Monday, April 6, 2009

ಪುಟ್ಟಜೀವಿಯ ದೊಡ್ಡ ಮನೆ

"ಅರೆ! ಇದೇನಿದು ಮರಕ್ಕೇನೋ ಕಟ್ಟಿದ ಹಾಗಿದೆ?"ನನ್ನ ಹೆಂಡತಿ ಕೈತೋರಿದತ್ತ ನೋಡಿದಾಗ ಅಲ್ಲಿ ಕಂಡದ್ದು, ಕೈ ಚಾಚಿ ತಬ್ಬಿಕೊಳ್ಳಬಹುದಾದಷ್ಟು ದೊಡ್ಡದಾದ ಮಣ್ಣಿನ ಹೆಂಟೆ. ಹಲಸಿನ ಮರದ ಕೊಂಬೆಯಿಂದ ಆ ಹೆಂಟೆ ನೇತಾಡುತ್ತಿತ್ತು. ತಕ್ಷಣವೇ ಹೊಳೆಯಿತು - ಅದು ಕಣಜದ ಗೂಡೆಂದು. ನಿಧಾನವಾಗಿ ಹತ್ತಿರ ಹೋಗುತ್ತಿದ್ದಂತೆಯೇ, "ಅಲ್ಲಿಗೆ ಹೋಗ್ಬೇಡ್ರೀ, ಹುಳ ಕಚ್ತವೆ" ಎಂದು ಅಲ್ಲಿಯೇ ಸಮೀಪದಲ್ಲಿದ್ದ ಒಬ್ಬ ಮಹಿಳೆ ಕೂಗಿಕೊಂಡರು. ದೂರದಿಂದಲೇ ನೋಡುವುದಷ್ಟಕ್ಕೇ ನಾವು ತೃಪ್ತಿಪಡಬೇಕಾಯಿತು.
ಅಂದಹಾಗೆ, ಶಿಡ್ಲಘಟ್ಟದಿಂದ ಎರಡು ಕಿ.ಮೀ. ದೂರದಲ್ಲಿರುವ ಗವಿಗುಟ್ಟವೆಂಬ ಗವಿಯಲ್ಲಿರುವ ಶಿವನ ದೇವಸ್ಥಾನಕ್ಕೆ ಹೋದಾಗ ನಮ್ಮ ಕಣ್ಣಿಗೆ ಈ ಅಪರೂಪದ ಗೂಡಿನ ದೃಶ್ಯ ಬಿದ್ದಿತ್ತು.
ದೇವಾಲಯದಲ್ಲಿನ ಅರ್ಚಕರನ್ನು ಕಣಜದ ಗೂಡಿನ ಬಗ್ಗೆ ವಿಚಾರಿಸಿದೆವು. ಅವರು ಹೇಳಿದ್ದಿಷ್ಟು: "ಸುಮಾರು ಮೂರು ತಿಂಗಳಿಂದ ಈ ಗೂಡು ಇಲ್ಲಿದೆ. ಹುಡುಗರ ತಂಟೆ ಇಲ್ಲಿ ಜಾಸ್ತಿ. ನಾವು ಆದಷ್ಟೂ ಯಾರನ್ನೂ ಗೂಡಿನ ಹತ್ತಿರಕ್ಕೆ ಬಿಡೊಲ್ಲ. ಅಕಸ್ಮಾತ್ ಯಾರನ್ನಾದ್ರೂ ಹುಳಗಳು ಕಚ್ಚಿ ಏನಾದ್ರೂ ಅನಾಹುತ ಆದ್ರೆ..."
ಸೊಳ್ಳೆಗಳಂತೆ ಕಣಜಗಳಲ್ಲೂ ಹೆಣ್ಣುಗಳಿಗೆ ಮಾತ್ರ ಮುಳ್ಳಿರುತ್ತದೆ. ಈ ಮುಳ್ಳಿರುವ ಕಣಜಗಳು ಮಾತ್ರ ಕಚ್ಚುತ್ತವೆ. ತಮ್ಮನ್ನು ರಕ್ಷಿಸಿಕೊಳ್ಳಲು ಇವು ಕುಟುಕುತ್ತವೆಯೇ ಹೊರತು, ಸುಮ್ಮಸುಮ್ಮನೆ ಮನುಷ್ಯನ ಮೇಲೇರಿ ಹೋಗುವುದಿಲ್ಲ. ಗುಂಪಿನಲ್ಲಿ ವಾಸಿಸುವ ಕಣಜಗಳಲ್ಲಿ ತಮ್ಮ ದೊಡ್ಡ ಮನೆಯ ರಕ್ಷಣೆಗಾಗಿಯೇ ಮುಳ್ಳುಗಳನ್ನು ಹೊಂದಿರುವ ಸೈನಿಕರ ಪಡೆ ಇರುತ್ತದೆ. ಇವುಗಳ ಕೊಂಡಿ ಅಥವಾ ಮುಳ್ಳು ವಿಷಕಾರಿ. ಈ ಮುಳ್ಳುಗಳಲ್ಲಿ ಕೆಂಪು ರಕ್ತ ಕಣಗಳನ್ನು ಕರಗಿಸುವ ಹಿಸ್ಟಮಿನ್ ರಾಸಾಯನಿಕವನ್ನು ಬಿಡುಗಡೆ ಮಾಡುವ ಕೋಶಗಳಿರುತ್ತವೆ. ಕಣಜಗಳ ಗುಂಪು ದಾಳಿಯಲ್ಲಿ ಕಡಿತಕ್ಕೊಳಗಾದ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆಯೂ ಇದೆ.
ಕಣಜದ ಬಗೆಗಿನ ಧ್ಯಾನದಲ್ಲೇ ಪೂಜೆ ಮುಗಿಸಿ ಮನೆಗೆ ಬಂದವನೇ ಕ್ಯಾಮೆರಾದೊಂದಿಗೆ ಮರಳಿ ದೇಗುಲದ ಬಳಿ ಹೋದೆ. ಸದ್ದು ಮಾಡದೆ ಪೋಟೋಗಳನ್ನು ಕ್ಲಿಕ್ಕಿಸಿಕೊಂಡು ಬಂದೆ.
ಇಂಗ್ಲಿಷ್ ನಲ್ಲಿ ಹಾರ್ನೆಟ್ ಎಂದು ಕರೆಯುವ ಗುಂಪಿನ ಕಣಜಗಳು ತಮ್ಮ ಗೂಡಿನ ಸುತ್ತಲೂ ಚೆಂಡಿನಂತಹ ಗುಂಡಗಿನ ಹೊದಿಕೆಯನ್ನು ರಕ್ಷಿಸಿಕೊಳ್ಳುತ್ತವೆ. ಈ ಗೂಡುಗಳಲ್ಲಿ ನೂರಾರು, ಕೆಲವೊಮ್ಮೆ ಸಾವಿರಾರು ಕಣಜಗಳು ಸಹಜೀವನ ನಡೆಸುತ್ತವೆ.
ರಾಣಿಯ ಆಡಳಿತ ಹೊಂದಿರುವ ಈ ಕಣಜಗಳು ಗೂಡು ಕಟ್ಟುವ ರೀತಿಯೇ ವಿಚಿತ್ರ. ಒಣ ಮರ ಮತ್ತು ತೊಗಟೆಗಳನ್ನು ಜಗಿದು ತಮ್ಮ ಜೊಲ್ಲಿನೊಂದಿಗೆ ಮಿಶ್ರಣ ಮಾಡಿಕೊಂಡು ಆರು ಮುಖಗಳಿರುವ ಮನೆಗಳನ್ನು ಕಟ್ಟುತ್ತಾ ಹೋಗುತ್ತವೆ. ಒಂದೇ ಅಳತೆಯ, ಒಂದರ ಪಕ್ಕ ಒಂದು, ಮೇಲೆ ಕೆಳಗೆ, ಸುತ್ತ ಮುತ್ತ, ಹೀಗೆ ಗೂಡು ಕಟ್ಟುವ ಇವುಗಳ ತಾಂತ್ರಿಕ ಕೌಶಲ್ಯಕ್ಕೆ ಯಾರಾದರೂ ತಲೆದೂಗಲೇಬೇಕು.
ಕೊಂಡಿ ಹೊಂದಿರುವ ಕಣಜವು ಜೀವಲೋಕದ ಮುಖ್ಯ ಕೊಂಡಿಯೂ ಹೌದು. ಕಣಜವನ್ನು ತಿನ್ನುವ ಜೀವಿಗಳಿರುವಂತೆ, ಕಣಜವು ತಿನ್ನುವ ಹಲವು ಜೀವಿಗಳಿವೆ. ಬೆಳೆಗಳಿಗೆ ಮಾರಕವಾದ ಹಲವು ಕ್ರಿಮಿಕೀಟಗಳನ್ನು ತಿನ್ನುವ ಕಣಜ ರೈತರಿಗೆ ಉಪಕಾರಿ. ಹೂಗಳ ಮಕರಂದವನ್ನು ಹೀರುತ್ತಾ ಪರಾಗ ಸ್ಪರ್ಶದ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ.
ಸ್ವಲ್ಪ ದಿನಗಳ ನಂತರ ಊರಿನಲ್ಲಿ ಭೇಟಿಯಾದ ಗವಿಗುಟ್ಟದ ಅರ್ಚಕರು ಸೂತಕದ ಸಮಾಚಾರ ತಂದಿದ್ದರು. "ನಾವಿಲ್ಲದ ಹೊತ್ತಿನಲ್ಲಿ ಯಾರೋ ಹುಡುಗರು ಆ ಗೂಡನ್ನು ಒಡೆದು ಹಾಕಿದ್ದಾರಪ್ಪ" ಅಂದರು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅಂತಾರಲ್ಲ, ಹಾಗಾಗಿತ್ತು. ತಕ್ಷಣವೇ ಹೋಗಿ ನೋಡಿದೆ. ಗೂಡಿನ ಅರ್ಧಕ್ಕೂ ಹೆಚ್ಚು ಭಾಗ ಕಳಚಿ ಬಿದ್ದಿತ್ತು. ಗೂಡಿನ ಒಳಭಾಗ ಅನಾವರಣಗೊಂಡಿತ್ತು. ಕೆಳಗೆ ಬಿದ್ದಿದ್ದ ಗೂಡಿನ ಅವಶೇಷಗಳನ್ನು ನೋಡಿ ಮನಸ್ಸಿಗೆ ಪಿಚ್ಚೆನ್ನಿಸಿತು. ಕಣಜಗಳು ಕಾಣಲಿಲ್ಲ. ಎಲ್ಲಿ ಹೋದವೋ? ಅವು ಎಷ್ಟು ಕಷ್ಟಪಟ್ಟು ಈ ಗೂಡು ಕಟ್ಟಿದ್ದವೋ?
ನಮ್ಮಲ್ಲಂತೂ ಒಟ್ಟು ಕುಟುಂಬಗಳು, ದೊಡ್ಡ ಕುಟುಂಬಗಳು ಅಪರೂಪವಾಗುತ್ತಿವೆ. ಸಹಜೀವನದ ಉದಾಹರಣೆಗಾಗಿ ಕಣಜಗಳಂಥ ಜೀವಿಗಳತ್ತ ನೋಡುವ ಸಂದರ್ಭ ಬಂದಿದೆ. ಆದರೆ ಕಲಾತ್ಮಕ ಗೂಡನ್ನು ಹೊಡೆದು ಬಡಿದು ಬೀಳಿಸುವ ವಿಕೃತಿಗೆ ಏನನ್ನುವುದು?

