Wednesday, December 16, 2009

ಕ್ರಿಸ್‌ಮಸ್ ಮತ್ತು ಹೊಸವರ್ಷಕ್ಕೆ ತರತರಹದ ಚರ್ಚ್‌ಗಳು

ಹಸಿರ ಶಾಲು ಹೊದ್ದ ಚರ್ಚ್

ದೇವಲೋಕಕ್ಕೆ ಮೆಟ್ಟಿಲ ಹಾದಿ

ನೀಲಗಿರಿ ಮರದಂತೆ ಎತ್ತರ ಎತ್ತರ


ಸಾಂತ್ವನ

ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು


ದೇವರ ಮನೆಯೊ ಅರಮನೆಯೊ!


ಹಾದಿ ದೂರವಾದಷ್ಟೂ ಗಮ್ಯ ಸುಂದರ


ವಿರಾಟ್‌ಸ್ವರೂಪಿ ಚರ್ಚ್


ಬೆಟ್ಟದ ಮೇಲೆ ಗುಲಾಬಿಬಣ್ಣದ ಚರ್ಚ್


ನೀಲಿ ನೀಲಿ

ಕೊಚಿನ್‌ನಲ್ಲಿರುವ ಅತಿ ಪುರಾತನ ಚರ್ಚ್

ಮುಂದೆ ನೀರು ಹಿಂದೆ ಹಸಿರು ಮೇಲೆ ನೀಲಾಗಸ!


ನೀರಿನಲ್ಲಿ ಅಲೆಯ ಉಂಗುರ ದಡದ ಮೇಲೆ ದೇವ ಮಂದಿರ




ತೆಂಗಿನ ನಾಡಲ್ಲಿ ತೆಂಗಿನ ನೆರಳಲ್ಲಿ...


ಉದ್ದುದ್ದ ಚರ್ಚ್


ಕೊಚಿನ್‌ನಲ್ಲಿರುವ ದೊಡ್ಡ ಚರ್ಚ್


ದೊಡ್ಡ ಮರದ ನೆರಳಲ್ಲಿ

ಹಸಿರುಡುಗೆಯುಟ್ಟ ಶ್ವೇತಮಂದಿರ

ಕ್ರಿಸ್‌ಮಸ್ ಟ್ರೀ ಪಕ್ಕ

ನಿಸರ್ಗದ ಮಡಿಲಲ್ಲಿ ವಿರಾಜಮಾನವಾಗಿರುವ ವೀರರಾಜಪೇಟೆಯ ಚರ್ಚ್

Monday, December 7, 2009

ಹೊಟ್ಟೆ-ಬಟ್ಟೆ

ಬುರ್ ಬುರ್ ಗಂಗಮ್ಮ


ಚಟಾರ್ ಎಂದು ಚಾಟಿಯಲ್ಲಿ ಹೊಡೆದುಕೊಳ್ಳುವ ಬಾಲಕ

ವೆಂಕಟೇಶ್ವರನ ಲೀಲೆ


ಇಲಿ ಪಾಷಾಣ


ದಾಸಯ್ಯ


ಶಿವನ ಹೆಸರಲ್ಲಿ...


ಬುರ್ ಬುರ್ ತಾಯವ್ವ


ಪುಂಗಿನಾದ

Thursday, November 26, 2009

ಕಾಮತರ ಮನೆಯಲ್ಲಿ... ಒಂದು ಸಂಜೆ

ಕಾಮತ್ ವೆಬ್‌ಸೈಟಿನ(http://www.kamat.com/) ರೂವಾರಿ ವಿಕಾಸ್ ಕಾಮತ್ ತಮ್ಮ ಪತ್ನಿ ಕಿಮ್ ರೊಂದಿಗೆ ಅಮೇರಿಕೆಯಿಂದ ಬೆಂಗಳೂರಿಗೆ ಬಂದಿದ್ದರು. ಅವರ ತಂದೆ ದಿವಂಗತ ಡಾ.ಕೃಷ್ಣಾನಂದ ಕಾಮತರ ಕೆಲವು ಅಪರೂಪದ ಸಂಗತಿಗಳನ್ನು ತೋರಿಸಿದರು.
ವಿಜ್ಞಾನಿ, ಸಾಹಿತಿ, ಫೋಟೋಗ್ರಾಫರ್, ಪರಿಸರಪ್ರೇಮಿ, ಚಿತ್ರಕಾರರು... ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಡಾ.ಕೃಷ್ಣಾನಂದ ಕಾಮತರು ನನಗೆ ಸದಾ ಸ್ಫೂರ್ತಿ.


ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಡಾ.ಕೃಷ್ಣಾನಂದ ಕಾಮತರು ಮತ್ತು ಇತಿಹಾಸದ ಸಂಶೋಧಕರು ಹಾಗು ನಿವೃತ್ತ ಆಕಾಶವಾಣಿ ನಿರ್ದೇಶಕರಾದ ಡಾ.ಜ್ಯೋತ್ಸ್ನಾಕಾಮತ್.


ನಲವತ್ತೈದು ವರ್ಷಗಳ ಹಿಂದೆಯೇ ಅವರು ತಮ್ಮ ಮನೆಯಲ್ಲಿ "Guest Book" ಇಟ್ಟಿದ್ದರು. ಅವರ ಮನೆಗೆ ಬರುವ ಅತಿಥಿಗಳ ಕೈಲಿ ಹೆಸರು, ದಿನಾಂಕ ಮತ್ತು ವಿಳಾಸ ಬರೆಸಿಡುತ್ತಿದ್ದರು.
ವಿಕಾಸರು ಅದನ್ನು ತೋರಿಸಿದಾಗ ಅಮೂಲ್ಯ ಹಸ್ತಾಕ್ಷರಗಳ ಅದ್ಭುತ ಸಂಗ್ರಹವನ್ನೇ ನೋಡುವಂತಾಯಿತು. ಡಾ.ಎಸ್.ಎಲ್.ಭೈರಪ್ಪ, ಚದುರಂಗ, ಜಿ.ಬಿ.ಜೋಶಿ, ಕೀರ್ತಿನಾಥ ಕುರ್ತಕೋಟಿ, ಸು.ರಂ.ಎಕ್ಕುಂಡಿ, ಜಿ.ಪಿ.ರಾಜರತ್ನಂ... ಅನೇಕ ಗಣ್ಯರ ಹಸ್ತಾಕ್ಷರಗಳಿವೆ. ಕೆಲಗಣ್ಯರು ಮತ್ತೊಮ್ಮೆ ಮಗದೊಮ್ಮೆ ಇವರ ಮನೆಗೆ ಬಂದಾಗ ಬದಲಾದ ಅವರ ವಿಳಾಸಗಳಿಂದ ಅವರ ಸಾಮಾಜಿಕ ಸ್ಥಾನಮಾನದ ಏರುಗತಿಯೂ ದಾಖಲಾಗಿದೆ.

ಕಾಮತರ ಗೆಸ್ಟ್ ಬುಕ್ ತೋರಿಸುತ್ತಿರುವ ವಿಕಾಸ್ ಕಾಮತ್ ಮತ್ತು ಅವರ ಪತ್ನಿ ಕಿಮ್.


ನೇಮಿಚಂದ್ರ ಮೇಡಂ ಅವರು ಗೆಸ್ಟ್ ಬುಕ್‌ನಲ್ಲಿ ಬರೆಯುತ್ತಿರುವುದು.


ಗೆಸ್ಟ್ ಬುಕ್‌ನ ಮೊದಲ ಪುಟ.


ಚದುರಂಗ, ಜಿ.ಬಿ.ಜೋಶಿ, ಕೀರ್ತಿನಾಥ ಕುರ್ತಕೋಟಿ... ಹಸ್ತಾಕ್ಷರಗಳ ಅಮೂಲ್ಯ ಸಂಗ್ರಹ.


ಡಾ.ಎಸ್.ಎಲ್.ಭೈರಪ್ಪನವರ ಹಸ್ತಾಕ್ಷರ.
ಡಾ.ಕಾಮತರು ಫೋಟೋ ಆಲ್ಬಂ ತಾವೇ ತಯಾರಿಸುತ್ತಿದ್ದರು. ಆಲ್ಬಂ ತೆರೆದರೆ ಚಿತ್ರಗಳು ಚಲನಚಿತ್ರದಂತೆ ಕಥೆ ಹೇಳುವ ರೀತಿ ಜೋಡಿಸಿರುತ್ತಿದ್ದರು. ಪ್ರತಿ ಫೋಟೋ ಕೆಳಗೂ ಆಕರ್ಷಕವಾದ ಶೀರ್ಷಿಕೆ ಕೊಡುವುದು ಅವರ ವೈಶಿಷ್ಟ್ಯ.
ಒಮ್ಮೆ ನಾಗಪುರದಲ್ಲಿ ತಮ್ಮ ಸಂಬಂಧಿಕರೊಬ್ಬರ ಮನೆಗೆ ಡಾ.ಕಾಮತರು ಹೋಗಿದ್ದರಂತೆ. ಅವರ ಮನೆಯಲ್ಲಿ ನಡೆದ ಔತಣಕೂಟಕ್ಕೆ ರಘು ಮಾಸೂರ್‌ಕರ್‍ ಎನ್ನುವವರು ಬಂದಿದ್ದರಂತೆ. ಮೂವತ್ತೆರಡರ ಹರೆಯದ ಲವಲವಿಕೆಯ, ಹಾಸ್ಯಮಿಶ್ರಿತ ಮಾತುಗಾರಿಕೆಯ ಆಕರ್ಷಕ ವ್ಯಕ್ತಿತ್ವ. ನೋಡಲೂ ತುಂಬಾ ಸುಂದರನಾಗಿದ್ದ ರಘು ಎಲ್ಲರಿಗೂ ಇಷ್ಟವಾಗಿಬಿಟ್ಟರಂತೆ.
ಕ್ಯಾಂಡಿಡ್ ಫೋಟೋಗ್ರಫಿಯಲ್ಲಿ ಸಿದ್ಧಹಸ್ತರಾಗಿದ್ದ ಡಾ.ಕಾಮತರು ರಘು ಅವರ ಅನೇಕ ಚಿತ್ರಗಳನ್ನು ತೆಗೆದರಂತೆ. ದುರಂತವೆಂದರೆ ಎಲ್ಲರಿಗೂ ಅಷ್ಟೊಂದು ಪ್ರೀತಿಪಾತ್ರರಾಗಿದ್ದ ರಘು ದೇವರಿಗೂ ಪ್ರೀತಿಪಾತ್ರರೇ ಆದರೇನೋ ಅನ್ನುವಂತೆ ಬ್ರೈನ್ ಟ್ಯೂಮರ್ ಬಂದು ಕೆಲವೇ ದಿನಗಳಲ್ಲಿ ತೀರಿಕೊಂಡರಂತೆ. ಪಾಪ ಆಗ ಅವರಿಗೆ ಮದುವೆ ನಿಕ್ಕಿಯಾಗಿತ್ತಂತೆ.
ಬೆಂಗಳೂರಿನಲ್ಲಿದ್ದ ಕಾಮತರಿಗೆ ವಿಷಯ ತಿಳಿದು ದುಃಖವಾಗಿದೆ. ರಘು ಮಾಸೂರ್‌ಕರ್ ಅವರ ಚಿತ್ರಗಳನ್ನೆಲ್ಲಾ ತಮ್ಮ ಡಾರ್ಕ್ ರೂಮಿನಲ್ಲಿ ತೊಳೆದು ಆಲ್ಬಂ ತಯಾರಿಸಿದ್ದಾರೆ. ಅದರ ತಯಾರಿಕೆಯಲ್ಲಿ ವಿಕಾಸರೂ ಸಹಾಯ ಮಾಡಿದ್ದರಂತೆ. ಒಂದೊಂದು ಚಿತ್ರಕ್ಕೂ ಆಕರ್ಷಕ ಶೀರ್ಷಿಕೆಗಳು.. ಇಂಗ್ಲೀಷ್ ಮತ್ತು ಕನ್ನಡ ಎರಡರಲ್ಲೂ ಬರೆದಿದ್ದರಂತೆ. ಆಲ್ಬಂ ಪ್ಯಾಕ್ ಮಾಡಿ ಡಾ.ಕಾಮತರು ರಘು ಅವರ ತಂದೆ ತಾಯಿಗೆ ಕಳಿಸಿದ್ದಾರೆ. ಕಾಕತಾಳೀಯವೆಂದರೆ ಅದು ಅವರಿಗೆ ತಲುಪಿದ್ದು ಅವರ ಮೊದಲ ವರ್ಷದ ಪುಣ್ಯತಿಥಿಯಂದು! ಅವರೆಲ್ಲ ಅದನ್ನು ನೋಡಿ ತಮ್ಮ ಮಗನೇ ಹಿಂತಿರುಗಿ ಬಂದನೆಂದು ಆನಂದಪಟ್ಟರಂತೆ... ಕಣ್ಣೀರಿಟ್ಟರಂತೆ...

ಮುಂದೆ ೨೦೦೨ರ ಫೇಬ್ರವರಿಯಲ್ಲಿ ಡಾ.ಕೃಷ್ಣಾನಂದ ಕಾಮತರು ಹೃದಯಾಘಾತದಿಂದ ನಿಧನರಾದಾಗ ಆ ಸಮಯದಲ್ಲಿ ಡಾ.ಜ್ಯೋತ್ಸ್ನಾಕಾಮತರ ನೆರವಿಗೆ ಬಂದವರು ಇದೇ ರಘು ಮಾಸೂರ್‌ಕರ್‍‌ರ ಸಹೋದರಿ ಲಲಿತ ಕಾಯ್ಕಿಣಿ. "ಆಗ ಏನೂ ತೋಚದಂತಿದ್ದಾಗ ಇವರಿಂದಲೇ ಡಾ.ಕಾಮತರ ಕಣ್ಣುಗಳನ್ನು ದಾನಮಾಡುವಂತಾಯ್ತು" ಎಂದು ನೆನೆಸಿಕೊಳ್ಳುವರು ಜ್ಯೋತ್ಸ್ನಾ ಮೇಡಂ.

ಡಾ.ಕಾಮತರು ರಚಿಸಿದ್ದ ರೇಖಾಚಿತ್ರಗಳು.

ಡಾ.ಕಾಮತರು ಮಧ್ಯಪ್ರದೇಶದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಾಗ ಅಲ್ಲಿ ಫೋಟೋ ತೆಗೆಯಲಾಗದೆಡೆ ಅವರು ರೇಖಾಚಿತ್ರಗಳನ್ನು ಬಿಡಿಸಿದ್ದರು. ಅದರ ಸಂಗ್ರಹವನ್ನೂ ವಿಕಾಸರು ತೋರಿಸಿದರು.

ಡಾ.ಜ್ಯೋತ್ಸ್ನಾಕಾಮತ್ ಮಗ ವಿಕಾಸರೊಂದಿಗೆ.

ಡಾ.ಕಾಮತರ ಸಂಗ್ರಹ ಅಕ್ಷಯ ಪಾತ್ರೆಯಿದ್ದಂತೆ. ಅವರು ಕ್ಲಿಕ್ಕಿಸಿರುವ ಸುಮಾರು ಎರಡು ಲಕ್ಷ ಚಿತ್ರಗಳಲ್ಲಿ ಮೂರನೇ ಒಂದು ಭಾಗವಷ್ಟೇ ಅವರ ವೆಬ್‌ಸೈಟ್‌ನಲ್ಲಿರುವುದು. ಮುಂದಿನ ವರ್ಷ ವಿಕಾಸರು ಬಂದಾಗ ಇನ್ನಷ್ಟು ಕಾಮತರ ಬೆರಗುಗಳನ್ನು ತೋರಿಸಲಿ.
ನಮ್ಮ ಮನೆಯಲ್ಲಿ "Guest Book" ಇಟ್ಟಿರುವೆ. ನೀವೂ ಇಡುತ್ತೀರಲ್ವಾ?

Friday, November 20, 2009

ಪದ್ಮಾವತಿ ಪರಿಣಯ

"ಚೂಡಾಲನಿ ಉಂದಿ" ತೆಲುಗು ಫಿಲಂ ನೋಡುತ್ತಿದ್ದೆವು. ಅದರಲ್ಲಿ ಅಮಾಯಕಳಾದ ಸೌಂದರ್ಯಳನ್ನು ಯಾರೋ ಒಬ್ಬ ಮದುವೆಯಾಗುತ್ತೇನೆಂದು ಹೇಳಿ ಅವಳ ಒಡವೆಗಳನ್ನು ಲಪಟಾಯಿಸಿ ಓಡಿಹೋಗಿರುತ್ತಾನೆ. ಅವಳು ಚಿರಂಜೀವಿಗೆ ಅವನು ಬರೆದಿದ್ದ ಪ್ರೇಮಪತ್ರಗಳನ್ನು ತೋರಿಸುತ್ತಾಳೆ. ಚಿತ್ರದಲ್ಲಿ ಅವಳ ಹೆಸರು ಪದ್ಮಾವತಿ. ಪತ್ರದಲ್ಲೊಂದು ಕವನ -
"ಪದ್ಮಾವತಿ ಪದ್ಮಾವತಿ
ನೀ ಎರ್ರಗಾನಿ ಮೂತಿ
ಸೂಡಗಾನೆ
ಪೋಯಿಂದಿ ನಾ ಮತಿ!"
("ಪದ್ಮಾವತಿ ಪದ್ಮಾವತಿ
ನಿನ್ನ ಕೆಂಪನೆಯ ಮೂತಿ
ನೋಡಿದೊಡನೆ
ಹೋಯ್ತು ನನ್ನ ಮತಿ!")
ತಕ್ಷಣ ಚಿರಂಜೀವಿ, "ದಾಂತೋ ನೀ ಪನಿ ಅಯ್ಯಿಂದಿ ಅಧೋಗತಿ!" (ಅದರಿಂದಾಗಿ ನಿನ್ನ ಕಥೆ ಅಧೋಗತಿ!) ಅನ್ನುತ್ತಾನೆ.
* * * *
"ನನ್ನದೂ ಒಂದು ಪದ್ಮಾವತಿ ಕಥೆ ಇದೆ" ಅಂದ ವೆಂಕಟರಮಣ. ಡಿವಿಡಿ ಸ್ಟಾಪ್ ಮಾಡಿ, "ನಿನ್ನ ಪದ್ಮಾವತಿ ಕಥೆ ಹೇಳು ಮಾರಾಯ" ಎಂದು ಗಂಟು ಬಿದ್ದೆ.
ವೆಂಕಟರಮಣ ತನ್ನ ಮಧುರ ನೆನಪಿಗೆ ಜಾರಿದ.
"ಪ್ರೇಮಿಂಚಿ ಪೆಳ್ಳಾಡು"(ಪ್ರೇಮಿಸಿ ಮದುವೆಯಾಗು) ಚಲನಚಿತ್ರ. ಸಿಕ್ಕಾಪಟ್ಟೆ ರಶ್ಶಿತ್ತು. ಗಂಡಸರ ಕ್ಯೂನಲ್ಲಿ ನೊಣ ನುಗ್ಗುವುದಕ್ಕೂ ಜಾಗವಿರಲಿಲ್ಲ. ಅಕಸ್ಮಾತ್ ನುಗ್ಗಿದರೂ ಅಪ್ಪಚ್ಚಿಯಾಗುವುದು ಗ್ಯಾರಂಟಿ! ಹೆಂಗಸರ ಕ್ಯೂ ಬಳಿ ಹೋದೆ. "ಟಿಕೇಟ್ ತಗೊಳ್ಳಲು ಯಾರನ್ನು ಕೇಳೋದು?" ಯೋಚಿಸುತ್ತಿರುವಾಗ ಕಿಲಕಿಲನೆ ನಗುವೊಂದು ಅಲೆಅಲೆಯಾಗಿ ತೇಲಿಬಂತು. ಉದ್ದನೆ ಜಡೆಯ ಹಾಫ್‌ಸ್ಯಾರಿ(ಲಂಗದಾವಣಿ) ಉಟ್ಟಿದ್ದ ಹುಡುಗಿ ತನ್ನ ಗೆಳತಿಯೊಂದಿಗೆ ಮಾತನಾಡುತ್ತಾ ನಗುತ್ತಿದ್ದಾಳೆ. ಅವರ ಹತ್ತಿರ ಹೋಗಿ ನನಗೊಂದು ಟಿಕೇಟ್ ಎಂದು ತೆಲುಗಲ್ಲಿ ಕೇಳಿದೆ. ಹುಡುಗಿ ನನ್ನೆಡೆಗೆ ನೋಡಿದಳು. ಆ ನೋಟಕ್ಕೆ ಮಾರುಹೋಗಿದ್ದೆ. ಲಕ್ಷಣವಾಗಿದ್ದಳು. ನನ್ನ ಮನಸ್ಸಿನ ಕನ್ಯಾಪರೀಕ್ಷೆಯಲ್ಲಿ ಇವಳಿಗೆ ನೂರಕ್ಕೆ ನೂರು ಅಂಕಗಳನ್ನು ಕೊಟ್ಟುಬಿಟ್ಟೆ. ಅವಳು ಆಗಲ್ಲ ಅಂದಳು. ಕರ್ನಾಟಕದಿಂದ ಬಂದಿರುವುದಾಗಿ ಹೇಳಿದೆ. ಕೊಡಿ ಎಂದು ಹಣ ಪಡೆದಳು.
ಹಿಂದಿಯ ಡಿಡಿಎಲ್‌ಜೆ(ದಿಲ್‌ವಾಲೆ ದುಲ್ಹನಿಯಾ ಲೇಜಾಯೇಂಗೆ) ತೆಲುಗಿನಲ್ಲಿ ವಾಯ್ಸ್ ಡಬ್ ಮಾಡಿ "ಪ್ರೇಮಿಂಚಿ ಪೆಳ್ಳಾಡು" ಅಂತ ಹೆಸರಿಟ್ಟಿದ್ದರು. ಈ ಚಿತ್ರಕ್ಕೆ ಬಂದಾಗಲೇ ಈ ಹುಡುಗಿ ಸಿಗುವುದೆಂದರೇನು? ನನ್ನ ಜೀವನದಲ್ಲೂ ಮ್ಯಾಜಿಕ್ಕುಗಳು ಘಟಿಸುತ್ತವಾ? ಆ ವಯಸ್ಸೇ ಅಂತಹುದು. ಯಾವ ಹುಡುಗಿಯನ್ನು ನೋಡಿದರೂ ಪಕ್ಕದಲ್ಲಿ ನಿಂತಂತೆ ಕಲ್ಪಿಸಿಕೊಂಡು ಜೋಡಿ ಹೇಗಿರುತ್ತೆ ಎಂದು ಕನಸು ಕಾಣುವುದು. ಈ ಹುಡುಗಿ ಆ ಲೆಕ್ಕಾಚಾರವನ್ನು ಮೀರಿಸಿದ್ದಳು.
ಟಿಕೇಟ್ ಸೀರಿಯಲ್ ನಂಬರಿನಂತೆ ಕೊಟ್ಟಿದ್ದರಿಂದ ಇಬ್ಬರದೂ ಅಕ್ಕಪಕ್ಕ ಸೀಟ್. ಏನೇ ಹೇಳಿ... ಆ ವಯಸ್ಸಿನಲ್ಲಿ... ಹುಡುಗಿಯೊಡನೆ... ಥಿಯೇಟರಿನಲ್ಲಿ... ಅದೂ ಇಂಥ ಚಿತ್ರ ನೋಡುವ ಗಮ್ಮತ್ತೇ ಬೇರೆ!
ಇಂಟರ್‌ವಲ್‌ನಲ್ಲಿ ಚಿಪ್ಸ್ ತಂದುಕೊಟ್ಟೆ. ಮೊದಲು ಬೇಡವೆಂದರೂ ತಗೊಂಡರು. ಏನೆಂದು ಮಾತಾಡುವುದು?!
"ಏನು ಓದುತ್ತಿರುವುದು?" ಎಂದು ಕೇಳಿದೆ.
"ಟಿಸಿಹೆಚ್ ಟ್ರೈನಿಂಗ್" ಅಂದಳು.
"ನೀವು?" ಎಂದು ನನ್ನನ್ನು ಪ್ರಶ್ನಿಸಿದಳು."ನನ್ನದು ಹೋಟೆಲ್ ಇದೆ" ಅಂದೆ.
"ಇಲ್ಲಿ ಮದನಪಲ್ಲಿಯಲ್ಲಿ? ನೆಂಟರಿದ್ದಾರಾ?" ಕೇಳಿದಳು.
"ಪುಂಗನೂರು ರೋಡಿನಲ್ಲಿ ’ಪೋತಬೋಲು’ ಅಂತ ಹಳ್ಳಿಯಿದೆಯಲ್ಲ ಅಲ್ಲಿ ನಮ್ಮಣ್ಣನ ತೋಟ ಇದೆ. ಹಾಗಾಗಿ ಬರುತ್ತಿರುತ್ತೇನೆ" ಅಂದೆ.
* * * * *
ಬಸ್ಸಲ್ಲಿ ಹೋಗುವಾಗ ಎಲ್ಲಿಂದಲೋ ಬಂದ ಘಮ ಮೂಗನ್ನು ಸೋಕಿ ಮನವನ್ನರಳಿಸಿ, "ಇದು ಎಲ್ಲಿಂದ?" ಅಂತ ನೋಡುವಷ್ಟರಲ್ಲಿ ಮಾಯವಾಗುವಂತಹ ಘಟನೆಯಿದು. ಆ ಘಮಲನ್ನು ಹೊರಸೂಸಿದ ಹೂವನ್ನು ಮತ್ತೆ ನೋಡುವಂತಾದರೆ..?
* * * * *
ಸ್ವಲ್ಪ ದಿನಗಳಾಗಿತ್ತು. ಮದನಪಲ್ಲಿಯಲ್ಲಿ ಸಂಜೆ ೫.೩೦ರ ಚಿಂತಾಮಣಿಯ ಬಸ್ಸಿಗೆ ಕಾಯುತ್ತಿದ್ದೆ. ೫.೧೫ರ ಸುಮಾರಿಗೆ ಅಲ್ಲಿ ಶಾಲೆಯ ಹುಡುಗರು ಹೋಗುತ್ತಾರೆ. ಆ ದಿನ ಈ ಹುಡುಗಿ ಕಾಣಿಸಿದಳು. ಅವಳೇನಾ? ಅಲ್ಲವಾ? ಅನುಮಾನ...! ಕನಸಿನಂತಿತ್ತು. ಸುಮ್ಮನಾದೆ.
ಶನಿವಾರ ನಮ್ಮ ಹೋಟೆಲ್ ರಜ. ಮದನಪಲ್ಲಿಗೆ ಹೋದೆ. ಸಂಜೆ ಹುಡುಗಿ ಕಾಣಿಸಿದಳು. ವಾರ ಪೂರ್ತಿ ಧೈರ್ಯ ಕೂಡಿಸಿಕೊಂಡಿದ್ದೆ. ಹತ್ತಿರ ಹೋಗಿ "ಗುರುತುಂಡಾನಾ?"(ನೆನಪಿದ್ದೀನ?) ಎಂದು ಕೇಳಿದೆ. ಗಲಿಬಿಲಿಗೊಂಡ ಹುಡುಗಿಗೆ ಆ ದಿನ ಥಿಯೇಟರ್‌ನಲ್ಲಿ ಟಿಕೇಟ್ ತೆಗೆದುಕೊಟ್ಟಿದ್ದೆಲ್ಲ ನೆನಪಿಸಿದೆ. ನಕ್ಕು ಮಾತನಾಡಿಸಿ ಹೋದಳು. ವಾರದ ದಿನವೆಲ್ಲ ಶನಿವಾರವೇ ಇರಬಾರದೇ ಎಂದನಿಸಿತ್ತು! ಶನಿವಾರ ಬರುವುದಕ್ಕೆ ಕಾಯುತ್ತಿರುತ್ತಿದ್ದೆ. ಮುಂದಿನ ಶನಿವಾರ ಹೆಸರು ಕೇಳಿದೆ.
"ಪದ್ಮಾವತಿ" ಅಂದಳು. ನಾನು ವೆಂಕಟರಮಣ, ಅವಳು ಪದ್ಮಾವತಿ. ತಿರುಪತಿ ಬೆಟ್ಟವೇರಿ ವೈಕುಂಠ ನೋಡುತ್ತಿದ್ದೆ! ಹಗಲೂ ರಾತ್ರಿ ಕನಸೋ ಕನಸು! ವಾರವಾರ ತಪ್ಪದೆ ಶನಿವಾರ ಹೋಗಿ ಕಾದಿದ್ದು ಮಾತನಾಡಿಸುತ್ತಿದ್ದೆ.
ಅವಳ ಮನೆಯಿರುವುದು ಪ್ರಶಾಂತನಗರದಲ್ಲಂತೆ. ಆಗೆಲ್ಲಾ ಲ್ಯಾಂಡ್ ಲೈನ್. ಫೋನ್ ನಂಬರ್ ಕೇಳಿದೆ. ನಮ್ಮ ತಂದೆ ತುಂಬಾ ಸ್ಟ್ರಿಕ್ಟ್... ಬೇಡವೆಂದಳು.
ಹೀಗಿದ್ದಾಗ ಮೂರುವಾರ ಹೋಗಲಾಗಲಿಲ್ಲ. ನಾಲ್ಕನೇ ವಾರ ಹೋದೆ. ಪದ್ಮಾವತಿ ಬರಲಿಲ್ಲ. ಕಾದಿದ್ದು ಕಾದಿದ್ದು ಬಸ್ ತಪ್ಪಿಹೋಯ್ತು. ೬ ಗಂಟೆಗೆ ಫಿಲಂಗೆ ಹೋಗಿ ಬಂದು ೯ ಗಂಟೆಯ ಹುಬ್ಬಳ್ಳಿ ಬಸ್‌ನಲ್ಲಿ ಬಂದೆ. ಮುಂದಿನ ವಾರವೂ ಅದೇ ಕಥೆ. ಅದರ ಮುಂದಿನ ವಾರವೂ... ಊಹೂಂ... ಪದ್ಮಾವತಿಯ ಸುಳಿವೇ ಇಲ್ಲ...
* * * *
"ಛೆ! ಅದೇನೋ ಪ್ರಶಾಂತನಗರ ಅಂತ ಹೇಳಿದ್ದಳಲ್ಲ. ಹೋಗಿ ನೋಡಬೇಕಿತ್ತು..." ಕಥೆ ಕೇಳುತ್ತಿದ್ದ ನಾನು ಮಧ್ಯೆ ಮೂಗು ತೂರಿಸಿದೆ.
"ಹೇಗೆ ಹುಡುಕೋದು? ಏನಂತ ಹುಡುಕೋದು? ಆದರೂ ಪ್ರಶಾಂತನಗರಕ್ಕೆ ಹೋಗಬೇಕಾಯ್ತು. ಅದೂ ಹೇಳ್ತೀನಿ ಕೇಳಿ..." ಎಂದು ಶುರುಮಾಡಿದ ವೆಂಕಟರಮಣ.
ಪುಂಗನೂರಿನಿಂದ ತಿರುಪತಿಗೆ ಹೋಗುವ ದಾರಿಯಲ್ಲಿ "ಸೋಮಲ" ಅಂತ ಹಳ್ಳಿಯಿದೆ. ಅಲ್ಲಿಗೆ ನಮ್ಮಕ್ಕನನ್ನು ಕೊಟ್ಟಿದ್ದೆವು. ನನ್ನಕ್ಕನ ಮಾವನಿಗೆ ಅದೇ ಹಳ್ಳಿಯ ಮೇಸ್ಟ್ರು ನರಸಿಂಹಲು ಸ್ನೇಹಿತರು. ಆ ಮೇಸ್ಟ್ರು ತಮ್ಮ ಮಗಳಿಗೆ ಕರ್ನಾಟಕದ ಕಡೆ ಗಂಡು ನೋಡಲು ಅವರಿಗೆ ಹೇಳಿದ್ದಾರೆ. ನನ್ನಕ್ಕನ ಮಾವ ನಮ್ಮಪ್ಪನಿಗೆ ಕಾಗದ ಬರೆದಿದ್ದರು. ಅದು ತೆಲುಗಿನಲ್ಲಿತ್ತು. ತೆಲುಗು ಫಿಲಂ ಹುಚ್ಚಿನಿಂದ ನಾನು ತೆಲುಗು ಫಿಲಂ ಮ್ಯಾಗಜೀನ್‌ಗಳನ್ನು ಓದುತ್ತಿದ್ದೆ. ನನಗೆ ಓದಲು ಕೊಟ್ಟರು. ವಿಷಯ ತಿಳಿಸಿದೆ. ಆ ಪತ್ರದಲ್ಲಿ ಅವರ ವಿಳಾಸವೂ ಇತ್ತು. ಪತ್ರವನ್ನು ಗಣೇಶನ ಫೋಟೋ ಹಿಂದಿಟ್ಟೆ. ನಮ್ಮಪ್ಪ ಒಂದೆರಡು ಗಂಡುಗಳ ಬಗ್ಗೆ ಅವರಿಗೆ ತಿಳಿಸಿದ್ದರು.
ನಮ್ಮಪ್ಪ ಸೋಮಲಕ್ಕೆ ಹೋಗಿದ್ದಾಗ ನನ್ನಕ್ಕನ ಮಾವ , "ಹುಡುಗ ಕೆಲಸದಲ್ಲಿರಲಿ. ಹುಡುಗಿ ಚೆನ್ನಾಗಿದ್ದಾಳೆ. ನಿಮ್ಮ ವೆಂಕಟರಮಣನ ಥರ ಇದ್ದರೆ ನೋಡಿ" ಅಂದಿದ್ದಾರೆ. ಯಲಹಂಕದಲ್ಲಿ ನಮ್ಮ ಸಂಬಂಧಿಕರಲ್ಲಿ ಚಂದ್ರ ಎಂಬ ಹುಡುಗನಿದ್ದ. ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಒಳ್ಳೆ ಸಂಬಳವಿತ್ತು. ಆದರೆ ಎಡಗೈ ಬೆರಳುಗಳು ಫ್ಯಾಕ್ಟರಿಯಲ್ಲಿ ಮೆಷಿನಿಗೆ ಸಿಕ್ಕಿ ಕತ್ತರಿಸಿಹೋಗಿತ್ತು. ಮೇಸ್ಟ್ರಿಗೆ ಚಂದ್ರನ ಬಗ್ಗೆ ತಿಳಿಸಲು ಮನೆಯಲ್ಲಿ ನನಗೆ ಹೇಳಿದರು. ನಾನು ಸ್ವಲ್ಪ ಉದಾಸೀನ ಮಾಡಿದೆ. "ಮದನಪಲ್ಲಿಗೆ ವಾರವಾರ ಹೋಗ್ತೀಯ. ಹಾಗೇ ಆ ಮೇಸ್ಟ್ರ ಮನೆಗೆ ಹೋಗೋಕಾಗಲ್ವಾ?" ಅಂತ ಮನೇಲಿ ಬೈದಾಗ ವಿಳಾಸ ಗುರುತು ಹಾಕಿಕೊಂಡು ಹೊರಟೆ.
ಅಷ್ಟೊತ್ತಿಗೆ ಮೂರ್ನಾಕು ವಾರದಿಂದ ಪದ್ಮಾವತಿ ಕಾಣಿಸುತ್ತಿರಲಿಲ್ಲ. ಮೇಸ್ಟ್ರ ವಿಳಾಸ ಪ್ರಶಾಂತನಗರ.
"ಪದ್ಮಾವತಿಯದೂ ಅದೇ ಏರಿಯಾ ಅಲ್ವಾ?" ಅಂದುಕೊಂಡು ಅವಳೇನಾದರೂ ಕಾಣಿಸಿದರೆ ಎಂಬ ಆಸೆಯಿಂದ ಅಲ್ಲೆಲ್ಲಾ ಸುಮ್ಮನೆ ಸುತ್ತಾಡಿದೆ. ನರಸಿಂಹಲು ಮೇಸ್ಟ್ರ ಮನೆ ಸಿಕ್ಕರೂ ಒಳಗೆ ಹೋಗದೇ ಪದ್ಮಾವತಿಗಾಗಿ ಓಡಾಡಿದೆ. ಸಂಜೆಯಾಗುತ್ತಿತ್ತು. ಮೇಸ್ಟ್ರ ಮನೆಗೆ ಹೋದೆ. ಅವರ ಹೆಂಡತಿ ಮತ್ತು ಮಗ ಇದ್ದರು. ಶಿಡ್ಲಘಟ್ಟದಿಂದ ಬಂದಿರುವುದಾಗಿ ಹೇಳಿದೆ. ಕರೆದು ಒಳಗೆ ಕೂರಿಸಿದರು. ಸೋಮಲದ ನನ್ನಕ್ಕನ ಮಾವನ ಹೆಸರು ಹೇಳಿ ನಂತರ ಚಂದ್ರನ ಬಗ್ಗೆ ಹೇಳಿದೆ.
"ನಮ್ಮ ಹುಡುಗಿಗೆ ಕಳೆದವಾರವಷ್ಟೇ ಮದುವೆಯಾಯ್ತು" ಎನ್ನುತ್ತಾ ಆಕೆ ಗೋಡೆಯಮೇಲಿದ್ದ ದೊಡ್ಡದಾಗಿ ಲ್ಯಾಮಿನೇಷನ್ ಮಾಡಿಸಿದ್ದ ಗಂಡುಹೆಣ್ಣಿನ ಫೋಟೋ ತೋರಿಸಿದರು. ಫೋಟೋ ನೋಡಿದ ತಕ್ಷಣ ಎದೆ ಧಸಕ್ಕಂತು.
ಗಂಡನ ಪಕ್ಕದಲ್ಲಿ ಹೂವಿನ ಹಾರ ಹಾಕಿಕೊಂಡು ನಗುತ್ತಿದ್ದಾಳೆ ಪದ್ಮಾವತಿ! ಮುಂದೆ ನಡೆದಿದ್ದೆಲ್ಲಾ ಮಂಪರು ಮಂಪರು. ನೆನಪಿಲ್ಲ..."
"ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು..."

