Tuesday, June 5, 2012

ಹದಿನೆಂಟು ಕುಲ ಚಿಹ್ನೆಗಳಿಂದ ಕೂಡಿರುವ ದೇಶಮುದ್ರೆ ಗಂಟೆಬಟ್ಟಲು


 ಶಿಡ್ಲಘಟ್ಟ ತಾಲ್ಲೂಕಿನ ಬೈಯಪ್ಪನಹಳ್ಳಿಯ ಚನ್ನಪ್ಪ ಹದಿನೆಂಟು ಕುಲ ಚಿಹ್ನೆಗಳಿಂದ ಕೂಡಿರುವ ಬಸವ, ಲಿಂಗಮುದ್ರೆಯಿರುವ ದೇಶಮುದ್ರೆ ಗಂಟೆಬಟ್ಟಲನ್ನು ಪ್ರದರ್ಶಿಸುತ್ತಿರುವುದು.

ದೇಶದ ಮೂಲನಿವಾಸಿಗಳಾಗಿ ದ್ರಾವಿಡ ಸಂಸ್ಕೃತಿಯನ್ನು ಹೊಂದಿದವರು ಮತ್ತು ಶಿವನನ್ನು ತಮ್ಮ ಆರಾಧ್ಯ ದೈವವನ್ನಾಗಿ ಪಡೆದುಕೊಂಡು ಆದಿಶೈವಭಕ್ತರಾಗಿ ಬದುಕುತ್ತಿರುವವರು ಛಲವಾದಿ ಸಮುದಾಯದವರು. ಪುರಾತನ ಜನಾಂಗವಾದ ಛಲವಾದಿಗಳು ಇಂದಿಗೂ ಶಿವಭಕ್ತರಾಗಿ ಜೀವಿಸುತ್ತಿದ್ದು, ಆಚಾರ ನಡವಳಿಕೆಗಳಲ್ಲಿ ಶೈವ ಸಂಪ್ರದಾಯವನ್ನು ಬಿಡದೆ ಅನುಸರಿಸುತ್ತಿದ್ದಾರೆ. ಅದರ ಸ್ಪಷ್ಟ ಕುರುಹುಗಳು ಇಂದಿಗೂ ಅವರಲ್ಲಿ ಉಳಿದಿವೆ. ಹಿಂದೆ ಈ ದಲಿತ ಜನಾಂಗದವರು ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು, ಕಹಳೆ, ಸೂರ್ಯವಾದನ ಮತ್ತು ಚಂದ್ರವಾದನಗಳನ್ನು ನುಡಿಸಲು ಹಕ್ಕುದಾರಾಗಿದ್ದರಿಂದ ವಿವಿಧ ಶೈವ ಸಂಪ್ರದಾಯಗಳಲ್ಲಿ ಭಾಗಿಗಳಾಗುತ್ತಿದ್ದರು. ಕಾಲಕ್ರಮದಲ್ಲಿ ಈ ಸಂಪ್ರದಾಯಗಳು ಕಡಿಮೆಯಾದಂತೆ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲುಗಳು ವಿರಳವಾದವು. ತಾಲ್ಲೂಕಿನ ಬೈಯಪ್ಪನಹಳ್ಳಿಯ ಚನ್ನಪ್ಪ ಇನ್ನೂ ತಮ್ಮ ಸಂಪ್ರದಾಯದ ಚಿಹ್ನೆಗಳು ಮತ್ತು ಕುರುಹಾದ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು ಕಾಪಾಡಿಕೊಂಡು ಬಂದಿದ್ದಾರೆ. ‘೧೯೩೯ ರಲ್ಲಿ ಪಂಚಲೋಹದಿಂದ ತಯಾರಿಸಲಾದ ಸುಮಾರು ೧೦ ಕೆಜಿಗೂ ಹೆಚ್ಚು ತೂಕದ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು ಬುರುಡುಗುಂಟೆಯ ವೀರಶೈವ ಹಿರಿಯ ನಾಗಣ್ಣ ಶೆಟ್ಟರು ಎಲರ ಒಳಿತಿಗಾಗಿ ಮಾಡಿಸಿಕೊಟ್ಟಿರುವುದಾಗಿ ಇದರ ಮೇಲೆ ಕೆತ್ತಲಾಗಿದೆ. ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಇದನ್ನು ನಮ್ಮ ಜನಾಂಗದ ಶುಭ ಕಾರ್ಯಗಳಲ್ಲಿ ಮೊದಲು ಪೂಜಿಸುತ್ತೇವೆ. ನಮ್ಮ ಜಿಲ್ಲೆಯಲ್ಲಿ ಅಲ್ಲಲ್ಲಿ ಕೆಲವರು ಇನ್ನೂ ಬಸವ, ಲಿಂಗಮುದ್ರೆಯಿರುವ ಗಂಟೆಬಟ್ಟಲನ್ನು ಉಳಿಸಿಕೊಂಡಿದ್ದಾರೆ’ ಎಂದು ಬೈಯಪ್ಪನಹಳ್ಳಿಯ ಚನ್ನಪ್ಪ ತಿಳಿಸಿದರು.



 
ಶಿವನ ಮುಂದೆ ಬಸವ ಹಾಗೂ ಚಿಹ್ನೆಗಳಿಂದ ಕೂಡಿರುವ ದೇಶಮುದ್ರೆ ಗಂಟೆಬಟ್ಟಲು.

  ‘ಛಲವಾದಿ ಜನಾಂಗದವರು ಹದಿನೆಂಟು ಪಣಕ್ಕೆ ಸೇರಿದ ಶೆಟ್ಟಿಪಟ್ಟಣಸ್ಥರು. ಸಂಪ್ರದಾಯಸ್ಥ ವೀರಶೈವರೂ ಶೆಟ್ಟಿ ಬಣಜಿಗರಾದಿಯಾಗಿ ಅವರಲ್ಲಿನ ಜನನ ಮರಣ ಮತ್ತು ಎಲ್ಲಾ ಶುಭಕಾರ್ಯಗಳಿಗೆ ಛಲವಾದಿಯನ್ನು ಕರೆಯುತ್ತಾರೆ. ಅವರು ಲಿಂಗ, ಬಸವ ಸಮೇತದ ಗಂಟೆಬಟ್ಟಲಿನೊಡನೆ ಬರುತ್ತಾರೆ. ಅವರಿಂದ ಅವುಗಳ ಪ್ರಥಮ ಪೂಜೆ ಮಾಡಿಸುವ ರೂಢಿಯಿದೆ. ಅಲ್ಲದೆ ಮೆರವಣಿಗೆ, ಸ್ಮಶಾನಯಾತ್ರೆಗೂ ಗಂಟೆಬಟ್ಟಲಿನ ಛಲವಾದಿಯೂ ಮುಂದೆ ಹೋಗುವರು. ಹದಿನೆಂಟು ಪಣಗಳಾದ ಬಣಜಿಗ, ಒಕ್ಕಲಿಗ, ಗಾಣಿಗ, ರಂಗಾರೆ, ಲಾಡ, ಗುಜರಾತಿ, ಕಾಮಾಟಿ, ಜೈನ ಅಥವಾ ಕೋಮಟಿ, ಕುರುಬ, ಕುಂಬಾರ, ಅಗಸ, ಬೆಸ್ತ, ಪದ್ಮಸಾಲಿ, ನಾಯಿಂದ, ಉಪ್ಪಾರ, ಚಿತ್ರಗಾರ, ಗೊಲ್ಲ, ಛಲವಾದಿ ಎಂಬ ಪಣ ಸಮಾಜದ ಪಟ್ಟಿಯಲ್ಲಿ ಬಣಜಿಗರು ಹದಿನೆಂಟು ಪಣದ ಕುಲದವರ ನಾಯಕರಾಗಿರುತ್ತಾರೆ. ಆ ಕುಲದವರ ಕುಲ ಚಿಹ್ನೆಗಳಾದ ನೆಗಿಲು. ತಕ್ಕಡಿ, ಚಕ್ರ, ಕತ್ತರಿ, ಗುದ್ದಿ, ಕತ್ತಿ ಮುಂತಾದ ಹದಿನೆಂಟು ಕುಲ ಚಿಹ್ನೆಗಳಿಂದ ಕೂಡಿರುವ ಗಂಟೆ ಬಟ್ಟಲನ್ನು ‘ದೇಶಮುದ್ರೆ ಗಂಟೆಬಟ್ಟಲು’ ಎನ್ನುವರು. ಈ ಕುಲದವರ ಶುಭ ಕಾರ್ಯಕ್ರಮಗಳಲ್ಲಿ ಇದನ್ನು ಹೊರುವ ಅಧಿಕಾರವು ಛಲವಾದಿ ಕುಲಸ್ಥರದಾಗಿರುತ್ತದೆ. ಛಲವಾದಿಗಳು ಇಂದಿಗೂ ಈ ಕುಲಾಚಾರವನ್ನು ಹಲವು ಕಡೆ ನಡೆಸುತ್ತಾ ಬರುತ್ತಿದ್ದಾರೆ. ಪುರಾಣದಲ್ಲಿ ಶಿವನನ್ನು ಅವಮಾನಗಳಿಸಲು ದಕ್ಷಬ್ರಹ್ಮನು ಯಾಗ ಮಾಡಿ ಶಿವನನ್ನು ಆಹ್ವಾನಿಸಲಿಲ್ಲ. ಆಗ ತನ್ನ ತಂದೆಯಿಂದ ತನ್ನ ಗಂಡನು ಅವಮಾನಹೊಂದುವುದನ್ನು ಸಹಿಸದ ದಾಕ್ಷಾಯಿಣಿಯು ಯಾಗದ ಅಗ್ನಿಗೆ ಆಹುತಿಯಾಗಿ ಪ್ರಾಣವನ್ನು ತ್ಯಜಿಸಿದಾಗ ಶಿವನ ಕೋಪಕ್ಕೆ ಜನಿಸಿದ್ದು ಛಲದಂಕಮಲ್ಲ, ಮಹಾಕಾಳಿ ಮತ್ತು ವೀರಭದ್ರ. ಇವರು ದಕ್ಷಬ್ರಹ್ಮನನ್ನು ಸಂಹರಿಸಿದರು. ಯಜ್ಞಕೊಂಡದಲ್ಲಿ ಅಸುನೀಗಿದ ತನ್ನ ಪತ್ನಿಯ ಎಲ್ಲಾ ಕರ್ಮಕಾರ್ಯಗಳನ್ನು ಶಿವನ ಅಣತಿಯಂತೆ ಛಲದಂಕಮಲ್ಲನು ಮಾಡಿದನು. ಇದರಿಂದ ತೃಪ್ತಗೊಂಡ ಶಿವನು ನಂದಿಯ ಮುಂಭಾಗದಲ್ಲಿ ಗಂಟೆಬಟ್ಟಲು, ಲಿಂಗಮುದ್ರೆಗಳನ್ನು ಸ್ಥಾಪಿಸಿ ಅವುಗಳನ್ನು ಛಲದಂಕಮಲ್ಲನ ವಂಶಜರು ಹಿಡಿಯಬೇಕೆಂದು ಆಶೀರ್ವದಿಸಿದನು ಎಂದು ಪುರಾಣದಿಂದ ತಿಳಿದುಬರುತ್ತದೆ. ಇಂದಿಗೂ ಆ ವಂಶಸ್ಥರು ಈ ಕಾರ್ಯವನ್ನು ಮಾಡುತ್ತಿದ್ದಾರೆ. ಪುರಾಣ ಪ್ರಸಿದ್ಧ ಛಲದಂಕಮಲ್ಲನ ವಂಶಸ್ಥರನ್ನು ಛಲವಾದಿ ಜನಾಂಗವೆಂದು ಕರೆಯುವರು. ಈ ಜನಾಂಗದವರು ಆಂಧ್ರಪ್ರದೇಶ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಈ ಜನಾಂಗದವರನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಸಲಾದೋಳ್ಳು, ಚಲುವಾದುಲು, ಮಾಲೋಳ್ಳು, ಹೊಲೆಯರು, ಬಲಗೈಯವರು, ಆದಿಕರ್ನಾಟಕ, ಆದಿದ್ರಾವಿಡ-ಮುಂತಾದ ಹೆಸರುಗಳಿಂದ ಪ್ರಾದೇಶಿಕವಾಗಿ ಕರೆಯುತ್ತಾರೆ. ಆದರೆ ಎಲ್ಲಾ ಹೊಲೆಯರು ಛಲವಾದಿಗಳಲ್ಲ, ಆದರೆ ಛಲವಾದಿಗಳೆಲ್ಲ ಹೊಲೆಯರೆ ಆಗಿದ್ದಾರೆ. ಇವರನ್ನು ಪ್ರಾದೇಶಿಕವಾಗಿ ’ಸಲಾದೋಳ್ಳು’ಎಂದು ಕರೆಯುವುದು ರೂಢಿ ಯಾಗಿದೆ’ ಎನ್ನುತ್ತಾರೆ ಛಲವಾದಿಗಳ ಬಗ್ಗೆ ಸಂಶೋಧನೆ ಮಾಡಿ ಡಾಕ್ಟರೇಟ್ ಗಳಿಸಿರುವ ಉಪನ್ಯಾಸಕ ಡಾ.ಜಿ.ಶ್ರೀನಿವಾಸಯ್ಯ.