40 comments:

Ittigecement said...

ಹುಡುಕಾಟದ ಮಲ್ಲಿಕಾರ್ಜುನ್....

ನಿಮ್ಮಲೇಖನ ಓದುತ್ತ ಭಾವಲೋಕಕ್ಕೆ ಹೋಗಿಬಿಟ್ಟೆ...
ನಾನು ಗುತ್ತಿಗೆ ದಾರನಾದರೂ ಹನ್ನೆರಡು ವರ್ಷದ ನಂತರ ಒಂದು ಗೂಡನ್ನು ಕಟ್ಟಿಕೊಂಡೆ..

"ನಮ್ಮನೆಯ" ಮಹತ್ವ ಗೊತ್ತಾಗಿದೆ...

ಕಣಜಗಳ ಉಪಕಾರವನ್ನು ಅರಿಯದೆ..
ನಿರ್ದಯವಾಗಿ..
ದ್ವಂಸಮಾಡಿದ ಮನಸ್ಸಿನ ಬಗೆಗೆ ಸಿಟ್ಟು ಬರುತ್ತದೆ...

ಅದ್ಭುತ ಫೋಟೊಗಳು ...!
ಮನಮಿಡಿಯುವ ಲೇಖನ...!

ನಿಮ್ಮ ಹುಡುಕಾಟಕ್ಕೆ ಅಭಿನಂದನೆಗಳು...!

shivu.k said...

ಮಲ್ಲಿಕಾರ್ಜುನ್,

ಕಣಜ ಗೂಡಿನ ಬಗ್ಗೆ ತುಂಬಾ ಚೆನ್ನಾದ ಮಾಹಿತಿ...

ನಾನು ನಿಮ್ಮೂರಿಗೆ ಬಂದಾಗ ಕರೆದುಕೊಂಡು ಹೋಗಿ ತೋರಿಸಿದ್ದಿರಿ....ಅದರ ಗಾತ್ರ ಮತ್ತು ಅಲ್ಲಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿಕೊಂಡಿದ್ದು ಅದ್ರ ಮುಖಾಂತರವೇ ಹೋಗಿಬರುವ ಈ ಕಣಜಗಳನ್ನು ಕಣ್ಣಾರೆ ಕಂಡಾಗ...
ನಮ್ಮ ಇತಿಹಾಸದ ದೊಡ್ಡ ಕೋಟೆ, ಅದಕ್ಕಿರುವ ದೊಡ್ಡ ಬಾಗಿಲುಗಳು ಅದನ್ನು ಕಾಯುವ ಸೈನಿಕರು....ಮತ್ತು ಒಳಗಿನ ಆರು ಮುಖಗಳನ್ನು ಹೊಂದಿರುವ ಒಂದರ ಪಕ್ಕ ಒಂದು ಸಮಾನ ವಿನ್ಯಾಸದ ಗೂಡುಗಳನ್ನು ನೋಡಿದಾಗ ಅವುಗಳ ಪರ್ಪೆಕ್ಟ್ ವಿನ್ಯಾಸ ನನ್ನನ್ನು ಬೆರಗಾಗಿಸಿತು...
ಅವಿಭಕ್ತ ಕುಟುಂಬಕ್ಕೆ ಉತ್ತಮ ಉದಾಹರಣೆಯಾದ ಕಣಜದ ಬಗೆಗಿನ ಲೇಖನ ಸಂಗ್ರಹಯೋಗ್ಯವೆನಿಸುತ್ತದೆ...
ಧನ್ಯವಾದಗಳು..

Govinda Nelyaru said...
This comment has been removed by the author.
Govinda Nelyaru said...

ನಮ್ಮ ಕರಾವಳಿ ಪ್ರದೇಶದಲ್ಲಿ ಗೂಡು ಕಟ್ಟುವುದು ಇದೇ ಅನ್ನಿಸುತ್ತೆ. ಅಪಾಯಕಾರಿಯಾದ ಕಾರಣ ನಾವು ದೂರವೇ ಇರುತ್ತೇವೆ.

ನಮಗೆ ತೊಂದರೆಯಾಗುವ ಜಾಗದಲ್ಲಿದ್ದರೆ ರಾತ್ರಿ ಸುಟ್ಟು ಬಿಡುವುದುಂಟು. ಇಲ್ಲವಾದರೆ ಚೂರಿಮುಳ್ಳು ಎನ್ನುವ ಮುಳ್ಳಿನ ಪೊದೆ ಹೂ ಬಿಡಲು ಕಾಯುತ್ತೇವೆ. ಆಗ ಇವುಗಳ ಹೆಚ್ಚಿನ ಪಾಲು ಸಾಯುತ್ತದೆ. ನಂತರ ಸಮೀಪ ಪ್ರದೇಶದಲ್ಲಿ ಇವುಗಳು ಕಾಣಸಿಗುವುದಿಲ್ಲ.

sritri said...

ನಮ್ಮನೆಯ ತಾರಸಿಯ ಮೇಲೆ ಆಗಾಗ ಕಣಜ ಗೂಡು ಕಟ್ಟುತ್ತಿತ್ತು. ಆದರೆ, ಕಣಜದ ಗೂಡು ಇಷ್ಟು ಕಲಾತ್ಮಕವಾಗಿರುವುದನ್ನು ನೋಡಿರಲಿಲ್ಲ. ಚಿತ್ರ, ಲೇಖನ ಎರಡೂ ಸುಂದರ!

Anonymous said...

ಒಳ್ಳೆ ಚಿತ್ರ ಲೇಖನ. ಚಿಕ್ಕಂದಿನಲ್ಲಿ ಊರಿನಲ್ಲಿ ಈ ತರದ ಗೂಡನ್ನು ನೋಡಿದ್ದೇನೆ, ಆದರೆ ಇಷ್ಟು ದೊಡ್ಡದನ್ನು ನೋಡಿರಲಿಲ್ಲ. ಚೆನ್ನಾಗಿದೆ; ಹಾಗೆಯೇ ಎಲ್ಲವನ್ನೂ ಹಾಳುಮಾಡುವ ಮನುಷ್ಯ ಮನಸ್ಸಿನ ವಿಕೃತಿಯ ಬಗ್ಗೆ ಸಿಟ್ಟೂ ಬರುತ್ತದೆ.

