Wednesday, April 1, 2009

"ತೇಜಸ್ವಿ" ಎಂಬ ಸ್ಫೂರ್ತಿ

"ಅಲ್ರೀ, ನಾನೂ ನಿಮ್ಮಂತೆ ಮನುಷ್ಯ. ಕಷ್ಟಪಟ್ರೆ ನೀವು ಕೂಡ ಈ ರೀತಿ ಫೋಟೋ ತೆಗೀಬಹುದು" ಎಂದು ತೇಜಸ್ವಿಯವರು ಅಂದು ಹೇಳಿದ್ದು ಈಗ ಹೇಳಿದಂತಿದೆ. ಅವರ ಮನೆಯಲ್ಲಿ ಟೀಪಾಯ್ ಮೇಲೆಲ್ಲಾ ನಾನಾ ವಿಧದ ಹಕ್ಕಿಚಿತ್ರಗಳು. ಕೆಲವೊಂದಂತೂ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನೋಡುತ್ತಿರುವುದು. ತೇಜಸ್ವಿಯವರು ತೆಗೆದಿದ್ದ ಚಿತ್ರಗಳನ್ನೆಲ್ಲಾ ನೋಡುತ್ತಾ ಬೆಕ್ಕಸಬೆರಗಾಗಿ,"ಇವೆಲ್ಲಾ ನಮ್ಮ ಕೈಲಿ ತೆಗೆಯೊಕಾಗಲ್ಲ" ಎಂದುಬಿಟ್ಟೆ. ತಕ್ಷಣ ಗುಂಡಿನಂತೆ ಬಂದ ತೇಜಸ್ವಿಯವರ ಮಾತು ನನ್ನೊಬ್ಬನಿಗೇ ಅಲ್ಲ ಎಲ್ಲರಿಗೂ ಎಲ್ಲಾ ಕೆಲಸಕ್ಕೂ ಅನ್ವಯಿಸುತ್ತದೆ.
ಅಂದು ೨೦೦೨ರ ಏಪ್ರಿಲ್ ೨೬. ತೇಜಸ್ವಿಯವರ ತೋಟದೊಳಗೆ ಗೇಟಿಗೆ ಸುತ್ತಿದ್ದ ಚೈನ್ ಬಿಡಿಸಿಕೊಂಡು ಒಳಗಡೆ ಹೋದೆವು. ಅಕ್ಕಪಕ್ಕ ಬರಿ ಕಾಫಿ ಗಿಡಗಳು. ಮುಂದೆ ಕಾಲುದಾರಿ. ಆಹ್ಲಾದಕರವಾದ ಮಲೆನಾಡ ವಾತಾವರಣ. ಎಲ್ಲೆಲ್ಲೂ ಮರಗಿಡಗಳು. ಸ್ವಲ್ಪ ದೂರ ಹೋದ ನಂತರ ಅವರ ಮನೆ "ನಿರುತ್ತರ"ದ ಹೆಂಚು ಕಾಣಿಸಿತು. ಮನೆಯ ಸುತ್ತ ನಾನಾ ಬಗೆಯ ಹೂಗಿಡಗಳು. ಮುಂದೆ ಹುಲ್ಲುಹಾಸು, ಆಕರ್ಷಕ ಸಸ್ಯ ವೈವಿಧ್ಯ.
ಅಂಜುತ್ತಲೇ ಬೆಲ್ ಮಾಡಿದೆವು. ತೇಜಸ್ವಿಯವರು ಬಂದರು. ಸ್ವಲ್ಪ ಮಡಿಸಿದ ಜೀನ್ಸ್ ಪ್ಯಾಂಟ್, ಕಾಟನ್ ಶರ್ಟ್, ಬಿಳಿಗಡ್ಡ, ಕನ್ನಡಕ. ಒಳಕರೆದು ಕುಳಿತುಕೊಳ್ಳಿ ಅಂದರು. ಆಗಲೇ ನಾವು ನೋಡಿದ್ದು ಟೀಪಾಯ್ ಮೇಲೆ ನೂರಾರು ಪಕ್ಷಿಗಳು. "ಇವು ನನ್ನ ೩೦ಕ್ಕೂ ಹೆಚ್ಚು ವರ್ಷಗಳ ಅನುಭವ ಮತ್ತು ಪರಿಶ್ರಮದಿಂದ ತೆಗೆದ ಚಿತ್ರಗಳು" ಅಂದರು.
ಅವರ ಪತ್ನಿ ರಾಜೇಶ್ವರಿಯವರು ಕೊಟ್ಟ ಕಾಫಿ, ಬಿಸ್ಕತ್ ಸೇವಿಸಿ ಮಾತನಾಡುತ್ತ ಕುಳಿತೆವು. ಅವರು ಮಾಡಿರುವ ಪೇಂಟಿಂಗ್ ಗೋಡೆಯ ಮೇಲಿತ್ತು. ಕೇಳಿದ್ದಕ್ಕೆ, "ಐ ಯಾಮ್ ಎ ಪೇಂಟರ್. ಮೈಸೂರಿನಲ್ಲಿ ತಿಪ್ಪೇಸ್ವಾಮಿಯವರ ಬಳಿ ಕಲಿತಿರುವೆ. ಅದಕ್ಕೂ ಮುಖ್ಯವಾಗಿ ನಾನೊಬ್ಬ ಮ್ಯುಸಿಷಿಯನ್. ಪಂಡಿತ್ ರವಿಶಂಕರರ ಬಳಿ ಸಿತಾರ್ ಕಲಿತಿರುವೆ" ಅಂದರು.
ಮನೆಯ ಹಿಂದೆ ಇರುವ ನೀರಿನ ಪುಟ್ಟ ತೊರೆಯಲ್ಲಿ ತೇಜಸ್ವಿ ಮೀನುಗಳನ್ನು ಸಾಕಿದ್ದರು. ನನ್ನ ಜೊತೆ ಬಂದಿದ್ದ ನನ್ನಕ್ಕನ ಮಗಳ ಕೈಲಿ ಅವಕ್ಕೆ ಬ್ರೆಡ್ ಹಾಕಿಸಿದರು. ಅವರ ಫೋಟೋ ತೆಗೆದಾಗ "ಯಾಕ್ರೀ ಇಷ್ಟೊಂದು ಫೋಟೋ ತೆಗೆಯುತ್ತೀರಿ. ನಾನೂ ಕೂಡ ನಿಮ್ಮಂತೆಯೇ ಮನುಷ್ಯ" ಅಂದರು. ತಮ್ಮನ ಜೊತೆ ರೇಷ್ಮೆ ಹುಳು ಸಾಕಲು ಅವರ ಮೈಸೂರಿನ ಮನೆಯಲ್ಲಿ ಪ್ರಯತ್ನಿಸಿದ್ದು ಮತ್ತು ಹಿಪ್ಪುನೇರಳೆ ಸೊಪ್ಪಿಗಾಗಿ ಅಲೆದದ್ದು