ಪ್ರಕಾಶ್ ಹೆಗಡೆಯವರ ಮನೆಯಲ್ಲಿ ಭರ್ಜರಿ ಭೋಜನ.
ಶಿವು, ನಾನು ಮತ್ತು ಪ್ರಕಾಶ್ ಹೆಗಡೆಯವರು ಬ್ಯಾಟಿಂಗ್ ಶುರುಮಾಡಿದ್ದೆವು.
ಪ್ರಕಾಶ್ರ ಪತ್ನಿ ನಮಗೆ ಬಡಿಸುತ್ತಾ, "ಶಿವು, ನಿಮ್ಮ ಮನೇಲಿ ವಾಟರ್ ಫಿಲ್ಟರ್ ಹಾಕ್ಸಿದ್ರಾ?" ಎಂದು ಕೇಳಿದರು.
"ಇನ್ನೂ ಇಲ್ಲ. ಹಾಕಿಸ್ಬೇಕು" ಅಂದರು ಶಿವು.
"ಈ ರಿವರ್ಸ್ ಆಸ್ಮಾಸಿಸ್ ಇರುವ ಫಿಲ್ಟರ್ ಬೆಲೆ ಜಾಸ್ತಿಯಲ್ವಾ?" ನಾನು ಮಧ್ಯೆ ಮೂಗು ತೂರಿಸಿದೆ.
"ಹೌದು. ನೀವದನ್ನು ಹಾಕ್ಸಿಲ್ವಾ?" ಎಂದು ಕೇಳಿದರು ಪ್ರಕಾಶ್.
"ಇಲ್ಲ ಸರ್. ನಮ್ಮಲ್ಲಿ ಸಿಹಿನೀರಲ್ವಾ. ಹಾಗಾಗಿ ಆ ಸಿಸ್ಟಂ ಬೇಕಿಲ್ಲ. ಅದೂ ಅಲ್ದೆ ನಮ್ಮ ಶಿಡ್ಲಘಟ್ಟದ ನೀರು ಬಹಳ ರುಚಿ" ಅಂದೆ.
"ನೀರು ರುಚಿಯಾ?" ಪ್ರಕಾಶ್ ಅಚ್ಚರಿಪಟ್ಟರು.
"ಹೌದು. ನಿಮ್ಮ ಕಾವೇರಿ ನೀರಿಗಿಂತ ರುಚಿಯಾಗಿರುತ್ತೆ. ಅದಕ್ಕೇ ನಮ್ಮ ರೇಷ್ಮೆಗೂ ಬೆಲೆ ಜಾಸ್ತಿ" ಅಂದೆ.
"ಅಂದ್ರೆ ಸೀರೆ ಮಾಡ್ತೀರಾ?" ಪ್ರಕಾಶ್ರ ಪತ್ನಿ ಕೇಳಿದರು.
"ನಮ್ಮಲ್ಲಿ ಕಚ್ಛಾರೇಷ್ಮೆ ಅಂದ್ರೆ ರಾ ಸಿಲ್ಕ್ ತಯಾರಿಸುತ್ತೇವೆ. ರೇಷ್ಮೆ ಗೂಡನ್ನು ಕುದಿಯುವ ನೀರಲ್ಲಿ ಹಾಕಿ ಅದರಿಂದ ರೇಷ್ಮೆ ಎಳೆಯನ್ನು ತೆಗೆಯುವುದು. ಇಲ್ಲಿ ನೀರಿನ ಗುಣ ಮುಖ್ಯ ಪಾತ್ರ ವಹಿಸುತ್ತೆ. ನಮ್ಮ ಶಿಡ್ಲಘಟ್ಟದ ಸಿಹಿನೀರಲ್ಲಿ ತೆಗೆದ ರೇಷ್ಮೆಗೆ ಬಣ್ಣ, ಹೊಳಪು ಮತ್ತು ಹಿಗ್ಗುವಿಕೆ(ಎಲಾಸ್ಟಿಸಿಟಿ) ಗುಣವಿರುತ್ತೆ. ಹಾಗಾಗಿ ಈ ರೇಷ್ಮೆಯು ಸೀರೆ ತಯಾರಿಸಲು ಕಂಚಿಗೆ, ಜರಿ ತಯಾರಿಸಲು ಸೂರತ್ಗೆ ಹೆಚ್ಚಾಗಿ ಹೋಗುತ್ತೆ. ಬೇರೆ ಕಡೆ ತಯಾರಾಗುವ ರೇಷ್ಮೆಗಿಂತ ನಮ್ಮ ರೇಷ್ಮೆ ಬೆಲೆ ಹೆಚ್ಚು"
"ರೇಷ್ಮೆ ತೆಗೆದು ಉಳಿದಿರೋದ್ರಲ್ಲಿ ಹಾರ ಮಾಡ್ತಾರಾ?" ಪ್ರಕಾಶ್ರ ಪತ್ನಿ ಕೇಳಿದರು.
