Saturday, August 18, 2012

ಚೌಕಟ್ಟಿನ ಆಚೆಗೆ ಇತಿಹಾಸ ಚಿತ್ರಪಟ...

 ಶಿಡ್ಲಘಟ್ಟದಲ್ಲಿ ಪುರಸಭೆ ರಚನೆಯಾದ ನಂತರ ಆಯ್ಕೆಯಾದ ಪುರಸಭಾ ಸದಸ್ಯರ ಭಾವಚಿತ್ರ.

ಇಂದು ವಿಶ್ವಛಾಯಾಗ್ರಾಹಕರ ದಿನ. ಶಿಡ್ಲಘಟ್ಟದ ತಾಲ್ಲೂಕಿನ ಇತಿಹಾಸದ ದಾಖಲೆಯಂತೆ ಕಾಣುವ ಕೆಲವು ಅಪರೂಪದ ಕಪ್ಪು-ಬಿಳುಪಿನ ಛಾಯಾಚಿತ್ರಗಳು ಹಲವು ಕಥೆಗಳನ್ನು ಹೇಳುತ್ತವೆ. ಅಲಲ್ಲಿ ಕೆಲವು ಆಸಕ್ತರ ಸಂಗ್ರಹಗಳಲ್ಲಿ ಭದ್ರವಾಗಿರುವ ಈ ಛಾಯಾಚಿತ್ರಗಳು ಅಂದಿನ ದಿನಗಳ ನೆನಪುಗಳನ್ನು ಮೆಲುಕು ಹಾಕಲು ನೆರವಾಗುತ್ತವೆ.
 ಶಿಡ್ಲಘಟ್ಟಕ್ಕೆ ಜಯಚಾಮರಾಜೇಂದ್ರ ಒಡೆಯರ್ ಬಂದಿದ್ದರು, ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ, ಡಿ.ದೇವರಾಜ ಅರಸ್ ಮುಂತಾದ ಗಣ್ಯರು ಭೇಟಿ ನೀಡಿದ್ದರು. ಹೀಗೆ ಹಲವು ಗಣ್ಯರು ಇಲ್ಲಿಗೆ ಆಗಮಿಸಿದ್ದರ ಕುರುಹಾಗಿ ದಾಖಲಾಗಿರುವ ಛಾಯಾಚಿತ್ರಗಳಿವೆ. ಆಗಿನ ಸಾಮಾಜಿಕ ಜೀವನವನ್ನು ಕಣ್ಣೆದುರು ತರುವ ಆಗಿನವರ ಉಡುಪುಗಳು, ಸಾಂಘಿಕ ಜೀವನ, ಸಾಮಾಜಿಕ ಸೇವೆ ತಿಳಿಸಿಕೊಡುವ ಈ ಚಿತ್ರಗಳು ಹೊಸಬರಿಗೆ ಅಪರೂಪದ ದಾಖಲಾತಿಯಾದರೆ, ಹಳಬರಿಗೆ ನೆನಪುಗಳ ನೇವರಿಕೆ.
 ಶಿಡ್ಲಘಟ್ಟ ಪುರಸಭೆ ಘೋಷಣೆಯಾದ ನಂತರ ಮೊಟ್ಟಮೊದಲ ಬಾರಿಗೆ ಆಯ್ಕೆಯಾದ ಪುರಸಭಾ ಸದಸ್ಯರ ಚಿತ್ರದಲ್ಲಿ ಪೇಟ, ಶಲ್ಯ, ಪೈಜಾಮ, ಕೋಟು, ಠೀವಿ, ಗತ್ತುಗಳನ್ನು ಛಾಯಾಚಿತ್ರ ಚೌಕಟ್ಟಿನಾಚೆಗೂ ಹರಿಬಿಡುತ್ತದೆ. ಮೈಸೂರು ಸಂಸ್ಥಾನದ ಪುರಸಭೆಗಳ ಕೈಪಿಡಿ ೧೯೫೩ ರ ಮಾಹಿತಿ ಪ್ರಕಾರ, ಆಗಿನ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ಟೌನ್ ಮುನಿಸಿಪಾಲಿಟಿ  ಜನಸಂಖ್ಯೆ ೯೨೨೯, ಅಧ್ಯಕ್ಷ ಬಿ.ವಿರೂಪಾಕ್ಷಪ್ಪ, ಸಿಬ್ಬಂದಿ ಸಂಖ್ಯೆ ೩೨. ಆಗ ಟೌನಿನಲ್ಲಿ ನೀರಿಗಾಗಿ ನಲ್ಲಿ ವ್ಯವಸ್ಥೆಯಿರಲಿಲ್ಲ. ಆದರೆ ೧೫೦ ಬೀದಿ  ದೀಪಗಳಿದ್ದವು.
‘ಈ ಪುರಸಭೆಯು ೧೯೫೧ರ ಟೌನ್ ಮುನಿಸಿಪಲ್ ಕಾಯ್ದೆ ಮೇಲೆ ರಚನೆಯಾಗಿದೆ. ೧೫ ಜನ ಸದಸ್ಯರಿದ್ದಾರೆ. ಬಿ.ವಿರೂಪಾಕ್ಷಪ್ಪ ಅಧ್ಯಕ್ಷರಾಗಿಯೂ, ಜಿ.ಚೌಡಪ್ಪ ಉಪಾಧ್ಯಕ್ಷರಾಗಿಯೂ ಚುನಾಯಿತರಾಗಿದ್ದಾರೆ. ಇಲ್ಲಿ ಎರಡು ಸಾವಿರ ಮನೆಗಳಿವೆ.  ಬಿ.ವಿರೂಪಾಕ್ಷಪ್ಪನವರ  ನಾಮಾಂಕಿತದಲ್ಲಿ ವಿರೂಪಾಕ್ಷಪ್ಪ ಪ್ರೌಢಶಾಲೆ ಇರುತ್ತದೆ. ಬಿ.ವಿರೂಪಾಕ್ಷಪ್ಪನವರು ಪ್ರೌಢಶಾಲೆಗಾಗಿ ೧೩ ಎಕರೆ ಸ್ಥಳವನ್ನು, ಕಟ್ಟಡದ ನಿಧಿಗಾಗಿ ೩೦ ಸಾವಿರ ರೂಪಾಯಿಗಳನ್ನು ದಾನ ಮಾಡಿದ್ದಾರೆ. ತಾಲ್ಲೂಕು  ಕಚೇರಿ ಬಳಿ  ಪ್ರೌಢಶಾಲೆ ಕಟ್ಟಡವು ಕಟ್ಟಲಾಗುತ್ತಿದೆ. ಹೆರಿಗೆ ಆಸ್ಪತ್ರೆ ಕಟ್ಟಡಕ್ಕಾಗಿ ಈಗಾಗಲೇ ಹತ್ತು ಸಾವಿರ ರೂಪಾಯಿಗಳವರೆಗೆ ಸಾರ್ವಜನಿಕರಿಂದ ಚಂದಾ ವಸೂಲಾಗಿದೆ ಮತ್ತು ಹೆರಿಗೆ ಆಸ್ಪತ್ರೆ ಮಂಜೂರು ಮಾಡಲು ಸರ್ಕಾರವನ್ನು ಪ್ರಾರ್ಥಿಸಿಕೊಳ್ಳಲಾಗಿದೆ. ಈ ಆಸ್ಪತ್ರೆಗೆ ಬಿ.ವಿರೂಪಾಕ್ಷಪ್ಪನವರು ಹತ್ತು ಸಾವಿರ  ರೂಪಾಯಿ ನೀಡುವ ವಾಗ್ದಾನ ಮಾಡಿದ್ದು, ಈಗಾಗಲೇ ಐದು ಸಾವಿರ ರೂಪಾಯಿ ಕೊಟ್ಟಿದ್ದಾರೆ’ ಎಂದು ಕೈಪಿಡಿಯಲ್ಲಿ ಮುದ್ರಿಸಲಾಗಿದೆ.


 ಶಿಡ್ಲಘಟ್ಟದಲ್ಲಿ ೧೯೫೬ರಲ್ಲಿ ರಾಷ್ಟ್ರಭಾಷೆಯಾದ ಹಿಂದಿಯನ್ನು ಮಕ್ಕಳಿಂದ ಹಿರಿಯರವರೆಗೂ ಉಚಿತವಾಗಿ ಕಲಿಸುತ್ತಿದ್ದ  ಕೆಲಸವನ್ನು ಹಿಂದಿ ಪ್ರಚಾರ ಸಮಿತಿ ಮಾಡುತ್ತಿದ್ದು, ಹಿಂದಿ ಕಲಿಯುತ್ತಿದ್ದವರ ಚಿತ್ರವಿದು. ಹಿಂದಿ ಕಲಿಸುತ್ತಿದ್ದ ಹಿಂದಿ ಪಂಡಿತರಾದ ಎಚ್.ವಿ.ರಾಮಚಂದ್ರರಾವ್ ಚಿತ್ರದಲ್ಲಿದ್ದಾರೆ.


೧೯೫೬ರಲ್ಲಿ ರಾಷ್ಟ್ರಭಾಷೆಯಾದ ಹಿಂದಿಯನ್ನು ಮಕ್ಕಳಿಂದ ಹಿರಿಯರವರೆಗೂ ಉಚಿತವಾಗಿ ಕಲಿಸುವ ಕೆಲಸವನ್ನು ಶಿಡ್ಲಘಟ್ಟದ ಹಿಂದಿ ಪ್ರಚಾರ ಸಮಿತಿ ಮಾಡುತ್ತಿತ್ತು. ಸ್ವಾತಂತ್ರ್ಯ ಬಂದು ಕೆಲವೇ ವರ್ಷಗಳಾಗಿತ್ತು. ರಾಷ್ಟ್ರೀಯತೆ ತಿಳಿಸುವ ಉದ್ದೇಶದಿಂದ ಹಿಂದಿ ಪಂಡಿತರಾಗಿದ್ದ ಎಚ್.ವಿ.ರಾಮಚಂದ್ರರಾವ್ ಅವರ ನೇತೃತ್ವದಲ್ಲಿ ಹಿಂದಿ ತರಗತಿಗಳನ್ನು ನಡೆಸುತ್ತಿದ್ದರು. ಮುಂದೆ ಎಚ್.ವಿ.ರಾಮಚಂದ್ರರಾವ್ ಆಕಾಶವಾಣಿ ನಿರ್ದೇಶಕರಾದರು. ೨೦೦೨ರಲ್ಲಿ  ಶಿಡ್ಲಘಟ್ಟದಲ್ಲಿ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.



ರಾಜ್ಯದ  ಮುಖ್ಯಮಂತ್ರಿಗಳಾಗಿದ್ದ ಕೆಂಗಲ್‌ಹನುಮಂತಯ್ಯ ಮತ್ತು ಡಿ.ದೇವರಾಜ ಅರಸ್ ೧೯೭೦ರಲ್ಲಿ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದರು.

ಕೆಪಿಸಿಸಿ ಅಧ್ಯಕ್ಷರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಶಿಡ್ಲಘಟ್ಟದ ಕೆ.ಕೊಂಡಪ್ಪನವರ ಮನೆಗೆ ೧೯೭೦ರಲ್ಲಿ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಕೆಂಗಲ್‌ಹನುಮಂತಯ್ಯ ಮತ್ತು ಕಾಂಗ್ರೆಸ್ ಪಕ್ಷ ಇಬ್ಬಾಗವಾದ ಮೇಲೆ ೧೯೭೨ರಲ್ಲಿ ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸ್ ಬಂದಿದ್ದರು. ಅವರ ಸರಳತೆ ಈ ಛಾಯಾಚಿತ್ರದಲ್ಲಿ ಕಾಣಬಹುದು.
 ‘ಈಗ ಮುಖ್ಯಮಂತ್ರಿ ಊರಿಗೆ ಬರುತ್ತಾರೆ ಅಂದರೆ ಸಾಮಾನ್ಯ ಜನರು ಹತ್ತಿರದಿಂದ ನೋಡಲಾಗದ ಸ್ಥಿತಿ ಇರುತ್ತದೆ. ಆಗ ನಮ್ಮ ದೊಡ್ಡಪ್ಪ ಕೆ.ಕೊಂಡಪ್ಪನವರನ್ನು ಭೇಟಿಯಾಗಲು ಕೆಂಗಲ್‌ಹನುಮಂತಯ್ಯ ಮತ್ತು ಡಿ.ದೇವರಾಜ ಅರಸ್ ಅವರು ಬಂದಿದ್ದಾಗ ನಮಗೆ ಕುಟುಂಬದ ಸ್ನೇಹಿತರೊಬ್ಬರು ಬಂದಂತೆ ಅನಿಸಿತ್ತು. ಮೊಟ್ಟಮೊದಲು ಪುರಸಭೆಯು ರಚನೆಯಾದಾಗ ನಮ್ಮ ದೊಡ್ಡಪ್ಪ ಸದಸ್ಯರಾಗಿದ್ದರು. ಆಗಿನ ನೆನಪನ್ನು ಮರುಕಳಿಸುವ ಶಿಡ್ಲಘಟ್ಟದ ಇತಿಹಾಸವನ್ನು ತಿಳಿಸುವ ಕೆಲವು ಛಾಯಾಚಿತ್ರಗಳನ್ನು ಜೋಪಾನವಾಗಿಟ್ಟುಕೊಂವಿದ್ದೇನೆ’ ಎನ್ನುತ್ತಾರೆ ಕೊಂಡಪ್ಪನವರ ಸಂಬಂಧಿ ವೇಣುಗೋಪಾಲ್.

Monday, July 16, 2012

ಗಂಜಿಗುಂಟೆಯ ಗೆರಿಗಿಗುಂಡು

 
ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿರುವ ಗುಡ್ಡದ ಮೇಲಿನ ಬೃಹದಾಕಾರದ ಗೆರಿಗಿಗುಂಡು.


ಹಿಂದೆ ಬೆಟ್ಟಗುಡ್ಡಗಳ ಪ್ರದೇಶವನ್ನು ಪಾಳೇಗಾರರು ಆಯ್ದುಕೊಂಡು ತಮ್ಮ ರಕ್ಷಣಾ ಸ್ಥಾನವನ್ನಾಗಿಸಿಕೊಳ್ಳುತ್ತಿದ್ದರು. ಅಂಥಹ ಪ್ರದೇಶಗಳು ಈಗಿನ ಕಾಲದಲ್ಲಿ ಹಳೆಯ ನೆನಪುಗಳ ಪಳೆಯುಳಿಕೆಗಳಾಗಿ ನಿಸರ್ಗದತ್ತ ಆಕರ್ಷಕ ಪ್ರದೇಶಗಳಾಗಿ ಮಾರ್ಪಾಡಾಗಿವೆ.
 ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮಕ್ಕೆ ಹೊಂದಿಕೊಂಡಿರುವ ಗೆರಿಗಿಗುಂಡು ಇಂಥಹ ಸೋಜಿಕ ಸ್ಥಳಗಳಲ್ಲೊಂದು. ಊಹಿಸಲಸಾಧ್ಯವಾದ ಬೃಹದಾಕಾರದ ಕಲ್ಲಿನ ಗುಂಡು ಇಲ್ಲಿ ಗುಡ್ಡದ ಮೇಲ್ಭಾಗದಲ್ಲಿದೆ. ಈ ಗುಡ್ಡದಲ್ಲಿ ಹಲವಾರು ದೊಡ್ಡ ಆಕಾರದ ಕಲ್ಲುಗುಂಡುಗಳಿದ್ದರೂ ಈ ಗುಂಡು ಮಾತ್ರ ಅತಿ ದೊಡ್ಡದು. ಇದನ್ನು ಹಿಂದಿನಿಂದಲೂ ಇಲ್ಲಿನವರು ಗೆರಿಗಿಗುಂಡು ಎಂದೇ ಕರೆಯುತ್ತಾರೆ.
 ಈ ಬೃಹತ್ತಾದ ಗೆರಿಗಿಗುಂಡಿನ ಮೇಲೆ ಹಿಂದೆ ಪಾಳೆಗಾರರು ನಿರ್ಮಿಸಿದ್ದ ಬುರುಜಿನ ಕೆಲ ಭಾಗವಿದ್ದು, ಇದೊಂದು ಅವರ ರಕ್ಷಣಾ ಸ್ಥಾನವಾಗಿರಬಹುದೆಂಬುದಕ್ಕೆ ಪುರಾವೆ ಸಿಗುತ್ತದೆ. ಇಲ್ಲಿ ಮನುಷ್ಯನ ಮುಖದ ಆಕಾರದ ಕಲ್ಲು ಬಂಡೆಗಳು, ತ್ರಿಕೋನಾಕಾರದ್ದು, ಇನ್ನೇನು ಬೀಳುತ್ತದೆಯೋ ಎಂದು ಗಾಬರಿಹುಟ್ಟಿಸುವಂತದ್ದು ಮುಂತಾದ ವಿವಿಧ ರೂಪಗಳನ್ನು ಗುರುತಿಸಬಹುದಾದ ಬಂಡೆಕಲ್ಲುಗಳಿವೆ.
 ಗ್ರಾಮಸ್ಥರು ಗೆರಿಗಿಗುಂಡಿನ ಕೆಳಗೆ ಗೆರಿಗಿಲಮ್ಮ ದೇವಾಲಯವನ್ನು ನಿರ್ಮಿಸಿದ್ದಾರೆ. ಗೆರಿಗಿಗುಂಡು ಮುಂಭಾಗದಲ್ಲಿ ಮುಜರಾಯಿ ಇಲಾಖಾ ವ್ಯಾಪ್ತಿಗೆ ಬರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವಿದೆ. ಇಲ್ಲಿ ಪ್ರತಿ ವರ್ಷ ಕಾಮನ ಹುಣ್ಣಿಮೆಯಂದು ವಿಶೇಷ ಜಾತ್ರೆಯನ್ನು ನಡೆಸಲಾಗುತ್ತದೆ.

 
ಮನುಷ್ಯನ ಮುಖವನ್ನು ಹೊಲುವ ಕಲ್ಲುಗಳು.


‘ಪಾಳೇಗಾರರು ಇಲ್ಲಿ ಕೋಟೆಯನ್ನು ನಿರ್ಮಿಸಿದ್ದರಂತೆ. ಅವರು ಇಲ್ಲಿ ಏಳು ಕೊಪ್ಪರಿಗೆ ನಿಧಿ ನಿಕ್ಷೇಪವನ್ನು ಇಟ್ಟಿರುವರೆಂದು ದಂತಕಥೆಗಳು ಈಗಲೂ ಗ್ರಾಮದ ಹಿರಿಯರ ಬಾಯಲ್ಲಿ ಕೇಳಬಹುದಾಗಿದೆ. ಪಾಳೇಗಾರರು ಗಂಜಿಗುಂಟೆಯ ಸುತ್ತಮುತ್ತಲೂ ಏಳು ಕೆರೆಗಳನ್ನು ನಿರ್ಮಿಸಿದ್ದರು. ಇಲ್ಲಿ ಬಹಳ ಜನರಿದ್ದು ಪ್ರತಿದಿನ ಅನ್ನ ಬಸಿದ ಗಂಜಿ ಒಂದು ದೊಡ್ಡ ಗುಣಿಯಲ್ಲಿ ಶೇಖರಣೆಯಾಗುತ್ತಿತ್ತು. ಅದರಿಂದಲೇ ಈ ಪ್ರದೇಶಕ್ಕೆ ಗಂಜಿಗುಂಟೆ ಎಂಬ ಹೆಸರು ಬಂತು. ಇಲಿನ ಗೆರಿಗಿಗುಂಡಿನ ಕೆಳಗೆ ಒಂದು ದೊಡ್ಡ ಗವಿಯಿದೆ. ಇಲಿ ಸಾಧುಗಳು ವಾಸವಿರುತ್ತಾರೆ’ ಎಂದು ಗಂಜಿಗುಂಟೆಯ ಶಾಲಾ ಶಿಕ್ಷಕ ಎಲ್.ವಿ.ವೆಂಕಟರೆಡ್ಡಿ ತಿಳಿಸಿದರು.


 
ವಾಲಿ ನಿಂತಿರುವ ಬಂಡೆಯ ಮೇಲೂ ಕಲ್ಲಿನ ಗೋಪುರ.

‘ವರ್ಷಕ್ಕೊಮ್ಮೆ ಮಾಘ ಪೌರ್ಣಮಿಯಂದು ಗುರುವಂದನಾ ಹಾಗೂ ಭಜನೆ ಕಾರ್ಯಕ್ರಮವನ್ನು ಗ್ರಾಮಸ್ಥರು ಹಮ್ಮಿಕೊಳ್ಳುತ್ತಾರೆ. ಇಲ್ಲಿಗೆ ಹತ್ತಿರವಿರುವ ತಲಕಾಯಲಬೆಟ್ಟದಲ್ಲಿ ನಡೆಯುವ ರಥೋತ್ಸವದ ದಿನ ಇಲ್ಲಿನ ಗೆರಿಗಿಗುಂಡು ಗವಿಯಲ್ಲಿ ಅನ್ನಸಂತರ್ಪಣೆಯನ್ನು ಮಾಡಲಾಗುತ್ತದೆ. ಇಲ್ಲಿನ ವಾತಾವರಣವಂತೂ ಅದ್ಭುತವಾಗಿದೆ. ಮೇಲಿನಿಂದ ಕಾಣುವ ಭೂದೃಶ್ಯಗಳು ಕಣ್ಣಿಗೆ ಆನಂದ ನೀಡಿದರೆ, ಹೊರಗೆ ಎಷ್ಟೇ ಬಿಸಿಯಿದ್ದರೂ ಗೆರಿಗಿಗುಂಡಿನ ಕೆಳಗೆ ಸದಾ ತಂಪಾಗಿದ್ದು ಜೀವಕ್ಕೆ ತಂಪೆನಿಸುವಂತಿರುತ್ತದೆ. ಗುಡ್ಡ ಹತ್ತಿ ಇಲ್ಲಿನ ಪ್ರಶಾಂತ ವಾತಾವರಣದಲ್ಲಿ ಕೆಲಹೊತ್ತು ಇದು ಬಂದರೆ ದೇಹ ಮತ್ತು ಮನಸ್ಸಿಗೆ ನವಚೈತನ್ಯ ಬರುತ್ತದೆ’ ಎಂದು ಅವರು ವಿವರಿಸಿದರು.

Friday, July 13, 2012

ಕೀಟ ಬೇಟೆ

ಚೀಲದಲ್ಲಿ ತುಂಬಿರುವ ಈಸುಳ್ಳಿಗಳು.

ಮಾನವನ ಆಹಾರಪದ್ಧತಿಯಲ್ಲಿ ಕೀಟಭಕ್ಷಣೆಯೂ ಸೇರಿದೆ. ಎಲೆಗಳನ್ನು ಸೇರಿಸಿ ಗೂಡು ಕಟ್ಟುವ ಕಟ್ಟಿರುವೆ, ಜೇನು ಹುಟ್ಟಿನಲ್ಲಿರುವ ಹಾಲುಳ ಎನ್ನುವ ಬಿಳಿಹುಳಗಳು, ಅತ್ತಿ ಹಣ್ಣಿನಲ್ಲಿನ ಹುಳುಗಳು ಹಾಗೂ ಮಳೆಹುಳುಗಳು ಗ್ರಾಮೀಣ ಭಾಗದ ಜನರ ಆಹಾರದ ಒಂದು ಭಾಗವಾಗಿದೆ. ರುಚಿ ಮತ್ತು ಪ್ರೋಟೀನ್ ಅಂಶ ಹೆಚ್ಚಿರುವುದರಿಂದ ಹಲವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ ಮತ್ತು ಮಕ್ಕಳಿಗೂ ತಿನ್ನಿಸುತ್ತಾರೆ.
 ಈಚೆಗೆ ಬಿದ್ದ ಭರಣಿ ಮಳೆಗೆ ನೆಲದಾಳದಿಂದ ರೆಕ್ಕೆ ಮೂಡಿದೊಡನೆ ಮೇಲೇಳುತ್ತಿದ್ದ ಗೆದ್ದಲು ಹುಳುಗಳನ್ನು ಶಿಡ್ಲಘಟ್ಟ ತಾಲ್ಲೂಕಿನ ಕಾಚನಾಯಕನಹಳ್ಳಿಯ ಹೊರವಲಯದಲ್ಲಿ ಪಂಜಿನ ಸಹಾಯದಿಂದ ಗ್ರಾಮಸ್ಥರು ಹಿಡಿದು ಗುಡ್ಡೆ ಹಾಕಿ ಚೀಲದೊಳಕ್ಕೆ ತುಂಬುತ್ತಿದ್ದರು. ಅತ್ಯಂತ ರುಚಿಕರ ಆಹಾರವೆಂಬುದು ಇದನ್ನು ಗ್ರಾಮೀಣರು ಇಷ್ಟಪಡುತ್ತಾರೆ.
 ರೆಕ್ಕೆಬಂದಿರುವ ಗೆದ್ದಲು ಹುಳುಗಳನ್ನು ಗ್ರಾಮೀಣರು ಈಸುಳ್ಳಿ, ಈಸಿಳ್ಳು, ಈಸೀಗಳು ಎಂದು ಕರೆಯುತ್ತಾರೆ. ಹಲವಾರು ಹಳ್ಳಿಗಳಲ್ಲಿ ಮಳೆ ಬಂದು ನಿಂತ ದಿನ ಹುಳುಗಳನ್ನು ಹಿಡಿಯುವುಕ್ಕೇ ಸಮಯ ಮೀಸಲಿಡುತ್ತಾರೆ. ಬೆಳಕಿನೆಡೆಗೆ ಆಕರ್ಷಿತವಾಗುವ ಈ ಹುಳುಗಳನ್ನು ಜನರು ಪಂಜು, ಲೈಟು, ಬೆಂಕಿ, ಲ್ಯಾಟೀನು ಮುಂತಾದವುಗಳಿಂದ ಆಕರ್ಷಿಸಿ ಒಟ್ಟುಗೂಡಿಸಿ ಸಂಗ್ರಹಿಸುತ್ತಾರೆ.
ಅಶ್ವಿನಿ, ಭರಣಿ ಮತ್ತು ಕೃತಿಕಾ ಮಳೆಯ ಸಂದರ್ಭದಲ್ಲಿ ಮಾತ್ರ ಸಿಗುವ ಈ ಮಳೆಹುಳುಗಳ ಸಂಗ್ರಹಣೆಗೆ ಹಲವು ಉಪಾಯಗಳನ್ನೂ ಮಾಡುತ್ತಾರೆ. ನೆಲಮಟ್ಟದಲ್ಲಿ ನೀರಿರುವ ಮಡಿಕೆಯನ್ನು ಹೂತಿಟ್ಟು ಅದರ ಬಾಯಿಯ ಬಳಿ ಬೆಳಕಿನ ಮೂಲವನ್ನಿಟ್ಟು ಕೆಲವರು ಹಿಡಿದರೆ, ಕೆಲವರು ಹುತ್ತವನ್ನು ಹುಡುಕಿ ಅದರ ಮೇಲೆ ಸೊಪ್ಪಿನ ಗುಡಾರವನ್ನು ನಿರ್ಮಿಸಿ ಬೆಳಕಿನ ಮೂಲವನ್ನಿಟ್ಟು ಹುಳುಗಳನ್ನು ಸಂಗ್ರಹಿಸುವರು. ಕೆಲವು ಹಳ್ಳಿಗಳಲ್ಲಿ ಒಂದು ಲೋಟ ಹುಳುಗಳನ್ನು ೮ ರಿಂದ ೧೦ ರೂಗಳಿಗೆ ಮಾರಾಟವನ್ನೂ ಮಾಡುವುದೂ ಉಂಟು.

 
ಶಿಡ್ಲಘಟ್ಟ ತಾಲ್ಲೂಕಿನ ಕಾಚನಾಯಕನಹಳ್ಳಿಯ ಹೊರವಲಯದಲ್ಲಿ ಈಚೆಗೆ ಬಿದ್ದ ಭರಣಿ ಮಳೆಗೆ ನೆಲದಾಳದಿಂದ ರೆಕ್ಕೆ ಮೂಡಿದೊಡನೆ ಮೇಲೇಳುತ್ತಿದ್ದ ಗೆದ್ದಲುಹುಳುಗಳನ್ನು ಪಂಜಿನ ಸಹಾಯದಿಂದ ಗ್ರಾಮಸ್ಥರು ಹಿಡಿದು ಗುಡ್ಡೆ ಹಾಕಿ ಚೀಲದೊಳಕ್ಕೆ ತುಂಬುತ್ತಿರುವುದು. 


‘ಈ ಮಳೆಹುಳುಗಳನ್ನು ಸಂಗ್ರಹಿಸುವುದು ಒಂದು ಭಾಗವಾದರೆ ಇದರ ಸಂಸ್ಕರಣೆ ಮತ್ತೊಂದು ಮುಖ್ಯ ಭಾಗ. ರೆಕ್ಕೆ ಕಳಚಿರುವ ಹುಳುಗಳನ್ನು ಬತ್ತದ ಜರಡಿಯಲ್ಲಿ ಹಾಕಿ ಕಲಕಿ ರೆಕ್ಕೆ ಹಾಗೂ ಇನ್ನಿತರ ಕಸದಿಂದ ಬೇರ್ಪಡಿಸುತ್ತಾರೆ. ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಬಾಣಲಿಯಲ್ಲಿ ಹದವಾಗಿ ಹುರಿಯಲಾಗುತ್ತದೆ. ಇದಕ್ಕೆ ಬೆಳ್ಳುಳ್ಳಿ, ಉಪ್ಪು ಮೆಣಸು ಸೇರಿಸಿದರೆ ರುಚಿಕಟ್ಟಾದ ಆಹಾರವಾಗುತ್ತವೆ. ಇದರಲ್ಲಿ ಯಥೇಚ್ಛವಾಗಿ ಪ್ರೋಟೀನ್ ಅಂಶವಿರುವುದರಿಂದ ಮಕ್ಕಳಿಗೂ ಒಳ್ಳೆಯದು. ಹಿಂದೆ ಎಳೆಯ ಮಕ್ಕಳು ಬಡಕಲಾಗಿದ್ದರೆ ಅಂತಹ ಮಕ್ಕಳಿಗೆ ಹುತ್ತದ ತಳದಲ್ಲಿರುವ ದೊಡ್ಡ ಆಕಾರದ ರಾಣಿ ಗೆದ್ದಲು ಹುಳುವನ್ನು ತಂದು ಮಕ್ಕಳಿಗೆ ತಿನ್ನಿಸುವ ಪರಿಪಾಠವೂ ಇತ್ತು. ನಾವಂತೂ ಪ್ರತಿವರ್ಷ ಈಸಿಳ್ಳುಗಳನ್ನು ಹಿಡಿದು ತಿನ್ನುತ್ತೇವೆ’ ಎನ್ನುತ್ತಾರೆ ಕಾಚನಾಯಕನಹಳ್ಳಿಯ ಶ್ರೀನಿವಾಸ್.
 ಮನುಷ್ಯರಿಗಷ್ಟೇ ಅಲ್ಲದೆ ಕೋತಿಗಳಿಗೂ ಈಸುಳ್ಳಿಗಳು ಬಹಳ ಪ್ರಿಯ. ಓತಿಕ್ಯಾತ, ಕಾಗೆ ಮುಂತಾದ ಹುಳು ಭಕ್ಷಕ ಜೀವಿಗಳಿಗೆಲ್ಲಾ ಇದು ಬಹು ಮುಖ್ಯವಾದ ಆಹಾರವಾಗಿದೆ.
 ಸುಮಾರು ಐವತ್ತು ಮಿಲಿಯನ್ ವರ್ಷಗಳಿಂದಲೂ ಈ ಭೂಮಿಯಲ್ಲಿ ವಾಸಿಸುತ್ತಿರುವ ಸಂಘಜೀವಿಗಳಾದ ಗೆದ್ದಲುಗಳು ಮಾನವನಿಗಿಂತ ಮುಂಚಿನಿಂದಲೇ ತಮ್ಮ ಜೀವನಕ್ರಮವನ್ನು ರೂಪಿಸಿಕೊಂಡಿವೆ. ಇವುಗಳಲ್ಲಿ ೩೦೦೦ ಪ್ರಬೇಧಗಳಿವೆ. ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳಲ್ಲಿ ಇವು ಕಂಡುಬರುತ್ತವೆ. ಮರಮುಟ್ಟುಗಳಲ್ಲಿರುವ ಸೆಲ್ಯುಲೋಸ್ ಇದರ ಪ್ರಮುಖ ಆಹಾರ.
 ಗೆದ್ದಲು ಹುಳುಗಳಲ್ಲಿ ಮೊಟ್ಟೆಯಿಡುವ ರಾಣಿಯಲ್ಲದೆ, ರಾಜವಂಶ, ಕೆಲಸಗಾರ ಮತ್ತು ಸೈನಿಕ ಎಂಬ ಮೂರು ವರ್ಗಗಳಿವೆ. ಸಂತಾನೋತ್ಪತ್ತಿ ನಡೆಸುವುದಷ್ಟೇ ರಾಜವಂಶದ ಹುಳುಗಳ ಕೆಲಸ. ಬೇಸಿಗೆಯ ಕಡೆಯಲ್ಲಿ ಮೊದಲ ಮಳೆ ಬಿದ್ದೊಡನೆಯೇ ಈ ರಾಜವಂಶದ ಹುಳುಗಳಿಗೆ ರೆಕ್ಕೆ ಮೂಡುತ್ತವೆ. ಹೊಸ ಸಂಸಾರ ಹೂಡಲು ತಯಾರಾದ ವಯಸ್ಸಿಗೆ ಬಂದ ಗೆದ್ದಲು ಹುಳುಗಳಿಗೆ ರೆಕ್ಕೆ ಮೂಡಿ ಗೂಡಿನಿಂದ ಹೊರಕ್ಕೆ ಬರುತ್ತವೆ. ಇದು ಅವುಗಳ ಜೀವನದ ಮೊದಲ ಮತ್ತು ಕಡೆಯ ಹಾರಾಟ. ಸೂಕ್ತ ಸಂಗಾತಿಯನ್ನರಸಿ ನಡೆಸುವ ಕಟ್ಟ ಕಡೆಯ ಹಾರಾಟವಿದು.
 ಸೂಕ್ತ ಸಂಗಾತಿ ಸಿಕ್ಕೊಡನೆ, ತಮ್ಮ ರೆಕ್ಕೆ ಕಳಚಿಕೊಂಡು ಇವು ಸೂಕ್ತ ಸ್ಥಳ ಹುಡುಕಿ ತಮ್ಮ ಸಂಸಾರವನ್ನು ಪ್ರಾರಂಭಿಸುತ್ತವೆ. ಹೆಣ್ಣು ಮೊಟ್ಟೆಯಿಡತೊಗುತ್ತದೆ. ದಿನಕ್ಕೆ ಸಾವಿರಾರು ಮೊಟ್ಟೆಯಿಡುವ ಹೆಣ್ಣು ಹುಳ ಶೀಘ್ರವಾಗಿ ತನ್ನದೇ ಯಶಸ್ವಿ ಕುಟುಂಬದ ಒಡತಿಯಾಗುತ್ತದೆ. ಮಣ್ಣಿನ ಫಲವತ್ತತೆ, ಅಂತರ್ಜಲ ಹೆಚ್ಚಿಸುವಲ್ಲಿ, ಹಲವಾರು ಪ್ರಾಣಿಗಳ ಆಹಾರವಾಗಿ ಉಪಯುಕ್ತ ಜೀವಿಯಾಗಿದೆ.

ಬೇಟೆಯ ನೆನಪುಗಳು


ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿಯ ಹಕ್ಕಿಪಿಕ್ಕಿಕಾಲೋನಿಯಲ್ಲಿ ಹಕ್ಕಿಪಿಕ್ಕಿಗಳ ಬಳಿ ಇರುವ, ಹಿಂದೆ ಅವರು ಬೇಟೆಗಾಗಿ ಬಳಸುತ್ತಿದ್ದ ಬೇಟೆಯ ಪರಿಕರಗಳು.

“ವಾಕ್ಕೂ ಸೊಕ್ಕು ಕಡಮ ಭಿಂಗು” ಎಂದರೆ ಗೌಜಹಕ್ಕಿಯ ಬಲೆ ಎಂದರ್ಥ. “ಖಡಾ ಬಲ್ಡಾಪರ್ ಟಾಂಗ್‌ಚೀರಿ ಪಡೀಸ್” ಎನ್ನುವುದು ಪುರಲಕ್ಕಿ ಬಲೆಯನ್ನು. ಈ ನುಡಿಗಟ್ಟುಗಳು ವಾಗ್ರಿ ಭಾಷೆಯಲ್ಲಿವೆ. ಇದು ಹಕ್ಕಿಪಿಕ್ಕಿಗಳ ಭಾಷೆ. ಹಕ್ಕಿಪಿಕ್ಕಿ ಎಂಬ ಹೆಸರು ಇವರ ಸಾಂಪ್ರದಾಯಿಕ ಕಸುಬಾದ ಹಕ್ಕಿಗಳನ್ನು ಹಿಡಿಯುವುದರಿಂದ ಬಂದಿದೆ. ಹಿಂದೆ ಬೇಟೆ ಮತ್ತು ಆಹಾರ ಸಂಗ್ರಹಣೆಯ ಮೂಲಕ ವ್ಯವಸ್ಥಿತವಾಗಿ ಸಂಘಟಿತವಾಗುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತಾ ಜೀವನ ರೂಪಿಸಿಕೊಂಡಿದ್ದ ಸಮಯದಲ್ಲಿ ಇವರು ಶುದ್ಧ ಅಲೆಮಾರಿಗಳಾಗಿದ್ದರು. ಹಕ್ಕಿಪಿಕ್ಕಿಯರು ಹಿಂದೆ ಬೇಟೆಗಾಗಿ ಬಳಸುತ್ತಿದ್ದ ಚಿತ್ರ ವಿಚಿತ್ರವಾದ ಬಲೆಗಳು, ಪೌದುಗಳು, ಹಕ್ಕಿಗಳನ್ನು ಹಿಡಿಯಲು ಬಳಸುತ್ತಿದ್ದ ಪರಿಕರಗಳು ಈಗಲೂ ಅವರ ಬಳಿ ಪಳೆಯುಳಿಕೆಯಂತಿವೆ. ಹಕ್ಕಿಪಿಕ್ಕಿಗಳು ಹಿಂದೆ ಗಿಡಮೂಲಿಕೆಗಳ ಜನಕರಾಗಿದ್ದರು. ನೋವುಗಳಿಗೆ ಮಸಾಜ್ ಮಾಡಲು ಬಳಸುವ ವಿವಿಧ ಎಣ್ಣೆಗಳನ್ನು ಇವರು ತಯಾರಿಸುತ್ತಿದ್ದರು. ಉಡದ ಎಣ್ಣೆ, ನವಿಲಿನ ಎಣ್ಣೆ, ಬೆಳ್ಳುಳ್ಳಿ ಎಣ್ಣೆ ಇತ್ಯಾದಿ ಇವರ ಸಂಗ್ರಹದಲ್ಲಿರುತ್ತಿದ್ದವು. ಕಾಡು ಉತ್ಪನ್ನಗಳಾದ ಗೆಡ್ಡೆ ಗೆಣಸು ಹಾಗೂ ಜೇನನನ್ನೂ ಸಹ ಮಾರಾಟ ಮಾಡುತ್ತಿದ್ದರು.
ಬೇಟೆಯಿಂದ ವ್ಯವಸಾಯಕ್ಕೆ ಮಾರ್ಪಾಡಾದ ನಂತರ ನೆಲೆ ನಿಂತು ಒಟ್ಟಾಗಿ ಬಾಳುವುದರೊಂದಿಗೆ ತಮ್ಮದೇ ಆದ ಸಾಮಾಜಿಕ ವ್ಯವಸ್ಥೆಯನ್ನು ಕಾಲಾಂತರದಲ್ಲಿ ಇವರು ರೂಪಿಸಿಕೊಂಡಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿಯಲ್ಲಿ ಹಕ್ಕಿಪಿಕ್ಕಿಕಾಲೋನಿ ಮತ್ತು ಬಾಳೇಗೌಡನಹಳ್ಳಿ ಎಂಬ ಎರಡು ಗ್ರಾಮಗಳಲ್ಲಿ ಇವರು ನೆಲೆಯನ್ನು ಕಂಡುಕೊಂಡಿದ್ದಾರೆ. ಇಂದು ಹಕ್ಕಿಪಿಕ್ಕಿಯರ ಸಂಪ್ರದಾಯಗಳು ಬಹುವಾಗಿ ಕಣ್ಮರೆಯಾಗುತ್ತಿವೆ. ಇವರ ಆರಂಭದ ದಿನಗಳಲ್ಲಿ ಬೇಟೆಯಾಡುವುದೇ ಮೂಲ ಕಸುಬಾಗಿತ್ತು. ಇವರು ತಮ್ಮ ಮೂಲಸ್ಥಾನವಾದ ಮಧ್ಯ ಭಾರತದ ವಿಂದ್ಯಪರ್ವತದಿಂದ, ಗುಜರಾತ್, ರಾಜಾಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕಗಳತ್ತ ಬೇಟೆಯನ್ನು ಅರಸುತ್ತಾ ಬಂದವರು. ಆಡುಮುಟ್ಟದ ಸೊಪ್ಪು ಹೇಗೆ ಇಲ್ಲವೋ, ಅದೇ ರೀತಿಯಲ್ಲಿ ಹಕ್ಕಿಪಿಕ್ಕಿಯರು ತಿನ್ನದೇ ಇರುವ ಸೊಪ್ಪು ಇಲ್ಲವೆನ್ನಬಹುದು. ನಾಡಿಗಿಂತ ಕಾಡಿನ ಜೀವನವೇ ಹೆಚ್ಚಾಗಿ ಅನುಭವಿಸಿದ ಈ ಬುಡಕಟ್ಟು ಕಾಡಿನಲ್ಲಿರುವ ಎಲ್ಲಾ ಸೊಪ್ಪುಗಳನ್ನು ತಮ್ಮ ಆಹಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಇವರ ಮಾಂಸಾಹಾರದ ಅಡುಗೆಯ ಬಗ್ಗೆ ತಿಳಿಯುವುದರಿಂದ ಇವರು ಎಂಥೆಂಥಹ ಬೇಟೆಯನ್ನಾಡುತ್ತಿದ್ದರು ಎಂಬುದರ ಬಗ್ಗೆಯೂ ತಿಳಿದುಬರುತ್ತದೆ. ತಿತರೋನಿ(ಗೌಜಲಹಕ್ಕಿ), ಗೇರಾಜನಿ(ಪುರಲಕ್ಕಿ), ನ್ಹೋರಿನಿ(ಗುಳ್ಳೇನರಿ), ಮುಂಗಶ್ನಿ(ಮುಂಗುಸಿ), ಗೋಯಿನಿ(ಉಡ), ಗಿಲೋರಿನಿ(ಅಳಿಲು), ಚಕತಾಂಡೋನಿ(ಹಾಲಕ್ಕಿ), ಗುಗ್ಗೂನಿ(ಗೂಬೆ), ಢೋಳ್ನಿ(ಸೊರಕ್ಕಿ), ಕೊಂಗಾನಿ(ಬಿಳಿಕೊಕ್ಕರೆ), ಶಾಮ್ಮುರಗನಿ(ಕರಿತಲೆಯ ಬಾತುಕೋಳಿ), ಖೇಕಡನಿ(ಏಡಿ), ಮಾತ್ಸುಲುನಿ(ಮೀನು), ಗೂಬ್ನಿ(ಹೆಗ್ಗಣ), ಲಕ್ಕಡ್‌ಪೋಡನಿ(ಮರಕುಟಿಕಹಕ್ಕಿ), ಪರ್ಯಾವೋನಿ(ಪಾರಿವಾಳ), ಹರಣ್ಣಿ(ಚಿಗರೆ), ದಾಂತಿ(ಮೊಲ), ಡುಕರ್ನಿ(ಕಾಡುಹಂದಿ), ಭೋಕಡಾನಿ(ಆಡು), ಮುರಗಾನಿ(ಕೋಳಿ), ಮೇಂಡೋನಿ(ಕುರಿ), ಭೇಖೋನಿ(ಕೋಣ), ಬಿಲ್ಲಾಡಾನಿ(ಕಾಡುಬೆಕ್ಕು). ಈ ರೀತಿಯ ಇವರ ಆಹಾರ ಕ್ರಮ ಹಿಂದೆ ಇದ್ದ ಇವರ ಅಲೆಮಾರಿತನ, ಕಾಡಿನ ಜೀವನ ಮತ್ತು ಇವರ ಆರ್ಥಿಕ ಪರಿಸ್ಥಿತಿಯನ್ನೂ ತಿಳಿಸುತ್ತದೆ.

ಹಕ್ಕಿಗಳನ್ನು ಹಿಡಿಯಲು ಹೇಗೆ ಪೌದುಗಳನ್ನು ಹರಡಬೇಕೆಂದು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿರುವುದು.

‘ಹಿಂದೆ ಬೇಟೆಯೇ ನಮ್ಮ ಬದುಕಾಗಿತ್ತು. ಆಗ ನಾವು ಬಹುತೇಕ ಪ್ರಾಣಿ ಪಕ್ಷಿಗಳನ್ನು ಜೀವ ಸಹಿತ ಹಿಡಿಯಲು ಪ್ರಯತ್ನಿಸುತ್ತಿದ್ದೆವು. ಕೌಜುಗ ಜಾತಿಯ ನೆಲದ ಮೇಲೆ ಚಲಿಸುವ ಹಕ್ಕಿಗಳನ್ನು ಪೌದುಗಳನ್ನು ಬಳಸಿ ಹಿಡಿಯುತ್ತಿದ್ದೆವು. ಮೊಲ, ಮುಂಗುಸಿಯಂಥಹ ಪ್ರಾಣಿಗಳನ್ನು ಬೋನುಗಳನ್ನು ಬಳಸಿ ಹಿಡಿಯುತ್ತಿದ್ದೆವು. ಕೆಲವು ಪ್ರಾಣಿಗಳನ್ನು ಹಿಡಿಯಲು ಮೊಟ್ಟೆ, ಒಣಮೀನು, ಮಾಂಸದ ವಾಸನೆಗೆ ಆಕರ್ಷಿಸಿ ಬಲೆಗೆ ಬೀಳಿಸುತ್ತಿದ್ದೆವು. ಬೋನನ್ನು ಇಟ್ಟು ಹಸುವಿನೊಂದಿಗೆ ತಲೆಗೆ ಟೋಪಿ ಮಾಡಿಕೊಂಡು ಕರುವಿನಂತೆ ನಟಿಸುತ್ತಾ ಬೋನಿಗೆ ಓಡಿಸಿ ಕೌಜುಗಗಳನ್ನು ಹಿಡಿಯುತ್ತಿದ್ದೆವು. ಆದರೆ ಸರ್ಕಾರ ಬೇಟೆಯನ್ನು ನಿಷೇಧಿಸಿರುವುದರಿಂದ ನಾವು ಈಗ ವ್ಯವಸಾಯ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಕೈಕಸುಬನ್ನು ಮಾಡಿ ಜೀವನ ನಡೆಸುತ್ತೇವೆ’ ಎನ್ನುತ್ತಾರೆ ಹಕ್ಕಿಪಿಕ್ಕಿಯರಲ್ಲಿ ಹಿರಿಯರಾದ ವೈರ್‌ಮಣಿ.

Tuesday, June 5, 2012

ಹದಿನೆಂಟು ಕುಲ ಚಿಹ್ನೆಗಳಿಂದ ಕೂಡಿರುವ ದೇಶಮುದ್ರೆ ಗಂಟೆಬಟ್ಟಲು


 ಶಿಡ್ಲಘಟ್ಟ ತಾಲ್ಲೂಕಿನ ಬೈಯಪ್ಪನಹಳ್ಳಿಯ ಚನ್ನಪ್ಪ ಹದಿನೆಂಟು ಕುಲ ಚಿಹ್ನೆಗಳಿಂದ ಕೂಡಿರುವ ಬಸವ, ಲಿಂಗಮುದ್ರೆಯಿರುವ ದೇಶಮುದ್ರೆ ಗಂಟೆಬಟ್ಟಲನ್ನು ಪ್ರದರ್ಶಿಸುತ್ತಿರುವುದು.

ದೇಶದ ಮೂಲನಿವಾಸಿಗಳಾಗಿ ದ್ರಾವಿಡ ಸಂಸ್ಕೃತಿಯನ್ನು ಹೊಂದಿದವರು ಮತ್ತು ಶಿವನನ್ನು ತಮ್ಮ ಆರಾಧ್ಯ ದೈವವನ್ನಾಗಿ ಪಡೆದುಕೊಂಡು ಆದಿಶೈವಭಕ್ತರಾಗಿ ಬದುಕುತ್ತಿರುವವರು ಛಲವಾದಿ ಸಮುದಾಯದವರು. ಪುರಾತನ ಜನಾಂಗವಾದ ಛಲವಾದಿಗಳು ಇಂದಿಗೂ ಶಿವಭಕ್ತರಾಗಿ ಜೀವಿಸುತ್ತಿದ್ದು, ಆಚಾರ ನಡವಳಿಕೆಗಳಲ್ಲಿ ಶೈವ ಸಂಪ್ರದಾಯವನ್ನು ಬಿಡದೆ ಅನುಸರಿಸುತ್ತಿದ್ದಾರೆ. ಅದರ ಸ್ಪಷ್ಟ ಕುರುಹುಗಳು ಇಂದಿಗೂ ಅವರಲ್ಲಿ ಉಳಿದಿವೆ. ಹಿಂದೆ ಈ ದಲಿತ ಜನಾಂಗದವರು ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು, ಕಹಳೆ, ಸೂರ್ಯವಾದನ ಮತ್ತು ಚಂದ್ರವಾದನಗಳನ್ನು ನುಡಿಸಲು ಹಕ್ಕುದಾರಾಗಿದ್ದರಿಂದ ವಿವಿಧ ಶೈವ ಸಂಪ್ರದಾಯಗಳಲ್ಲಿ ಭಾಗಿಗಳಾಗುತ್ತಿದ್ದರು. ಕಾಲಕ್ರಮದಲ್ಲಿ ಈ ಸಂಪ್ರದಾಯಗಳು ಕಡಿಮೆಯಾದಂತೆ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲುಗಳು ವಿರಳವಾದವು. ತಾಲ್ಲೂಕಿನ ಬೈಯಪ್ಪನಹಳ್ಳಿಯ ಚನ್ನಪ್ಪ ಇನ್ನೂ ತಮ್ಮ ಸಂಪ್ರದಾಯದ ಚಿಹ್ನೆಗಳು ಮತ್ತು ಕುರುಹಾದ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು ಕಾಪಾಡಿಕೊಂಡು ಬಂದಿದ್ದಾರೆ. ‘೧೯೩೯ ರಲ್ಲಿ ಪಂಚಲೋಹದಿಂದ ತಯಾರಿಸಲಾದ ಸುಮಾರು ೧೦ ಕೆಜಿಗೂ ಹೆಚ್ಚು ತೂಕದ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು ಬುರುಡುಗುಂಟೆಯ ವೀರಶೈವ ಹಿರಿಯ ನಾಗಣ್ಣ ಶೆಟ್ಟರು ಎಲರ ಒಳಿತಿಗಾಗಿ ಮಾಡಿಸಿಕೊಟ್ಟಿರುವುದಾಗಿ ಇದರ ಮೇಲೆ ಕೆತ್ತಲಾಗಿದೆ. ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಇದನ್ನು ನಮ್ಮ ಜನಾಂಗದ ಶುಭ ಕಾರ್ಯಗಳಲ್ಲಿ ಮೊದಲು ಪೂಜಿಸುತ್ತೇವೆ. ನಮ್ಮ ಜಿಲ್ಲೆಯಲ್ಲಿ ಅಲ್ಲಲ್ಲಿ ಕೆಲವರು ಇನ್ನೂ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು ಉಳಿಸಿಕೊಂಡಿದ್ದಾರೆ’ ಎಂದು ಬೈಯಪ್ಪನಹಳ್ಳಿಯ ಚನ್ನಪ್ಪ ತಿಳಿಸಿದರು.



 
ಶಿವನ ಮುಂದೆ ಬಸವ ಹಾಗೂ ಚಿಹ್ನೆಗಳಿಂದ ಕೂಡಿರುವ ದೇಶಮುದ್ರೆ ಗಂಟೆಬಟ್ಟಲು.

  ‘ಛಲವಾದಿ ಜನಾಂಗದವರು ಹದಿನೆಂಟು ಪಣಕ್ಕೆ ಸೇರಿದ ಶೆಟ್ಟಿಪಟ್ಟಣಸ್ಥರು. ಸಂಪ್ರದಾಯಸ್ಥ ವೀರಶೈವರೂ ಶೆಟ್ಟಿ ಬಣಜಿಗರಾದಿಯಾಗಿ ಅವರಲ್ಲಿನ ಜನನ ಮರಣ ಮತ್ತು ಎಲ್ಲಾ ಶುಭಕಾರ್ಯಗಳಿಗೆ ಛಲವಾದಿಯನ್ನು ಕರೆಯುತ್ತಾರೆ. ಅವರು ಲಿಂಗ, ಬಸವ ಸಮೇತದ ಗಂಟೆಬಟ್ಟಲಿನೊಡನೆ ಬರುತ್ತಾರೆ. ಅವರಿಂದ ಅವುಗಳ ಪ್ರಥಮ ಪೂಜೆ ಮಾಡಿಸುವ ರೂಢಿಯಿದೆ. ಅಲ್ಲದೆ ಮೆರವಣಿಗೆ, ಸ್ಮಶಾನಯಾತ್ರೆಗೂ ಗಂಟೆಬಟ್ಟಲಿನ ಛಲವಾದಿಯೂ ಮುಂದೆ ಹೋಗುವರು. ಹದಿನೆಂಟು ಪಣಗಳಾದ ಬಣಜಿಗ, ಒಕ್ಕಲಿಗ, ಗಾಣಿಗ, ರಂಗಾರೆ, ಲಾಡ, ಗುಜರಾತಿ, ಕಾಮಾಟಿ, ಜೈನ ಅಥವಾ ಕೋಮಟಿ, ಕುರುಬ, ಕುಂಬಾರ, ಅಗಸ, ಬೆಸ್ತ, ಪದ್ಮಸಾಲಿ, ನಾಯಿಂದ, ಉಪ್ಪಾರ, ಚಿತ್ರಗಾರ, ಗೊಲ್ಲ, ಛಲವಾದಿ ಎಂಬ ಪಣ ಸಮಾಜದ ಪಟ್ಟಿಯಲ್ಲಿ ಬಣಜಿಗರು ಹದಿನೆಂಟು ಪಣದ ಕುಲದವರ ನಾಯಕರಾಗಿರುತ್ತಾರೆ. ಆ ಕುಲದವರ ಕುಲ ಚಿಹ್ನೆಗಳಾದ ನೆಗಿಲು. ತಕ್ಕಡಿ, ಚಕ್ರ, ಕತ್ತರಿ, ಗುದ್ದಿ, ಕತ್ತಿ ಮುಂತಾದ ಹದಿನೆಂಟು ಕುಲ ಚಿಹ್ನೆಗಳಿಂದ ಕೂಡಿರುವ ಗಂಟೆ ಬಟ್ಟಲನ್ನು ‘ದೇಶಮುದ್ರೆ ಗಂಟೆಬಟ್ಟಲು’ ಎನ್ನುವರು. ಈ ಕುಲದವರ ಶುಭ ಕಾರ್ಯಕ್ರಮಗಳಲ್ಲಿ ಇದನ್ನು ಹೊರುವ ಅಧಿಕಾರವು ಛಲವಾದಿ ಕುಲಸ್ಥರದಾಗಿರುತ್ತದೆ. ಛಲವಾದಿಗಳು ಇಂದಿಗೂ ಈ ಕುಲಾಚಾರವನ್ನು ಹಲವು ಕಡೆ ನಡೆಸುತ್ತಾ ಬರುತ್ತಿದ್ದಾರೆ. ಪುರಾಣದಲ್ಲಿ ಶಿವನನ್ನು ಅವಮಾನಗಳಿಸಲು ದಕ್ಷಬ್ರಹ್ಮನು ಯಾಗ ಮಾಡಿ ಶಿವನನ್ನು ಆಹ್ವಾನಿಸಲಿಲ್ಲ. ಆಗ ತನ್ನ ತಂದೆಯಿಂದ ತನ್ನ ಗಂಡನು ಅವಮಾನಹೊಂದುವುದನ್ನು ಸಹಿಸದ ದಾಕ್ಷಾಯಿಣಿಯು ಯಾಗದ ಅಗ್ನಿಗೆ ಆಹುತಿಯಾಗಿ ಪ್ರಾಣವನ್ನು ತ್ಯಜಿಸಿದಾಗ ಶಿವನ ಕೋಪಕ್ಕೆ ಜನಿಸಿದ್ದು ಛಲದಂಕಮಲ್ಲ, ಮಹಾಕಾಳಿ ಮತ್ತು ವೀರಭದ್ರ. ಇವರು ದಕ್ಷಬ್ರಹ್ಮನನ್ನು ಸಂಹರಿಸಿದರು. ಯಜ್ಞಕೊಂಡದಲ್ಲಿ ಅಸುನೀಗಿದ ತನ್ನ ಪತ್ನಿಯ ಎಲ್ಲಾ ಕರ್ಮಕಾರ್ಯಗಳನ್ನು ಶಿವನ ಅಣತಿಯಂತೆ ಛಲದಂಕಮಲ್ಲನು ಮಾಡಿದನು. ಇದರಿಂದ ತೃಪ್ತಗೊಂಡ ಶಿವನು ನಂದಿಯ ಮುಂಭಾಗದಲ್ಲಿ ಗಂಟೆಬಟ್ಟಲು, ಲಿಂಗಮುದ್ರೆಗಳನ್ನು ಸ್ಥಾಪಿಸಿ ಅವುಗಳನ್ನು ಛಲದಂಕಮಲ್ಲನ ವಂಶಜರು ಹಿಡಿಯಬೇಕೆಂದು ಆಶೀರ್ವದಿಸಿದನು ಎಂದು ಪುರಾಣದಿಂದ ತಿಳಿದುಬರುತ್ತದೆ. ಇಂದಿಗೂ ಆ ವಂಶಸ್ಥರು ಈ ಕಾರ್ಯವನ್ನು ಮಾಡುತ್ತಿದ್ದಾರೆ. ಪುರಾಣ ಪ್ರಸಿದ್ಧ ಛಲದಂಕಮಲ್ಲನ ವಂಶಸ್ಥರನ್ನು ಛಲವಾದಿ ಜನಾಂಗವೆಂದು ಕರೆಯುವರು. ಈ ಜನಾಂಗದವರು ಆಂಧ್ರಪ್ರದೇಶ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಈ ಜನಾಂಗದವರನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಸಲಾದೋಳ್ಳು, ಚಲುವಾದುಲು, ಮಾಲೋಳ್ಳು, ಹೊಲೆಯರು, ಬಲಗೈಯವರು, ಆದಿಕರ್ನಾಟಕ, ಆದಿದ್ರಾವಿಡ-ಮುಂತಾದ ಹೆಸರುಗಳಿಂದ ಪ್ರಾದೇಶಿಕವಾಗಿ ಕರೆಯುತ್ತಾರೆ. ಆದರೆ ಎಲ್ಲಾ ಹೊಲೆಯರು ಛಲವಾದಿಗಳಲ್ಲ, ಆದರೆ ಛಲವಾದಿಗಳೆಲ್ಲ ಹೊಲೆಯರೆ ಆಗಿದ್ದಾರೆ. ಇವರನ್ನು ಪ್ರಾದೇಶಿಕವಾಗಿ ’ಸಲಾದೋಳ್ಳು’ಎಂದು ಕರೆಯುವುದು ರೂಢಿ ಯಾಗಿದೆ’ ಎನ್ನುತ್ತಾರೆ ಛಲವಾದಿಗಳ ಬಗ್ಗೆ ಸಂಶೋಧನೆ ಮಾಡಿ ಡಾಕ್ಟರೇಟ್ ಗಳಿಸಿರುವ ಉಪನ್ಯಾಸಕ ಡಾ.ಜಿ.ಶ್ರೀನಿವಾಸಯ್ಯ.

Monday, April 23, 2012

ಬರಗಾಲದಲ್ಲೂ ಮೂಡಿವೆ ಚಿಗುರೆಲೆ

ಶಿಡ್ಲಘಟ್ಟ ತಾಲ್ಲೂಕಿನ ಪಟರೇನಹಳ್ಳಿ ಅರಣ್ಯ ಪ್ರದೇಶದ ಹುಣಸೆ ತೋಪಿನಲ್ಲಿ ಚಿಗುರೊಡೆದಿರುವ ಹುಣಸೆಮರ.

ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಬಳಿಯಿರುವ ಪಟರೇನಹಳ್ಳಿ ಅರಣ್ಯ ಪ್ರದೇಶದ ಸುಮಾರು ೪೦ ಎಕರೆಯಷ್ಟು ಹುಣಸೆ ತೋಪಿನಲ್ಲಿ ಚಿಗುರೆಲೆಗಳು ಮೂಡಿವೆ. ಈ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಒಣಹುಲ್ಲು ಸೇರಿದಂತೆ ಬಹಳಷ್ಟು ಮರಗಿಡಗಳಿಗೆ ಹಾನಿಯಾಗಿತ್ತು. ಪ್ರಕೃತಿಯ ನಿಯಮವೆಂಬಂತೆ ಈಗ ಒಣಗಿಡದಲ್ಲಿ ಚಿಗುರಿನ ಸಂಭ್ರಮ. ಕೆಲವು ಮರಗಳಲ್ಲಿ ಕೆಂಪು ಮಿಶ್ರಿತ ಚಿಗುರೆಲೆಗಳು ಮೂಡುತ್ತಿದ್ದರೆ, ಇನ್ನು ಕೆಲವು ಮರಗಳಲ್ಲಿ ಚಿಗುರಿನೊಂದಿಗೆ ಹೂಗಳೂ ಮೂಡಿದ್ದು ಮಕರಂದ ಹೀರುವ ದುಂಬಿಗಳು ಮತ್ತು ಮಧುಪಾನ ಮಾಡುವ ಸೂರಕ್ಕಿಗಳಿಗೆ ಸುಗ್ಗಿ ತಂದಿವೆ. ಆಲ, ಅರಳಿ ಮೊದಲಾದ ಕೆಂಪು ಚಿಗುರು ಬಿಡುವ ಸಸ್ಯಗಳ ಸಾಲಿನಲ್ಲಿ ಹುಣಸೆಯೂ ಒಂದು. ಹುಣಸೆಹಣ್ಣು ದುಬಾರಿಯಾಗಿರುವ ಕಾಲದಲ್ಲಿ ಬಡವರು ಹುಣಸೆ ಚಿಗುರನ್ನು ಆಶ್ರಯಿಸಿ ಕೆಲವು ದಿನಗಳ ಮಟ್ಟಿಗೆ ಹುಣಸೆಹಣ್ಣಿಗೆ ಆಗುವ ವೆಚ್ಚವನ್ನು ಉಳಿಸುತ್ತಾರೆ. ‘ಹುಣಸೆ ತವರಿಗೆ ಹೋಗಲ್ಲ’ ಎಂಬ ಮಾತು ಜನಪದರಲ್ಲಿದೆ. ಹುಣಸೆ ಕಾಯನ್ನು ಉದುರಿಸುತ್ತಿದ್ದಂತೆಯೇ ಎಲೆ ಉದುರುತ್ತದೆ. ಅದಾದ ಸ್ವಲ್ಪ ದಿನಗಳಿಗೇ ಚಿಗುರೆಲೆಗಳು ಮೂಡುತ್ತವೆ. ಚಿಗುರಿನೊಂದಿಗೇ ಹೂಗಳು ಮೂಡುತ್ತವೆ. ಅದರ ಹಿಂದೆಯೇ ಈಚುಗಳು ಮೂಡುತ್ತವೆ. ನಂತರ ಕಾಯಿಯಾಗುವ ಸರದಿ. ಹೀಗೆ ನಡೆಯುವ ಜೀವನ ಚಕ್ರದಲ್ಲಿ ಅದರ ತವರಿಗೆ ಹಿಂದಿರುಗುವ ಆಸೆ ಈಡೇರುವುದಿಲ್ಲವಂತೆ. ಹಿಂದೆ ದೂರದ ಊರುಗಳಿಗೆ ಹೋಗಲು ಇದ್ದ ತೊಂದರೆಗಳು ಮತ್ತು ರೈತರ ಮನೆಗಳಲ್ಲಿನ ಶ್ರಮ ಜೀವನದಲ್ಲಿ ಹೆಣ್ಣುಮಕ್ಕಳು ತವರಿಗೆ ಹಲವಾರು ವರ್ಷಗಳು ಹೋಗಲಾಗುತ್ತಿರಲಿಲ್ಲ. ಆಗ ಹುಣಸೆ ಮರಕ್ಕೆ ಅವರ ಜೀವನವನ್ನು ಹೋಲಿಸಿ ನುಡಿಗಟ್ಟನ್ನೇ ಸೃಷ್ಟಿಸಿದ್ದರು ಜನಪದರು.
ಹುಣಸೆ ಚಿಗುರು.

 ಹುಣಸೆ ಮರವನ್ನು ದುಡಿಮೆಗೆ ಹೋಲಿಸುವುದರೊಂದಿಗೆ ಹಲವಾರು ಉಪಯುಕ್ತತೆಗೆ ಬಳಸಲಾಗುತ್ತದೆ. ಹುಣಸೆ ಕಾಯಿಯಲ್ಲಿ ತೊಕ್ಕನ್ನು ತಯಾರಿಸುತ್ತಾರೆ. ಜೀರಿಗೆ, ಮೆಣಸು, ಉಪ್ಪು, ಇಂಗು, ಹುಣಸೆ ಹಣ್ಣಿನೊಂದಿಗೆ ಬೆರೆಸಿ ಪಿತ್ತಕ್ಕೆ ಔಷಧಿ ತಯಾರಿಸಲಾಗುತ್ತದೆ. ಹುಣಸೆ ಚಿಗುರು ಒಗರು ಮತ್ತು ಹುಳಿಯ ರುಚಿ ಹೊಂದಿರುತ್ತದೆ. ಮಾವಿನ ಕಾಯಿಯ ಓಟೆ ಮೂಡುವ ಸಮಯದಲ್ಲಿ ಹುಣಸೆ ಚಿಗುರಲು ಪ್ರಾರಂಭವಾಗುತ್ತದೆ. ಇದರ ಕೆಂಪನೆಯ ಚಿಗುರು ನೋಡಲು ಬಲು ಆಕರ್ಷಕವಾಗಿರುತ್ತದೆ. ಈಗಲೂ ಗ್ರಾಮೀಣ ಭಾಗದಲ್ಲಿ ಹುಣಸೆ ಚಿಗುರನ್ನು ವಿವಿಧ ಅಡುಗೆಗಳಲ್ಲಿ ಬಳಸುತ್ತಾರೆ. ಅವರೆಬೇಳೆ ಹುಣಸೆ ಚಿಗುರಿನ ತೊವ್ವೆ, ಆಲೂಗಡ್ಡೆ ಬದನೆಕಾಯಿ ಹುಣಸೆಚಿಗುರಿನ ಹುಳಿ, ನುಗ್ಗೆಕಾಯಿಯ ಉಷ್ಣದ ಅಂಶವನ್ನು ಕಡಿಮೆ ಮಾಡಲು ಬೇಳೆಯೊಂದಿಗೆ ಹುಣಸೆ ಚಿಗುರು ಹಾಕಿ ಸಾರು ತಯಾರಿಸುತ್ತಾರೆ. ಹುಣಸೆ ಚಿಗುರನ್ನು ಒಣಗಿಸಿಟ್ಟುಕೊಂಡೂ ಬಳಸುತ್ತಾರೆ. ಹುಣಸೆ ಚಿಗುರನ್ನು ಸ್ವಲ್ಪ ಎಣ್ಣೆಯಲ್ಲಿ ಕರಿದು ಒಗ್ಗರಣೆ ಹಾಕಿ ಅನ್ನದೊಂದಿಗೆ ಕಲಸಿ ತಿನ್ನುತ್ತಾರೆ. ತುಪ್ಪದಲ್ಲಿ ಹುರಿದರೆ ಇದರ ರುಚಿ ಇನ್ನೂ ಹೆಚ್ಚು. ಹಾಗೆಯೇ ಹುಣಸೆ ಹೂವನ್ನೂ ಸಹ.

Sunday, April 22, 2012

ಎಲೆ ಅಡಿಕೆ ಚೀಲದಲ್ಲಿ ಬದುಕಿನ ಕ್ಷಣಗಳು


ಎಲೆ ಅಡಿಕೆಯ ಚೀಲ ಅಥವಾ ತಿತ್ತಿ.

 ಗ್ರಾಮೀಣ ಪ್ರದೇಶದಲ್ಲಿ ಜೀವನದ ಅವಿಭಾಜ್ಯ ಅಂಗವಾಗಿ ಹಲವಾರು ಸಂಗತಿಗಳಿರುತ್ತವೆ. ಅವುಗಳಲ್ಲಿ ಎಲೆ ಅಡಿಕೆಯೂ ಸೇರಿದೆ. ಬಾಯಿ ಕೆಂಪಾಗಿಸಿ, ಹಲ್ಲನ್ನು ಬಣ್ಣವಾಗಿಸ್ದಿದರೂ ಎಲೆ ಅಡಿಕೆಯ ಮೋಹವನ್ನು ಬಿಡುವುದಿಲ್ಲ. ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮೀಣ ಪರಿಸರದಲ್ಲಿ ಮೊದಲು ಎಲ್ಲರ ಬಳಿಯೂ ಇರುತ್ತಿದ್ದ ಎಲೆ ಅಡಿಕೆ ಚೀಲ ನಿಡಾನವಾಗಿ ಕಣ್ಮರೆಯಾಗುತ್ತಿದೆ. ಎಲೆ ಅಡಿಕೆ ವಿವಿಧ ರೂಪಗಳಲ್ಲಿ ನಾಡಿನಾದ್ಯಂತ ವ್ಯಾಪಿಸಿದೆ. ಬಾಯಿಯಲ್ಲಿ ಹಾಕಿಕೊಂಡು ಮೆಲ್ಲುವುದರ ಜೊತೆಗೆ ಹುಟ್ಟು-ಸಾವಿನ ನಡುವಿನ ಜೀವನದ ಮಹತ್ವದ ಘಟ್ಟಗಳಲ್ಲಿ ಇದರ ಪ್ರಮುಖ ಪಾತ್ರವಿದೆ. ಪಾನ್‌ಬೀಡಾ, ಪಾನ್‌ಪರಾಗ್ ಮತ್ತಿತರ ಥಳಕು-ಬಳುಕಿಗೆ ಈಗಿನ ಜನರು ಮೊರೆ ಹೋದರೂ ವಿಶೇಷ ಸಂದರ್ಭಗಳಲ್ಲಿ ಎಲೆ ಅಡಿಕೆ ಹಾಕದಿರುವವರು ಕಡಿಮೆ. ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಭೋಜನಾ ನಂತರ ಎಲೆ ಅಡಿಕೆ ಪ್ರತ್ಯಕ್ಷವಾಗುತ್ತದೆ. ಮಂಗಳ ಕಾರ್ಯಗಳಲ್ಲಿ ತಾಂಬೂಲ ಕೊಟ್ಟು ತಾಂಬೂಲ ಹಾಕಿಕೊಂಡು ಹೋಗಿ ಎನ್ನುವುದು ರೂಢಿ. ನವಾಬರು ಇದನ್ನು ಬೀಡಾ ಎಂದೇ ಪ್ರಸಿದ್ಧಿಗೆ ತಂದರು. ಮೈಸೂರು ಎಲೆ, ಬನಾರಸ್, ಮದ್ರಾಸ್, ಕಲ್ಕತ್ತ, ನಾಟಿ ಎಲೆಗಳು ಜನಪ್ರಿಯವಾಗಿವೆ. ಎಲೆ ಅಡಿಕೆಗಳ ಅಭ್ಯಾಸವಿರುವ ಗ್ರಾಮೀಣರು ಮೊಬೈಲ್ ಫೋನ್‌ಗಳಂತೆ ತಮ್ಮೊಟ್ಟಿಗೇ ಇಟ್ಟುಕೊಳ್ಳಲು ಪರಿಕರವೊಂದನ್ನು ಸೃಷ್ಟಿಸಿಕೊಂಡಿದ್ದರು. ಅದುವೇ ಎಲೆ ಅಡಿಕೆ ಚೀಲ. ಸುಲಭವಾಗಿ ಬಳಸುವಂತೆ, ಎಲ್ಲೆ ಹೋಗಲಿ ಜೊತೆಯಲ್ಲಿ ಇಟ್ಟುಕೊಳ್ಳುವಂತೆ ಇದನ್ನು ರೂಪಿಸಿರುತ್ತಿದ್ದರು. ಇದಕ್ಕೆ ತಿತ್ತಿ, ಸಂಚಿ ಎಂದೆಲ್ಲಾ ಕರೆಯುತ್ತಾರೆ.
ಹಲ್ಲಿಲ್ಲದ್ದರಿಂದ ಕುಟ್ಟಾಣಿಯಲ್ಲಿ ಎಲೆ ಅಡಿಕೆ ಸುಣ್ಣ ಬೆರೆಸಿ ಕುಟ್ಟಿಕೊಳ್ಳುತ್ತಿರುವ ರಾಗಿಮಾಕಲಹಳ್ಳಿಯ ರಾಮಕ್ಕ.

ಕನ್ನಡದ ಕವಿಯತ್ರಿ ಹೊನ್ನಮ್ಮ ಈ ಎಲೆ ಅಡಿಕೆ ಚೀಲದಿಂದಾಗಿ ಸಂಚಿ ಹೊನ್ನಮ್ಮ ಎಂದೇ ಕರೆಸಿಕೊಂಡಿದ್ದಾರೆ. ಈ ಸಂಚಿ ಅಥವಾ ತಿತ್ತಿಯಲ್ಲಿ ಬಹುಪಯೋಗಿ ವಿಭಾಗಗಳಿವೆ. ಸುಣ್ಣದ ಡಬ್ಬಿಗೊಂದು ಜಾಗ, ಹಲ್ಲುಕಡ್ಡಿಗೊಂದು ಜಾಗ, ಪಕ್ಕದಲ್ಲಿ ಎಲೆ ಇಡುವ ಅರೆ, ಅಡಿಕೆ ಇಡಲು ಒಂದು ಪದರವಿರುತ್ತದೆ. ಒಂದು ಅಡಿ ಪದರ ಉದವಿದ್ದು ಸೊಂಟಕ್ಕೆ ಸಿಕ್ಕಿಸಿಕೊಳ್ಳಲು ಅನುಕೂಲಕರವಾಗಿರುತ್ತದೆ. ಇದರಲ್ಲಿ ಕಡ್ಡಿಪುಡಿ(ತಂಬಾಕು ಪುಡಿ) ಇಡಲೂ ಸ್ಥಳವುಂಟು. ಹಲ್ಲಿಲ್ಲದವರು ಕುಟ್ಟಾಣಿಯನ್ನೂ ಇದರಲ್ಲಿಟ್ಟುಕೊಳ್ಳುತ್ತಾರೆ. ಕೆಲವು ತಿತ್ತಿಗಳಿಗೆ ಉದ್ದನೆಯ ಪದರದ ತುದಿಗೆ ಪೊರಕೆ ಕಡ್ಡಿ ಗಾತ್ರದ ದಾರ ಹಾಕಿರುತ್ತಾರೆ. ತಿತ್ತಿಯನ್ನು ಗುಂಡಗೆ ಸುತ್ತಿ ಆ ದಾರದಿಂದ ಸುತ್ತಿ ಅದನ್ನು ಮಹಿಳೆಯರು ಸೊಂಟದ ಬಳಿ ಬಟ್ಟೆಗೆ ಸಿಕ್ಕಿಸಿ ಇಟ್ಟುಕೊಳ್ಳುತ್ತಿದ್ದರು. ಇದು ಅನಕ್ಷರಸ್ಥರ ಹಣದ ಚೀಲವೂ ಹೌದು. ಸೂಜಿ ದಾರ ಸೇರಿದಂತೆ ಅನೇಕ ಸಣ್ಣ ಪುಟ್ಟ ಪರಿಕರಗಳನ್ನೂ ಇದರಲ್ಲಿ ಇಟ್ಟಿರುತ್ತಾರೆ. ಇನ್ನೂ ಹಳ್ಳಿಗಳಲ್ಲಿ ಅಲ್ಲಲ್ಲಿ ಈ ತಿತ್ತಿಗಳು ಕಂಡು ಬರುತ್ತಿವೆ. ಇನ್ನೂ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ. ಸಂತೆಗಳಲ್ಲಿ, ವೃದ್ಧರ ಬಳಿ ಕಾಣಸಿಗುತ್ತದೆ. ಒಂದು ತಿತ್ತಿಯಲ್ಲಿನ ಎಲೆ ಅಡಿಕೆ ತನ್ನ ಆಯುಷ್ಯದಲ್ಲಿ ನೂರಾರು ಬಾಯಿಗಳನ್ನು ಸೇರುತ್ತದೆ. ಹೆಂಗಸರು ಮೊದಲು ಒಂದೆಡೆ ಸೇರಿದಾಗ ಈ ತಿತ್ತಿಯು ಅವರ ಸ್ನೇಹದ ದ್ಯೋತಕವಾಗಿರುತ್ತಿತ್ತು. ಎಲೆ ಅಡಿಕೆ ಹಂಚಿಕೊಂಡು ನಂತರ ಮಾತಿಗೆ ತೊಡಗುತ್ತಿದ್ದರು. ‘ನನಗೆ ಮೊದಲಿನಿಂದಲೂ ಎಲೆ ಅಡಿಕೆಯ ಅಭ್ಯಾಸವಾಗಿಬಿಟ್ಟಿದೆ. ಅದಿಲ್ಲದೆ ಇರಲಾರೆ. ಹೊಗೆ ಸೊಪ್ಪಿನ ದಂಟನ್ನು ತಂದು ಕುಟ್ಟಿ ಪುಡಿ ಮಾಡಿಟ್ಟುಕೊಂಡು ಬಳಸುತ್ತೇನೆ. ವಯಸ್ಸಾಗಿರುವುದರಿಂದ ಹಲ್ಲಿಲ್ಲ. ಅದಕ್ಕಾಗಿ ಕುಟ್ಟಾಣಿಯಲ್ಲಿ ಎಲೆ ಅಡಿಕೆ ಸುಣ್ಣ ಎಲ್ಲ ಬೆರೆಸಿ ಕುಟ್ಟಿ ನಂತರ ತಿನ್ನುತ್ತೇನೆ’ ಎನ್ನುತ್ತಾರೆ ರಾಗಿಮಾಕಲಹಳ್ಳಿಯ ರಾಮಕ್ಕ.

Friday, April 13, 2012

ಶಿಡ್ಲಘಟ್ಟದಲ್ಲಿ "ಗಾಣ" ಗ್ರಾಮ


ಶಿಡ್ಲಘಟ್ಟ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ಗಾಣದಿಂದ ಎಣ್ಣೆ ತಯಾರಿಸುತ್ತಿರುವುದು.