Monday, April 23, 2012

ಬರಗಾಲದಲ್ಲೂ ಮೂಡಿವೆ ಚಿಗುರೆಲೆ

ಶಿಡ್ಲಘಟ್ಟ ತಾಲ್ಲೂಕಿನ ಪಟರೇನಹಳ್ಳಿ ಅರಣ್ಯ ಪ್ರದೇಶದ ಹುಣಸೆ ತೋಪಿನಲ್ಲಿ ಚಿಗುರೊಡೆದಿರುವ ಹುಣಸೆಮರ.

ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಬಳಿಯಿರುವ ಪಟರೇನಹಳ್ಳಿ ಅರಣ್ಯ ಪ್ರದೇಶದ ಸುಮಾರು ೪೦ ಎಕರೆಯಷ್ಟು ಹುಣಸೆ ತೋಪಿನಲ್ಲಿ ಚಿಗುರೆಲೆಗಳು ಮೂಡಿವೆ. ಈ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಒಣಹುಲ್ಲು ಸೇರಿದಂತೆ ಬಹಳಷ್ಟು ಮರಗಿಡಗಳಿಗೆ ಹಾನಿಯಾಗಿತ್ತು. ಪ್ರಕೃತಿಯ ನಿಯಮವೆಂಬಂತೆ ಈಗ ಒಣಗಿಡದಲ್ಲಿ ಚಿಗುರಿನ ಸಂಭ್ರಮ. ಕೆಲವು ಮರಗಳಲ್ಲಿ ಕೆಂಪು ಮಿಶ್ರಿತ ಚಿಗುರೆಲೆಗಳು ಮೂಡುತ್ತಿದ್ದರೆ, ಇನ್ನು ಕೆಲವು ಮರಗಳಲ್ಲಿ ಚಿಗುರಿನೊಂದಿಗೆ ಹೂಗಳೂ ಮೂಡಿದ್ದು ಮಕರಂದ ಹೀರುವ ದುಂಬಿಗಳು ಮತ್ತು ಮಧುಪಾನ ಮಾಡುವ ಸೂರಕ್ಕಿಗಳಿಗೆ ಸುಗ್ಗಿ ತಂದಿವೆ. ಆಲ, ಅರಳಿ ಮೊದಲಾದ ಕೆಂಪು ಚಿಗುರು ಬಿಡುವ ಸಸ್ಯಗಳ ಸಾಲಿನಲ್ಲಿ ಹುಣಸೆಯೂ ಒಂದು. ಹುಣಸೆಹಣ್ಣು ದುಬಾರಿಯಾಗಿರುವ ಕಾಲದಲ್ಲಿ ಬಡವರು ಹುಣಸೆ ಚಿಗುರನ್ನು ಆಶ್ರಯಿಸಿ ಕೆಲವು ದಿನಗಳ ಮಟ್ಟಿಗೆ ಹುಣಸೆಹಣ್ಣಿಗೆ ಆಗುವ ವೆಚ್ಚವನ್ನು ಉಳಿಸುತ್ತಾರೆ. ‘ಹುಣಸೆ ತವರಿಗೆ ಹೋಗಲ್ಲ’ ಎಂಬ ಮಾತು ಜನಪದರಲ್ಲಿದೆ. ಹುಣಸೆ ಕಾಯನ್ನು ಉದುರಿಸುತ್ತಿದ್ದಂತೆಯೇ ಎಲೆ ಉದುರುತ್ತದೆ. ಅದಾದ ಸ್ವಲ್ಪ ದಿನಗಳಿಗೇ ಚಿಗುರೆಲೆಗಳು ಮೂಡುತ್ತವೆ. ಚಿಗುರಿನೊಂದಿಗೇ ಹೂಗಳು ಮೂಡುತ್ತವೆ. ಅದರ ಹಿಂದೆಯೇ ಈಚುಗಳು ಮೂಡುತ್ತವೆ. ನಂತರ ಕಾಯಿಯಾಗುವ ಸರದಿ. ಹೀಗೆ ನಡೆಯುವ ಜೀವನ ಚಕ್ರದಲ್ಲಿ ಅದರ ತವರಿಗೆ ಹಿಂದಿರುಗುವ ಆಸೆ ಈಡೇರುವುದಿಲ್ಲವಂತೆ. ಹಿಂದೆ ದೂರದ ಊರುಗಳಿಗೆ ಹೋಗಲು ಇದ್ದ ತೊಂದರೆಗಳು ಮತ್ತು ರೈತರ ಮನೆಗಳಲ್ಲಿನ ಶ್ರಮ ಜೀವನದಲ್ಲಿ ಹೆಣ್ಣುಮಕ್ಕಳು ತವರಿಗೆ ಹಲವಾರು ವರ್ಷಗಳು ಹೋಗಲಾಗುತ್ತಿರಲಿಲ್ಲ. ಆಗ ಹುಣಸೆ ಮರಕ್ಕೆ ಅವರ ಜೀವನವನ್ನು ಹೋಲಿಸಿ ನುಡಿಗಟ್ಟನ್ನೇ ಸೃಷ್ಟಿಸಿದ್ದರು ಜನಪದರು.
ಹುಣಸೆ ಚಿಗುರು.

 ಹುಣಸೆ ಮರವನ್ನು ದುಡಿಮೆಗೆ ಹೋಲಿಸುವುದರೊಂದಿಗೆ ಹಲವಾರು ಉಪಯುಕ್ತತೆಗೆ ಬಳಸಲಾಗುತ್ತದೆ. ಹುಣಸೆ ಕಾಯಿಯಲ್ಲಿ ತೊಕ್ಕನ್ನು ತಯಾರಿಸುತ್ತಾರೆ. ಜೀರಿಗೆ, ಮೆಣಸು, ಉಪ್ಪು, ಇಂಗು, ಹುಣಸೆ ಹಣ್ಣಿನೊಂದಿಗೆ ಬೆರೆಸಿ ಪಿತ್ತಕ್ಕೆ ಔಷಧಿ ತಯಾರಿಸಲಾಗುತ್ತದೆ. ಹುಣಸೆ ಚಿಗುರು ಒಗರು ಮತ್ತು ಹುಳಿಯ ರುಚಿ ಹೊಂದಿರುತ್ತದೆ. ಮಾವಿನ ಕಾಯಿಯ ಓಟೆ ಮೂಡುವ ಸಮಯದಲ್ಲಿ ಹುಣಸೆ ಚಿಗುರಲು ಪ್ರಾರಂಭವಾಗುತ್ತದೆ. ಇದರ ಕೆಂಪನೆಯ ಚಿಗುರು ನೋಡಲು ಬಲು ಆಕರ್ಷಕವಾಗಿರುತ್ತದೆ. ಈಗಲೂ ಗ್ರಾಮೀಣ ಭಾಗದಲ್ಲಿ ಹುಣಸೆ ಚಿಗುರನ್ನು ವಿವಿಧ ಅಡುಗೆಗಳಲ್ಲಿ ಬಳಸುತ್ತಾರೆ. ಅವರೆಬೇಳೆ ಹುಣಸೆ ಚಿಗುರಿನ ತೊವ್ವೆ, ಆಲೂಗಡ್ಡೆ ಬದನೆಕಾಯಿ ಹುಣಸೆಚಿಗುರಿನ ಹುಳಿ, ನುಗ್ಗೆಕಾಯಿಯ ಉಷ್ಣದ ಅಂಶವನ್ನು ಕಡಿಮೆ ಮಾಡಲು ಬೇಳೆಯೊಂದಿಗೆ ಹುಣಸೆ ಚಿಗುರು ಹಾಕಿ ಸಾರು ತಯಾರಿಸುತ್ತಾರೆ. ಹುಣಸೆ ಚಿಗುರನ್ನು ಒಣಗಿಸಿಟ್ಟುಕೊಂಡೂ ಬಳಸುತ್ತಾರೆ. ಹುಣಸೆ ಚಿಗುರನ್ನು ಸ್ವಲ್ಪ ಎಣ್ಣೆಯಲ್ಲಿ ಕರಿದು ಒಗ್ಗರಣೆ ಹಾಕಿ ಅನ್ನದೊಂದಿಗೆ ಕಲಸಿ ತಿನ್ನುತ್ತಾರೆ. ತುಪ್ಪದಲ್ಲಿ ಹುರಿದರೆ ಇದರ ರುಚಿ ಇನ್ನೂ ಹೆಚ್ಚು. ಹಾಗೆಯೇ ಹುಣಸೆ ಹೂವನ್ನೂ ಸಹ.

Sunday, April 22, 2012

ಎಲೆ ಅಡಿಕೆ ಚೀಲದಲ್ಲಿ ಬದುಕಿನ ಕ್ಷಣಗಳು


ಎಲೆ ಅಡಿಕೆಯ ಚೀಲ ಅಥವಾ ತಿತ್ತಿ.

 ಗ್ರಾಮೀಣ ಪ್ರದೇಶದಲ್ಲಿ ಜೀವನದ ಅವಿಭಾಜ್ಯ ಅಂಗವಾಗಿ ಹಲವಾರು ಸಂಗತಿಗಳಿರುತ್ತವೆ. ಅವುಗಳಲ್ಲಿ ಎಲೆ ಅಡಿಕೆಯೂ ಸೇರಿದೆ. ಬಾಯಿ ಕೆಂಪಾಗಿಸಿ, ಹಲ್ಲನ್ನು ಬಣ್ಣವಾಗಿಸ್ದಿದರೂ ಎಲೆ ಅಡಿಕೆಯ ಮೋಹವನ್ನು ಬಿಡುವುದಿಲ್ಲ. ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮೀಣ ಪರಿಸರದಲ್ಲಿ ಮೊದಲು ಎಲ್ಲರ ಬಳಿಯೂ ಇರುತ್ತಿದ್ದ ಎಲೆ ಅಡಿಕೆ ಚೀಲ ನಿಡಾನವಾಗಿ ಕಣ್ಮರೆಯಾಗುತ್ತಿದೆ. ಎಲೆ ಅಡಿಕೆ ವಿವಿಧ ರೂಪಗಳಲ್ಲಿ ನಾಡಿನಾದ್ಯಂತ ವ್ಯಾಪಿಸಿದೆ. ಬಾಯಿಯಲ್ಲಿ ಹಾಕಿಕೊಂಡು ಮೆಲ್ಲುವುದರ ಜೊತೆಗೆ ಹುಟ್ಟು-ಸಾವಿನ ನಡುವಿನ ಜೀವನದ ಮಹತ್ವದ ಘಟ್ಟಗಳಲ್ಲಿ ಇದರ ಪ್ರಮುಖ ಪಾತ್ರವಿದೆ. ಪಾನ್‌ಬೀಡಾ, ಪಾನ್‌ಪರಾಗ್ ಮತ್ತಿತರ ಥಳಕು-ಬಳುಕಿಗೆ ಈಗಿನ ಜನರು ಮೊರೆ ಹೋದರೂ ವಿಶೇಷ ಸಂದರ್ಭಗಳಲ್ಲಿ ಎಲೆ ಅಡಿಕೆ ಹಾಕದಿರುವವರು ಕಡಿಮೆ. ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಭೋಜನಾ ನಂತರ ಎಲೆ ಅಡಿಕೆ ಪ್ರತ್ಯಕ್ಷವಾಗುತ್ತದೆ. ಮಂಗಳ ಕಾರ್ಯಗಳಲ್ಲಿ ತಾಂಬೂಲ ಕೊಟ್ಟು ತಾಂಬೂಲ ಹಾಕಿಕೊಂಡು ಹೋಗಿ ಎನ್ನುವುದು ರೂಢಿ. ನವಾಬರು ಇದನ್ನು ಬೀಡಾ ಎಂದೇ ಪ್ರಸಿದ್ಧಿಗೆ ತಂದರು. ಮೈಸೂರು ಎಲೆ, ಬನಾರಸ್, ಮದ್ರಾಸ್, ಕಲ್ಕತ್ತ, ನಾಟಿ ಎಲೆಗಳು ಜನಪ್ರಿಯವಾಗಿವೆ. ಎಲೆ ಅಡಿಕೆಗಳ ಅಭ್ಯಾಸವಿರುವ ಗ್ರಾಮೀಣರು ಮೊಬೈಲ್ ಫೋನ್‌ಗಳಂತೆ ತಮ್ಮೊಟ್ಟಿಗೇ ಇಟ್ಟುಕೊಳ್ಳಲು ಪರಿಕರವೊಂದನ್ನು ಸೃಷ್ಟಿಸಿಕೊಂಡಿದ್ದರು. ಅದುವೇ ಎಲೆ ಅಡಿಕೆ ಚೀಲ. ಸುಲಭವಾಗಿ ಬಳಸುವಂತೆ, ಎಲ್ಲೆ ಹೋಗಲಿ ಜೊತೆಯಲ್ಲಿ ಇಟ್ಟುಕೊಳ್ಳುವಂತೆ ಇದನ್ನು ರೂಪಿಸಿರುತ್ತಿದ್ದರು. ಇದಕ್ಕೆ ತಿತ್ತಿ, ಸಂಚಿ ಎಂದೆಲ್ಲಾ ಕರೆಯುತ್ತಾರೆ.
ಹಲ್ಲಿಲ್ಲದ್ದರಿಂದ ಕುಟ್ಟಾಣಿಯಲ್ಲಿ ಎಲೆ ಅಡಿಕೆ ಸುಣ್ಣ ಬೆರೆಸಿ ಕುಟ್ಟಿಕೊಳ್ಳುತ್ತಿರುವ ರಾಗಿಮಾಕಲಹಳ್ಳಿಯ ರಾಮಕ್ಕ.

ಕನ್ನಡದ ಕವಿಯತ್ರಿ ಹೊನ್ನಮ್ಮ ಈ ಎಲೆ ಅಡಿಕೆ ಚೀಲದಿಂದಾಗಿ ಸಂಚಿ ಹೊನ್ನಮ್ಮ ಎಂದೇ ಕರೆಸಿಕೊಂಡಿದ್ದಾರೆ. ಈ ಸಂಚಿ ಅಥವಾ ತಿತ್ತಿಯಲ್ಲಿ ಬಹುಪಯೋಗಿ ವಿಭಾಗಗಳಿವೆ. ಸುಣ್ಣದ ಡಬ್ಬಿಗೊಂದು ಜಾಗ, ಹಲ್ಲುಕಡ್ಡಿಗೊಂದು ಜಾಗ, ಪಕ್ಕದಲ್ಲಿ ಎಲೆ ಇಡುವ ಅರೆ, ಅಡಿಕೆ ಇಡಲು ಒಂದು ಪದರವಿರುತ್ತದೆ. ಒಂದು ಅಡಿ ಪದರ ಉದವಿದ್ದು ಸೊಂಟಕ್ಕೆ ಸಿಕ್ಕಿಸಿಕೊಳ್ಳಲು ಅನುಕೂಲಕರವಾಗಿರುತ್ತದೆ. ಇದರಲ್ಲಿ ಕಡ್ಡಿಪುಡಿ(ತಂಬಾಕು ಪುಡಿ) ಇಡಲೂ ಸ್ಥಳವುಂಟು. ಹಲ್ಲಿಲ್ಲದವರು ಕುಟ್ಟಾಣಿಯನ್ನೂ ಇದರಲ್ಲಿಟ್ಟುಕೊಳ್ಳುತ್ತಾರೆ. ಕೆಲವು ತಿತ್ತಿಗಳಿಗೆ ಉದ್ದನೆಯ ಪದರದ ತುದಿಗೆ ಪೊರಕೆ ಕಡ್ಡಿ ಗಾತ್ರದ ದಾರ ಹಾಕಿರುತ್ತಾರೆ. ತಿತ್ತಿಯನ್ನು ಗುಂಡಗೆ ಸುತ್ತಿ ಆ ದಾರದಿಂದ ಸುತ್ತಿ ಅದನ್ನು ಮಹಿಳೆಯರು ಸೊಂಟದ ಬಳಿ ಬಟ್ಟೆಗೆ ಸಿಕ್ಕಿಸಿ ಇಟ್ಟುಕೊಳ್ಳುತ್ತಿದ್ದರು. ಇದು ಅನಕ್ಷರಸ್ಥರ ಹಣದ ಚೀಲವೂ ಹೌದು. ಸೂಜಿ ದಾರ ಸೇರಿದಂತೆ ಅನೇಕ ಸಣ್ಣ ಪುಟ್ಟ ಪರಿಕರಗಳನ್ನೂ ಇದರಲ್ಲಿ ಇಟ್ಟಿರುತ್ತಾರೆ. ಇನ್ನೂ ಹಳ್ಳಿಗಳಲ್ಲಿ ಅಲ್ಲಲ್ಲಿ ಈ ತಿತ್ತಿಗಳು ಕಂಡು ಬರುತ್ತಿವೆ. ಇನ್ನೂ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ. ಸಂತೆಗಳಲ್ಲಿ, ವೃದ್ಧರ ಬಳಿ ಕಾಣಸಿಗುತ್ತದೆ. ಒಂದು ತಿತ್ತಿಯಲ್ಲಿನ ಎಲೆ ಅಡಿಕೆ ತನ್ನ ಆಯುಷ್ಯದಲ್ಲಿ ನೂರಾರು ಬಾಯಿಗಳನ್ನು ಸೇರುತ್ತದೆ. ಹೆಂಗಸರು ಮೊದಲು ಒಂದೆಡೆ ಸೇರಿದಾಗ ಈ ತಿತ್ತಿಯು ಅವರ ಸ್ನೇಹದ ದ್ಯೋತಕವಾಗಿರುತ್ತಿತ್ತು. ಎಲೆ ಅಡಿಕೆ ಹಂಚಿಕೊಂಡು ನಂತರ ಮಾತಿಗೆ ತೊಡಗುತ್ತಿದ್ದರು. ‘ನನಗೆ ಮೊದಲಿನಿಂದಲೂ ಎಲೆ ಅಡಿಕೆಯ ಅಭ್ಯಾಸವಾಗಿಬಿಟ್ಟಿದೆ. ಅದಿಲ್ಲದೆ ಇರಲಾರೆ. ಹೊಗೆ ಸೊಪ್ಪಿನ ದಂಟನ್ನು ತಂದು ಕುಟ್ಟಿ ಪುಡಿ ಮಾಡಿಟ್ಟುಕೊಂಡು ಬಳಸುತ್ತೇನೆ. ವಯಸ್ಸಾಗಿರುವುದರಿಂದ ಹಲ್ಲಿಲ್ಲ. ಅದಕ್ಕಾಗಿ ಕುಟ್ಟಾಣಿಯಲ್ಲಿ ಎಲೆ ಅಡಿಕೆ ಸುಣ್ಣ ಎಲ್ಲ ಬೆರೆಸಿ ಕುಟ್ಟಿ ನಂತರ ತಿನ್ನುತ್ತೇನೆ’ ಎನ್ನುತ್ತಾರೆ ರಾಗಿಮಾಕಲಹಳ್ಳಿಯ ರಾಮಕ್ಕ.

Friday, April 13, 2012

ಶಿಡ್ಲಘಟ್ಟದಲ್ಲಿ "ಗಾಣ" ಗ್ರಾಮ


ಶಿಡ್ಲಘಟ್ಟ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ಗಾಣದಿಂದ ಎಣ್ಣೆ ತಯಾರಿಸುತ್ತಿರುವುದು.


ಆಧುನಿಕ ತಂತ್ರಜ್ಞಾನದಿಂದಾಗಿ ಹಲವಾರು ಪರಂಪರಾಗತ ಉದ್ದಿಮೆಗಳು ಕಣ್ಮರೆಯಾಗುತ್ತಿವೆ. ಅವುಗಳಲ್ಲಿ ಎಣ್ಣೆ ಗಾಣಗಳೂ ಒಂದು. ಹಿಂದೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿದ್ದ ಗಾಣಗಳು ಈಗ ಕೇವಲ ಪಳೆಯುಳಿಕೆಗಳಾಗಿ ಉಳಿದಿವೆ. ಸಂಪ್ರದಾಯಿಕ ಎಣ್ಣೆ ಗಾಣಗಳು ಎಣ್ಣೆ ಕಾರ್ಖಾನೆಯೊಂದಿಗೆ ಯಾವ ತರಹದ ಪೈಪೋಟಿಗಳನ್ನು ನಡೆಸಲಸಾಧ್ಯವಾಗಿವೆ. ಆದರೆ ಶಿಡ್ಲಘಟ್ಟ ತಾಲ್ಲೂಕಿನ ಶೆಟ್ಟಹಳ್ಳಿಯಲ್ಲಿ ಇನ್ನೂ ಹಳೆಯ ಗಾಣವನ್ನೇ ನಂಬಿ ಜೀವನ ನಡೆಸುತ್ತಿರುವುದು ವಿಶೇಷ. ಎಲ್ಲಾ ಗಾಣಗಳೂ ನಿಂತುಹೋಗಿದ್ದರೂ ಶೆಟ್ಟಹಳ್ಳಿ ನಾರಾಯಣಪ್ಪ ಅವರು ಮಾತ್ರ ಪರಂಪರೆಯ ಪಳೆಯುಳಿಕೆಯಾಗಿ ಮುಂದುವರೆಸಿದ್ದಾರೆ.
ಒಂದು ವಸ್ತುವನ್ನು ಹಿಂಡಿ, ಅದಕ್ಕೆ ದ್ರವರೂಪ ನೀಡುವುದು ಗಾಣದ ಮೂಲ ಉದ್ದೇಶ. ಮೂಲತಃ ಕೊಬ್ಬರಿ, ಕಡಲೆ, ಹರಳು, ಹೊನ್ನೆ, ಎಳ್ಳು, ಔಡಲ, ಕುಸುಬಿ ಮುಂತಾದ ಎಣ್ಣೆ ಹಿಂಡುವ ಸಾಧನವಾಗಿದ್ದ ಗಾಣ, ನಂತರದ ದಿನಗಳಲ್ಲಿ ಕಬ್ಬನ್ನು ಅರೆಯುವ ಸಾಧನವಾಗಿ ರೂಪುಗೊಂಡು ಆಲೆಮನೆ ಎಂಬ ಹೆಸರು ಪಡೆಯಿತು.