"ಇಲ್ಲ. ಹಾರ ಮಾಡಲು ಚೆನ್ನಾಗಿರುವ ಗೂಡನ್ನೇ ಬಳಸುತ್ತಾರೆ. ಅದನ್ನು ಕತ್ತರಿಸಿ ಒಳಗಿರುವ ಹುಳುವನ್ನು ಬಿಸಾಡಿ ಹಾರ ತಯಾರಿಸ್ತಾರೆ"
"ಈ ಹುಳುಗಳನ್ನು ಏನ್ಮಾಡ್ತೀರ?" ಪ್ರಕಾಶ್ ಕೇಳಿದರು.
"ಸರ್, ಇಲ್ಲಿ ಯಾವುದೂ ವೇಸ್ಟ್ ಅಲ್ಲ. ರೇಷ್ಮೆ ತೆಗೆದ ಮೇಲೆ ಉಳಿಯುವ ಪೊರೆ, ಹುಳುಗಳನ್ನು ಬೇರ್ಪಡಿಸಿ ಸಂಸ್ಕರಿಸುವುದೇ ಒಂದು ಘಟಕ. ಅದು ಕೆಟ್ಟ ವಾಸನೆ ಬೀರುವುದರಿಂದ ಊರ ಹೊರಗೆ ಮಾಡಿರ್ತಾರೆ. ಈ ಹುಳಗಳಿಂದ ಎಣ್ಣೆ ತಯಾರಿಸುತ್ತಾರೆ. ಆ ಎಣ್ಣೆ ಸೋಪ್ ಫ್ಯಾಕ್ಟರಿಗಳಲ್ಲಿ ಬಳಸುತ್ತಾರೆ"
"ಅಂದದ ಮೈಕಾಂತಿ ಹಿಂದೆ ಎಷ್ಟೊಂದು ಹಿಂಸೆ ಇದೆ ಮಾರಾಯ್ರೆ!" ಪ್ರಕಾಶ್ರ ಆಲೋಚನೆ ಎಲ್ಲೆಲ್ಲಿಗೋ ಹೋಯಿತು.
"ಹಾಗ್ಯಾಕೆ ಯೋಚಿಸ್ತೀರಿ ಸರ್. ರೇಷ್ಮೆ ಮೊಟ್ಟೆಯಿಂದ ಬಟ್ಟೆಯಾಗಲು ನಾನಾ ಹಂತಗಳು. ಮೊದಲು ಗ್ರೇನೇಜ್ನಲ್ಲಿ ಮೊಟ್ಟೆ ತಯಾರಾಗುತ್ತೆ. ನಂತರ ಚಾಕಿ ಸೆಂಟರ್ನಲ್ಲಿ ಮೊಟ್ಟೆಯಿಂದ ಹೊರಬಂದ ಹುಳು ಸ್ವಲ್ಪ ಬೆಳೆಸುವರು. ಇಲ್ಲಿಂದ ರೈತರು ಕೊಂಡು ತಮ್ಮ ಹುಳುಮನೆಯಲ್ಲಿ ಸಾಕುತ್ತಾರೆ. ಬೆಳೆದ ಹುಳುವನ್ನು ಚಂದ್ರಂಕಿಗಳಲ್ಲಿ ಹಾಕಿ ಗೂಡು ಕಟ್ಟಿಸುತ್ತಾರೆ. ಈ ಗೂಡುಗಳನ್ನು ಮಾರುಕಟ್ಟೆಯಲ್ಲಿ ಹರಾಜು ಹಾಕುತ್ತಾರೆ"
"ಗೂಡು ತಯಾರಿಸೋದಕ್ಕೇ ಇಷ್ಟು ಹಂತಗಳಾ? ಎಷ್ಟು ಜನ ಕೆಲಸ ಮಾಡ್ಬೇಕಲ್ವಾ? ರಾಮನಗರದಲ್ಲಿ ಗೂಡು ಮಾರ್ಕೆಟ್ ಇದೆಯೆಂದು ಕೇಳಿರುವೆ" ಅಂದರು ಪ್ರಕಾಶ್.
