಷಗಳೂ ಯುವಜನರನ್ನು ಆಕರ್ಷಿಸಲಾರವು"





"ಐ ವಿಲ್ ಡು ಇಟ್,
ವಿ ವಿಲ್ ಡು ಇಟ್,
ಇಂಡಿಯಾ ವಿಲ್ ಡು ಇಟ್..."





"ಯುವಜನರೇ ನೀವೊಬ್ಬರೇ ಸಾಧನೆ ಮಾಡಿದರೆ ಸಾಲದು, ದೇಶವನ್ನೂ ಸಹ ಮುಂಚೂಣಿಗೆ ತರಬೇಕು. ವಿಷನ್-೨೦೨೦ ಯೋಜನೆಯಂತೆ ದೇಶವನ್ನು ಆರ್ಥಿಕವಾಗಿ ಬಲಗೊಳಿಸುವುದರ ಜೊತೆಗೆ ಇತರ ಕ್ಷೇತ್ರಗಳಲ್ಲೂ ಸಶಕ್ತಗೊಳಿಸಬೇಕು. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲೂ ದೇಶವು ತನ್ನದೇ ಆದ ರೀತಿಯಲ್ಲಿ ಸಾಧನೆ ಮಾಡಬೇಕು"




"ದೊಡ್ಡ ದೊಡ್ಡ ಕನಸುಗಳನ್ನು ಕಾಣಿರಿ. ಕನಸುಗಳನ್ನು ನನಸು ಮಾಡಲು ಸಿದ್ಧತೆ ಮಾಡಿ. ಅದಕ್ಕೆ ತಕ್ಕಂತೆ ಪರಿಶ್ರಮ ಪಡಲು ಹಿಂಜರಿಯದಿರಿ"




"ಜೀವನದಲ್ಲಿ ಗುರಿ ಹೊಂದಿರಬೇಕು. ಅದಕ್ಕೆ ತಕ್ಕಂತೆ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಗುರಿ, ಜ್ಞಾನ ಮತ್ತು ಶಿಕ್ಷಣ ಮೇಳೈಸುವುದರ ಜೊತೆಗೆ ಪರಿಶ್ರಮ ಪಟ್ಟಲ್ಲಿ ಸಹಜವಾಗಿ ಯಶಸ್ಸು ದೊರೆಯುತ್ತದೆ"





"ನಮ್ಮದು ಶಾಂತಿಪ್ರಿಯ ದೇಶ. ಆದರೆ ನೆರೆ ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಈ ಕಾರಣಕ್ಕಾದರೂ ಪರಮಾಣು ಶಸ್ತ್ರಾಸ್ತ್ರಗಳಿಗಾಗಿ ಹೆಚ್ಚಿನ ಖರ್ಚು ವೆಚ್ಚ ಮಾಡಬೇಕಿದೆ. ನೆರೆ ದೇಶಗಳು ದಾಳಿ ಮಾಡಿದಾಗ ಮಾತ್ರ ನಮ್ಮ ಬಳಿಯಿರುವ ಶಸ್ತ್ರಾಸ್ತ್ರಗಳು ಪ್ರಯೋಗಿಸಲಾಗುವುದು. ನಮ್ಮ ದೇಶಕ್ಕೆ ೬೦೦೦ ವರ್ಷಗಳ ಇತಿಹಾಸವಿದೆ. ಆದರೆ ಭಾರತೀಯರು ಕೇವಲ ೫೦೦ ವರ್ಷಗಳ ಕಾಲ ಮಾತ್ರ ದೇಶವನ್ನು ಆಳಿದ್ದಾರೆ. ನೆರೆ ದೇಶಗಳಿಂದ ಆತಂಕ ಇರುವಾಗ ನಾವು ಭದ್ರತೆ ಕಾಯ್ದುಕೊಳ್ಳುವುದು ಅತ್ಯಗತ್ಯ"





"ಭ್ರಷ್ಟಾಚಾರ ಮುಕ್ತ ದೇಶ ನಿರ್ಮಿಸುವತ್ತ ಎಲ್ಲರೂ ಪಣತೊಡಬೇಕು. ನಮ್ಮ ಮನೆಯಲ್ಲಿ ಕುಟುಂಬ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ, ಅದನ್ನು ತಡೆಯುತ್ತೇನೆ ಎಂದು ಯುವಜನರು ಪ್ರಮಾಣ ಮಾಡಬೇಕು. ಆಗ ಮಾತ್ರ ಭ್ರಷ್ಟಾಚಾರ ಹಂತಹಂತವಾಗಿ ನಿವಾರಿಸಲು ಸಾಧ್ಯ"





"ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಗತಿಯಾದಷ್ಟೂ ನೂತನ ಆವಿಷ್ಕಾರಗಳನ್ನು ಮಾಡಲು ಸಾಧ್ಯ. ಭಿನ್ನ ಭಿನ್ನ ಮಾದರಿಯ ತಂತ್ರಜ್ಞಾನಗಳು ಮೇಳೈಸಿದರೆ ವಿಭಿನ್ನವಾದ ವಿಶ್ವವನ್ನೇ ನಿರ್ಮಿಸಬಹುದು"




"ಹೊಸ ಭಾರತವನ್ನು ನಿರ್ಮಿಸುವ, ಕನಸುಗಳನ್ನು ನನಸು ಮಾಡುವ ಗುರಿ ಹೊಂದಿರುವ ಯುವಜನರು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನಿಂದ ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಬೇಕು"