Wednesday, May 25, 2011

ಬುರ್‌ಬುರ್ ಗಂಗಮ್ಮ


ಶಿಡ್ಲಘಟ್ಟದ ಬಳಿ ಕಂಡುಬಂದ ‘ಬುರ್ಬುರ್ ಗಂಗಮ್ಮ’ ಜನಾಂಗದವರು.

ತುತ್ತು ಅನ್ನಕ್ಕಾಗಿ ಕೆಲವರು ಪಡಬಾರದ ಕಷ್ಟಗಳನ್ನೆಲ್ಲ ಪಡುತ್ತಾರೆ. ಹೊಟ್ಟೆ ತುಂಬ ಊಟ ಮಾಡಲಾಗದೇ ಪರಿತಪಿಸುತ್ತಾರೆ. ಪರಾವಲಂಬಿಯಾಗಿ ಯಾತನೆಯಿಂದ ಬದುಕುವುದು ಅನಿವಾರ್ಯವಾಗುತ್ತದೆ. ಆದರೆ ಸ್ವಾವಲಂಬಿ ಸ್ವಾಭಿಮಾನದಿಂದ ಬದುಕಲು ಕೆಲವರು ಶ್ರಮಿಸುತ್ತಾರೆ. ದೇಹದಂಡನೆ ಮಾಡುತ್ತಾರೆ. ಅಂಥವರು ‘ಬುರ್‌ಬುರ್ ಗಂಗಮ್ಮ’ ಎಂಬ ಜನಾಂಗದಲ್ಲಿದ್ದಾರೆ.

ಓದು-ಬರಹ ಕಲಿಯಲಾಗದ ಅವರಿಗೆ ಶಿಸ್ತುಬದ್ಧ ಜೀವನ ಕೂಡ ಇರುವುದಿಲ್ಲ. ಊರೂರಿಗೆ ಅಲಮಾರಿಗಳಂತೆ ತಿರುಗುವ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಊರುಗಳನ್ನು ತಿರುಗುತ್ತ ಶಿಡ್ಲಘಟ್ಟಕ್ಕೆ ಬಂದ ಅವರು ತಮ್ಮ ಜೀವನದ ಕಟುಸತ್ಯಗಳನ್ನು ತೆರೆದಿಟ್ಟರು.
‘ನಮಗೆ ಓದಲು-ಬರೆಯಲು ಬರುವುದಿಲ್ಲ. ಯಾರೂ ಕೆಲಸ ಕೂಡ ಕೊಡುವುದಿಲ್ಲ. ಈ ಕಾರಣಕ್ಕಾಗಿ ನಮ್ಮ ಶರೀರವನ್ನು ಹಿಂಸಿಸಿಕೊಳ್ಳುತ್ತ, ನಮ್ಮ ಕಲೆಯನ್ನು ಪ್ರದರ್ಶಿಸುತ್ತವೆ. ಇದನ್ನು ನೋಡುವ ಜನರು ಬೆರಗಾಗಿ ಅಲ್ಪಸ್ವಲ್ಪ ಹಣವನ್ನು ನೀಡುತ್ತಾರೆ. ಆ ಒಂದು ದಿನದ ಊಟಕ್ಕೆ ಸಾಕಾಗುವಷ್ಟು ಹಣ ಬರುತ್ತದೆ. ಇವತ್ತಿನ ಊಟದ ಸಮಸ್ಯೆಯಿಲ್ಲ ಎಂದು ನೆಮ್ಮದಿಯಿಂದ ಊಟ ಮಾಡಿ ಮತ್ತೆ ಮುಂದಿನ ಊರಿಗೆ ಪ್ರಯಾಣಿಸುತ್ತೇವೆ’ ಎಂದು ಜನಾಂಗದ ಕಲಾವಿದರು ತಿಳಿಸಿದರು.