ಎಲ್ಲಾ ನೆನಪಿಸಿಕೊಂಡು ನಕ್ಕರು. ಚೀನಾ ರೇಷ್ಮೆಯಿಂದ ನಮ್ಮ ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೇಳಿದಾಗ, "ಚೀನಾ ದೇಶದವನು ತಿನ್ನುವುದೂ ಅನ್ನವೇ, ನಮ್ಮ ದೇಶದವನು ತಿನ್ನುವುದೂ ಅನ್ನವೇ. ಅವರು ಕಡಿಮೆ ಬೆಲೆಗೆ ರೇಷ್ಮೆ ಇಲ್ಲಿಗೆ ತಂದು ಮಾರುತ್ತಿದ್ದಾರೆಂದರೆ ನಾವು ಏಕೆ ಅಷ್ಟು ಕಡಿಮೆ ಬೆಲೆಗೆ ರೇಷ್ಮೆ ತಯಾರಿಸಲಾಗುತ್ತಿಲ್ಲವೆಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಸರಕಾರದಿಂದ ಸಬ್ಸಿಡಿ ಪಡೆದು ನೆಮ್ಮದಿಯ ಜೀವನ ನಡೆಸಿದರೆ ಬುದ್ಧಿ ಮಂದವಾಗುತ್ತದೆ. ಚಾಲೆಂಜುಗಳನ್ನು ಎದುರಿಸಬೇಕು" ಅಂದರು.
ಅವರು ಭಾವಾನುವಾದ ಮಾಡಿರುವ ಕೆನೆತ್ ಆಂಡರ್ಸನ್, ಜಿಮ್ ಕಾರ್ಬೆಟ್ ರ ಕಥೆಗಳು, ಹೆನ್ರಿಶಾರೇರೆ ಬರೆದಿರುವ ಪ್ಯಾಪಿಲಾನ್ ಕೃತಿಗಳಂಥ ರೋಮಾಂಚಕಾರಿ ಕಥೆಗಳ ಬಗ್ಗೆ ಕೇಳಿದೆವು. "ಈ ಪುಸ್ತಕಗಳನ್ನೆಲ್ಲಾ ನಾವು ಹೈಸ್ಕೂಲಿನಲ್ಲಿದ್ದಾಗಲೇ ಓದಿದ್ದೆವು. ೪೦ ವರ್ಷಗಳ ನಂತರ ಅನುವಾದ ಮಾಡಿರುವೆನಷ್ಟೆ. ನಮ್ಮ ಸ್ನೇಹಿತರ ಗುಂಪು ಹಾಗಿತ್ತು. ಬರೀ ಓದಿದ್ದರೆ ಮರೆತುಬಿಡುತ್ತಿದ್ದೆವು. ನಾವುಗಳು ಚರ್ಚೆ-ವಿಮರ್ಶೆ ಮಾಡುತ್ತಿದ್ದುದರಿಂದ ಇನ್ನೂ ನೆನಪಿನಲ್ಲಿವೆ" ಎಂದರು ತೇಜಸ್ವಿ.
"ನಿಮ್ಮ ಮಿಲೇನಿಯಂ ಸರಣಿಯನ್ನು ಮುಂದುವರೆಸಿ" ಎಂದು ಹೇಳಿದಾಗ ಅವರು ನಕ್ಕರು. "ಈ ರೀತಿ ಮಾಹಿತಿ ಸಾಹಿತ್ಯದ ಪುಸ್ತಕಗಳನ್ನು ಬರೆದರೆ ಕಥೆ ಕಾದಂಬರಿ ಬರೆಯಿರಿ ಅನ್ನುತ್ತಾರೆ. ಅದನ್ನು ಬರೆದರೆ ಇದನ್ನು ಬರೆಯಿರಿ ಅನ್ನುತ್ತಾರೆ. ಒಮ್ಮೆ ಶಿವರಾಮ ಕಾರಂತರು ಈ ರೀತಿ ಮಕ್ಕಳಿಗೆ ಜ್ಞಾನದಾಯಕವಾದಂತಹ ಪುಸ್ತಕಗಳನ್ನೇ ಬರೆಯಲು ಹೇಳಿದ್ದರು. ಏಕೆಂದರೆ ಮಕ್ಕಳು ಮುಂದಿನ ಭವಿಷ್ಯ, ಅವರನ್ನು ತಿದ್ದಬೇಕು. ಬೆಳೆದವರನ್ನು ಏನು ತಿದ್ದುವುದು?" ಎಂದರು.
"ಸಣ್ಣವರಿದ್ದಾಗ ಎಷ್ಟೊಂದು ಗಲಾಟೆ, ತಂಟೆ ಮಾಡುತ್ತಿದ್ದೆವೆಂದರೆ, ನಮ್ಮಮ್ಮ ಇವರು ಶಾಲೆಗೆ ಹೋದರೆ ಸಾಕಪ್ಪ ಎಂದು ಶಾಲೆಗೆ ಅಟ್ಟುತ್ತಿದ್ದರು. ಶಾಲೆಗಾದರೋ ಒಂದು ಪುಸ್ತಕ ಹಿಡಿದು ಹೋಗುತ್ತಿದ್ದೆವು. ಈಗಿನ ಮಕ್ಕಳನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ. ನಾವು ಗುರುಗಳ ಪಾಠದ ಶೈಲಿಯಿಂದಲ್ಲ, ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದೆವು" ಎಂದರು.
ಏಪ್ರಿಲ್ ೫ಕ್ಕೆ ಅವರು ನಮ್ಮನ್ನಗಲಿ ಎರಡು ವರ್ಷಗಳಾಯ್ತು. ಅವರಿನ್ನೂ ಇರಬೇಕಿತ್ತು. ನಮ್ಮೆಲ್ಲರ ಚೈತನ್ಯದ ಭಾಗವಾಗಿರುವ ಅವರು ನಮ್ಮನ್ನು ಪೊರೆಯಲಿ.

40 comments:

Ittigecement said...