ವಿನುತ said...

ಅಬ್ಬಾ! ಅದ್ಭುತವೆನಿಸುವ೦ತಹ ಗುಡಿಗಾರಿಕೆ. ಇ೦ಥಹುದೊ೦ದು ಕೌಶಲದ ಮು೦ದೆ ಮನುಷ್ಯನ ಜಾಣ್ಮೆ ಏನೂ ಅಲ್ಲ. ಸಚಿತ್ರ ಮಾಹಿತಿಗಾಗಿ ಧನ್ಯವಾದಗಳು.

PARAANJAPE K.N. said...

ಮಲ್ಲಿ,
ಚೆನ್ನಾಗಿದೆ ಚಿತ್ರ-ಲೇಖನ. ಗೀಜಗನ ಗೂಡು ಅ೦ದ್ರೆ ಇದೇ ಅಲ್ವೇನ್ರಿ ?

guruve said...

ಕಣಜದ ಗೂಡಿನ ವರ್ಣನೆ, ಬರವಣಿಗೆ, ಫೋಟೋಗಳು ಬಹಳ ಚೆನ್ನಾಗಿವೆ. ಉಪಯುಕ್ತವಾದ ಮಾಹಿತಿ. ಕೊನೆಗೆ ಕುಟುಂಬಕ್ಕೆ ಹೋಲಿಸಿದ ರೀತಿಯೂ ಚೆನ್ನ...

ಮಲ್ಲಿಕಾರ್ಜುನ.ಡಿ.ಜಿ. said...

B.Suresha has sent a message on Kannada Bloggers.

ಪ್ರಿಯ ಮಲ್ಲಿಕಾರ್‍ಜುನ್,
ನಿಮ್ಮ ಪುಟ್ಟಜೀವಿಯ ದೊಡ್ಡಮನೆ ಓದಿದೆ.
ಇಂತಹ ಕಣಜಗಳನ್ನ ಅದಾಗಲೇ ನೋಡಿರುವವರಿಗೆ ಈ ಬರಹ ವಿಶೇಷ ಎನಿಸದು. ಕಂಡಿಲ್ಲದವರಿಗೆ ನೀವು ನೀಡಿರುವ ಮಾಹಿತಿ ಉಪಯುಕ್ತ.
ಬಯಲುಸೀಮೆಯ ಅನೇಕ ಕಡೆಗಳಲ್ಲಿ ವಿಶೇಷವಾಗಿ ಭಾರೀ ವಾಸನೆಯ ಹೂವುಗಳಿರುವ ಮರಗಿಡಗಳಲ್ಲಿ ಇವು ಕಾಣಿಸುತ್ತವೆ. ದಾಸವಾಳಕ್ಕೆ ಸಂಪಿಗೆಗೆ ಹೆಚ್ಚು.
ನನ್ನ ಬಾಲ್ಯದ ದಿನಗಳಲ್ಲಿ ಇಂತಹ ಕಣಜಗಳ ಅನೇಕ ಗೂಡುಗಳನ್ನು ನೋಡಿದ್ದೇನೆ.
ನನ್ನ ಚಿಕ್ಕಪ್ಪ (ಅಥವಾ ಮಾವ ಇರಬಹುದು) ರಾಮಿ ಅಂತಿದ್ದರು. ಆತನಿಗೆ ಕಾಲು ಸರಿ ಇರಲಿಲ್ಲ. ತೆವಳುತ್ತಾ ನಡೆಯುತ್ತಿದ್ದರು. ಅವರು ನಮ್ಮನ್ನ ಇಂತಹ ಗೂಡುಗಳಿರುವಲ್ಲಿಗೆ ಕರೆದೊಯ್ದು ವಿವರಿಸುತ್ತಾ ಇದ್ದದ್ದು ನೆನಪಿದೆ.
ಆತ ನಂತರ ಯಾವುದೋ ಶಾಲೆಯಲ್ಲಿ ಮೇಷ್ಟರಾಗಿದ್ದರು. ಮಕ್ಕಳನ್ನ ಹೀಗೆ ಪ್ರಕೃತಿಯ ನಡುವೆ ಕರೆದೊಯ್ಯುವುದೇ ಅವರಿಗೆ ಖುಷಿಯ ಕೆಲಸ. ಐದಾರು ವರ್ಷಗಳ ಕೆಳಗೆ ಅವರು ಬೆನ್ನು ನೋವಿನಿಂದಾಗ ತೀರಿಕೊಂಡರು.
ನಿಮ್ಮ ಲೇಖನ ಓದುತ್ತಾ ರಾಮಿ ಚಿಕ್ಕಪ್ಪ, ಅವರ ತಾಯಿ ಕಮಲಮ್ಮಜ್ಜಿ, ನಾನು ಓಡಾಡಿದ ಖಾನಮಡಗು ಎಲ್ಲಾ ನೆನಪಿಗೆ ಬಂದವು. ಅದಕ್ಕಾಗಿ ಥ್ಯಾಂಕ್ಸ್.
ಬರಹದ ಪ್ರಧಾನ ಗುರಿಗಳಲ್ಲಿ ನೆನಪಿನ ಕಣಜವನ್ನ ಬಿಚ್ಚುವದೂ ಸಹ ಒಂದು. ಆ ಕೆಲಸವನ್ನು ನಿಮ್ಮ ಬರಹ ಮಾಡಿದೆ.
ನಿಮ್ಮವ
ಬಿ.ಸುರೇಶ

Jayalaxmi said...

ಎಷ್ಟು ಚೆಂದದ ಗೂಡಿದು!! ಅಂದುಕೊಳ್ಳುತ್ತಾ ಲೇಖನ ಓದುತ್ತಾ ಮುಂದುವರೆದಂತೆ ಮುರಿದ ಗೂಡಿನ ಫೋಟೊ ನೋಡಿ ಅಚ್ಚರಿ,ಖುಷಿ ಬೇಸರದಲ್ಲಿ ಬದಲಾಯಿತು..

sunaath said...

