Sunday, April 24, 2011
ಪಪ್ಪಾಯಿ ಮರದಲ್ಲಿ ಜೇನು ಸಾಕಾಣಿಕೆ
ಶಿಡ್ಲಘಟ್ಟ ತಾಲ್ಲೂಕಿನ ಇದ್ಲೂಡು ಗ್ರಾಮದ ರೈತ ಗೋಪಾಲಪ್ಪ ಮೂರ್ತಿ ಅವರ ತೋಟದ ಪಪಾಯ ಮರದಲ್ಲಿ ಜೇನು ಗೂಡು ಮಾಡಿಕೊಳ್ಳುವಂತೆ ಮಾಡಿರುವ ರಂಧ್ರವನ್ನು ತೋರಿಸುತ್ತಿರುವುದು
ಎಲ್ಲ ಕೀಟಗಳು ಅಲ್ಲದಿದ್ದರೂ ಕೆಲ ಕೀಟಗಳು ಉಪಯುಕ್ತ ಎಂದು ಹೇಳಲಾಗುತ್ತದೆ. ಪಠ್ಯಪುಸ್ತಕಗಳಲ್ಲಿ ಉಪಯುಕ್ತ ಕೀಟಗಳ ಬಗ್ಗೆ ವರ್ಣನೆ ಕೂಡ ಮಾಡಲಾಗುತ್ತಿದೆ. ಆದರೆ ಕೀಟಗಳ ಸದ್ಬಳಕೆ ವಿಷಯ ಪ್ರಸ್ತಾಪವಾದಾಗ, ಬಹುತೇಕ ಜನರಿಂದ ಹೆಚ್ಚಿನ ಆಸಕ್ತಿ ವ್ಯಕ್ತವಾಗುವುದಿಲ್ಲ. ಕೀಟಗಳು ಕಾಪಾಡುವುದು ಅಷ್ಟೇ ಅಲ್ಲ, ಅವುಗಳ ಸಂತತಿಯ ಬೆಳವಣಿಗೆಗೂ ಯಾರೂ ಮುಂದಾಗುವುದಿಲ್ಲ.
ಆದರೆ ಇದಕ್ಕೆ ಅಪವಾದ ಎಂಬಂತೆ ಶಿಡ್ಲಘಟ್ಟದ ಹೊರವಲಯದಲ್ಲಿರುವ ಇದ್ಲೂಡು ಗ್ರಾಮದ ರೈತರೊಬ್ಬರು ವಿಶಿಷ್ಟ ಪ್ರಯೋಗ ಕೈಗೊಳ್ಳುವುದರ ಮೂಲಕ ಕೀಟಗಳ ಸಾಕಾಣಿಕೆ ಮತ್ತು ಬಳಕೆಯಲ್ಲಿ ಹೆಚ್ಚಿನ ಆಸ್ಥೆ ತೋರುತ್ತಿದ್ದಾರೆ. ರೈತ ಗೋಪಾಲಪ್ಪ ಮೂರ್ತಿ ಅವರು ಪಪಾಯ ಮರದ ಕಾಂಡವನ್ನು ಜೇನು ಸಾಕಾಣಿಕಾ ಸ್ಥಳವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.
ಟೊಳ್ಳಾಗಿರುವ ಪಪಾಯ ಮರದ ಕಾಂಡದ ಮೂರು ಕಡೆ ಸಣ್ಣ ರಂಧ್ರಗಳನ್ನು ಮಾಡಿದ್ದಾರೆ. ತುಡುವೆ ಜೇನಿಗೆ ಪ್ರಶಸ್ತ ಸ್ಥಳವಾದ್ದರಿಂದ ಜೇನು ನೊಣಗಳು ಅಲ್ಲಿ ಬಂದು ಸೇರಿಕೊಂಡಿವೆ.
ಸಾಮಾನ್ಯವಾಗಿ ಜೇನು ನೊಣಗಳ ಕುಟುಂಬಗಳು ಭಾಗವಾದಾಗ ರಾಣಿ ಜೇನು ತನ್ನ ಕೆಲ ಜೇನುನೊಣಗಳೊಂದಿಗೆ ಈ ರೀತಿಯ ಸೂಕ್ತ ಸ್ಥಳವನ್ನು ಗುರುತಿಸಿ ಗೂಡು ಮಾಡುತ್ತವೆ. ದಿನವೊಂದಕ್ಕೆ ೫೫೦ ರಿಂದ ೧೦೦೦ ಮೊಟ್ಟೆ ಇಡುವ ಸಾಮರ್ಥ್ಯ ತುಡುವೆ ರಾಣಿ ಜೇನು ನೊಣಕ್ಕಿದೆ. ಮಕರಂದ ಮತ್ತು ಪರಾಗ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತಿದ್ದರೆ ರಾಣಿ ನೊಣವು ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಡುತ್ತದೆ. ಇದರಿಂದ ಹುಳುಗಳ ಸಂಖ್ಯೆಯೂ ಹೆಚ್ಚಾಗುತ್ತದೆ.