Friday, November 13, 2009

ಮಕ್ಕಳ ದಿನಾಚರಣೆ

ನವೊಲ್ಲಾಸ

ಪಿಳಿಪಿಳಿ ನಗು

ಉತ್ಸಾಹದ ಬುಗ್ಗೆ


ನಗು ನೀ ನಗು...

ಬೊಚ್ಚು ನಗೆ


ಅಣ್ಣ ಬಸವಣ್ಣ

ವಿಸ್ಮಯ

ಆಕಳಿಕೆ

ಖುಷಿಯೋ ಖುಷಿ

ಯಾವ ದ್ವೀಪದಿಂದ ಬಂದವರೋ?

ಮೊಲ

Friday, November 6, 2009

(ಅ)ಸ್ಥಿರ ಚಿತ್ರಗಳು


"ಮುನಿರಾಜು, ಬರಲಾ?" ಬೆಳೆಗ್ಗೆ ೬ ಗಂಟೆಗೇ ರಿಂಗ್ ಮಾಡಿದೆ.
"ಬಾ ಮಲ್ಲಿ. ಎರಡೇ ನಿಮಿಷ. ಬಂದೆ" ಅಂದ ಮುನಿರಾಜು.
ಈತ ಒಂದು ಕಾಲದಲ್ಲಿ ಒಳ್ಳೆ ಅಥ್ಲೀಟ್. ಈಗ ಹೊಟ್ಟೆ ಮುಂದೆ ಬಂದಿದೆ. ಎಲ್ಲಾ ಮಾಡುವುದೂ ಈ ಹೊಟ್ಟೆಗಾಗೇ ಅಲ್ವೆ. ಅದಕ್ಕೇ ಕ್ಷೌರಿಕ ವೃತ್ತಿ.
ಅವನು ಬರುವಷ್ಟರಲ್ಲಿ ಅವನ ಅಂಗಡಿ ಮುಂದೆ ನಿಂತಿದ್ದೆ.
"ಲೇಟಾಯ್ತಾ..." ಅಂದ. "ಇಲ್ಲ ಬಾ..." ಅಂದೆ.
ಅಂಗಡಿ ಮುಂದೆ ಚಪ್ಪಲಿ ಬಿಟ್ಟ. ರೋಲಿಂಗ್ ಷಟರ್‌ಗೆ ಮೂರು ಬಾರಿ ಕೈಯಲ್ಲಿ ಮುಟ್ಟಿ ಕಣ್ಣಿಗೊತ್ತಿಕೊಂಡ.
ಬೀಗದ ಕೈಯಿಂದ ಎಡಭಾಗದ ಬೀಗಕ್ಕೆ ಮೂರು ಬಾರಿ ಕುಟ್ಟಿದ. ಟಕ್ ಟಕ್ ಟಕ್...
ರೋಲಿಂಗ್ ಷಟರ್‌ಗೂ ಮೂರು ಬಾರಿ ಕುಟ್ಟಿದ. ಟಕ್ ಟಕ್ ಟಕ್...
ನಂತರ ಬೀಗ ತೆಗೆದ.
ಈಗ ಬಲಭಾಗದ ಸರದಿ! ಅಲ್ಲೂ ಬೀಗಕ್ಕೆ ಟಕ್ ಟಕ್ ಟಕ್...
ರೋಲಿಂಗ್ ಷಟರ್‌ಗೂ ಟಕ್ ಟಕ್ ಟಕ್...
ಬೀಗ ತೆಗೆದ. ಷಟರ್ ಮೇಲೆತ್ತಿದ.
ಬಾಗಿದವನೇ ಮೂರು ಬಾರಿ ನೆಲವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡ.
ಅರ್ಧ ನೀರಿದ್ದ ಬಕೆಟ್ ತೆಗೆದು ಹೊರಗಿಟ್ಟ.
ಅಲ್ಲಿ ಎರಡು ಪೊರಕೆಗಳಿದ್ದವು. ಒಂದರಿಂದ ಅಂಗಡಿ ಮುಂದೆ ಗುಡಿಸಿದ. ಇನ್ನೊಂದರಿಂದ ಒಳಗೆ ಗುಡಿಸಿ, ಕಸವನ್ನು ಮೊರಕ್ಕೆ ತುಂಬಿ ಮೂಲೆಯಲ್ಲಿದ್ದ ಪ್ಲಾಸ್ಟಿಕ್ ಡಬ್ಬಕ್ಕೆ ಸುರಿದ. ಅಕ್ಕಸಾಲಿಗರಂತೆ ಕಸವನ್ನು ಅಮೂಲ್ಯವೆಂಬಂತೆ ಏಕೆ ಇಡುತ್ತಾನೆ. ಕೂದಲನ್ನು ಮಾರಬಹುದೇನೋ? ಕೇಳಲು ಮನಸ್ಸಾಗಲಿಲ್ಲ.
ನೀರನ್ನು ಅಂಗಡಿ ಮುಂದೆ ಚಿಮುಕಿಸಿದ.
"ಬಾ ಮಲ್ಲಿ" ಅಂದ. "ಅಬ್ಬಾ! ಮುಗಿಯಿತಾ ಇವನ ಪ್ರಾರಂಭೋತ್ಸವ" ಅಂದುಕೊಂಡು ಹೋಗಿ ಸಿಂಹಾಸನದ ಮೇಲೆ ಕುಳಿತೆ.
ದೇವರ ಪಟದ ಮೇಲಿದ್ದ ಹಳೆ ಹೂ ತೆಗೆದ. ಊದುಕಡ್ಡಿ ಬೆಳಗಿದ. ಸಿಕ್ಕಿಸಿದ. ಕೆಳಗೊಂದು ಪೇಪರ್ ಇಟ್ಟ, ಬೂದಿ ಬೀಳಲು. ಎಫ್.ಎಮ್. ಹಾಕಿದ. ಸುಪ್ರಭಾತ ಶುರುವಾಯ್ತು. ಡ್ರಾ ಒಳಗಿಂದ ಕತ್ತರಿ, ಬಾಚಣಿಗೆ ಇತ್ಯಾದಿ ತನ್ನ ಆಯುಧಗಳನ್ನು ಹೊರತೆಗೆದ. ಅದನ್ನೂ ಕಣ್ಣಿಗೊತ್ತಿಕೊಂಡ, ಮೂರು ಬಾರಿ!
ಬಟ್ಟೆ ತೆಗೆದು ನನ್ನ ಕುತ್ತಿಗೆಗೆ ಬಿಗಿದ. "ನನ್ನ ತಲೆ(ಕೂದಲನ್ನೂ) ಕೈಯಿಂದ ಮುಟ್ಟಿ ಕಣ್ಣಿಗೊತ್ತಿಕೊಂಡರೆ, ಅದೂ ಮೂರು ಬಾರಿ!" ಅಂದುಕೊಳ್ಳುತ್ತಿದ್ದಂತೆ ಕತ್ತರಿ ಬಾಚಣಿಗೆ ತೆಗೆದುಕೊಂಡು, "ಮೀಡಿಯಮ್ಮಾ? ಶಾರ್ಟಾ?" ಅಂದ...
ಬಚಾವಾಗಿದ್ದೆ!
* * * * *