ಮಲ್ಲಿಕಾರ್ಜುನ್...

ನಿಮ್ಮ ಲೇಖನ ಓದುತ್ತ...
ಫೋಟೊಗಳನ್ನು ನೋಡುತ್ತಿದ್ದ ಹಾಗೆ..
ಯಾಕೋ ಬಹಳ ಬೇಜಾರಾಯಿತು...
ಕಣ್ಣುಗಳು ತೇವವಾದವು...

ನಿಜ ಅವರು ಇರಬೇಕಿತ್ತು...

ಇದ್ದರೆ ಇನ್ನಷ್ಟು ಬರೆಯುತ್ತಿದ್ದರು...
ಅಪೂರ್ಣವಾದ ಅವರ ಯೋಜನೆಗಳು ಪೂರ್ಣವಾಗುತ್ತಿದ್ದವು...

ನನಗೂ ಅವರ್ನ್ನೊಮ್ಮೆ ನೋಡಬೇಕೆಂಬ ಹಂಬಲವಿತ್ತು..

ಭೌತಿಕವಾಗಿ ಇರದಿದ್ದರೂ..
ತಮ್ಮ ಕ್ರತಿಗಳಲ್ಲಿ ಅವರಿದ್ದಾರೆ..
ನಮ್ಮ ಮನದಲ್ಲಿ ಗಾಢವಾಗಿ ಉಳಿದು ಬಿಡುತ್ತಾರೆ..

ನಮ್ಮನ್ನಗಲಿದ ಆ ಚೇತನಕ್ಕೆ ನಮನಗಳು..

ನಿಮ್ಮ ನೆನಪಿನ ಬುತ್ತಿಗೆ..
ಅದ್ರಷ್ಟಕ್ಕೆ..
ಅಪರೂಪದ ಚಿತ್ರ ಲೇಖನಕ್ಕೆ

ಅಭಿನಂದನೆಗ:ಉ...

ಧನ್ಯವಾದಗಳು..

ಆಲಾಪಿನಿ said...

u r so lucky mallikarjun. khushiyaaythu

ಶರಶ್ಚಂದ್ರ ಕಲ್ಮನೆ said...

ಮತ್ತೆ ನೆನಪು ಮಾಡಿಬಿಟ್ರಿ ಮಲ್ಲಿಕಾರ್ಜುನ್, ಅವರ ಪುಸ್ತಕಗಳೊಂದಿಗೆ ಕುಳಿತಾಗ ಅವರು ನಮ್ಮನ್ನು ಬಿಟ್ಟು ಅಗಲಿದ್ದು ಗೊತ್ತೇ ಆಗುವುದಿಲ್ಲ... ತೇಜಸ್ವಿ ಅವರು ಹೋದಾಗ ತುಂಬಾ ಬೇಸರವಾಗಿತ್ತು, ಸಂಜೆ ನಾಲ್ಕರ ಸಮಯವಿರಬಹುದು, ಜಯಂತ್ ಸರ್ ಗೆ sms ಕಳಿಸಿದ್ದೆ ಮಾತಾಡಲಾರದೆ "ಸರ್ ತೇಜಸ್ವಿ ನಮ್ಮನ್ನ ಬಿಟ್ಟು ಹೋಗಿಬಿಟ್ರಲ್ಲ " ಎಂದು.. ಅದಕ್ಕವರು "ಅವರು ನಮ್ಮನ್ನು ಎಂದು ಬಿಟ್ಟು ಹೋಗಲು ಸಾಧ್ಯವಿಲ್ಲ, ಅವರು ಬರೆದ ಕೃತಿಗಳು ಇವೆಯಲ್ಲ, ಅವುಗಳನ್ನ ಹಿಡಿದುಕೊಂಡು ನೋಡು" ಎಂದಿದ್ದರು.... ಕಣ್ಣಾಲಿಗಳು ತುಂಬಿ ಬಂದಿದ್ದವು ಆಗಲೂ.. ನಿಮ್ಮ ಲೇಖನ ಓದಿ ಮತ್ತೆ ಕಣ್ಣುಗಳು ತುಂಬಿ ಬಂದಿದೆ.. ಅವರನ್ನು ಭೇಟಿ ಆಗಬೇಕೆಂಬ ಹಂಬಲ ಬಹಳ ಇತ್ತು, ಕೊನೆಗೂ ಆಗಲಿಲ್ಲ... ನನಗೆ ಪ್ರಕೃತಿಯಲ್ಲಿ, ಕನ್ನಡದಲ್ಲಿ ಆಸಕ್ತಿ ಹುಟ್ಟಲು ಪರೋಕ್ಷವಾಗಿ ಅವರೇ ಕಾರಣ... ನೀವು ಅದೃಷ್ಟವಂತರು, ಅಂತ ಮಹಾ ಚೈತನ್ಯವನ್ನು ಭೇಟಿ ಮಾಡುವ ಅವಕಾಶವಾದರೂ ಸಿಕ್ಕಿತು ನಿಮಗೆ.. ಧನ್ಯವಾದಗಳು... ನಿಮ್ಮ ಲೇಖನಕ್ಕೆ... ಎಂದೂ ಆರದ ಚೇತನವನ್ನು ನೆನಪಿಸಿದ್ದಕ್ಕೆ...

ಶರಶ್ಚಂದ್ರ ಕಲ್ಮನೆ

Keshav.Kulkarni said...

ಆಪ್ತ ಬರಹ, ಚಂದದ ಚಿತ್ರಗಳು! ಪೂಚಂತೇಯವರನ್ನು ಹೀಗೆ ನೆನಪಿಸಿದ್ದಕ್ಕೆ ನಿಮಗೆ ಅನಂತ ನಮನಗಳು!

- ಕೇಶವ (www.kannada-nudi.blogspot.com)

ಮಲ್ಲಿಕಾರ್ಜುನ.ಡಿ.ಜಿ. said...

Comment from-
Rakshi
Kingsport, TN
United States
I saw your article on Tejaswi. So nice I always enjoyed reading his books too. Me and my sister used to fight to read his articles in Lankesh pathrike. We used to stop at his Mudigere house on our way home in Hanbal. Loved seeing the pictures and well written article on him.Please write more.

Thank you,
Rakshi

ಕಾರ್ತಿಕ್ ಪರಾಡ್ಕರ್ said...