ಗಾಣದ ವಿನ್ಯಾಸವು ಮೊದಲು ಸುಮಾರು ೯ ರಿಂದ ೧೦ ಅಡಿ ವ್ಯಾಸದ ಚಪ್ಪಟೆಯಾದ ಗಟ್ಟಿ ನೆಲ ನಿರ್ಮಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಇಲಿ ತೈಲ ಬೀಜಗಳನ್ನು ಹಾಕಲು ದೊಡ್ಡ ಒರಳನ್ನು ಇಡಲಾಗುತ್ತದೆ. ಅದಕ್ಕೆ ಗಾಣದ ಮರವನ್ನು ಕಟ್ಟುತ್ತಾರೆ. ಕಬ್ಬಿಣದ ಬಳೆಯ ಅಂಚನ್ನುಳ್ಳ ಮರದ ಒನಕೆಯನ್ನು ಗಾಣದ ಒರಳಿನ ಸೂಕ್ತವಾದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿರುತ್ತಾರೆ. ಗಾಣದ ಮರ ಹಾಗೂ ಒರಳಿನ ಕೆಳಭಾಗಕ್ಕೂ ಹೊಂದಿಕೊಂಡಿರುವಂತೆ ಕತ್ತರಿ ಹಲಗೆಯೊಂದನ್ನು ನಿರ್ಮಿಸಿ ಆ ಹಲಗೆಯ ಮೇಲೆ ಭಾರವಾದ ಕಲ್ಲುಗಳನ್ನು ಹೇರಿರುತ್ತಾರೆ.
ಕತ್ತರಿ ಹಲಗೆಯು ತನ್ನೊಂದು ಹಗ್ಗದಿಂದ ಗಾಣದ ಮಧ್ಯಭಾಗವನ್ನು ಆವರಿಸಿಕೊಂಡು ಭದ್ರವಾಗಿರುತ್ತದೆ. ನಂತರ ಒನಕೆಗೆ ಹೊಂದಿಕೊಂಡು ಆಸರೆಯಾಗಿರುವಂತೆಯೂ ಬೀಜಗಳನ್ನು ಅರೆಯುವ ಪ್ರಧಾನ ಕ್ರಿಯೆಯು ಸುಸೂತ್ರವಾಗುವಂತೆ ಮಲ್ಲಗಂಬವೊಂದನ್ನು ಸ್ವಲ್ಪ ಓರೆಯಾಗಿ ನಿಲ್ಲಿಸಲಾಗುತ್ತದೆ. ಹೀಗೆ ಸ್ಥಾನ ಗ್ರಹಣ ಮಾಡಿದ ಈ ಮಲ್ಲಗಂಬವು ಮಧ್ಯದಲ್ಲಿ ಬಲವಾದ ಹಗ್ಗದ ಜೋಡಣೆಯನ್ನು ಹೊಂದಿರುತ್ತದೆ. ಈ ಎಲ್ಲಾ ಸಿದ್ಧತೆಗಳನ್ನು ಒಳಗೊಂಡು ರಚನೆಯಾದ ಎಣ್ಣೆಗಾಣದ ಕ್ರಿಯೆಯಿಂದ ಕೊಬ್ಬರಿ, ಔಡಲ, ಶೇಂಗಾ ಮುಂತಾದ ತೈಲ ಬೀಜಗಳ ಎಣ್ಣೆ ಉತ್ಪಾದನೆಯಾಗುತ್ತದೆ. ಇಂಥಾ ಪ್ರತಿಭಾಪೂರ್ಣವಾದ ಗಾಣದ ಕರಕುಶಲ ಕಲೆಯು ಬಡಿಗನ ಕುಶಾಗ್ರಮತಿಯನ್ನು ಪ್ರತಿನಿಧಿಸುತ್ತದೆ. ನೋಡಲು ಲಿಂಗದ ಆಕಾರದ ಈ ಗಾಣ ತುಂಬಾ ಕಲಾತ್ಮಕತೆಯಿಂದ ಕೂಡಿದುದಾಗಿದೆ.


ಎಣ್ಣೆ ಕಾಳುಗಳನ್ನು ಬೆಳಗಿನ ಅವಧಿಯಲ್ಲಿ ಗಾಣಕ್ಕೆ ಹಾಕಿ ಪುಡಿ ಮಾಡಿ ಜರಡಿ ಹಿಡಿಯುತ್ತಿರುವುದು.


‘ನಮ್ಮ ಗಾಣದ ಕಲ್ಲು ಎಷ್ಟು ಹಳೆಯದೋ ತಿಳಿಯದು. ನಾನು ಹುಟ್ಟುವ ಮೊದಲಿಂದಲೂ ಇತ್ತು. ವರ್ಷದ ಬಿಸಿಲಿರುವ ಮೂರ್ನಾಕು ತಿಂಗಳಿನಲ್ಲಿ ಮಾತ್ರ ಈ ಕಸುಬು ಚೆನ್ನಾಗಿ ನಡೆಯುತ್ತದೆ. ಮೊದಲು ನಮ್ಮ ಹಳ್ಳಿಯಲ್ಲಿ ಎಂಟು ಗಾಣಗಳಿದ್ದವು. ಈಗ ಎಲ್ಲರೂ ನಿಲ್ಲಿಸಿಬಿಟ್ಟಿದ್ದಾರೆ. ಅವರಲ್ಲಿ ಕೆಲವರು ಯಂತ್ರಗಳಿಂದ ತಯಾರಿಸಿದ ಎಣ್ಣೆಯನ್ನು ಮಾರುವುದನ್ನು ಕಸುಬನ್ನಾಗಿಸಿಕೊಂಡಿದ್ದಾರೆ. ಮೊದಲಾದರೆ ಅರಳು, ಕಡಲೆ, ಇಪ್ಪೆ, ಎಳ್ಳು, ಕೊಬ್ಬರಿ ಮೊದಲಾದವುಗಳಿಂದ ಎಣ್ಣೆ ತೆಗೆಯುತ್ತಿದ್ದೆವು. ಆದರೆ ಈಗ ಹೆಚ್ಚಾಗಿ ಹೊಂಗೆಯನ್ನೇ ನಂಬಿದ್ದೇವೆ’ ಎನ್ನುತ್ತಾರೆ ಹಿರಿಯರಾದ ನಾರಾಯಣಪ್ಪ.

‘ಒಣಗಿದ ಎಣ್ಣೆ ಕಾಳುಗಳನ್ನು ಬೆಳಗಿನ ಅವಧಿಯಲ್ಲಿ ಗಾಣಕ್ಕೆ ಹಾಕಿ ಪುಡಿ ಮಾಡಿ ಜರಡಿ ಹಿಡಿಯುತ್ತೇವೆ. ನಂತರ ಪುಡಿಗೆ ಸ್ವಲ್ಪ ನೀರು ಹಾಕಿ ಹದವಾಗಿ ಉಂಡೆ ಮಾಡಿಟ್ಟು ಅವನ್ನು ಸಂಜೆ ವೇಳೆಗೆ ಗಾಣಕ್ಕೆ ಹಾಕಿ ಎಣ್ಣೆ ತೆಗೆಯುತ್ತೇವೆ. ೫೦ ಕೆಜಿ ಬೀಜದಿಂದ ೧೦ ಕೆಜಿ ಎಣ್ಣೆ ತಯಾರಾಗುತ್ತದೆ ಮತ್ತು ೩೦ ಕೆಜಿ ಹಿಂಡಿ ಸಿಗುತ್ತದೆ. ಹಿಂಡಿ ತೋಟಗಳಿಗೆ ಒಳ್ಳೆಯ ಗೊಬ್ಬರ. ಒಂದು ಕೆಜಿ ಎಣ್ಣೆ ೬೫ ರಿಂದ ೭೦ ರೂಗೆ ಮಾರಾಟವಾದರೆ, ಹಿಂಡಿ ಒಂದು ಕೆಜಿಯನ್ನು ೧೬ ರೂಗಳಂತೆ ಮಾರುತ್ತೇವೆ. ಹೊಂಗೆ ಬೀಜವನ್ನು ನಾವು ರೈತರಿಂದ ಒಂದು ಸೇರಿಗೆ ೨೦೦ ಗ್ರಾಂ ಎಣ್ಣೆ ನೀಡಿ ಪಡೆಯುತ್ತೇವೆ. ಅದರಿಂದ ಸಿಗುವ ಚಕ್ಕೆ ಅಥವಾ ಹಿಂಡಿಯೇ ನಮಗೆ ಲಾಭ. ಯಂತ್ರದಿಂದ ತಯಾರಾದ ಎಣ್ಣೆಗಿಂತ ಗಾಣದಲ್ಲಿ ತೆಗೆಯುವ ಎಣ್ಣೆ ಗುಣಮಟ್ಟದಲ್ಲಿ ಚೆನ್ನಾಗಿರುತ್ತದೆಂದು ಕೆಲವರು ನಮ್ಮಲ್ಲೇ ಕೊಳ್ಳುತ್ತಾರೆ. ಗಾಣಕ್ಕೆ ಕೆಲಸವಿರದ ಸಮಯದಲ್ಲಿ ನಾವು ವ್ಯವಸಾಯ ಮತ್ತು ಪಶುಪಾಲನೆಯಲ್ಲಿ ತೊಡಗುತ್ತೇವೆ’ ಎಂದು ಅವರು ಹೇಳಿದರು.


ಗಾಣದಿಂದ ಹೊರಬರುತ್ತಿರುವ ಎಣ್ಣೆ.


‘ಗುಂಡು ತೋಪುಗಳು ಕರಗುತ್ತಿವೆ. ಅವುಗಳ್ಲಲಿ ಬೆಳೆಯುತ್ತಿದ್ದ ಹೊಂಗೆ ಇಪ್ಪೆ, ಬೇವು ಮೊದಲಾದ ಮರಗಳಿಂದ ಸಿಗುತ್ತಿದ್ದ ಎಣ್ಣೆ ಬೀಜಗಳ ಲಭ್ಯತೆ ಕಡಿಮೆಯಾಗುತ್ತಿದೆ. ಅಕಸ್ಮಾತ್ ಎಣ್ಣೆ ಬೀಜಗಳು ಸಿಕ್ಕರೂ ಕೊಂಡು ಶೇಖರಿಸುವಷ್ಟು ಹಣ ಗಾಣದವರ ಬಳಿ ಇರುವುದಿಲ್ಲ. ಹೀಗಾಗಿ ಗಾಣಗಳು ಸ್ಥಗಿತಗೊಂಡು, ದುಡಿಯುವ ಸಂಪತ್ತು ವ್ಯರ್ಥವಾಗಿದೆ. ಸರ್ಕಾರ ಎಣ್ಣೆ ಬೀಜಗಳನ್ನು ಒದಗಿಸುವುದರಿಂದ ಈ ಪಾರಂಪರಿಕ ವೃತ್ತಿಯ ಅವಸಾನವನ್ನು ತಡೆಯಲು ಪ್ರಯತ್ನಿಸಬೇಕು’ ಎಂದು ಗ್ರಾಮದ ಹಿರಿಯರೊಬ್ಬರು ತಿಳಿಸಿದರು.