ವೆಂಕಟರಮಣ ಮತ್ತು ನಾನು ಬೆಳಿಗ್ಗೆ ವಾಕಿಂಗ್ ಹೋಗಿ ಬರುವಾಗ ರಾಮಣ್ಣನ ಹೋಟೆಲ್‌ಗೆ ಹೋದೆವು. ಕಾಫಿ ಕುಡಿದು ಹಣಕೊಟ್ಟೆ.
"ಅಲ್ಲಿಡಿ ಸ್ವಾಮಿ" ಅಂದ ರಾಮಣ್ಣ. ಆತನ ಗಲ್ಲ(ಕ್ಯಾಷ್ ಟೇಬಲ್) ಮೇಲೊಂದು ಟ್ರೇ. ಅದರಲ್ಲಾಗಲೇ ಹತ್ತು ಮತ್ತು ಇಪ್ಪತ್ತು ರೂಗಳ ಒಂದೊಂದು ನೋಟುಗಳಿದ್ದವು.
ಎಲ್ಲರೂ ಹಣವನ್ನು ಒಳಗಿಟ್ಟರೆ, ಈತ ಏಕೆ ಎಲ್ಲರಿಗೂ ಕಾಣುವಂತೆ ಪ್ರದರ್ಶನಕ್ಕೆ ಇಟ್ಟಿದ್ದಾನೆ ಅಂದುಕೊಳ್ಳುತ್ತಾ ಇನ್ನೊಮ್ಮೆ, "ತಗೊಳ್ಳಿ ರಾಮಣ್ಣ" ಅಂದೆ.
ಮತ್ತೆ ಆತ " ಅಲ್ಲಿಡಿ ಸ್ವಾಮಿ" ಅಂದ.
"ಯಾಕ್ರೀ ರಾಮಣ್ಣ, ನೋಟು ಮುಟ್ಟಿದರೆ ಹೆಚ್೧ಎನ್೧ ವೈರಸ್ ಬರುತ್ತಾ?" ಕಿಚಾಯಿಸಿದೆ.
"ಹೆ..ಹ್ಹೆ...ಹ್ಹೆ... ಹಾಗಲ್ಲ ಸ್ವಾಮಿ. ಮೊದಲು ಬರೋ ಹತ್ತು ಗಿರಾಕಿಗಳ ನೋಟು ಮುಟ್ಟಲ್ಲ. ಇಲ್ಲಿ ಟ್ರೇನಲ್ಲಿ ಹಾಕಿಸಿಕೊಳ್ತೀನಿ. ಆ ಹತ್ತು ಜನರಲ್ಲಿ ಒಬ್ಬರದಾದ್ರೂ ಕೈಗುಣ ಚೆನ್ನಾಗಿರುತ್ತಲ್ಲ... ವ್ಯಾಪಾರ ಚೆನ್ನಾಗಿ ಆಗುತ್ತೆ" ಅಂದ.
ಅವನ ತರ್ಕಕ್ಕೆ ತಲೆದೂಗಿದ್ದೆ!
* * * * *

ನನ್ನ ಸ್ನೇಹಿತ ವೆಂಕಟರಮಣನದ್ದು ಮಿಲ್ಟ್ರಿ ಹೋಟೆಲ್. ಎಲ್ಲರದ್ದೂ ಬೆಳಿಗ್ಗೆ ವ್ಯಾಪಾರ ಶುರುವಾದರೆ ಈತನದ್ದು ಮದ್ಯಾಹ್ನ. ಎಲ್ಲರಿಗೂ ಭಾನುವಾರ ರಜವಾದರೆ ಇವರಿಗೆ ಶನಿವಾರ ರಜ.
ಆ ದಿನ ಚಿಲ್ಲರೆ ಬೇಕಾಗಿತ್ತು. ಇವನ ಹೋಟೆಲ್‌ಗೆ ಹೋಗಿ ಕೇಳಿದೆ. "ಇನ್ನೂ ಬೋಣಿನೇ ಆಗಿಲ್ಲ" ಅಂದ.
ಅಷ್ಟರಲ್ಲಿ ಯಾರೋ ಬಂದು, "ಚಿಕನ್, ಮಟನ್... ಏನಿದೆ?" ಅಂದರು.
"ಇನ್ನೂ ರೆಡಿಯಾಗ್ಬೇಕು. ಸ್ವಲ್ಪ ಹೊತ್ತಾಗುತ್ತೆ" ಅಂದುಬಿಟ್ಟ ವೆಂಕಟರಮಣ. ಅವರು ಹೊರಟುಹೋದರು.
ನನಗೆ ಅಚ್ಚರಿ. "ಅಲ್ಲಯ್ಯಾ ನೂರರಿಂದ ನೂರೈವತ್ತು ಬಿಲ್ ಮಾಡುವ ಹಾಗಿದ್ದರು. ಯಾಕೆ ಕಳಿಸಿಬಿಟ್ಟೆ? ನನಗೆ ನೋಡಿದರೆ ಬೋಣಿ ಆಗಿಲ್ಲ ಅಂತೀಯಲ್ಲ" ಅಂದೆ.
"ಮೊದ್ಲ ಬೋಣಿ ಜಾಸ್ತಿ ಬಿಲ್ ಮಾಡಿದ್ರೆ ಆ ದಿನ ಪೂರ್ತಿ ಸರಿಯಾಗಿ ವ್ಯಾಪಾರ ಆಗಲ್ಲ. ಅದಕ್ಕೇ ಕಳ್ಸಿದ್ದು" ಅಂದ.
ಅಷ್ಟರಲ್ಲಿ ರೈತರೊಬ್ಬರು ಬಂದು "ಸಂಗಟಿ ಉಂದಾಪ್ಪ?"(ಮುದ್ದೆ ಇದ್ಯಾಪ್ಪ?) ಅಂದರು.
"ಉಂದನ್ನ"(ಇದೆಯಣ್ಣ) ಎನ್ನುತ್ತಾ ವೆಂಕಟರಮಣ ತಾನೇ ಎದ್ದು ಓಡುತ್ತಾ "ಏ... ಒಂದು ಪ್ಲೇಟ್ ಮುದ್ದೆ" ಎಂದು ಹುಡುಗರಿಗೆ ಕೂಗಿ ಹೇಳುತ್ತಾ ಹೋದ.
ತಟ್ಟೆಗೆ ಮುದ್ದೆ ಇಟ್ಟು ಲೋಟದಲ್ಲಿ ಶೇರ್ವಾ ಹಾಕುತ್ತಿದ್ದ ಹುಡುಗನಿಂದ ತಟ್ಟೆ ತಗೊಂಡು ಬಂದು ಟೇಬಲ್ ಮೇಲೆ ಆ ರೈತರ ಮುಂದಿಟ್ಟ. ಹುಡುಗನಿಗೆ ನೀರು ತರಲು ಹೇಳಿದ.
ಐದು ಹತ್ತು ರುಪಾಯಿ ಬಿಲ್‌ಗೆ ಇಷ್ಟು ಉತ್ಸಾಹ ತೋರುವ ಇವನನ್ನು ಅಚ್ಚರಿಯಿಂದ ನೋಡುತ್ತಿದ್ದ ನನ್ನ ಬಳಿ ಬಂದು, "ಮೊದಲ ಬೋಣಿ ಹಿಂಗೆ ಕಡಿಮೆ ಆಗ್ಬೇಕು. ಆಗ ದಿನ ಪೂರ್ತಿ ಚೆನ್ನಾಗಿ ವ್ಯಾಪಾರ ಆಗುತ್ತೆ" ಅಂದ.
* * * * *


ಅಂಗಡಿ ಮುಚ್ಚಿ ರಾತ್ರಿ ಮನೆಗೆ ಹೋಗುವಾಗ ಫ್ಯಾನ್ಸಿ ಸ್ಟೋರ್ ಚಂದು ಅಂಗಡಿ ಮುಂದೆ ಹೋದೆ.
"ಏನು ಚಂದು ಇನ್ನೂ ಕ್ಲೋಸ್ ಮಾಡಿಲ್ಲ?" ಅಂದೆ.
"ಈಗ ಮಾಡ್ಬೇಕು" ಎನ್ನುತ್ತಾ ತನ್ನ ಅಂಗಡಿ ಹೊರಗೆ ನೇತಾಕಿದ್ದ ಬ್ಯಾಗು, ಬಾಲು, ಕಾಯಿನ್‌ಬೂತ್ ಇತ್ಯಾದಿ ಒಳಗಿಡತೊಡಗಿದ.
ಜೊತೆಯಲ್ಲಿ ಹೋದರಾಯ್ತೆಂದು ನಾನೂ ಅಲ್ಲೇ ನಿಂತೆ.
ಸ್ವಿಚ್ಚುಗಳನ್ನೆಲ್ಲ ಆಫ್ ಮಾಡಿದ. ಮೈನ್ ಸ್ವಿಚ್ಚನ್ನೂ ಆರಿಸಿದ. ಕತ್ತಲಲ್ಲಿ ಏನನ್ನೋ ತಡಕಾಡುತ್ತಿರುವವನಂತೆ ಕಂಡ. ನೋಡಿದರೆ ಆಫ್ ಆಗಿದೆಯೋ ಇಲ್ಲವೋ ಎಂದು ಸ್ವಿಚ್ಚುಗಳ ಮೇಲೆ ಕೈಯಾಡಿಸುತ್ತಿದ್ದಾನೆ. ನೋಡುತ್ತಿದ್ದಂತೆಯೇ ಪ್ಲಗ್ ಪಾಯಿಂಟ್‌ನಲ್ಲೂ ಬೆರಳಿಟ್ಟುಬಿಟ್ಟ!
ರೋಲಿಂಗ್ ಷಟರ್ ಎಳೆದ. ಬೀಗಗಳನ್ನು ಹಾಕಿದ. ನಂತರ ಆ ದಪ್ಪ ಬೀಗವನ್ನು ಎರಡೂ ಕೈಗಳಲ್ಲಿಡಿದು ಎಳೆಯತೊಡಗಿದ. ರೋಲಿಂಗ್ ಷಟರ್ "ಗರಕ್...ಗರಕ್..." ಎಂದು ಶಬ್ದ ಮಾಡಿತು.
ಎರಡೂ ಕಡೆ ಹೀಗೆ ಬೀಗಗಳನ್ನು ಎಳೆದ. ಅಲ್ಲಿಂದ ಹೊರಟಾಗಲೂ ಅವನ ಮುಖದಲ್ಲಿ ಏನೋ ಕೊಂಚ ಅನುಮಾನ, ಅಸಮಾಧಾನವಿತ್ತು. ಅಕಸ್ಮಾತ್ ಇವನು ಚಿನ್ನದ ಅಂಗಡಿ ಇಟ್ಟಿದ್ದಿದ್ದರೆ?!
"ಮಗ ಹೇಗಿದ್ದಾನೆ ಚಂದು?" ಎಂದು ವಿಷಯಾಂತರ ಮಾಡಿದೆ. ಮನೆಕಡೆ ಹೆಜ್ಜೆ ಹಾಕಿದೆವು.