‘ಅಲೆಮಾರಿಗಳಾಗಿರುವ ನಮ್ಮ ಬಳಿ ಬಳಿ ಪಡಿತರ ಚೀಟಿ ಇಲ್ಲ. ಹೇಳಿಕೊಳ್ಳಲು ಸ್ವಂತ ಊರು ಇಲ್ಲ. ಸರ್ಕಾರಿ ಸೌಲಭ್ಯಗಳು ಸಿಗುವುದಂತೂ ಇನ್ನೂ ದೂರ. ನೋವು-ದುಃಖವನ್ನು ಮರೆಯಲು ಸೆರೆ ಕುಡಿಯುತ್ತೇವೆ. ಅನಾರೋಗ್ಯಕ್ಕೀಡಾವರು ಆಯಾ ಊರುಗಳಲ್ಲೇ ಸಾವನ್ನಪ್ಪುತ್ತಾರೆ. ನಮ್ಮ ಹುಟ್ಟು-ಸಾವುಗಳ ಬಗ್ಗೆ ಯಾರೂ ಲೆಕ್ಕ ಇಡುವುದಿಲ್ಲ’ ಎಂದು ಅವರು ಹೇಳಿದರು.

ದಕ್ಷಿಣ ಕರ್ನಾಟಕದಲ್ಲಿ ಉರು ಮಾರಿಯಮ್ಮ, ಕೊಲ್ಲಾಪುರದಮ್ಮ, ಬುರ್‌ಬುರ್ ಗಂಗಮ್ಮ ಎಂದು ಕರೆಸಿಕೊಳ್ಳುವ ಈ ಜನಾಂಗದವರು ಉತ್ತರ ಕರ್ನಾಟಕ ಭಾಗದಲ್ಲಿ ‘ದುರುಗ ಮುರುಗಿ’ ಎಂದು ಕರೆಯಲ್ಪಡುತ್ತಾರೆ. ಮಾರಮ್ಮ ಅಥವಾ ಗಂಗಮ್ಮ ದೇವತೆಯ ಮೂರ್ತಿಯನ್ನು ಪೆಟ್ಟಿಗೆಯಲ್ಲಿಟ್ಟುಕೊಳ್ಳುವ ಅವರು ಅದನ್ನು ಹೊತ್ತುಕೊಂಡು ಊರೂರು ತಿರುಗುತ್ತಾರೆ. ವಾದ್ಯ ಬಡಿತಕ್ಕೆ ತಕ್ಕಂತೆ ಕುಣಿಯುವುದಲ್ಲದೆ, ಪೋತುರಾಜನ ವೇಷ ಮತ್ತು ಸೋಮನ ಮುಖವಾಡದ ಪ್ರದರ್ಶನ ಕೂಡ ನೀಡುತ್ತಾರೆ.
ಸಂತೆ, ಜಾತ್ರೆಗಳಂತಹ ಹೆಚ್ಚು ಜನಸಂಖ್ಯೆಯಿರುವ ಪ್ರದೇಶದಲ್ಲಿ ತಮ್ಮ ಪೆಟ್ಟಿಗೆಯನ್ನು ಸ್ಥಾಪಿಸಿ ಗಂಟೆ ಸದ್ದು ಮಾಡುತ್ತಾರೆ. ಮಹಿಳೆಯರು ಉರುಮೆ ಸದ್ದು ಮಾಡುತ್ತಾ ಮರಗಮ್ಮನ ಸ್ತುತಿ ಮಾಡುತ್ತಾರೆ. ಪುರುಷರು ಚಾವಟಿಯಿಂದ ತಮ್ಮ ಬರಿಮೈಗೆ ಹೊಡೆದುಕೊಂಡು ದೇವರನ್ನು ಹೊಗಳುತ್ತಾರೆ. ಉರುಮೆ ವಾದ್ಯದ ಗತಿಗೆ ತಕ್ಕಂತೆ ಹೆಚ್ಚೆ ಹಾಕುತ್ತಾ ‘ಪೋತರಾಜ’ ಆವೇಶ ಬಂದವರಂತೆ ಚಾವಟಿಯಿಂದ ಪಟಪಟನೆ ಮೈಯಿಗೆ ಹೊಡೆದುಕೊಳ್ಳುತ್ತಾರೆ. ಕೆಲವೊಮ್ಮೆ ರಕ್ತ ಕೂಡ ಒಸರುತ್ತದೆ.