ಶೀರ್ಷಿಕೆ ಓದಿದಾಗ ಮಾನವರ ಮನೆ ಅಂದುಕೊಂಡಿದ್ದೆ. ಲೇಖನವನ್ನು open ಮಾಡುತ್ತಿದ್ದಂತೆ ಕಣಜದ ಗೂಡಿನ ಬಗೆಗೆ ಗೊತ್ತಾಯಿತು. ಇಷ್ಟು ದೊಡ್ಡದಾದ ಗೂಡನ್ನು ನಾನು ಈ ಮೊದಲು ಎಲ್ಲಿಯೂ ನೋಡಿರಲಿಲ್ಲ. ಉತ್ತಮ ಲೇಖನ ಹಾಗು ಚಿತ್ರಗಳಿಗಾಗಿ ಧನ್ಯವಾದಗಳು.

Greeshma said...

ಎಷ್ಟು ದೊಡ್ಡ ಗೂಡು! ಕೊನೆಯ ಎರಡು ಚಿತ್ರಗಳು ಜೇನಿನ ಗೂಡಿನ ಹಾಗಿದೆ. material change ಅಷ್ಟೇ.
ಕಣಜದ್ದೂ ಒಂದು ಫೋಟೋ ಇದ್ದಿದ್ರೆ ಚೆನಾಗಿರ್ತಿತ್ತು.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಮಲ್ಲಿಕಾರ್ಜುನ್ ಅವರೇ ಚೆನ್ನಾಗಿದೆ. ಉತ್ತಮ ಸಂಗ್ರಹ. ನಮ್ಮ ಮನೆಯ ಸುತ್ತ ದಟ್ಟವಾದ ಕಾಡು. ಅಲ್ಲಿ ಇಂತ ಕಣಗನ ಗೂಡು ಸಾಕಸ್ಟು ಸಿಗತ್ತೆ. ಆದರೆ ಈಗ ಕಡಿಮೆ, ಅಪರೂಪ.

Unknown said...

ಮಲ್ಲಿಕಾರ್ಜುನ್, ದಿನವೂ ನಾವು ನೋಡುತ್ತಿರುವ ವಸ್ತುಗಳನ್ನೇ ನೀವು ನೋಡುತ್ತಿದ್ದರೂ, ಅವುಗಳಲ್ಲಿ ಏನೋ ಹೊಸದನ್ನು ಕಾಣುವ ಕಣ್ಣು ನಿಮಗಿದೆ. ನಿಮ್ಮ ಚಿತ್ರಲೇಖನ ಚೆನ್ನಾಗಿದೆ. ನಾವೂ ಚಿಕ್ಕ ಹುಡುಗರಲ್ಲಿ, ಸ್ಕೂಲಿಗೆ ಹೋಗಿಬರುವ ದಾರಿಯಲ್ಲಿ ತೆಂಗಿನ ಮರಕ್ಕೆ ಕಟ್ಟಿದ್ದ ಕಡಜದ ಗೂಡಿಗೆ ಕಲ್ಲು ಹೊಡೆದು ಓಡಿ ಹೋಗಿದ್ದು ನೆನಪಾಯಿತು. ಕಣಜ ಮತ್ತು ಅಡಜ ಿವುಗಳಲ್ಲಿ ಯಾವುದು ಸರಿ. ನಮ್ಮ ಕಡೆ ಇದನ್ನು ಕಡಜ ಎಂದೇ ಕರೆಯುವುದು. ಕಣಜ ಎಂದರೆ ಭತ್ತ ರಾಗಿ ಜೋಳ ಇವುಗಳನ್ನು ಸಂಗ್ರಹಿಸಿಡುವ ಉಗ್ರಾಣ ಎಂದಾಗುತ್ತದೆ. ಪಣತ ಎಂಬುದು ಅದಕ್ಕಿರುವ ಇನ್ನೊಂದು ಹೆಸರು. ಬಹುಶಃ ಕಡಜ ಸರಿಯಾದ ಪ್ರಯೋಗ ಎಂಬುದು ನನ್ನ ಅಭಿಪ್ರಾಯ. ಡ ಮತ್ತು ಣ ಒಂದೇ ವರ್ಗದ ಅಕ್ಷರಗಳಾಗಿರುವುದು ಈ ರೀತಿಯ ಅಕ್ಷರಪಲ್ಲಟಕ್ಕೆಡ ಕಾರಣವಿರಬಹುದು. ಅಲ್ಷರಪಲ್ಲಟ ಕನ್ನಡ ಭಾಷೆಯ ೊಂದು ಜಾಯಮಾನ. ಮರಳು- ಮಳಲು ಆದ ಹಾಗೆ. ಕಾಲುವೆ-ಕಾವಲೆ ಆದ ಹಾಗೆ.

ಅಹರ್ನಿಶಿ said...

ಮಲ್ಲಿಕಾರ್ಜುನ್,

ನಮ್ ಕಡೆ ಇವುಗಳನ್ನ ಕಟರೆ ಗೂಡು ಅ೦ತಾರೆ,ಆದ್ರೆ ಇಷ್ಟು ದೊಡ್ದ ಗೂಡನ್ನ ಎ೦ದೂ ಕ೦ಡಿಲ್ಲ.ನಿಮ್ಮ ಪರಿಶ್ರಮಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ.ಸಾಮಾನ್ಯವಾಗಿ ನೋಡುವ ಹವ್ಯಾಸ ನಿಮ್ಮದಲ್ಲ.ಚಿತ್ರ ಹಾಗು ಬರಹ ಬಹಳ ಚೆನ್ನಾಗಿದೆ.ಬಹಳ ನೊವಾಯಿತು,ಅ೦ತಹ ಸು೦ದರ ಮನೆಯನ್ನ ಹಾಳುಗೆಡವಿರುವುದ ಕ೦ಡು.ಆದರೆ ಅವುಗಳ ಮನೆಯ ಒಳಾ೦ಗಣ ವಿನ್ಯಾಸ ನೋಡಿ ಬೆರಗಾಯಿತು.ಯಾವ ಅರ್ಕಿಟೆಕ್ಟೂ ಊಹಿಸಿರಲಾರ.ಧನ್ಯವಾದಗಳು ಚೆ೦ದದ ಬರಹಕ್ಕೆ.