ಬರಹ ಸೊಗಸಾಗಿತ್ತು...ತೇಜಸ್ವಿ ಅವರ ನೆನಪುಗಳ ಜೊತೆ ಅವರ ಹಸ್ತಾಕ್ಷರವನ್ನು ಸ್ಕ್ಯಾನ್ ಮಾಡಿ ಹಾಕಿದ್ದಕ್ಕೆ ಕೋಟಿ ನಮಸ್ಕಾರ..ನಮ್ಮಲ್ಲಿ ಕ್ರಿಯಾಹೀನವಾಗಿದ್ದ ಭಾವಕೋಶಕ್ಕೆ ಜೀವತುಂಬಿದ್ದು ತೇಜಸ್ವಿ.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಮಲ್ಲಿ ಅವರೇ ಚೆನ್ನಾಗಿದೆ. ತೇಜಸ್ವಿ ಅವರ ಬಗ್ಗೆ ಅಪಾರ ಗೌರವ ಇರುವಂತ ನನ್ನಂತವರಿಗೆ ಖುಷಿಯಾಗುತ್ತೆ. ಉತ್ತಮ ಚಿತ್ರ ಸಂಗ್ರಹ.

PARAANJAPE K.N. said...

ಮಲ್ಲಿ,
ತೇಜಸ್ವಿಯವರ ಬಗ್ಗೆ ನಿಮ್ಮ ಚಿತ್ರ-ಲೇಖನ ಚೆನ್ನಾಗಿದೆ. ನಾನೂ ಕೂಡಾ ಅವರ ಮನೆಗೆ 2-3 ಬಾರಿ ಹೋಗಿದ್ದೆ. ನಿಮ್ಮ ಫೋಟೋ-ಬರಹ ನನ್ನಲ್ಲಿ ಹಳೆಯ ನೆನಪುಗಳ ಸುರುಳಿ ಬಿಚ್ಚಿತು. "ಪೂಚ೦ತೇ" ಒಬ್ಬ ಅಪರೂಪದ ವ್ಯಕ್ತಿ, ಅವರು ಎ೦ದೆ೦ದೂ ನಮ್ಮ ಜೊತೆ ಇರ್ತಾರೆ.

ಧರಿತ್ರಿ said...

ಮಲ್ಲಿಯಣ್ಣ...
ಬರಹ ನೋಡಿ ಎಷ್ಟು ಖುಷಿಯಾಯಿತು ಗೊತ್ತಾ? ನಂಗೂ ತೇಜಸ್ವಿ ಅಂದ್ರೆ ತುಂಬಾ ಇಷ್ಟ. ತೇಜಸ್ವಿ ಎಂದೂ ಪ್ರಚಾರ, ಪ್ರಶಸ್ತಿಗಳಿಗಾಗಿ ಹಲುಬಿದವರಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿ ತೇಜಸ್ವಿಗೆ ತೇಜಸ್ವಿಯೇ ಸಾಟಿ. ಅವರು ಇರಬೇಕಿತ್ತು..ಆದರೂ ಅವರು ಖಂಡಿತಾ ಇದ್ದಾರೆ. ತೇಜಸ್ವಿ ಅವರನ್ನು ಹಕ್ಕಿ, ಮರಗಿಡಗಳಲ್ಲಿ ಮಾತ್ರ ಕಾಣದೆ ಬದುಕಿನ ಸೂಕ್ಮ್ನ ಸಂವೇದನೆಗಳಲ್ಲಿ ಅವರು ಸ್ಪಂದಿಸುವಂತಾಗಬೇಕು.
-ಧರಿತ್ರಿ

guruve said...

ಮಲ್ಲಿಕಾರ್ಜುನ್,
ತೇಜಸ್ವಿಯವರನ್ನು ವ್ಯಯಕ್ತಿವಾಗಿ ಭೇತಿ ಮಾಡಿದ ನೀವು ಧನ್ಯರು.

ಬಹಳ ಚೆನ್ನಾಗಿ ವರ್ಣಿಸಿ ಬರೆದಿದ್ದೀರಿ, ಆ ನಿಮ್ಮ ಭೇಟಿಯನ್ನು. ತೇಜಸ್ವಿಅಯವರ ವ್ಯಕ್ತಿತ್ವವನ್ನು ಸರಳವಾಗಿ ಬಿಚ್ಚಿಟ್ಟಿದ್ದೀರಿ.
ಫೋಟೊಗಳು ಚೆನ್ನಾಗಿವೆ.

ಚೀನ ರೇಷ್ಮೆಯ ಬಗ್ಗೆ ತೇಜಸ್ವಿಯವರ ವಿಚಾರ ಬಹಳ ಇಷ್ಟ ಆಯ್ತು.

ತೇಜಸ್ವಿಯವರು, ರವಿಶಂಕರ್ ಬಳಿ ಸಿತಾರ್ ಕಲಿತಿದ್ದರ ನಾನು ಎಲ್ಲೂ ಓದಿರಲಿಲ್ಲ. ಅವರ ’ಅಣ್ಣನ ನೆನಪು’ ಪುಸ್ತಕದಲ್ಲಿ, ಅವರು ಸಂಗೀತ ಕಲಿಯಲು ಪಟ್ಟ ಪಾಡನ್ನು ಬಹಳ ಹಾಸ್ಯಮಯವಾಗಿ ಬರೆದಿದ್ದಾರೆ.

ಬೆಂಗಳೂರಿನಲ್ಲಿ ವಾಸಿಸುವ ನಮ್ಮಂತವರಿಗೆ, ಅವರ ಮನೆಯ ಸುತ್ತಲಿನ ವಾತಾವರಣದ ಬಗ್ಗೆ ಓದಿದರೇ ಖುಷಿಯಾಗುತ್ತದೆ.

ವಿವರಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.

Malenadiga said...

ಆತ್ಮೀಯರೇ,
ಏ. 5 ರಂದು ಮೂಡಿಗೆರೆಯಲ್ಲಿ ಪೂಚಂತೇ ನೆನಪಿನಲ್ಲಿ ಟ್ರೆಕ್ಕಿಂಗ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇದೆ. ಆಸಕ್ತರು ಬರಬಹುದು.

ಪೂಚಂತೇ ಪ್ರಕೃತಿಯಂತೇ ಎಂಬ ವಿಸ್ಮಯ. ಅವರ ಒಡನಾಟ ಸಿಕ್ಕವರೇ ಧನ್ಯರು. ಅವರ ನೆನಪು ಎಂದೂ ಅಳಿಯದು. ಮಲ್ಲಿಕಾರ್ಜುನ್ ಉತ್ತಮವಾದ ಸಂಸ್ಮರಣೆ.