Saturday, October 31, 2009

ಅರಿಶಿನ ಕುಂಕುಮ - ಕನ್ನಡ ಡಿಂಡಿಮ

ನಮ್ಮ ಬಾವುಟ... ಕನ್ನಡದ ಬಾವುಟ...
ಅರಿಶಿನ ಕುಂಕುಮ ಬಣ್ಣದ ನಾಡ ಬಾವುಟ ಕನ್ನಡ ತಾಯಿಯ ಸುಮಂಗಲಿತನವನ್ನು ಪ್ರತಿನಿಧಿಸುತ್ತದೆ.
ಚಿನ್ನದ ಬೀಡು, ರೇಷ್ಮೆಯ ನಾಡನ್ನು ಸಂಪತ್ತಿನ ಪ್ರತಿನಿಧಿಯಾಗಿ ಹಳದಿ ಬಣ್ಣ ಸೂಚಿಸಿದರೆ... ಫಲವತ್ತಾದ ಕೆಂಪು ಮಣ್ಣು, ವೀರತ್ವ, ಔಧಾರ್ಯ ಮತ್ತು ಖನಿಜ ಸಂಪತ್ತನ್ನು ಕೆಂಪು ಬಣ್ಣ ಪ್ರತಿನಿಧಿಸುತ್ತದೆ.
ಎಲ್ಲಾ ರಾಜ್ಯಗಳಿಗೂ ತಮ್ಮದೇ ಆದ ಧ್ವಜವಿಲ್ಲ. ಆದರೆ ನಮಗೆಲ್ಲಿಂದ ಬಂತು? ೧೯೬೫ರಲ್ಲಿ ಮ.ರಾಮಮೂರ್ತಿಯವರು "ಕನ್ನಡ ಪಕ್ಷ"ವನ್ನು ಸ್ಥಾಪಿಸಿದ್ದರು. ಅವರ ಪಕ್ಷ ಮರೆಯಾದರೂ ಅವರ ಪಕ್ಷದ ಧ್ವಜ ನಮ್ಮೆಲ್ಲರ ನಾಡಿನ ಧ್ವಜವಾಯಿತು.
ಕರುನಾಡಿನ ಸೌಭಾಗ್ಯದ ಸಂಕೇತವಾದ ಈ ಧ್ವಜದ ಬಣ್ಣ ನಮ್ಮ ನಾಡಲ್ಲಿ ಎಲ್ಲೆಲ್ಲೂ ಇದೆ. ಹಕ್ಕಿಯಲ್ಲಿ, ಚಿಟ್ಟೆಯಲ್ಲಿ, ಹಣ್ಣಲ್ಲಿ, ಮಗುವಿನ ಕಣ್ಣಲ್ಲಿ, ಹೂವಲ್ಲಿ...ಎಲ್ಲೆಲ್ಲಿ ನೋಡಿದರೂ ನಾಡಬಾವುಟ.
ನಮ್ಮ ನಿಸರ್ಗದಲ್ಲಿನ ಈ ಬಣ್ಣಗಳನ್ನು ನೋಡುತ್ತಾ ನಾಡಿನ ಹಿರಿಮೆಯ ಬಗ್ಗೆ ಹೆಮ್ಮೆ ಪಡೋಣ ಮತ್ತು ಅದರ ಗರಿಮೆಯನ್ನು ಎಲ್ಲೆಡೆಯೂ ಸಾರೋಣ.



ಅವಳಿ ಜವಳಿ.




ಐದು ಬೆರಳು ಒಗ್ಗೂಡಿದರೆ ಮುಷ್ಠಿ.




ಐದು ದಳದಲ್ಲೂ ಕನ್ನಡ ಬಣ್ಣದ ಸೃಷ್ಠಿ.



ಏಳು ದಳ ಹೇಳುತ್ತಿದೆ "ಎದ್ದೇಳು ಕನ್ನಡಿಗ" ಎಂದು.



ತೆರೆದಿದೆ ಮನೆ ಬಾ ಅತಿಥಿ...



ನಾವು ಯಾರಿಗೂ ಕಮ್ಮಿ ಇಲ್ಲ.. ಕನ್ನಡಿಗರಂದ್ರೆ ಸುಮ್ನೆ ಅಲ್ಲ..



ರಕ್ತಪುಷ್ಪ(ಬ್ಲಡ್ ಫ್ಲವರ್) ಕಣಕಣದಲ್ಲೂ ಕನ್ನಡತನವನ್ನು ಪ್ರತಿನಿಧಿಸುತ್ತಿದೆ.



ಆಂಥೂರಿಯಮ್‌ನ ಬೊಗಸೆಯಲ್ಲೂ ಕನ್ನಡ ಬಣ್ಣ.



ದಿಕ್ಕು ದಿಕ್ಕಲ್ಲೂ ಕನ್ನಡ ಕಹಳೆ ಮೊಳಗಿಸುವ ಹೂ.



ದಾಸವಾಳದ ತಾಯ್ನಾಡ ಪ್ರೇಮ.



ಕುಟುರನ ಕೊರಳಲ್ಲೂ ಕನ್ನಡ.. ಶಿರದ ಮೇಲೂ ಕನ್ನಡ.



ಹಣ್ಣಲ್ಲೂ ಮಣ್ಣಿನ ಬಗ್ಗೆ ಅಭಿಮಾನ ಮೂಡಿದೆ.



ಜೆಝಿಬಲ್ ಚಿಟ್ಟೆಯ ರೆಕ್ಕೆಯ ಮೇಲೆ ನಾಡಬಣ್ಣ.



ಚಿಮ್ಮುತಿದೆ ಕನ್ನಡಮಕ್ಕಳಲ್ಲಿ ನಾಡನುಡಿಯ ಪ್ರೇಮ.



ನೆರಳಾಗಿ, ದಾಹವನಿಂಗಿಸುವ ಜಲವಾಗಿ ಭಾರತ ಜನನಿಯ ತನುಜಾತೆ ನಮ್ಮನ್ನು ಸಲಹುತ್ತಿದ್ದಾಳೆ.



ಕತ್ತಲ ಬಾಳಿಗೆ ಬೆಳಕಾಗಿರುವ ತಾಯಿ ಭುವನೇಶ್ವರಿಗೆ ನಮೋನಮಃ.