Naveen ಹಳ್ಳಿ ಹುಡುಗ said...

Mallikarjunarige Namaskaragalu..

Indina "The Hindu" patrikeyali Nimma mathu Shivu avara bagge ondu lekhana prakatavagide. Adannu Nodi nanage thumba kushiyaguthide..

Inthi nimma preetiya abhimani

ಧರಿತ್ರಿ said...

ಮಲ್ಲಿಯಣ್ಣ..
ಪುಟ್ಟಜೀವಿಯ ದೊಡ್ಡ ಮನೆ ಶೀರ್ಷಿಕೆ ತುಂಬಾ ಚೆನ್ನಾಗಿದೆ. ನಮ್ಮನೆಯ ಬಳಿ ಈಗಲೂ ದೊಡ್ಡ ದೊಡ್ಡ ಮರಗಳಲ್ಲಿ ಇದು ಗೂಡು ಕಟ್ಟಿರುತ್ತವೆ. ನೋಡಲೂ ತುಂಬಾ ಚೆನ್ನಾಗಿರುತ್ತವೆ. ಚಿಕ್ಕಲದಿರುವಾಗ ಈ ಗೂಡು ಇರುವ ಮರದ ಕೆಳಗಡೆಯಿಂದ ನಡೆಯಲೂ ಅಮ್ಮ ಬಿಡುತ್ತಿರಲಿಲ್ಲ. ಹುಳು ಕಚ್ಚುತ್ತೆ ಅನ್ನುತ್ತಾ ಇದ್ದಳು. ಅವುಗಳಿಗೆ ಕಲ್ಲು ಬಿಸಾಡಿದ್ರೆ ಊರೆಲ್ಲಾ ಅವುಗಳೇ ತುಂಬಿಕೊಳ್ಳುತ್ತವೆ ಅಂತೆ. ಸಿಕ್ಕಿದವರಿಗೆಲ್ಲಾ ಕಚ್ಚುತ್ತವೆ ಅಂತೆ.
ಒಳ್ಳೆ ಫೋಟೋ..ಖುಷಿ ಕೊಟ್ಟಿತು.

-ಧರಿತ್ರಿ

ಚಂದ್ರಕಾಂತ ಎಸ್ said...

ನಾವು ಒಂದೊಂದು ಮನೆ ಬದಲಿಸಿದಾಗಲೂ ನಮ್ಮ ಮನೆಯಲ್ಲಿ ಕಣಜದ ಗೂಡು ನೋಡಿದ್ದೇನೆ. ಎರಡು ರೀತಿಯ ಗೂಡುಗಳನ್ನು ನೋಡಿದ್ದೇನೆ.ಅದನ್ನು ನೋಡಿದವರೆಲ್ಲಾ ಇವು ಅದೃಷ್ಟದ ಸಂಕೇತ ಎನ್ನುತ್ತಿದ್ದರು ಅಂದರೆ ಗೊತ್ತಲ್ಲಾ ! ಮನೆಗೆ ‘ಲಕ್ಷ್ಮಿ’ ಬರುತ್ತದೆ ಎಂಬ ನಂಬಿಕೆಯಂತೆ! ಆದರೆ ಈ ಎಲ್ಲಾ ಗೂಡುಗಳು ಒಂದೇ ಹುಳು ಕಟ್ಟುವ ಗೂಡುಗಳೆನಿಸುತ್ತದೆ.ಈ ಗಾತ್ರದ ಗೋಡನ್ನು ನಾನು ನೋಡೇ ಇರಲಿಲ್ಲ.

ನಿಮ್ಮ ವೈಜ್ಞಾನಿಕ ವಿವರಗಳು ನನಗೆ ಬಹಳ ಇಷ್ಟವಾಗುತ್ತದೆ.ಆದರೆ ಗೊತ್ತಿಲ್ಲದ ಜನ ಇವೆಲ್ಲವನ್ನೂ ಹಾಳು ಮಾಡುತ್ತಾರೆ. ಅದೇಕೋ ನಮ್ಮ ಜನಗಳಿಗೆ ಚೆನ್ನಾಗಿರುವದನ್ನು ಕಂಡರೆ ಹಾಳು ಮಾಡುವ ಮನಸ್ಸಾಗುತ್ತದೆ. ಯಾರೋ ಪ್ರತಿಕ್ರಿಯೆಯಲ್ಲಿ ಬೆಂಕಿಹಾಕಿ ಸುಡುವ ವಿಷಯ ಬರೆದಿದ್ದನ್ನು ನೋಡಿ ತುಂಬಾ ದುಃಖವಾಯಿತು.

ನೀವು ಬರೆದಿರುವಂತೆ ಗಿಡಮರ- ಅದರಲ್ಲಿರುವ ಗೂಡುಗಳು-ಅವುಗಳು ರೈತನಿಗೆ ಮಾಡುವ ಉಪಕಾರ- ಈ ಎಲ್ಲ ವಿವರಗಳು ಸಮತೋಲನವಿರುವ ಪ್ರಕೃತಿಯನ್ನು ನಾವು ಹೇಗೆ ಹಾಳುಗೆಡವುತ್ತೇವೆ ಎಂಬುದನ್ನು ಚಿಂತಿಸುವಂತೆ ಮಾಡಿತು

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ನೀವು ಮನೆ ಕಟ್ಟಿಕೊಡುವವರು. ನೀವಂದಂತೆ ಇದೊಂದು ಹುಳುವಿನ ಗೂಡೆಂದು ನೋಡದೆ ನಮ್ಮಂತೆಯೇ ಮನೆ ಕಟ್ಟಿಕೊಂಡಿದೆ ಎಂಬ ರೀತಿ ನೋಡಬೇಕು.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಅಂದು ನೀವು ನೋಡಿದ ಗೂಡು ಎಷ್ಟು ಚೆನ್ನಾಗಿತ್ತಲ್ವಾ? ಅಂತಹುದನ್ನು ಒಡೆದು ಹಾಕಿರುವುದನ್ನು ನೋಡಿ ತುಂಬಾ ಬೇಜಾರಾಯಿತು.