Eshanye K P said...

ಅವತ್ತು ನೀವು ತೇಜಸ್ವಿಯವರಿಗೆ ಹೇಳಿದಂತೆ ನಾವು ನಿಮಗೆ ಹೇಳುವಂತಿವೆ ಈ ಫೋಟೋಗಳು ! ನಿಮ್ಮ ಲೇಖನ, ತೇಜಸ್ವಿ ಎಂಥಾ ಸರಳವಾದ ಮನುಷ್ಯ ಅಂತ ಮತ್ತೊಮ್ಮೆ ನೆನಪು ಮಾಡಿಕೊಟ್ಟಿತ್ತು. ಅಂತಹವರ ಮೇಲೆ ಕೆಲವರು ಹೇಗಾದರೂ ಇಲ್ಲದ ಸಲ್ಲದ ಅಪವಾದಗಳನ್ನು ಹೊರಿಸಿ ಮನ ನೋಯಿಸುತ್ತಾರೋ ? ಮತ್ತೊಮ್ಮೆ ಅಷ್ಟು ಆತ್ಮೀಯವಾದವರನ್ನು ನಿಮ್ಮ ಮಾತಿನಲ್ಲಿ ನೆನಪಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

-ಈಶಾನ್ಯೆ.ಕೆ.ಪಿ

Sushrutha Dodderi said...

ಏನಿಲ್ಲ, ನೀವು ಅದೃಷ್ಟವಂತರು ಅಂತ ಮತ್ತೆ ಪ್ರೂವ್ ಆಯ್ತು ಅಷ್ಟೇ!
ಇದನ್ನೆಲ್ಲ ಹಂಚಿಕೊಂಡದ್ದಕ್ಕೆ, ಮತ್ತೆ ತೇಜಸ್ವಿ ನೆನಪು ತಂದಿದ್ದಕ್ಕೆ ನಿಮ್ಗೆ ತುಂಬಾ ತುಂಬಾ ಥ್ಯಾಂಕ್ಸ್.

shivu.k said...

ಮಲ್ಲಿಕಾರ್ಜುನ್,

ತೇಜಸ್ವಿಯವರ ಮನೆಗೆ ಹೋಗಿದ್ದು, ಅಲ್ಲಿ ಅವರ ಸೂರ್ತಿಯುತ ಮಾತು, ಜೊತೆ ಫೋಟೋ ಎಲ್ಲಾ ಸುಂದರವಾಗಿದೆ...ನನಗೂ ನಿಮ್ಮಜೊತೆ ಇರಬೇಕಿತ್ತು ಅನ್ನುವ ಆಸೆಯಾಗಿದ್ದಂತೂ ನಿಜ...
ಅವರನ್ನು ಚಿತ್ರಕಲಾ ಪರಿಷತ್ ನಲ್ಲಿ ನೋಡಿದಾಗ ನನಗಂತೂ ತುಂಬಾ ಖುಷಿಯಾಗಿತ್ತು...

ನನ್ನೆಲ್ಲಾ ಬರವಣಿಗೆಗೆ ತೇಜಸ್ವಿ ಸ್ಫೂರ್ತಿ....ಅವರಿಂದ ಎಷ್ಟೊಂದು ಕಲಿತಿದ್ದೇನೆ....
ಅವರಿದ್ದಿದ್ದರೇ ಮಾಯಾಲೋಕ ಮತ್ತಷ್ಟು ಬರುತ್ತಿತ್ತು... ಮತ್ತು ಫೋಟೋಗ್ರಫಿಯಲ್ಲೂ ಎನ್ನಷ್ಟು ಮಾಯಾಲೋಕ ತೋರಿಸುತ್ತಿದ್ದರೇನೋ....
ಹಿತಮಿತವಾಗಿ ಅವರ ವಿಚಾರವನ್ನು ಫೋಟೋಸಮೇತ ....ಅವರ ನೆನಪು ತುಂಬಾ ಹಿತವೆನಿಸುತ್ತೆ...

ಧನ್ಯವಾದಗಳು..

ವಿನುತ said...

'ಪೂಚ೦ತೇ' ಅವರ ಸಚಿತ್ರ ಸರಳ ಪರಿಚಯಕ್ಕಾಗಿ ಧನ್ಯವಾದಗಳು. ಆ ಮಹಾ ಚೈತನ್ಯದ ಬಗ್ಗೆ ಏನು ಹೇಳುವಷ್ಟು ದೊಡ್ದವಳಲ್ಲ. ಅವರ ಕೃತಿಗಳಲ್ಲಿ ಅವರನ್ನು ಜೀವ೦ತವಾಗಿರಿಸುತ್ತ, ನಮನಗಳನ್ನರ್ಪಿಸುತ್ತಿದ್ದೇನೆ.

Ashok Uchangi said...

ಪ್ರಿಯ ಮಲ್ಲಿಕಾರ್ಜುನ್...
ತೇಜಸ್ವಿಯವರು ನಮ್ಮೆಲ್ಲರ ಹಾಗೆ ಮನುಷ್ಯರೇ...ಆದರೆ ಅವರದ್ದು ದೈತ್ಯ ಪ್ರತಿಭೆ....ಕನ್ನಡ ನಾಡಿನ ಯುವಕರ ಆದರ್ಶವಾದ ತೇಜಸ್ವಿಯವರನ್ನು ಇಷ್ಟು ಹತ್ತಿರದಿಂದ ನೋಡಿ ಮಾತಾಡಿಸಿ ಚಿತ್ರ ತೆಗೆದ ನೀವೇ ಧನ್ಯರು....
ಅಶೋಕ ಉಚ್ಚಂಗಿ

Annapoorna Daithota said...

ತೇಜಸ್ವಿಯವರನ್ನು ಒಮ್ಮೆ ನೋಡಬೇಕೆಂಬ ಆಸೆ, ಆಸೆಯಾಗೇ ಉಳಿದಿದೆ...
ಫೋಟೋಸ್ ತುಂಬಾ ಚೆನ್ನಾಗಿವೆ ಮಲ್ಲಿಕಾರ್ಜುನ್

ಗುರುಪ್ರಸಾದ್ ಕಾಗಿನೆಲೆ said...

malli,

Excellent collection. and nice recap

Guru

Rajesh Manjunath - ರಾಜೇಶ್ ಮಂಜುನಾಥ್ said...