ತುಡುವೆ ಜೇನುನೊಣಗಳ ಗೂಡಿನ ಪ್ರವೇಶದ್ವಾರ.
"ಕೇರಳದ ರೈತರೊಬ್ಬರು ಜೇನು ಸಾಕಾಣಿಕೆ ಮಾಡಿ ಅದರಿಂದ ಪರಾಗಸ್ಪರ್ಶ ಹೆಚ್ಚಾಗಿ ನಾಲಜಾನಿ ತಳಿಯ ಏಲಕ್ಕಿ ಬೆಳೆಯನ್ನು ೩ ಟನ್ ನಿಂದ ೧೨ ಟನ್ ಇಳುವರಿಗೆ ಏರಿಸಿದ್ದನ್ನು ಪತ್ರಿಕೆಯಲ್ಲಿ ಓದಿದ್ದೆ. ಅದರಿಂದ ಸ್ಫೂರ್ತಿಗೊಂಡು ಪಪಾಯ ಗಿಡವು ಕಾಯಿ ನಿಲ್ಲಿಸುವ ಸಮಯಕ್ಕೆ ಜೇನು ಗೂಡುಗಳನ್ನಾಗಿಸುವ ಪ್ರಯೋಗ ಕೈಗೊಂಡೆ. ಆದರೆ ರಾಣಿ ಜೇನನ್ನು ಕೂಡಿಟ್ಟು ಬಂಧಿಸಿ ಸಾಕುವುದು ನನಗಿಷ್ಟವಿಲ್ಲ. ಅವು ನಮ್ಮಂತೆ ಸ್ವಾಭಾವಿಕವಾಗಿ ಸ್ವಚ್ಛಂದವಾಗಿ ಬದುಕಬೇಕು. ಈಗ ಎರಡು ಗೂಡುಗಳಾಗಿವೆ. ಈ ಜೇನುಗಳಿಂದ ನಮ್ಮ ತೋಟದ ಬೆಳೆಗಳಷ್ಟೇ ಅಲ್ಲದೆ ಸುತ್ತಮುತ್ತಲಿನ ತೋಟಗಳ ಬೆಳೆಗಳಿಗೂ ಪರಾಗಸ್ಪರ್ಶ ನಡೆಯುತ್ತದೆ. ಮುಂದೆ ೫೦ ರಿಂದ ೧೦೦ ಪಪಾಯ ಮರಗಳನ್ನು ಬೆಳೆದು ಈ ಪ್ರಯೋಗವನ್ನು ಮುಂದುವರಿಸುವ ಉದ್ದೇಶವಿದೆ. ಮನೆ ಮುಂದೆ ಹಲವರು ಪಪಾಯ ಗಿಡವನ್ನು ಬೆಳೆಯುತ್ತಾರೆ. ಹಣ್ಣು ಬಿಡುವುದು ನಿಲ್ಲಿಸಿದ ಮೇಲೆ ಮರವನ್ನು ಅವರೂ ಈ ರೀತಿ ಜೇನು ನೊಣಗಳು ಸೇರಲು ಅವಕಾಶ ಮಾಡಿಕೊಡಬಹುದು" ಎನ್ನುತ್ತಾರೆ ಮೂರ್ತಿ.
Subscribe to:
Post Comments (Atom)
5 comments:
ಉಪಯುಕ್ತ ಲೇಖನ. ಈ ಪ್ರಯೋಗದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.
ಅವರ ಪ್ರಯತ್ನ ಒಳ್ಳೆಯದು...ಉಪಯುಕ್ತ ಮತ್ತು ಲಾಭದಾಯಕವಾಗಿದೆ..ಒಳ್ಳೆಯ ಮಾಹಿತಿ ಕೊಟ್ಟಿದ್ದಿರ
good article.. informative..
nice info
Post a Comment