ಮಲ್ಲಿಕಾರ್ಜುನ.ಡಿ.ಜಿ. said...

ಗೋವಿಂದ ಅವರೆ,
ಇದರ ಗೂಡಿನ ಹತ್ತಿರ ಓಡಾಡಿದರೆ, ಕಚ್ಚಿದರೆ ಅಪಾಯಕರ ಸರಿ. ಇದು ನಮ್ಮ ಮನೆಯ ಹತ್ತಿರ ಗೂಡು ಕಟ್ಟಿದೆಯೆನ್ನುವುದಕ್ಕಿಂತ ನಾವು ಅವುಗಳ ವಾಸಸ್ಥಳಗಳನ್ನು ಆಕ್ರಮಿಸಿದ್ದೀವಲ್ಲವಾ?

ಮಲ್ಲಿಕಾರ್ಜುನ.ಡಿ.ಜಿ. said...

Sritri ಅವರೆ,
ಧನ್ಯವಾದಗಳು. ನಾನೂ ಚಿಕ್ಕಗೂಡುಗಳನ್ನು ಮಾತ್ರ ನೋಡಿದ್ದದ್ದು. ಅದೇ ಮೊದಲ ಬಾರಿ ಇಷ್ಟು ದೊಡ್ಡ ಗೂಡನ್ನು ನೋಡಿದ್ದು.

ಮಲ್ಲಿಕಾರ್ಜುನ.ಡಿ.ಜಿ. said...

ಗ್ರೀಷ್ಮಾ ಅವರೆ,
ನೀವಂದಂತೆ ಕಟ್ಟುವ ಮನಸ್ಸುಗಳಿರಬೇಕು ಕೆಡವುವಂತ ಬುದ್ಧಿಗಳು ಬೇಡ.

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಅವರೆ,
You are right.
ನಿಜಕ್ಕೂ ಜೀವಲೋಕದ ಅದ್ಭುತಗಳ ಮುಂದೆ ಮನುಷ್ಯ ಏನೇನೂ ಅಲ್ಲ.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ಇದು ಕಣಜದ ಗೂಡು. ಗೀಜಗನ ಗೂಡಿನ ಬಗ್ಗೆಯೂ ನನ್ನ ಹಳೇ ಪೋಸ್ಟಿಂಗ್ ನಲ್ಲಿದೆ ನೋಡಿ.

ಮಲ್ಲಿಕಾರ್ಜುನ.ಡಿ.ಜಿ. said...

ಗುರುಪ್ರಸಾದ್ ಅವರೆ,
ಧನ್ಯವಾದಗಳು. ಈ ಜೀವಿಗಳೇನೇ ನೋಡಿದರೂ ಮನುಷ್ಯನ ನಡವಳಿಕೆಗೆ ಹೋಲಿಸಿ ನೋಡುವುದು ಅಭ್ಯಾಸವಾಗಿದೆ. ಮನುಷ್ಯ ಮೂಲತಃ ಕಲಿತಿರುವುದೆಲ್ಲಾ ಇತರೇ ಜೀವಿಗಳನ್ನು ನೋಡಿಯೇ ಅಲ್ವೇ?

ಮಲ್ಲಿಕಾರ್ಜುನ.ಡಿ.ಜಿ. said...

ಜಯಲಕ್ಷ್ಮಿ ಅವರೆ,
ನನಗೂ ಅಷ್ಟು ಚಂದದ ಗೂಡು ಹಾಳಾದ ಹುಡುಗರಿಂದ ನಾಶವಾಗಿದ್ದರ ಬಗ್ಗೆ ತುಂಬಾ ಬೇಸರವಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ನಾನೂ ಸಹ ಇದೇ ಮೊದಲ ಬಾರಿಗೆ ಅಷ್ಟು ದೊಡ್ಡ ಗೂಡು ನೋಡಿದ್ದು. ಮೊದಲೆಲ್ಲಾ ಅವು ಕಾಡಲ್ಲಿರುತ್ತಿದ್ದವೇನೋ. ಈಗ ನಾವು ಕಾಡನ್ನು ನಾಡು ಮಾಡಿ ಅವಕ್ಕೆ ತಾವಿಲ್ಲದಂತೆ ಮಾಡಿದ್ದೇವೆ.

ಮಲ್ಲಿಕಾರ್ಜುನ.ಡಿ.ಜಿ. said...

ಗ್ರೀಷ್ಮಾ ಅವರೆ,
ಹತ್ತಿರ ಹೋಗಿ ಕಾದು ನೋಡಿದೆ. ಕಣಜ ಹಾರುತ್ತಾ ಬಂದು ಗೂಡಿನೊಳಕ್ಕೆ ಹೋಗುತ್ತಿತ್ತು. ಕಣಜದ ಫೋಟೋ ತೆಗೆಯಲಾಗಲಿಲ್ಲ.

ಮಲ್ಲಿಕಾರ್ಜುನ.ಡಿ.ಜಿ. said...