ತಯಾರಾದ ಎಣ್ಣೆಯನ್ನು ಡಬ್ಬಿಗೆ ಸುರಿಯುತ್ತಿರುವುದು.


ಕರ್ನಾಟಕದಲ್ಲಿ ಎಣ್ಣೆ ತೆಗೆಯುವ ಸಮುದಾಯವನ್ನು ಗಾಣಿಗ ಎನ್ನುತ್ತಾರೆ. ಕೇರಳದಲ್ಲಿ ಗಾಣಿಗರನ್ನು ಗಾನಿಕರೆಂದು ಕರೆಯುವರು. ಗಾಣಿಗರಲ್ಲಿ ಎಣ್ಣೆ ತೆಗೆಯುವ ರೀತಿ, ಎತ್ತಿನ ಜೋಡುಗಳ ಸಂಖ್ಯೆ, ಎಣ್ಣೆ ತೆಗೆಯಲು ಉಪಯೋಗಿಸುವ ಚೌಕಟ್ಟು ಮತ್ತು ಭಾಷೆಗಳ ಆಧಾರದ ಮೇಲೆ ಉಪಪಂಗಡಗಳಿವೆ. ಕಿರುಗಾಣಿಗ, ಹೆಗ್ಗಾಣಿಗ, ಜ್ಯೋತಿಘನ, ಪಂಚಮಸಾಲಿ ಗಾಣಿಗ, ಸಜ್ಜನ, ತೆಲೀ, ವನಿಯನ್, ಗಾಂಡ್ಲಾ, ಕರಿಗಾಣಿಗ, ಬಿಳಿಗಾಣಿಗ ಮತ್ತು ತುಳುಗಾಣಿಗರೆಂಬ ಪಂಗಡಗಳಿವೆ.

ಇಪ್ಪತ್ತನೇ ಶತಮಾನದ ಆರಂಭದಲ್ಲಿ ನಮ್ಮ ದೇಶದಲ್ಲಿ ಸುಮಾರು ಐದು ಲಕ್ಷ ಗಾಣಗಳು ಹನ್ನೆರಡು ವಿಧದ ಎಣ್ಣೆ ತಯಾರಿಕೆಯಲ್ಲಿ ತೊಡಗಿದ್ದವು. ಕ್ರಿ.ಪೂ.೧೫೦೦ ರಲ್ಲಿಯೇ ಗಾಣವಿತ್ತಿಂದು ಋಗ್ವೇದದಿಂದ ತಿಳಿದುಬರುತ್ತದೆ. ಯಂತ್ರಗಳು ಬರುವ ಮುನ್ನ ಸುಮಾರು ೨೫೦೦ ವರ್ಷಗಳ ಕಾಲ ದೇಶದ ಎಣ್ಣೆಯ ಅಗತ್ಯತೆಯನ್ನು ಪೂರೈಸಿದ್ದಾವೆ ಗಾಣಗಳು ಎಂದು ತಮ್ಮ ‘ಘಾನಿ - ದ ಟ್ರಡಿಷನಲ್ ಆಯಿಲ್‌ಮಿಲ್ ಆಫ್ ಇಂಡಿಯಾ’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ ಕೆ.ಟಿ.ಅಚ್ಚಯ್ಯ.

Sunday, March 18, 2012

ಹಿಪ್ಪುನೇರಳೆ ಒಡಲಲ್ಲಿ ಹಕ್ಕಿ ಚಿತ್ತಾರ


ಶಿಡ್ಲಘಟ್ಟದ ಗಾಂಧಿನಗರದಲ್ಲಿರುವ ಶೆಟ್ಟಪ್ಪನವರ ಶಂಕರ್ ಅವರ ಹಿತ್ತಲಿನಲ್ಲಿ ಎತ್ತರಕ್ಕೆ ಬೆಳೆದಿರುವ ಹಿಪ್ಪುನೇರಳೆ ಗಿಡ.

ಶಿಡ್ಲಘಟ್ಟ ತಾಲ್ಲೂಕು ಹಿಪ್ಪುನೇರಳೆ ಸೊಪ್ಪಿಗೆ ಹೆಸರುವಾಸಿ. ರೇಷ್ಮೆ ಹುಳುಗಳಿಗೆ ಆಹಾರವಾಗಿ ಬಳಸುವುದರಿಂದ ಕಂಬಳಿ ಸೊಪ್ಪೆಂದೇ ಇದನ್ನು ಕರೆಯಲಾಗುತ್ತದೆ. ಆದರೆ ಇದನ್ನು ಎತ್ತರವಾಗಲು ಯಾರೂ ಬಿಡುವುದಿಲ್ಲ. ಸೊಪ್ಪು ಬಲಿಯುತ್ತಿದ್ದಂತೆಯೇ ಕತ್ತರಿಸಲಾಗುತ್ತದೆ. ಹಾಗಾಗಿ ಇದರ ಹಣ್ಣುಗಳನ್ನು ಕಾಣುವುದು ಅಪರೂಪ.
ಆದರೆ ಇದಕ್ಕೆ ಅಪವಾದ ಎಂಬಂತೆ ಪಟ್ಟಣದ ಗಾಂಧೀನಗರದ ಶೆಟ್ಟಪ್ಪನವರ ಶಂಕರ್ ಅವರು ತಮ್ಮ ಹಿತ್ತಲಿನ ಕೈತೋಟದಲ್ಲಿ ಹಿಪ್ಪುನೇರಳೆ ಗಿಡವನ್ನು ಬೆಳೆಸಿದ್ದು ಸುಮಾರು ೩೫ ಅಡಿ ಎತ್ತರ ಬೆಳೆದಿದೆ. ತೆಂಗಿನ ಮರದ ಎತ್ತರದವರೆಗೆ ಬೆಳೆದಿರುವ ಹಿಪ್ಪುನೇರಳೆ ಗಿಡದ ತುಂಬ ಹಣ್ಣುಗಳು ಬಿಟ್ಟಿವೆ. ಈ ಹಣ್ಣುಗಳಿಗಾಗಿ ಬರುವ ವೈವಿಧ್ಯಮಯ ಪಕ್ಷಿಗಳಿಂದ ಇವರ ಹೂತೋಟ ಪಕ್ಷಿಧಾಮವಾಗಿದೆ.


ಹಿಪ್ಪುನೇರಳೆ ಹಣ್ಣು.

ಕೋಗಿಲೆ, ಗಿಳಿ, ಬುಲ್‌ಬುಲ್, ಹಸಿರುಗುಟುರ, ಪಿಕಳಾರ, ಮೈನಾ, ಸೊಪ್ಪುಗುಟುರ, ಕಾಮಾಲೆ ಹಕ್ಕಿ ಅಥವಾ ಗೋಲ್ಡನ್ ಓರಿಯೋಲ್, ರೋಸಿ ಪ್ಯಾಸ್ಚರ್ ಮುಂತಾದ ಹಕ್ಕಿಗಳೊಂದಿಗೆ ಅಳಿಲುಗಳು ಮತ್ತು ಮಂಗಗಳೂ ಹಣ್ಣು ತಿನ್ನಲು ಸ್ಪರ್ಧಿಸುತ್ತವೆ. ಹಕ್ಕಿಗಳು ಇಷ್ಟಪಟ್ಟು ಈ ಹಿಪ್ಪುನೇರಳೆ ಹಣ್ಣುಗಳನ್ನು ತಿನ್ನುವುದರಿಂದಾಗಿ ಮನುಷ್ಯರ ನಾಲಗೆ ಕೆಂಪಾಗುವಂತೆ ಅವುಗಳ ಕೊಕ್ಕು ಕೆಂಬಣ್ಣಕ್ಕೆ ತಿರುಗಿರುತ್ತವೆ.
ರೇಷ್ಮೆಯಂತೆಯೇ ಹಿಪ್ಪುನೇರಳೆ ಸೊಪ್ಪು ಕೂಡ ಚೀನಾದಿಂದಲೇ ಬಂದಿದೆ. ಉದ್ದುದ್ದ ಕೋಲಿನಂತಹ ಕಾಂಡ, ಹೃದಯಾಕಾರದ ಎಲೆ ಮತ್ತು ಎಲೆಯ ತೊಟ್ಟಿನ ಬುಡದಲ್ಲಿ ಕಂಬಳಿಹುಳುವಿನಂತೆ ನಸುಗುಲಾಬಿ ಬಣ್ಣದ ಕಾಯಿ. ಹಣ್ಣಾದಾಗ ನೇರಳೆ ಕಪ್ಪು ಬಣ್ಣ ತಳೆಯುತ್ತದೆ. ರುಚಿ ಮಾತ್ರ ಹುಳಿ ಮಿಶ್ರಿತ ಸಿಹಿ.


ಹಿಪ್ಪುನೇರಳೆ ಹಣ್ಣನ್ನು ತಿನ್ನಲು ಆಗಮಿಸಿರುವ ಗೋಲ್ಡನ್ ಓರಿಯೋಲ್ ಹಕ್ಕಿ.