ಅವರ ವೇಷಭೂಷಣಗಳು ವಿಚಿತ್ರ. ಮುಖಕ್ಕೆ ಅರಿಶಿನ, ಹಣೆಗೆ ದೊಡ್ಡ ಬೊಟ್ಟಿನಾಕಾರದ ಕುಂಕುಮ, ಕಣ್ಣಿಗೆ ಕಾಡಿಗೆ, ಪೊದೆ ಮೀಸೆ, ಎದೆಗೂ ಅರಿಶಿನ ಕುಂಕುಮದ ಲೇಪನ, ಕೈ ರೆಟ್ಟೆಗೆ ಬೆಳ್ಳಿಯ ಕಡಗ, ನಡುವಿಗೆ ದಪ್ಪ ಗೆಜ್ಜೆಯ ಸರ, ಕಾಲಿಗೆ ಪೊದೆಗೆಜ್ಜೆ, ಕೆಂಪು ಸೀರೆಯನ್ನೇ ನಿರಿಗೆಯಾಗಿ ಕಚ್ಚೆಯ ರೀತಿ ಕಟ್ಟಿದ ಕಾಸೆ, ಕೈಯಲ್ಲಿ ಚಾವಟಿ-ಇವು ಪೋತರಾಜನ ವೇಷ. ಈತನ ಜೊತೆಯಲ್ಲಿರುವ ಮಹಿಳೆ ಕೈಗೆ ಕಡಗ, ನಡುವಿಗೆ ಡಾಬು, ಮೂಗುತಿ ಹಾಗೂ ಇತರ ಬೆಳ್ಳಿಯ ಒಡವೆ ಧರಿಸಿರುತ್ತಾರೆ.
‘ಗ್ರಾಮೀಣ ಶಕ್ತಿದೇವತೆಗಳಲ್ಲಿ ಮಾರಮ್ಮ ಅತ್ಯಂತ ಪ್ರಭಾವಶಾಲಿ. ಉರಿ ಮಾರಮ್ಮ ಅಂದರಂತೂ ಮತ್ತಷ್ಟು ಉಗ್ರ. ಅಂತಹ ‘ಹೊತ್ತಾಡುವ ಉರಿ ಮಾರಮ್ಮ’ ಊರಿಗೆ ಬಂದರೆ ಕಷ್ಟಗಳು ದೂರವಾಗುತ್ತವೆ ಗ್ರಾಮಸ್ಥರ ನಂಬಿಕೆ. ಭಯ ಹಾಗೂ ಭೀಭತ್ಸ ಬೆರೆತ ಅಪರೂಪದ ಜಾನಪದ ಕಲೆಯಿದು’ ಎಂದು ಜನಪದ ತಜ್ಞ ಡಾ.ಜಿ.ಶ್ರೀನಿವಾಸಯ್ಯ ತಿಳಿಸಿದರು.

3 comments:

ಸವಿಗನಸು said...

tara tara jana rannu huduki parichayisuthira sir.....

sunaath said...

ಅಪರೂಪದ ಲೇಖನ. ಅಭಿನಂದನೆಗಳು.

ಸುಧೇಶ್ ಶೆಟ್ಟಿ said...

ಇವರನ್ನು ಹಲವು ಸಲ ನೋಡಿದ್ದರೂ ಅಷ್ಟು ಗಮನ ಕೊಟ್ಟಿರಲಿಲ್ಲ... ಇವರ ಹಿನ್ನೆಲೆ ತಿಳಿದು ಸ್ವಲ್ಪ ಖೇದವಾಯಿತು ಮನಸಿಗೆ...