"ಹೌದು ಸರ್. ರಾಮನಗರ ಬಿಟ್ಟರೆ ನಮ್ಮ ಶಿಡ್ಲಘಟ್ಟದ್ದು ಭಾರತದಲ್ಲೇ ಅತಿ ದೊಡ್ಡದಾದ ಗೂಡಿನ ಮಾರ್ಕೆಟ್. ಇಲ್ಲಿ ಕೋಟ್ಯಾಂತರ ವ್ಯವಹಾರ ನಡೆಯುತ್ತೆ"
"ಗೂಡಿನ ನಂತರ ಏನಾಗುತ್ತೆ" ಕುತೂಹಲದಿಂದ ಶಿವು ಕೇಳಿದರು.
"ಮಾರುಕಟ್ಟೆಯಲ್ಲಿ ಗೂಡು ಕೊಂಡ ರೀಲರುಗಳು ಫಿಲೇಚರ್(ರೇಷ್ಮೆ ನೂಲು ಬಿಚ್ಚಾಣಿಕಾ ಘಟಕ) ನಲ್ಲಿ ಗೂಡಿನಿಂದ ರೇಷ್ಮೆ ನೂಲು ತೆಗೆಯುತ್ತಾರೆ. ಈ ನೂಲನ್ನು ಟ್ವಿಸ್ಟಿಂಗ್ ಫ್ಯಾಕ್ಟರಿಯಲ್ಲಿ ಹುರಿ ಮಾಡಲಾಗುತ್ತೆ. ನಂತರ ಇದು ಡೈಯಿಂಗ್ ಘಟಕದಲ್ಲಿ ಬಣ್ಣ ಪಡೆಯುತ್ತೆ. ಆಮೇಲೆ ಮಗ್ಗದಲ್ಲಿ ಸೀರೆಯಾಗುತ್ತೆ. ಸೀರೆಯಾದಮೇಲೆ ಪಾಲಿಷ್ ಮಾಡಬೇಕು. ಮುಂದೆ ಸೀರೆ ಅಂಗಡಿ..."
"ಅಬ್ಬಬ್ಬಾ! ಎಷ್ಟೊಂದು ಕೆಲಸ. ಒಳ್ಳೆ ರೈಲಿನ ಬೋಗಿಗಳಂತೆ ಒಂದರ ಹಿಂದೆ ಒಂದು ಹೇಳ್ತಾ ಇದ್ದೀರಲ್ಲ" ಎಂದು ಈ ರೇಷ್ಮೆ ಸರಪಣಿಯ ಬಗ್ಗೆ ಪ್ರಕಾಶ್ ಮೆಚ್ಚುಗೆಯ ಅಚ್ಚರಿ ವ್ಯಕ್ತಪಡಿಸಿದರು.