ಹಿಪ್ಪುನೇರಳೆ ಹಣ್ಣು ಬಿಡುವುದು ಬೇಸಿಗೆಯ ಕಾಲದಲ್ಲಿ. ಇದರಲ್ಲಿ ಶರ್ಕರಪಿಷ್ಟ, ಸಸಾರಜನಕ, ನಾರು, ಸುಣ್ಣ, ರಂಜಕ ಮೊದಲಾದ ಪೌಷ್ಟಿಕಾಂಶಗಳಿವೆ. ಇದರಿಂದ ತಂಪುಪಾನೀಯವನ್ನೂ ತಯಾರಿಸಬಹುದು. ಈ ಹಣ್ಣಿಗೆ ಹಲವಾರು ಔಷಧೀಯ ಗುಣಗಳೂ ಇವೆ. ರಕ್ತ ಸಂಚಲನೆಗೆ, ಹೃದಯಕ್ಕೆ ಒಳ್ಳೆಯದು. ಶೀತಕಾರಕ, ಪಿತ್ತ ಶಮನಕಾರಿ ಹಾಗೂ ಜೀರ್ಣಕಾರಿ. ದೊರಗು ಹಣ್ಣಿನಿಂದ ಮಲಬದ್ಧತೆ ನಿವಾರಣೆಯಾದರೆ, ಚಕ್ಕೆ ಹಾಗೂ ಬೇರಿನಲ್ಲಿ ಜಂತುನಾಶಕ ಗುಣವಿದೆ. ಎಲೆ ಚಟ್ನಿಯ ಲೇಪದಿಂದ ಗಾಯ ಮಾಯುತ್ತದೆ. ಹೊಟ್ಟೆ ಶೂಲೆ, ಅತಿ ಬಾಯಾರಿಕೆ ಮತ್ತು ಸುಸ್ತು ನಿವಾರಣೆಗೆ ಹಣ್ಣಿನ ಸಿರಪ್ ಉತ್ತಮ.


ಹಿಪ್ಪುನೇರಳೆ ಹಣ್ಣು ತಿಂದು ಕೊಕ್ಕೆಲ್ಲಾ ಕೆಂಪಾದ ಕೋಗಿಲೆ.

"ನಮ್ಮ ಮನೆಯ ಹಿತ್ತಲಿನಲ್ಲಿರುವ ಹಿಪ್ಪುನೇರಳೆ ನಾಟಿ ತಳಿಯದ್ದು. ಇದಕ್ಕೆ ಸುಮಾರು ೧೫ ವರ್ಷಗಳಾಗಿರಬಹುದು. ನಮಗೇ ಆಶ್ಚರ್ಯವಾಗುವ ರೀತಿ ಈ ಗಿಡ ಎತ್ತರವಾಗಿ ಬೆಳೆಯತೊಡಗಿತು. ಇದು ಹಣ್ಣು ಬಿಟ್ಟಾಗೆಲ್ಲಾ ಹಲವಾರು ಹಕ್ಕಿಗಳು ಬರುವುದರಿಂದ ಕಡಿಯದೇ ಹಾಗೇ ಬೆಳೆಯಲು ಬಿಟ್ಟೆವು. ವಿದ್ಯುತ್ ತಂತಿಗಳಿಗೆ ಅಡಚಣೆಯಾಗುತ್ತದೆಂದು ಒಮ್ಮೆ ವಿದ್ಯುತ್ ಇಲಾಖೆಯವರು ದೂರಿದ್ದರು. ಆಗ ಒಂದೆರಡು ರೆಂಬೆಗಳನ್ನು ಕಡಿದು ಗಿಡವನ್ನು ಎಳೆದು ಕಟ್ಟಿದ್ದೆವು. ಆದರೆ ಈಗ ಅದು ವಿದ್ಯುತ್ ತಂತಿಗಳಿಗಿಂತ ಮೇಲೆ ಬೆಳೆದಿದೆ. ಪ್ರತಿ ಬೇಸಿಗೆಯಲ್ಲೂ ಹಣ್ಣುಗಳು ಬಿಟ್ಟಾಗ ಹೆಸರೇ ತಿಳಿಯದ ಬಣ್ಣ ಬಣ್ಣದ ಹಕ್ಕಿಗಳು ಹಣ್ಣಿಗಾಗಿ ಬರುತ್ತವೆ. ಕೆಲವು ಹಕ್ಕಿಗಳ ಶಬ್ದಗಳಂತೂ ಕೇಳಲು ಮಧುರವಾಗಿರುತ್ತದೆ" ಎನ್ನುತ್ತಾರೆ ಶೆಟ್ಟಪ್ಪನವರ ಶಂಕರ್.


ಹಿಪ್ಪುನೇರಳೆ ಹಣ್ಣನ್ನು ಬಾಯಲ್ಲಿಟ್ಟುಕೊಂಡಿರುವ ಗೋಲ್ಡನ್ ಓರಿಯೋಲ್ ಹೆಣ್ಣು ಹಕ್ಕಿ.

Friday, December 30, 2011

ಬ್ರಿಟಿಷ್ ಅಧಿಕಾರಿ ಕಂಡ "ಸಿಲಗುಟ್ಟ"


ಶಿಡ್ಲಘಟ್ಟದಲ್ಲಿ ಇನ್ನೂರು ವರ್ಷದ ಹಿಂದೆ ಸರ್ವೇಕ್ಷಣೆ ನಡೆಸಿದ್ದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್.


ರೇಷ್ಮೆ ಮತ್ತು ಹೈನುಗಾರಿಕೆಗೆ ಶಿಡ್ಲಘಟ್ಟ ತಾಲ್ಲೂಕು ಹೆಸರುವಾಸಿ ಎಂದು ಎಲ್ಲರೂ ಅಭಿಪ್ರಾಯಪಡುತ್ತಾರೆ. ಆದರೆ ಶಿಡ್ಲಘಟ್ಟ ಹೀಗಿರಲಿಲ್ಲ. ಇಲ್ಲಿನ ಜನರಿಗೆ ರೇಷ್ಮೆಯ ಗಂಧಗಾಳಿಯೂ ಇರಲಿಲ್ಲ. ಇಲ್ಲಿನ ಜನರು ತರಕಾರಿ ಬೆಳೆಯುವುದರಲ್ಲಿ, ಹತ್ತಿಯ ಬಟ್ಟೆಗಳನ್ನು ತಯಾರಿಸುವುದರಲ್ಲಿ ಸಿದ್ದಹಸ್ತರಾಗಿದ್ದರು. ಈ ಮಾತುಗಳನ್ನು ಹೇಳಿದವರು ಮೂಲನಿವಾಸಿಗಳಲ್ಲ, ಭಾರತೀಯ ಇತಿಹಾಸಕಾರರೂ ಅಲ್ಲ. ಈ ಪ್ರದೇಶದ ಕುರಿತು ಅತೀವ ಆಸಕ್ತಿಯಿಂದ ಅಧ್ಯಯನ ಮಾಡಿದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್ ಈ ವಿಷಯವನ್ನು ತಿಳಿಸಿದ್ದಾರೆ.
೧೮೦೭ರಲ್ಲಿ ಪ್ರಕಟವಾದ ಅವರ ಪುಸ್ತಕ “ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಅಂಡ್ ಮಲಬಾರ್” ದಲ್ಲಿ ಗತಕಾಲದ ಶಿಡ್ಲಘಟ್ಟದ ಇತಿಹಾಸದ ಚಿತ್ರಣವನ್ನೇ ಅವರು ನೀಡಿದ್ದಾರೆ. ಈ ಪುಸ್ತಕವನ್ನು ಸರ್ಕಾರ ಇತ್ತೀಚೆಗೆ ಮುದ್ರಿಸಿದೆ.
ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವೆಲ್ಲೆಸ್ಲಿಗೆ ವೈದ್ಯಾಧಿಕಾರಿಯಾಗಿದ್ದರು ಫ್ರಾನ್ಸಿಸ್ ಬುಕನನ್. ೧೭೯೯ರಲ್ಲಿ ಟಿಪ್ಪುಸುಲ್ತಾನನ ಮರಣದ ನಂತರ ಇವರಿಗೆ ಆಗಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪ್ತಿಗೆ ಒಳಪಡುವ ದಕ್ಷಿಣ ಭಾರತವನ್ನು ಸರ್ವೇಕ್ಷಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಯಿತು.


ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಿಂದೆ ಬಳಸುತ್ತಿದ್ದ ಕೃಷಿ ಉಪಕರಣಗಳ ರೇಖಾ ಚಿತ್ರ.