ಅಗ್ನಿ ಅವರೆ,
ಮನೆಯ ಸುತ್ತ ಕಾಡನ್ನು ಹೊಂದಿದ್ದ ನೀವೇ ಅದೄಷ್ಟವಂತರು ಸರ್. ನೀವಂದಂತೆ ಮುಂದೆ ಎಷ್ಟೆಲ್ಲಾ ಇಲ್ಲವಾಗುತ್ತದೆ. ನೆನೆದರೆ ದುಃಖವಾಗುತ್ತೆ.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ನೀವು ಬರೆದಂತೆ ಕಡಜವೇ ಸರಿಯಿರಬಹುದು. ನಮ್ಮ ಕಡೆ ಕಣಜ ಎನ್ನುವುದರಿಂದ ಚಿಕ್ಕಂದಿನಿಂದ ಅದೇ ಪದ ಬಳಸಿರುವುದರಿಂದ ಈ ಲೇಖನದಲ್ಲೂ ಅದೇ ಪದ ಬಳಸಿರುವೆ.
ಈ ಲೇಖನದಿಂದ ನಿಮ್ಮ ಬಾಲ್ಯ ನೆನಪಾಗಿದ್ದಕ್ಕೆ ಖುಷಿಯಾಯ್ತು. ಅದರ ಬಗ್ಗೆ ಬರೆಯಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ಅಹರ್ನಿಶಿ ಶ್ರೀಧರ್ ಅವರೆ,
ಧನ್ಯವಾದಗಳು. ನಿಮಗಾದಂತೆಯೇ ಈ ಗೂಡನ್ನು ನೋಡಿದ ತಕ್ಷಣ ಆಶ್ಚರ್ಯ, ಬೆರಗು ಎಲ್ಲವೂ ನನಗುಂಟಾಯಿತು. ನೀವಂದಂತೆ ಯಾವ ಆರ್ಕಿಟೆಕ್ಟ್ ಕೂಡ ಈ ಹುಳುಗಳ ಮುಂದೆ ಇಲ್ಲ.

ರಜನಿ. ಎಂ.ಜಿ said...

ಅಬ್ಬಾ!! ಎಷ್ಟು ದೊಡ್ಡ ಗೂಡೂ...!

ಗಿರಿ said...

ಮಲ್ಲಿಕಾರ್ಜುನ್,

ಸೊಗಸಾದ ಚಿತ್ರಗಳ ಮತ್ತು ಭಾಷೆಯ ಜೊತೆ ಅನ್ವರ್ಥವಾದ ತಲೆಬರಹ. ಇಷ್ಟವಾಯ್ತು...
ಒಟ್ಟು ಕುಟುಂಬ, ದೊಡ್ಡಕುಟುಂಬದ ಬಗ್ಗೆ ನಿಮ್ಮಂತೆ ನನಗೂ ತುಂಬಾ ಪ್ರೀತಿ...
ತುಂಬ ವರ್ಷಗಳ ಹಿಂದೆ, ನನ್ನ ಅಣ್ಣ ಎಳನೀರು ಕೊಯ್ಯಲು ತೆಂಗಿನ ಮರ ಹತ್ತಿದಾಗ, ಕಣಜಗಳ ಗೂಡ ಮೇಲೆ ಕೈಯಿಟ್ಟು ಕಚ್ಚಿಸಿಕ್ಕೊಂಡು, ಮರದಿಂದ ಕೆಳಗಿಳಿಯಲು ಪೇಚಾಡಿದ್ದನ್ನು, ಆಮೇಲೆ ತಲೆ ಕೆನ್ನೆ ಹಣೆ ಊದಿಸಿಕ್ಕೊಂಡನ್ನು ನೆನಪಿಸಿಕ್ಕೊಳ್ಳುವಂತಾಯ್ತು...
ಜೊತೆಗೆ ನಾನು ೭ನೇ ತರಗತಿಯಲ್ಲಿದ್ದಾಗ ಗೇರುಬೀಜದ ಮರದಲ್ಲಿದ್ದ ಜೇನು ನೋಣಗಳನ್ನು, ಜೇನು ಪೆಟ್ಟಿಗೆಗೆ ಹಾಕಲು ಮಿತ್ರನ ಜೊತೆ ಪ್ರಯತ್ನಿಸುತ್ತಿದ್ದಾಗ ೪-೫ ಜೇನು ನೊಣಗಳು ಕುಟುಕಿ ನನ್ನ ಮಂಡೆ ಗಾತ್ರದಲ್ಲಿ ೨ಡರಷ್ಟಾದದ್ದು ನೆನಪಾಯಿತು. ಆಮೇಲೆ ಶಾಲೆಗೆ ಹೋದಾಗ ನನ ಆತ್ಮಮಿತ್ರರು ಕೂಡಾ ನನ್ನನ್ನು ಒಬ್ಬ ಆಗಂತುಕನಂತೆ ನೋಡಿದ್ದು ನೆನಪಿಸುವಾಗ ನಗು ಬರುತ್ತಿದೆ.....!

ನಾನು ಬೆಂಗಳೂರಲ್ಲಿದ್ದೂ ನನ್ನಲ್ಲಿ ಮುಗ್ಧ ನಗೆ ಮೂಡಿಸಿದ್ದಕ್ಕೆ ನಿಮಗೆ ಶರಣು...

-ಗಿರಿ

Guruprasad said...

ಮಲ್ಲಿಕಾರ್ಜುನ್,
ತುಂಬ ಚೆನ್ನಾಗಿ ಇದೆ ಲೇಖನ , ಕಣಜದ ಬಗ್ಗೆ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದಿರಿ.... ಆದರೆ ಅಸ್ಟು ಕಷ್ಟ ಪಟ್ಟು ಕಟ್ಟಿದ ಗೂಡನ್ನು ಹೊಡೆದು ಹಾಕಿದ್ದು ನೋಡಿ ತುಂಬ ಬೇಜಾರಾಯಿತು......

ಗುರು

Nadi Basavaraju said...

ನಿಮ್ಮದು ಕಣ್ಣಿಗೆ ಕಟ್ಟುವ ಚಿತ್ರ ಮನ ಮುಟ್ಟುವ ಬರವಣಿಗೆ.

Anonymous said...

last two snaps are tooooooooo amazing sir..............

Unknown said...

Sir nam mane atra kadaja gudu

Unknown said...

Sir nam mane pakkadali tumba dodadagi kadaja gudu kattide nam mane atira jana baralu bayapadutidare namgu baya agutide gudanu suduvudake manasagtila enmadodu sir. agle 3 monts inda gudu ide