ಮಲ್ಲಿಕಾರ್ಜುನ್ ಸರ್,
ಪೂಚಂತೇ ನನ್ನ ಅತ್ಯಂತ ಅಚ್ಚುಮೆಚ್ಚಿನ ಬರಹಗಾರ ಮತ್ತು ವಾಗ್ಮೀ, ಕಾಲೇಜಿನ ದಿನಗಳಲ್ಲಿ ಅವರು ನಡೆಸಿಕೊಟ್ಟಿದ್ದ ಕನ್ನಡದಲ್ಲಿ ವಿಜ್ಞಾನ ಎಂಬ ಕಾರ್ಯಕ್ರಮ ನನ್ನ ಪಾಲಿಗೆ ಅವಿಸ್ಮರಣೀಯ. ಅಗಲಿದ ದಿವ್ಯಾತ್ಮಕ್ಕೊಂದು ಪದ ಪುಂಜಗಳ ಭಾವಪೂರ್ಣ ಶ್ರಧ್ಧಾಂಜಲಿ, ಮನಸ್ಸಿಗೆ ಆಪ್ತವೆನಿಸಿತು ಬರಹ.

ಮಲ್ಲಿಕಾರ್ಜುನ.ಡಿ.ಜಿ. said...

ನೇಮಿಚಂದ್ರ ಅವರ ಪ್ರತಿಕ್ರಿಯೆ:
Mallikarjuna avare,

Namaskara.

Oh it is a very nice blog - the article and the photos captured in the right mood - give such a friendly and intimate view of a creative gaint.
I am amazed at your leg work, camera work and now the work of your pen! With best wishes,
nemichandra

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಅವರ ಮಾಯಾಲೋಕ ಭಾಗ ೧ ಮಾತ್ರವೇ ಬಂದಿರುವುದು. ಅವರಲ್ಲಿ ಇನ್ನೂ ಎಷ್ಟಿದ್ದವೂ...

ಮಲ್ಲಿಕಾರ್ಜುನ.ಡಿ.ಜಿ. said...

ಆಲಾಪಿನಿಯವರೆ,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಶರಶ್ಚಂದ್ರ ಅವರೆ,
ನಿಮ್ಮ ಮನೆಯಲ್ಲಿ ತೇಜಸ್ವಿಯವರ ಅಷ್ಟೂ ಕೃತಿಗಳಿವೆಯೆಂದು ಪ್ರಕಾಶ್ ಹೆಗಡೆಯವರು ಹೇಳುತ್ತಿದ್ದರು. ನಿಮ್ಮಂತೆ ನಾನೂ ಅವರಿಂದ ತುಂಬಾ ಪ್ರಭಾವಿತನಾಗಿದ್ದೇನೆ. ನಾನು ೪ ವರ್ಷ ಓದಿದ್ದು ಚಿಕ್ಕಮಗಳೂರಿನಲ್ಲಿ. ಆಗ ಅವರ ಮನೆಗೆ ಹೋಗಿರಲಿಲ್ಲ. ೨೦೦೨ ರಲ್ಲಿ ಹೋಗಿದ್ದು.

ಮಲ್ಲಿಕಾರ್ಜುನ.ಡಿ.ಜಿ. said...

ಕೇಶವ ಕುಲಕರ್ಣಿಯವರೆ,
ಅನಂತ ಧನ್ಯವಾದಗಳು.
ಪೂಚಂತೆ ಯವರು ಮರೆಯಾಗುವುದೇ ಇಲ್ಲ.

ಮಲ್ಲಿಕಾರ್ಜುನ.ಡಿ.ಜಿ. said...

ಕಾರ್ತಿಕ್ ಪರಾಡ್ಕರ್,
ತೇಜಸ್ವಿಯವರ ಮೂರು ಪತ್ರಗಳು ನನ್ನ ಬಳಿ ಇವೆ.
ಅವರಿಗೆ ಪಂಪ ಪ್ರಶಸ್ತಿ ಬಂದಾಗ ಅವರಿಗೆ ಜನ ಮುತ್ತಿಕೊಳ್ಳುವುದು ಹಾರ ಹಾಕುವುದು ಇಷ್ಟವಾಗದೇ ಆ ಸರ್ಕಾರದ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಅವರ ಮನೆಗೇ ಪ್ರಶಸ್ತಿ ತಲುಪಿಸಿದ್ದರು. ಆಗ ನಾನೊಂದು ಗ್ರೀಟಿಂಗ್ ಕಾರ್ಡ್ ತಯಾರಿಸಿ ಅವರಿಗೆ ಅಭಿನಂದನೆಗಳನ್ನು ಕಳಿಸಿದ್ದೆ. ಅದಕ್ಕೆ ಅವರು ಬರೆದ ಉತ್ತರವೇ ಈ ಪತ್ರ.

ಮಲ್ಲಿಕಾರ್ಜುನ.ಡಿ.ಜಿ. said...

ಅಗ್ನಿಯವರೆ,
ಧನ್ಯವಾದಗಳು.

ಪರಂಜಪೆ ಸರ್,
ನೀವು ಅವರ ಮನೆಗೆ ಹೋಗಿದ್ದು, ಅವರ ಒಡನಾಟ, ಚಿತ್ರಗಳನ್ನು ಹಂಚಿಕೊಳ್ಳಿ.

ಮಲ್ಲಿಕಾರ್ಜುನ.ಡಿ.ಜಿ. said...

ಧರಿತ್ರಿಯವರೆ,
ನೀವು ಹೇಳಿರುವುದು ಸತ್ಯ.
ತೇಜಸ್ವಿ ಅವರನ್ನು ಹಕ್ಕಿ, ಮರಗಿಡಗಳಲ್ಲಿ ಮಾತ್ರ ಕಾಣದೆ ಬದುಕಿನ ಸೂಕ್ಮ್ನ ಸಂವೇದನೆಗಳಲ್ಲಿ ಅವರನ್ನು ಸ್ಪಂದಿಸುವಂತಾಗಬೇಕು.

ಮಲ್ಲಿಕಾರ್ಜುನ.ಡಿ.ಜಿ. said...

ಗುರುಪ್ರಸಾದ್,
ಸಾಧ್ಯವಾದರೆ ಈಗಲೂ ಅವರ ತೋಟಕ್ಕೆ ಮನೆಗೆ ಒಮ್ಮೆ ಹೊಗಿಬನ್ನಿ. ನಮ್ಮಂತಹ ಬಯಲುಸೀಮೆಯವರಿಗೆ ಸ್ವರ್ಗಕ್ಕೆ ಹೋದಂತೆನಿಸುತ್ತದೆ.