"ನಮ್ಮೂರಲ್ಲಿ ೪೫೦೦ ರೇಷ್ಮೆ ಘಟಕಗಳಿವೆ. ಇದರಲ್ಲಿ ಸುಮಾರು ೩೦೦೦೦ ಮಂದಿ ಕೆಲಸ ಮಾಡುತ್ತಾರೆ. ನಮ್ಮ ತಾಲೂಕಿನಲ್ಲಿ ೫೦೦೦ ಹೆಕ್ಟೇರ್ ಭೂಮಿಯಲ್ಲಿ ರೇಷ್ಮೆ ಕೃಷಿ ಅಂದರೆ ಹಿಪ್ಪು ನೇರಳೆ ಸೊಪ್ಪು ಬೆಳೆಯುತ್ತಾರೆ. ಸುಮಾರು ೧೦೦೦೦ ರೈತ ಕುಟುಂಬಗಳು ಇದನ್ನು ಅವಲಂಭಿಸಿವೆ. ಇದಲ್ಲದೆ ರೇಷ್ಮೆ ಕೊಳ್ಳುವವರು, ಮಾರುವವರು, ಬ್ರೋಕರುಗಳು, ಬಡ್ಡಿಗೆ ಕೊಡುವವರು, ಮೂಟೆ ಹೊರುವವರು, ನೀರು ಗಾಡಿಯವರು, ಫ್ಯಾಕ್ಟರಿಗೆ ಬೇಕಾದ ಸಾಮಾನು ಮಾರುವವರು, ಟೆಂಪೋಗಳು, ಕಾರುಗಳು, ತಳ್ಳುವ ಗಾಡಿಗಳು.... ಒಂದೇ ಎರಡೇ.. ಲಕ್ಷಾಂತರ ಜನರಿಗೆ ಅನ್ನ ಕೊಡುತ್ತಿದೆ ರೇಷ್ಮೆ"
"ರೇಷ್ಮೆ ಹುಳುಗಳ ಸಾವು ನೋವಿನಿಂದ ಅಂದವೂ ಇದೆ ಚಂದವೂ ಇದೆ ಲಕ್ಷಾಂತರ ಜನರಿಗೆ ಹೊಟ್ಟೆ ಬಟ್ಟೆಯೂ ಇದೆ ಅಂತ ಗೊತ್ತಿಲ್ಲಾಗಿತ್ತು ಮಾರಾಯ್ರೆ" ಅಂದರು ಪ್ರಕಾಶ್.
"ಈ ರೇಷ್ಮೆ ಸೀರೆ ಹಿಂದೆ ಇಷ್ಟೊಂದು ಹಿಂಸೆ ಇದೆ ಅಂತ ಈ ಸಾರಿ ಹಬ್ಬಕ್ಕೆ ನನ್ಹೆಂಡತಿಗೆ ಸೀರೆ ಕೊಡಿಸ್ಲಿಲ್ಲ!" ಎಂದು ಶಿವು ಚಟಾಕಿ ಹಾರಿಸಿದರು.
"ಕಳ್ಳಂಗೊಂದು ಪಿಳ್ಳೆ ನೆವವಂತೆ. ಇರಿ ಹೇಮಾಶ್ರೀಗೆ ಫೋನ್ ಮಾಡಿ ಹೇಳ್ತೀನಿ. ನಿಮ್ಮ ಜೇಬಿಗೆ ಕತ್ತರಿ ಹಾಕಿಸ್ತೀನಿ" ಅಂದರು ಪ್ರಕಾಶ್ ಪತ್ನಿ.
ಶಿವು ಗಲಿಬಿಲಿಗೊಂಡರು.
"ನಮ್ದೇನಿದೆ ಶಿವು. ನಮ್ಮದೆಲ್ಲಾ ಹೆಂಗಸರ ಕೈಲಿದೆ..! ಅವ್ರು ಹೇಳಿದಂತೆ ಕುಣಿದ್ರಾಯ್ತು" ಎಂದು ಕಣ್ಣು ಮಿಟುಕಿಸುತ್ತಾ ಸಾಂತ್ವನ ಹೇಳಿದರು ಪ್ರಕಾಶ್.
ಶಿಡ್ಲಘಟ್ಟದ ರೇಷ್ಮೆ ಬಗ್ಗೆ ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ :
http://www.youtube.com/watch?v=eAkaFniaB2o
http://www.youtube.com/watch?v=bqrOSPB7opU