ಆಧುನಿಕ ತಂತ್ರಜ್ಞಾನದಿಂದಾಗಿ ಹಲವಾರು ಪರಂಪರಾಗತ ಉದ್ದಿಮೆಗಳು ಕಣ್ಮರೆಯಾಗುತ್ತಿವೆ. ಅವುಗಳಲ್ಲಿ ಎಣ್ಣೆ ಗಾಣಗಳೂ ಒಂದು. ಹಿಂದೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿದ್ದ ಗಾಣಗಳು ಈಗ ಕೇವಲ ಪಳೆಯುಳಿಕೆಗಳಾಗಿ ಉಳಿದಿವೆ. ಸಂಪ್ರದಾಯಿಕ ಎಣ್ಣೆ ಗಾಣಗಳು ಎಣ್ಣೆ ಕಾರ್ಖಾನೆಯೊಂದಿಗೆ ಯಾವ ತರಹದ ಪೈಪೋಟಿಗಳನ್ನು ನಡೆಸಲಸಾಧ್ಯವಾಗಿವೆ. ಆದರೆ ಶಿಡ್ಲಘಟ್ಟ ತಾಲ್ಲೂಕಿನ ಶೆಟ್ಟಹಳ್ಳಿಯಲ್ಲಿ ಇನ್ನೂ ಹಳೆಯ ಗಾಣವನ್ನೇ ನಂಬಿ ಜೀವನ ನಡೆಸುತ್ತಿರುವುದು ವಿಶೇಷ. ಎಲ್ಲಾ ಗಾಣಗಳೂ ನಿಂತುಹೋಗಿದ್ದರೂ ಶೆಟ್ಟಹಳ್ಳಿ ನಾರಾಯಣಪ್ಪ ಅವರು ಮಾತ್ರ ಪರಂಪರೆಯ ಪಳೆಯುಳಿಕೆಯಾಗಿ ಮುಂದುವರೆಸಿದ್ದಾರೆ.
ಒಂದು ವಸ್ತುವನ್ನು ಹಿಂಡಿ, ಅದಕ್ಕೆ ದ್ರವರೂಪ ನೀಡುವುದು ಗಾಣದ ಮೂಲ ಉದ್ದೇಶ. ಮೂಲತಃ ಕೊಬ್ಬರಿ, ಕಡಲೆ, ಹರಳು, ಹೊನ್ನೆ, ಎಳ್ಳು, ಔಡಲ, ಕುಸುಬಿ ಮುಂತಾದ ಎಣ್ಣೆ ಹಿಂಡುವ ಸಾಧನವಾಗಿದ್ದ ಗಾಣ, ನಂತರದ ದಿನಗಳಲ್ಲಿ ಕಬ್ಬನ್ನು ಅರೆಯುವ ಸಾಧನವಾಗಿ ರೂಪುಗೊಂಡು ಆಲೆಮನೆ ಎಂಬ ಹೆಸರು ಪಡೆಯಿತು.

ಗಾಣದ ವಿನ್ಯಾಸವು ಮೊದಲು ಸುಮಾರು ೯ ರಿಂದ ೧೦ ಅಡಿ ವ್ಯಾಸದ ಚಪ್ಪಟೆಯಾದ ಗಟ್ಟಿ ನೆಲ ನಿರ್ಮಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಇಲಿ ತೈಲ ಬೀಜಗಳನ್ನು ಹಾಕಲು ದೊಡ್ಡ ಒರಳನ್ನು ಇಡಲಾಗುತ್ತದೆ. ಅದಕ್ಕೆ ಗಾಣದ ಮರವನ್ನು ಕಟ್ಟುತ್ತಾರೆ. ಕಬ್ಬಿಣದ ಬಳೆಯ ಅಂಚನ್ನುಳ್ಳ ಮರದ ಒನಕೆಯನ್ನು ಗಾಣದ ಒರಳಿನ ಸೂಕ್ತವಾದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿರುತ್ತಾರೆ. ಗಾಣದ ಮರ ಹಾಗೂ ಒರಳಿನ ಕೆಳಭಾಗಕ್ಕೂ ಹೊಂದಿಕೊಂಡಿರುವಂತೆ ಕತ್ತರಿ ಹಲಗೆಯೊಂದನ್ನು ನಿರ್ಮಿಸಿ ಆ ಹಲಗೆಯ ಮೇಲೆ ಭಾರವಾದ ಕಲ್ಲುಗಳನ್ನು ಹೇರಿರುತ್ತಾರೆ.
ಕತ್ತರಿ ಹಲಗೆಯು ತನ್ನೊಂದು ಹಗ್ಗದಿಂದ ಗಾಣದ ಮಧ್ಯಭಾಗವನ್ನು ಆವರಿಸಿಕೊಂಡು ಭದ್ರವಾಗಿರುತ್ತದೆ. ನಂತರ ಒನಕೆಗೆ ಹೊಂದಿಕೊಂಡು ಆಸರೆಯಾಗಿರುವಂತೆಯೂ ಬೀಜಗಳನ್ನು ಅರೆಯುವ ಪ್ರಧಾನ ಕ್ರಿಯೆಯು ಸುಸೂತ್ರವಾಗುವಂತೆ ಮಲ್ಲಗಂಬವೊಂದನ್ನು ಸ್ವಲ್ಪ ಓರೆಯಾಗಿ ನಿಲ್ಲಿಸಲಾಗುತ್ತದೆ. ಹೀಗೆ ಸ್ಥಾನ ಗ್ರಹಣ ಮಾಡಿದ ಈ ಮಲ್ಲಗಂಬವು ಮಧ್ಯದಲ್ಲಿ ಬಲವಾದ ಹಗ್ಗದ ಜೋಡಣೆಯನ್ನು ಹೊಂದಿರುತ್ತದೆ. ಈ ಎಲ್ಲಾ ಸಿದ್ಧತೆಗಳನ್ನು ಒಳಗೊಂಡು ರಚನೆಯಾದ ಎಣ್ಣೆಗಾಣದ ಕ್ರಿಯೆಯಿಂದ ಕೊಬ್ಬರಿ, ಔಡಲ, ಶೇಂಗಾ ಮುಂತಾದ ತೈಲ ಬೀಜಗಳ ಎಣ್ಣೆ ಉತ್ಪಾದನೆಯಾಗುತ್ತದೆ. ಇಂಥಾ ಪ್ರತಿಭಾಪೂರ್ಣವಾದ ಗಾಣದ ಕರಕುಶಲ ಕಲೆಯು ಬಡಿಗನ ಕುಶಾಗ್ರಮತಿಯನ್ನು ಪ್ರತಿನಿಧಿಸುತ್ತದೆ. ನೋಡಲು ಲಿಂಗದ ಆಕಾರದ ಈ ಗಾಣ ತುಂಬಾ ಕಲಾತ್ಮಕತೆಯಿಂದ ಕೂಡಿದುದಾಗಿದೆ.


ಎಣ್ಣೆ ಕಾಳುಗಳನ್ನು ಬೆಳಗಿನ ಅವಧಿಯಲ್ಲಿ ಗಾಣಕ್ಕೆ ಹಾಕಿ ಪುಡಿ ಮಾಡಿ ಜರಡಿ ಹಿಡಿಯುತ್ತಿರುವುದು.


‘ನಮ್ಮ ಗಾಣದ ಕಲ್ಲು ಎಷ್ಟು ಹಳೆಯದೋ ತಿಳಿಯದು. ನಾನು ಹುಟ್ಟುವ ಮೊದಲಿಂದಲೂ ಇತ್ತು. ವರ್ಷದ ಬಿಸಿಲಿರುವ ಮೂರ್ನಾಕು ತಿಂಗಳಿನಲ್ಲಿ ಮಾತ್ರ ಈ ಕಸುಬು ಚೆನ್ನಾಗಿ ನಡೆಯುತ್ತದೆ. ಮೊದಲು ನಮ್ಮ ಹಳ್ಳಿಯಲ್ಲಿ ಎಂಟು ಗಾಣಗಳಿದ್ದವು. ಈಗ ಎಲ್ಲರೂ ನಿಲ್ಲಿಸಿಬಿಟ್ಟಿದ್ದಾರೆ. ಅವರಲ್ಲಿ ಕೆಲವರು ಯಂತ್ರಗಳಿಂದ ತಯಾರಿಸಿದ ಎಣ್ಣೆಯನ್ನು ಮಾರುವುದನ್ನು ಕಸುಬನ್ನಾಗಿಸಿಕೊಂಡಿದ್ದಾರೆ. ಮೊದಲಾದರೆ ಅರಳು, ಕಡಲೆ, ಇಪ್ಪೆ, ಎಳ್ಳು, ಕೊಬ್ಬರಿ ಮೊದಲಾದವುಗಳಿಂದ ಎಣ್ಣೆ ತೆಗೆಯುತ್ತಿದ್ದೆವು. ಆದರೆ ಈಗ ಹೆಚ್ಚಾಗಿ ಹೊಂಗೆಯನ್ನೇ ನಂಬಿದ್ದೇವೆ’ ಎನ್ನುತ್ತಾರೆ ಹಿರಿಯರಾದ ನಾರಾಯಣಪ್ಪ.

‘ಒಣಗಿದ ಎಣ್ಣೆ ಕಾಳುಗಳನ್ನು ಬೆಳಗಿನ ಅವಧಿಯಲ್ಲಿ ಗಾಣಕ್ಕೆ ಹಾಕಿ ಪುಡಿ ಮಾಡಿ ಜರಡಿ ಹಿಡಿಯುತ್ತೇವೆ. ನಂತರ ಪುಡಿಗೆ ಸ್ವಲ್ಪ ನೀರು ಹಾಕಿ ಹದವಾಗಿ ಉಂಡೆ ಮಾಡಿಟ್ಟು ಅವನ್ನು ಸಂಜೆ ವೇಳೆಗೆ ಗಾಣಕ್ಕೆ ಹಾಕಿ ಎಣ್ಣೆ ತೆಗೆಯುತ್ತೇವೆ. ೫೦ ಕೆಜಿ ಬೀಜದಿಂದ ೧೦ ಕೆಜಿ ಎಣ್ಣೆ ತಯಾರಾಗುತ್ತದೆ ಮತ್ತು ೩೦ ಕೆಜಿ ಹಿಂಡಿ ಸಿಗುತ್ತದೆ. ಹಿಂಡಿ ತೋಟಗಳಿಗೆ ಒಳ್ಳೆಯ ಗೊಬ್ಬರ. ಒಂದು ಕೆಜಿ ಎಣ್ಣೆ ೬೫ ರಿಂದ ೭೦ ರೂಗೆ ಮಾರಾಟವಾದರೆ, ಹಿಂಡಿ ಒಂದು ಕೆಜಿಯನ್ನು ೧೬ ರೂಗಳಂತೆ ಮಾರುತ್ತೇವೆ. ಹೊಂಗೆ ಬೀಜವನ್ನು ನಾವು ರೈತರಿಂದ ಒಂದು ಸೇರಿಗೆ ೨೦೦ ಗ್ರಾಂ ಎಣ್ಣೆ ನೀಡಿ ಪಡೆಯುತ್ತೇವೆ. ಅದರಿಂದ ಸಿಗುವ ಚಕ್ಕೆ ಅಥವಾ ಹಿಂಡಿಯೇ ನಮಗೆ ಲಾಭ. ಯಂತ್ರದಿಂದ ತಯಾರಾದ ಎಣ್ಣೆಗಿಂತ ಗಾಣದಲ್ಲಿ ತೆಗೆಯುವ ಎಣ್ಣೆ ಗುಣಮಟ್ಟದಲ್ಲಿ ಚೆನ್ನಾಗಿರುತ್ತದೆಂದು ಕೆಲವರು ನಮ್ಮಲ್ಲೇ ಕೊಳ್ಳುತ್ತಾರೆ. ಗಾಣಕ್ಕೆ ಕೆಲಸವಿರದ ಸಮಯದಲ್ಲಿ ನಾವು ವ್ಯವಸಾಯ ಮತ್ತು ಪಶುಪಾಲನೆಯಲ್ಲಿ ತೊಡಗುತ್ತೇವೆ’ ಎಂದು ಅವರು ಹೇಳಿದರು.


ಗಾಣದಿಂದ ಹೊರಬರುತ್ತಿರುವ ಎಣ್ಣೆ.


‘ಗುಂಡು ತೋಪುಗಳು ಕರಗುತ್ತಿವೆ. ಅವುಗಳ್ಲಲಿ ಬೆಳೆಯುತ್ತಿದ್ದ ಹೊಂಗೆ ಇಪ್ಪೆ, ಬೇವು ಮೊದಲಾದ ಮರಗಳಿಂದ ಸಿಗುತ್ತಿದ್ದ ಎಣ್ಣೆ ಬೀಜಗಳ ಲಭ್ಯತೆ ಕಡಿಮೆಯಾಗುತ್ತಿದೆ. ಅಕಸ್ಮಾತ್ ಎಣ್ಣೆ ಬೀಜಗಳು ಸಿಕ್ಕರೂ ಕೊಂಡು ಶೇಖರಿಸುವಷ್ಟು ಹಣ ಗಾಣದವರ ಬಳಿ ಇರುವುದಿಲ್ಲ. ಹೀಗಾಗಿ ಗಾಣಗಳು ಸ್ಥಗಿತಗೊಂಡು, ದುಡಿಯುವ ಸಂಪತ್ತು ವ್ಯರ್ಥವಾಗಿದೆ. ಸರ್ಕಾರ ಎಣ್ಣೆ ಬೀಜಗಳನ್ನು ಒದಗಿಸುವುದರಿಂದ ಈ ಪಾರಂಪರಿಕ ವೃತ್ತಿಯ ಅವಸಾನವನ್ನು ತಡೆಯಲು ಪ್ರಯತ್ನಿಸಬೇಕು’ ಎಂದು ಗ್ರಾಮದ ಹಿರಿಯರೊಬ್ಬರು ತಿಳಿಸಿದರು.


ತಯಾರಾದ ಎಣ್ಣೆಯನ್ನು ಡಬ್ಬಿಗೆ ಸುರಿಯುತ್ತಿರುವುದು.