ಮಲ್ಲಿಕಾರ್ಜುನ.ಡಿ.ಜಿ. said...

ಈಶಾನ್ಯೆ ಮೇಡಂ,
ಧನ್ಯವಾದಗಳು. ತುಂಬಾ ಕ್ರಿಯಾಶೀಲವಾಗಿದ್ದವರು ಅವರು. ದೇವರು ಎಂತೆಂಥವರಿಗೋ ಆಯಸ್ಸು ಕೊಡುತ್ತಾನೆ. ತೇಜಸ್ವಿಯವರಿನ್ನೂ ನಮ್ಮ ಜೊತೆ ಇರಬೇಕಿತ್ತು, ಎಂದನಿಸುತ್ತದೆ.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನಾನವರ ಮನೆಗೆ ಹೋದಾಗ ನನ್ನ ಬಳಿ ಇದ್ದದ್ದು ಒಲಿಂಪಸ್ ನ ಪುಟ್ಟ Hotshot ಕ್ಯಾಮೆರಾ. ಈಗ ನಮ್ಮಲ್ಲಿರುವ ಕ್ಯಾಮೆರಾದೊಂದಿಗೆ ನಾವಿಬ್ಬರು ಹೋಗಬೇಕಿತ್ತು ಶಿವು. ಅವರ ಒಳ್ಳೊಳ್ಳೆ ಫೋಟೋ ತೆಗೆಯಬಹುದಿತ್ತು. ಅವರೊಂದಿಗೆ ಅವರ ತೊಟದಲ್ಲಿ ಹಕ್ಕಿಯ ಫೋಟೋ ತೆಗೆಯುವುದನ್ನು ಕಲ್ಪಿಸಿಕೊಳ್ಳಿ.

Haldodderi said...

ನಾನಿನ್ನೂ ಶಾಲಾ ವಿದ್ಯಾರ್ಥಿಯಾಗಿದ್ದಾಗ ಬೆರಗು ಹುಟ್ಟಿಸುತ್ತಿದ್ದದ್ದು ಉದಯವಾಣಿ ವಿಶೇಷಾಂಕ, ತುಷಾರಗಳಲ್ಲಿ ಪ್ರಕಟವಾಗುತ್ತಿದ್ದ ತೇಜಸ್ವಿಯವರ ಚಿತ್ರಮಾಲಿಕೆಗಳು. ನೀವು ತೆಗೆಯುತ್ತಿರುವ ಚಿತ್ರಗಳನ್ನು ಗಮನಿಸುತ್ತಿದ್ದೇನೆ. ತೇಜಸ್ವಿಯರಿಲ್ಲದ ಕೊರತೆಯನ್ನು ನೀವು ತುಂಬುತ್ತಿದ್ದೀರಿ. ಶುಭವಾಗಲಿ.

- ಹಾಲ್ದೊಡ್ಡೇರಿ

Unknown said...

ಮಲ್ಲಿಕಾರ್ಜುನ್ ಏನು ಬರೆಯಲಿ? ನಿಮ್ಮ ಲೇಖನ ಮತ್ತು ಚಿತ್ರಗಳೂ ಎರಡೂ ಅದ್ಭುತವಾಗಿವೆ. 'ತೇಜಸ್ವಿಯವರ ಮಾತು ನನ್ನೊಬ್ಬನಿಗೇ ಅಲ್ಲ ಎಲ್ಲರಿಗೂ ಎಲ್ಲಾ ಕೆಲಸಕ್ಕೂ ಅನ್ವಯಿಸುತ್ತದೆ.' ಎನ್ನುವ ನಿಮ್ಮ ಮಾತು ನೂರಕ್ಕೆ ನೂರು ಸತ್ಯ! ಅವರ ಮಾತುಗಳಷ್ಟೇ ಅಲ್ಲ ಅವರ ಸಾಹಿತ್ಯಕ್ಕೂ ತಲೆಮಾರುಗಳನ್ನು ರೂಪಿಸುವ ಶಕ್ತಿ ಇದೆ. ಅದಕ್ಕೇ ನಾನು ಅವರನ್ನು ಅರಿವಿನ ಗುರು ಎಂದು ಕರೆದಿದ್ದೇನೆ. ನನ್ನ ಬ್ಲಾಗಿನಲ್ಲೂ ಕೆಲವೊಂದು ಫೋಟೋ ಮತ್ತು ಬರಹ ಹಾಕುತ್ತಿದ್ದೇನೆ ಬಿಡುವಾದಾಗ ನೋಡಿ.

Anonymous said...

ಮಲ್ಲಿಕಾರ್ಜುನ ಸರ್,
ನಿಮ್ಮ ಚಿತ್ರಗಳು ತುಂಬಾ ಚೆನ್ನಾಗಿವೆ, ನಿಮ್ಮ ಬ್ಲಾಗ್ ನೋಡುತ್ತಿದ್ದೇನೆ. ಎಷ್ಟೆಲ್ಲ ಕವಿ/ಬರಹಗಾರರ ಚಿತ್ರ+ಸಹಿ ಸಂಪಾದಿಸಿದ್ದೀರಿ. ಹಕ್ಕಿಗಳ ಚಿತ್ರಗಳೆಲ್ಲ ತುಂಬ ಚೆನ್ನಾಗಿವೆ. ತೇಜಸ್ವಿಯವರ ಕುರಿತ ಲೇಖನ ಚೆನ್ನಾಗಿ ಬಂದಿದೆ. “ಸರಕಾರದಿಂದ ಸಬ್ಸಿಡಿ ಪಡೆದು ನೆಮ್ಮದಿಯ ಜೀವನ ನಡೆಸಿದರೆ ಬುದ್ಧಿ ಮಂದವಾಗುತ್ತದೆ. ಚಾಲೆಂಜುಗಳನ್ನು ಎದುರಿಸಬೇಕು” ಎಂಬಂತಹ ಮಾತುಗಳು ನಮಗೆಲ್ಲ ಸ್ಪೂರ್ತಿಯೇ. ಪರಿಶ್ರಮ ಮತ್ತು ಸ್ವತಃ ಹೊಸದನ್ನು ಕಂಡುಕೊಳ್ಳುವ ಪ್ರಯತ್ನವಿಲ್ಲದೇ ಇದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವಾಗುವುದಿಲ್ಲ. ಈ ಬರಹಕ್ಕಾಗಿ ವಂದನೆಗಳು..

Guruprasad said...