ಸ್ಥಳವರ್ಣನೆ, ನಕ್ಷೆ, ಸ್ವರೂಪ, ಇತಿಹಾಸ, ಪ್ರಾಚೀನ ಅವಶೇಷ, ಸ್ಥಳೀಯರ ನಡವಳಿಕೆ, ಪದ್ಧತಿ, ಧರ್ಮ, ಆಹಾರ, ಉತ್ಪಾದನೆ, ಬೆಳೆ, ಕೃಷಿ, ತರಕಾರಿ, ಗೊಬ್ಬರ, ಪ್ರವಾಹ, ಸಾಕು ಪ್ರಾಣಿಗಳು, ಜಮೀನು, ಗಡಿರೇಖೆ, ಕಲೆ, ವಾಣಿಜ್ಯ ಮುಂತಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ದಾಖಲಿಸಿದ್ದಾರೆ. ಇವರು ತಯಾರಿಸಿದ ವರದಿಗಳು ಮತ್ತು ದಾಖಲಾತಿಗಳು ಈಗಲೂ ಲಂಡನ್ನಿನ ಲೈಬ್ರರಿಯಲ್ಲಿ ಸಂರಕ್ಷಿಸಲಾಗಿದೆ. ಈ ಸರ್ವೇಕ್ಷಣಾ ಕಾರ್ಯದಲ್ಲಿ ಇವರು ಶಿಡ್ಲಘಟ್ಟಕ್ಕೂ ಬಂದಿದ್ದರು. ತಮ್ಮ ಪುಸ್ತಕದಲ್ಲಿ ಶಿಡ್ಲಘಟ್ಟವನ್ನು ಸಿಲಗುಟ್ಟ(Silagutta) ಎಂದು ಕರೆದಿದ್ದಾರೆ. ಎರಡು ಶತಮಾನಗಳ ಹಿಂದಿನ ಶಿಡ್ಲಘಟ್ಟವನ್ನು ಬುಕನನ್ ಅತ್ಯಂತ ಆಪ್ತವಾಗಿ ಪರಿಚಯಿಸಿದ್ದಾರೆ.
‘ಜುಲೈ ೧೩ ರ ಬೆಳಿಗ್ಗೆ ಸಿಲಗುಟ್ಟಕ್ಕೆ ಬಂದೆ. ಮಳೆ ಹೆಚ್ಚಾಗಿ ಬಿದ್ದಿದ್ದರಿಂದ ಜನರು ರಾಗಿ ಬಿತ್ತುವುದರಲ್ಲಿ ಮಗ್ನರಾಗಿದ್ದರು. ಪಶ್ಚಿಮದಿಂದ ಬೀಸುವ ಗಾಳಿಯ ಆರ್ಭಟ ಒಂದೆಡೆಯಾದರೆ, ಆಗಾಗ ಬೀಳುವ ಮಳೆ ಇನ್ನೊಂದೆಡೆ. ಇಲ್ಲಿ ಕಲ್ಲು ಬಂಡೆಗಳಿಲ್ಲದೆ ಭೂಮಿ ಫಲವತ್ತಾಗಿದೆ. ಸಿಲಗುಟ್ಟ ಪಟ್ಟಣದಲ್ಲಿ ಕೇವಲ ೫೦೦ ಮನೆಗಳಿವೆ. ಅದರಲ್ಲಿ ಕೆಲವರು ನೇಕಾರರಿದ್ದಾರೆ. ಇದು ಅತ್ಯಂತ ಸುಂದರವಾದ ಪ್ರದೇಶವಾಗಿದೆ. ಇಲ್ಲಿ ಎರಡು ಸುಂದರವಾದ ಕೆರೆಗಳಿವೆ. ಕೆರೆಗಳ ಅಂಚಿನಲ್ಲಿ ಉದ್ಯಾನವನಗಳಿವೆ’ ಎಂದು ತಮ್ಮ ಪುಸ್ತಕದಲ್ಲಿ ವರ್ಣಿಸಿದ್ದಾರೆ.
‘ಕೃಷಿಯನ್ನೇ ನಂಬಿರುವ ಮೊರಸು ಅಥವಾ ಒಕ್ಕಲಿಗರು, ಮುಸಲ್ಮಾನರು, ಸಾದರು, ಬ್ರಾಹ್ಮಣರು, ಶೈವರು, ತೆಲುಗು ಮಾತನಾಡುವ ಬಣಜಿಗರು, ನಗರ್ತರು, ಸಾತಾನಾನರು ಇಲ್ಲಿ ವಾಸವಾಗಿದ್ದಾರೆ. ಸಿಲಗುಟ್ಟದಲ್ಲಿ ಒರಟಾದ ದಪ್ಪದ ಹತ್ತಿಯ ಕೋರಾ ಬಟ್ಟೆಗಳನ್ನು ನೇಕಾರರು ತಯಾರಿಸುತ್ತಾರೆ. ನೇಕಾರರು ಪದ್ಮಶಾಲಿ ಕುಲದವರು.
ಸಿಲಗುಟ್ಟದ ವ್ಯಾಪಾರಸ್ಥರು ಅಡಿಕೆ ಮತ್ತು ಕರಿ ಮೆಣಸನ್ನು ಕಟೀಲು ಮತ್ತು ನಗರದಿಂದ ತರುತ್ತಾರೆ. ಇಲ್ಲಿ ಸುತ್ತಮುತ್ತ ಬೆಳೆದ ತಂಬಾಕು ಮತ್ತು ನೇಯ್ದ ಬಟ್ಟೆಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಮೆಣಸು ಮತ್ತು ಅಡಿಕೆಯನ್ನು ವಾಲಾಜಪೇಟೆಯಲ್ಲಿ ಮಾರುತ್ತಾರೆ. ಸಮುದ್ರದ ಮಾರ್ಗದಿಂದ ಮದ್ರಾಸಿಗೆ ಬರುತ್ತಿದ್ದ ರೇಷ್ಮೆಯನ್ನೂ ತಂದು ಬೆಂಗಳೂರು, ಬಳ್ಳಾರಿ, ಆದೋನಿಗಳಲ್ಲಿ ಮಾರಾಟ ಮಾಡುತ್ತಾರೆ. ಅಲ್ಲಿ ಹತ್ತಿಯ ನೂಲನ್ನು ಹಾಗೂ ಕಂಬಳಿಗಳನ್ನು ಕೊಳ್ಳುತ್ತಾರೆ.
ಸಿಲಗುಟ್ಟ ತರಕಾರಿಗಳನ್ನು ಬೆಳೆಯುವುದರಲ್ಲಿ ಅತ್ಯಂತ ಹೆಸರುವಾಸಿ. ಗೋದಿ, ಅರಶಿನ, ಈರುಳ್ಳಿ, ಮೆಣಸಿನಕಾಯಿ, ಬೆಳ್ಳುಳ್ಳಿ, ಜೋಳ, ಕೊತ್ತಂಬರಿ ಬೆಳೆಯುವರು. ದನಗಳನ್ನು ಸಾಕಿದ್ದಾರೆ. ಇಲ್ಲಿ ಒಂದು ಎಕರೆಗೆ ಆರು ಕಂಡುಗ ರಾಗಿ ಬೆಳೆಯುತ್ತಾರೆ. ನೀರನ್ನು ಬಾವಿಯಿಂದ ತೆಗೆಯಲು ಇಲ್ಲಿ ಸಣ್ಣ ಏತವನ್ನೇ ಬಳಸುವರು. ನೀರು ೩೫ ಅಡಿ ಆಳಕ್ಕೆ ಹೋದರೂ ಇದರಿಂದ ನೀರೆತ್ತಬಹುದು’ ಎಂಬ ಚಿತ್ರಣವನ್ನು ನೀಡಿದ್ದಾರೆ.


ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಿಂದೆ ನೀರನ್ನು ಬಾವಿಯಿಂದ ಎತ್ತಲು ಬಳಸುತ್ತಿದ್ದ ಏತದ ರೇಖಾಚಿತ್ರ.



‘ಇತಿಹಾಸ ನಮ್ಮ ಪೂರ್ವಜರ ಸಾಮಾಜಿಕ, ಆರ್ಥಿಕ ಹಾಗೂ ಮಾನವೀಯ ಗುಣಗಳನ್ನು ಪರಿಚಯಿಸುತ್ತದೆ. ಕಾಲ ಬದಲಾದಂತೆ ಎದುರಾಗುವ ಸಂದಿಗ್ದಗಳು ಮತ್ತು ಸವಾಲುಗಳನ್ನು ಎದುರಿಸಲು ಹಾಗೂ ತಪ್ಪುಗಳನ್ನು ತಿದ್ದಿಕೊಳ್ಳಲು ಇತಿಹಾಸವನ್ನು ಅವಲೋಕಿಸುತ್ತಿರಬೇಕು. ಬುಕನನ್ ಬರಹದಿಂದ ನಮ್ಮ ಹಿಂದಿನವರ ಕೃಷಿ, ನೀರಿನ ಸದ್ಭಳಕೆ, ವ್ಯಾಪಾರದ ಚತುರತೆ, ಧಾರ್ಮಿಕ ಪದ್ಧತಿ ಎಲ್ಲ ತಿಳಿಯುತ್ತದೆ’ ಎನ್ನುತ್ತಾರೆ ಶಾಸನತಜ್ಞ ಡಾ.ಶೇಷಶಾಸ್ತ್ರಿ.

Wednesday, December 21, 2011

ಪುಸ್ತಕ ಬಿಡುಗಡೆ ಸಮಾರಂಭ

ಡಿಸೆಂಬರ್ ೧೮ ರ ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನವಕರ್ನಾಟಕ ಪ್ರಕಾಶನ ಸಂಸ್ಥೆಯವರು ಡಾ.ಎನ್.ಎಸ್.ಲೀಲಾ ಅವರ ವರ್ಣ ಮಾಯಾಜಾಲ ಮತ್ತು Mystery, Magic and Music of Colours ಹಾಗೂ ನನ್ನ, ಚಿಟ್ಟೆಗಳು ಮತ್ತು Butterflies ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ಪ್ರೊ.ಕೆ.ಜಗನ್ನಾಥರಾವ್ ವಹಿಸಿದ್ದರು. ಪ್ರೊ.ಎಂ.ಆರ್.ನಾಗರಾಜು ಮತ್ತು ಕುಮಾರಿ ಅಭಿಜ್ಞ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು.
ಫೋಟೋಗಳನ್ನು ಕ್ಲಿಕ್ಕಿಸಿದ್ದು ಗೆಳೆಯ ಅಜಿತ್ ಕೌಂಡಿನ್ಯ.