ಕರ್ನಾಟಕದಲ್ಲಿ ಎಣ್ಣೆ ತೆಗೆಯುವ ಸಮುದಾಯವನ್ನು ಗಾಣಿಗ ಎನ್ನುತ್ತಾರೆ. ಕೇರಳದಲ್ಲಿ ಗಾಣಿಗರನ್ನು ಗಾನಿಕರೆಂದು ಕರೆಯುವರು. ಗಾಣಿಗರಲ್ಲಿ ಎಣ್ಣೆ ತೆಗೆಯುವ ರೀತಿ, ಎತ್ತಿನ ಜೋಡುಗಳ ಸಂಖ್ಯೆ, ಎಣ್ಣೆ ತೆಗೆಯಲು ಉಪಯೋಗಿಸುವ ಚೌಕಟ್ಟು ಮತ್ತು ಭಾಷೆಗಳ ಆಧಾರದ ಮೇಲೆ ಉಪಪಂಗಡಗಳಿವೆ. ಕಿರುಗಾಣಿಗ, ಹೆಗ್ಗಾಣಿಗ, ಜ್ಯೋತಿಘನ, ಪಂಚಮಸಾಲಿ ಗಾಣಿಗ, ಸಜ್ಜನ, ತೆಲೀ, ವನಿಯನ್, ಗಾಂಡ್ಲಾ, ಕರಿಗಾಣಿಗ, ಬಿಳಿಗಾಣಿಗ ಮತ್ತು ತುಳುಗಾಣಿಗರೆಂಬ ಪಂಗಡಗಳಿವೆ.

ಇಪ್ಪತ್ತನೇ ಶತಮಾನದ ಆರಂಭದಲ್ಲಿ ನಮ್ಮ ದೇಶದಲ್ಲಿ ಸುಮಾರು ಐದು ಲಕ್ಷ ಗಾಣಗಳು ಹನ್ನೆರಡು ವಿಧದ ಎಣ್ಣೆ ತಯಾರಿಕೆಯಲ್ಲಿ ತೊಡಗಿದ್ದವು. ಕ್ರಿ.ಪೂ.೧೫೦೦ ರಲ್ಲಿಯೇ ಗಾಣವಿತ್ತಿಂದು ಋಗ್ವೇದದಿಂದ ತಿಳಿದುಬರುತ್ತದೆ. ಯಂತ್ರಗಳು ಬರುವ ಮುನ್ನ ಸುಮಾರು ೨೫೦೦ ವರ್ಷಗಳ ಕಾಲ ದೇಶದ ಎಣ್ಣೆಯ ಅಗತ್ಯತೆಯನ್ನು ಪೂರೈಸಿದ್ದಾವೆ ಗಾಣಗಳು ಎಂದು ತಮ್ಮ ‘ಘಾನಿ - ದ ಟ್ರಡಿಷನಲ್ ಆಯಿಲ್‌ಮಿಲ್ ಆಫ್ ಇಂಡಿಯಾ’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ ಕೆ.ಟಿ.ಅಚ್ಚಯ್ಯ.

Sunday, March 18, 2012

ಹಿಪ್ಪುನೇರಳೆ ಒಡಲಲ್ಲಿ ಹಕ್ಕಿ ಚಿತ್ತಾರ


ಶಿಡ್ಲಘಟ್ಟದ ಗಾಂಧಿನಗರದಲ್ಲಿರುವ ಶೆಟ್ಟಪ್ಪನವರ ಶಂಕರ್ ಅವರ ಹಿತ್ತಲಿನಲ್ಲಿ ಎತ್ತರಕ್ಕೆ ಬೆಳೆದಿರುವ ಹಿಪ್ಪುನೇರಳೆ ಗಿಡ.

ಶಿಡ್ಲಘಟ್ಟ ತಾಲ್ಲೂಕು ಹಿಪ್ಪುನೇರಳೆ ಸೊಪ್ಪಿಗೆ ಹೆಸರುವಾಸಿ. ರೇಷ್ಮೆ ಹುಳುಗಳಿಗೆ ಆಹಾರವಾಗಿ ಬಳಸುವುದರಿಂದ ಕಂಬಳಿ ಸೊಪ್ಪೆಂದೇ ಇದನ್ನು ಕರೆಯಲಾಗುತ್ತದೆ. ಆದರೆ ಇದನ್ನು ಎತ್ತರವಾಗಲು ಯಾರೂ ಬಿಡುವುದಿಲ್ಲ. ಸೊಪ್ಪು ಬಲಿಯುತ್ತಿದ್ದಂತೆಯೇ ಕತ್ತರಿಸಲಾಗುತ್ತದೆ. ಹಾಗಾಗಿ ಇದರ ಹಣ್ಣುಗಳನ್ನು ಕಾಣುವುದು ಅಪರೂಪ.
ಆದರೆ ಇದಕ್ಕೆ ಅಪವಾದ ಎಂಬಂತೆ ಪಟ್ಟಣದ ಗಾಂಧೀನಗರದ ಶೆಟ್ಟಪ್ಪನವರ ಶಂಕರ್ ಅವರು ತಮ್ಮ ಹಿತ್ತಲಿನ ಕೈತೋಟದಲ್ಲಿ ಹಿಪ್ಪುನೇರಳೆ ಗಿಡವನ್ನು ಬೆಳೆಸಿದ್ದು ಸುಮಾರು ೩೫ ಅಡಿ ಎತ್ತರ ಬೆಳೆದಿದೆ. ತೆಂಗಿನ ಮರದ ಎತ್ತರದವರೆಗೆ ಬೆಳೆದಿರುವ ಹಿಪ್ಪುನೇರಳೆ ಗಿಡದ ತುಂಬ ಹಣ್ಣುಗಳು ಬಿಟ್ಟಿವೆ. ಈ ಹಣ್ಣುಗಳಿಗಾಗಿ ಬರುವ ವೈವಿಧ್ಯಮಯ ಪಕ್ಷಿಗಳಿಂದ ಇವರ ಹೂತೋಟ ಪಕ್ಷಿಧಾಮವಾಗಿದೆ.


ಹಿಪ್ಪುನೇರಳೆ ಹಣ್ಣು.

ಕೋಗಿಲೆ, ಗಿಳಿ, ಬುಲ್‌ಬುಲ್, ಹಸಿರುಗುಟುರ, ಪಿಕಳಾರ, ಮೈನಾ, ಸೊಪ್ಪುಗುಟುರ, ಕಾಮಾಲೆ ಹಕ್ಕಿ ಅಥವಾ ಗೋಲ್ಡನ್ ಓರಿಯೋಲ್, ರೋಸಿ ಪ್ಯಾಸ್ಚರ್ ಮುಂತಾದ ಹಕ್ಕಿಗಳೊಂದಿಗೆ ಅಳಿಲುಗಳು ಮತ್ತು ಮಂಗಗಳೂ ಹಣ್ಣು ತಿನ್ನಲು ಸ್ಪರ್ಧಿಸುತ್ತವೆ. ಹಕ್ಕಿಗಳು ಇಷ್ಟಪಟ್ಟು ಈ ಹಿಪ್ಪುನೇರಳೆ ಹಣ್ಣುಗಳನ್ನು ತಿನ್ನುವುದರಿಂದಾಗಿ ಮನುಷ್ಯರ ನಾಲಗೆ ಕೆಂಪಾಗುವಂತೆ ಅವುಗಳ ಕೊಕ್ಕು ಕೆಂಬಣ್ಣಕ್ಕೆ ತಿರುಗಿರುತ್ತವೆ.
ರೇಷ್ಮೆಯಂತೆಯೇ ಹಿಪ್ಪುನೇರಳೆ ಸೊಪ್ಪು ಕೂಡ ಚೀನಾದಿಂದಲೇ ಬಂದಿದೆ. ಉದ್ದುದ್ದ ಕೋಲಿನಂತಹ ಕಾಂಡ, ಹೃದಯಾಕಾರದ ಎಲೆ ಮತ್ತು ಎಲೆಯ ತೊಟ್ಟಿನ ಬುಡದಲ್ಲಿ ಕಂಬಳಿಹುಳುವಿನಂತೆ ನಸುಗುಲಾಬಿ ಬಣ್ಣದ ಕಾಯಿ. ಹಣ್ಣಾದಾಗ ನೇರಳೆ ಕಪ್ಪು ಬಣ್ಣ ತಳೆಯುತ್ತದೆ. ರುಚಿ ಮಾತ್ರ ಹುಳಿ ಮಿಶ್ರಿತ ಸಿಹಿ.


ಹಿಪ್ಪುನೇರಳೆ ಹಣ್ಣನ್ನು ತಿನ್ನಲು ಆಗಮಿಸಿರುವ ಗೋಲ್ಡನ್ ಓರಿಯೋಲ್ ಹಕ್ಕಿ.

ಹಿಪ್ಪುನೇರಳೆ ಹಣ್ಣು ಬಿಡುವುದು ಬೇಸಿಗೆಯ ಕಾಲದಲ್ಲಿ. ಇದರಲ್ಲಿ ಶರ್ಕರಪಿಷ್ಟ, ಸಸಾರಜನಕ, ನಾರು, ಸುಣ್ಣ, ರಂಜಕ ಮೊದಲಾದ ಪೌಷ್ಟಿಕಾಂಶಗಳಿವೆ. ಇದರಿಂದ ತಂಪುಪಾನೀಯವನ್ನೂ ತಯಾರಿಸಬಹುದು. ಈ ಹಣ್ಣಿಗೆ ಹಲವಾರು ಔಷಧೀಯ ಗುಣಗಳೂ ಇವೆ. ರಕ್ತ ಸಂಚಲನೆಗೆ, ಹೃದಯಕ್ಕೆ ಒಳ್ಳೆಯದು. ಶೀತಕಾರಕ, ಪಿತ್ತ ಶಮನಕಾರಿ ಹಾಗೂ ಜೀರ್ಣಕಾರಿ. ದೊರಗು ಹಣ್ಣಿನಿಂದ ಮಲಬದ್ಧತೆ ನಿವಾರಣೆಯಾದರೆ, ಚಕ್ಕೆ ಹಾಗೂ ಬೇರಿನಲ್ಲಿ ಜಂತುನಾಶಕ ಗುಣವಿದೆ. ಎಲೆ ಚಟ್ನಿಯ ಲೇಪದಿಂದ ಗಾಯ ಮಾಯುತ್ತದೆ. ಹೊಟ್ಟೆ ಶೂಲೆ, ಅತಿ ಬಾಯಾರಿಕೆ ಮತ್ತು ಸುಸ್ತು ನಿವಾರಣೆಗೆ ಹಣ್ಣಿನ ಸಿರಪ್ ಉತ್ತಮ.


ಹಿಪ್ಪುನೇರಳೆ ಹಣ್ಣು ತಿಂದು ಕೊಕ್ಕೆಲ್ಲಾ ಕೆಂಪಾದ ಕೋಗಿಲೆ.

"ನಮ್ಮ ಮನೆಯ ಹಿತ್ತಲಿನಲ್ಲಿರುವ ಹಿಪ್ಪುನೇರಳೆ ನಾಟಿ ತಳಿಯದ್ದು. ಇದಕ್ಕೆ ಸುಮಾರು ೧೫ ವರ್ಷಗಳಾಗಿರಬಹುದು. ನಮಗೇ ಆಶ್ಚರ್ಯವಾಗುವ ರೀತಿ ಈ ಗಿಡ ಎತ್ತರವಾಗಿ ಬೆಳೆಯತೊಡಗಿತು. ಇದು ಹಣ್ಣು ಬಿಟ್ಟಾಗೆಲ್ಲಾ ಹಲವಾರು ಹಕ್ಕಿಗಳು ಬರುವುದರಿಂದ ಕಡಿಯದೇ ಹಾಗೇ ಬೆಳೆಯಲು ಬಿಟ್ಟೆವು. ವಿದ್ಯುತ್ ತಂತಿಗಳಿಗೆ ಅಡಚಣೆಯಾಗುತ್ತದೆಂದು ಒಮ್ಮೆ ವಿದ್ಯುತ್ ಇಲಾಖೆಯವರು ದೂರಿದ್ದರು. ಆಗ ಒಂದೆರಡು ರೆಂಬೆಗಳನ್ನು ಕಡಿದು ಗಿಡವನ್ನು ಎಳೆದು ಕಟ್ಟಿದ್ದೆವು. ಆದರೆ ಈಗ ಅದು ವಿದ್ಯುತ್ ತಂತಿಗಳಿಗಿಂತ ಮೇಲೆ ಬೆಳೆದಿದೆ. ಪ್ರತಿ ಬೇಸಿಗೆಯಲ್ಲೂ ಹಣ್ಣುಗಳು ಬಿಟ್ಟಾಗ ಹೆಸರೇ ತಿಳಿಯದ ಬಣ್ಣ ಬಣ್ಣದ ಹಕ್ಕಿಗಳು ಹಣ್ಣಿಗಾಗಿ ಬರುತ್ತವೆ. ಕೆಲವು ಹಕ್ಕಿಗಳ ಶಬ್ದಗಳಂತೂ ಕೇಳಲು ಮಧುರವಾಗಿರುತ್ತದೆ" ಎನ್ನುತ್ತಾರೆ ಶೆಟ್ಟಪ್ಪನವರ ಶಂಕರ್.


ಹಿಪ್ಪುನೇರಳೆ ಹಣ್ಣನ್ನು ಬಾಯಲ್ಲಿಟ್ಟುಕೊಂಡಿರುವ ಗೋಲ್ಡನ್ ಓರಿಯೋಲ್ ಹೆಣ್ಣು ಹಕ್ಕಿ.