ಮಲ್ಲಿಕಾರ್ಜುನ್,
ತುಂಬ ಚೆನ್ನಾಗಿ ಇದೆ.. ಒಳ್ಳೆ recap, ಅವಾಗವಾಗ ಇವರಂಥ ನೆನಪುಗಳು ನಮಗೆಲ್ಲರಿಗೂ ಸ್ಫೂರ್ತಿ ತರುತ್ತೆ,
ನಾನು ತೇಜಸ್ವಿ ರವರ ಮಿಲೆನಿಂ ಸೀರೀಸ್ ಪುಸ್ತಕಗಳನ್ನು ಓದಿದ್ದೇನೆ.. ತುಂಬ ಇಂಟರೆಸ್ಟಿಂಗ್ ಆಗಿ ಇರುತ್ತೆ ಅವರ ಪುಸ್ತಕ.. ಎಸ್ಟೊಂದು ವಿಷಯಗಳನ್ನು ತಿಳಿದುಕೊಳ್ಳ ಬಹುದು . ಮತ್ತೊಮ್ಮೆ ಥ್ಯಾಂಕ್ಸ್ ತೇಜಸ್ವಿ ಅವರನ್ನು ಇಷ್ಟು ಹತ್ತಿರದಿಂದ ನೆನಪಿಸಿದಕ್ಕೆ..
ಗುರು

ಚಂದ್ರಕಾಂತ ಎಸ್ said...

ನಿಜವಾಗಿಯೂ ನೀವು ಪುಣ್ಯವಮ್ತರು. ಅವರನ್ನು ನೋಡಿ ಮಾತನಾಡಿಸಿರುವಿರಿ.

ಅವರು ಇನ್ನೂ ಬದುಕಿರಬೇಕಿತ್ತು. ಆದರೂ ಬೇರೆಯವರಂತಲ್ಲದೆ ಇವರು ನಮ್ಮನ್ನಗಲಿದನಂತರವೂ ಯುವಜನರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿದ್ದಾರೆ. ಅವರ ಕರ್ವಾಲೋ ನನ್ನ ಅಚ್ಚುಮೆಚ್ಚಿನ ಪುಸ್ತಕಗಳಲ್ಲೊಂದು. ಆದರೆ ನಿಜಕ್ಕೂ ಪ್ರಪಂಚದ ವೈವಿದ್ಯಮಯ ವಿಚಾರಗಳನ್ನು ಅವರು ತಮ್ಮ ಮಿಲೆನಿಯಮ್ ಸರಣಿಯಲ್ಲಿ ಸೆರೆಹಿಡಿದಿರುವ ರೀತಿ ಅದ್ಭುತ.
ಅವರ ಚಿತ್ರಗಳೂ ಅವರ ಮಾತುಗಳೂ ಮನಸ್ಸಿಗೆ ಸಂತಸ ನೀಡಿತು

PaLa said...

ತುಂಬಾ ಖುಷಿಯಾಯ್ತು, ತೇಜಸ್ವಿಯವರ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ. ರೇಶ್ಮೆಯ ಬಗ್ಗೆ ತೇಜಸ್ವಿಯವರ ಮಾತು, ಶಿಶು ಸಾಹಿತ್ಯದ ಬಗ್ಗೆ ಕಾರಂತರ ಮಾತು ಗಮನ ಸೆಳೆಯಿತು.

ಅಹರ್ನಿಶಿ said...

ಆತ್ಮೀಯ ಮಲ್ಲಿಕಾರ್ಜುನ್,

ನೀವು ಜೀನಿಯಸ್ ಅ೦ತ ಮತ್ತೆ ಪ್ರೂವ್ ಮಾಡಿಬಿಟ್ರಿ.ಇ೦ತಹ ಬ್ಲಾಗ್ ಪೋಸ್ಟ್ ಗಳು ನಿಮ್ಮಿ೦ದ ಮಾತ್ರ ಸಾಧ್ಯ..ಸು೦ದರ ಬರಹ ಹಾಗೂ ಸ೦ಗ್ರಹಯೋಗ್ಯ ಭಾವಚಿತ್ರಗಳು.

ನೂರಾರು ಪ್ರಶಸ್ತಿಗಳಿಗಿ೦ತ ಒಬ್ಬ ಓದುಗನ ಅಭಿನ೦ದನೆಗಳೇ ಹೆಚ್ಚು ಮೌಲ್ಯ ಎ೦ದ ತೇಜಸ್ಸು ನಮ್ಮ ತೇಜಸ್ವಿ ಯವರು.ಅವರನ್ನು ಸನಿಹದಿ೦ದ ಕ೦ಡು ಮಾತಾನಾಡಿದ ನೀವೇ ಧನ್ಯರು.

ಹೆಸರಿಗೆ ತಕ್ಕ೦ತೆ ಅವರು ಪೂರ್ಣಚ೦ದ್ರ ರೇ….ಎರಡಲ್ಲ ಇನ್ನೂ ನೂರು ವರ್ಷವಾದರು ಅವರ ಛಾಪು ಮಹೋನ್ನತ.

ಹ್ಯಾಟ್ಸ್ ಆಫ್ ಟು ಯು

Anonymous said...

naanu highschool-nalliddaaga, kuvempu avara kavi kaavya parichaya bareyuvaaga, "ivaru poorNachandra tEjaswiyavara tande" yendu baredidde!

DGM, Neevu hotte urisabEdi, please...

ನಾವಡ said...

ನಿಮ್ಮ ಲೇಖನ ಮತ್ತು ಅವರ ಬಗೆಗಿನ ಫೋಟೋಗಳು ಚೆನ್ನಾಗಿವೆ. ತೇಜಸ್ವಿ ಇವತ್ತಿಗೂ ಹಸಿರುಹೊನ್ನೇ. ನಾನು ಅತ್ಯಂತ ಇಷ್ಟಪಡುವ ಲೇಖಕರು. ಯಾವುದೇ ಆಷಾಢಭೂತಿಯಿಲ್ಲದೇ, ಯಾವುದೇ ನೆರಳನ್ನು ಆಶ್ರಯಿಸದೇ ಮಾದರಿಯಾದ ವ್ಯಕ್ತಿ. ಅವರಿಲ್ಲದ ಈ ಹೊತ್ತನ್ನು ನೆನೆಸಿಕೊಂಡರೆ ಕಣ್ಣುಗಳು ತೇವಗೊಳ್ಳುತ್ತವೆ.
ನಾವಡ

Shreemanth.M.Y said...

Thanks Mallikarjun.