Tuesday, August 13, 2013

ಶಿಡ್ಲಘಟ್ಟದ ವಿರೂಪಾಕ್ಷಪ್ಪ ಹೈಸ್ಕೂಲಿನ ದಿನಗಳು...


 ಶಿಡ್ಲಘಟ್ಟದ ಪ್ರಥಮ ಪುರಸಭಾ ಅಧ್ಯಕ್ಷ ಬಿ.ವಿರೂಪಾಕ್ಷಪ್ಪ ಅವರು ಪಟ್ಟಣದಲ್ಲಿ ಹೈಸ್ಕೂಲು ಕಟ್ಟಡದ ಅಡಿಗಲ್ಲು ಸ್ಥಾಪನಾ ಮಹೋತ್ಸವವನ್ನು ನೆರವೇರಿಸಲು ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಸಮ್ಮತಿಸಿದ್ದಕ್ಕೆ ವಂದನೆಯ ರೂಪದಲ್ಲಿ ಅರ್ಪಿಸಿದ್ದ ಬಿನ್ನವತ್ತಳೆ.

 ಮೈಸೂರು ಸಂಸ್ಥಾನದ ಶ್ರೀಮನ್‌ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್, ಜಿ.ಸಿ.ಬಿ., ಜಿ.ಸಿ.ಎಸ್.ಐ., ಅವರ ದಿವ್ಯಸನ್ನಿಧಾನಂಗಳಲ್ಲಿ ಶಿಡ್ಲಘಟ್ಟ ಬೇವಿನಮರದ ಬಸಪ್ಪನವರ ಮಗ ವಿರೂಪಾಕ್ಷಪ್ಪ ಸಮರ್ಪಿಸಿದ ... ಎಂದು ಆರಂಭವಾಗುವ ರೇಷ್ಮೆಯ ಬಟ್ಟೆಯ ಮೇಲೆ ಮುದ್ರಿಸಲಾದ ಬಿನ್ನವತ್ತಳೆ ಶಿಡ್ಲಘಟ್ಟದ ಇತಿಹಾಸವನ್ನು ಮೈಸೂರು ಸಂಸ್ಥಾನದ ಆಡಳಿತಾವಧಿಗೆ ಕೊಂಡೊಯ್ಯುತ್ತದೆ. ಜೊತೆಯಲ್ಲಿ ಶಿಡ್ಲಘಟ್ಟದಲ್ಲಿ ಮೊದಲ ಪ್ರೌಢಶಾಲೆ ಸ್ಥಾಪನೆಯಾದ ಬಗ್ಗೆ ವಿವರಗಳೂ ಸಿಗುತ್ತದೆ.
 ಶಿಡ್ಲಘಟ್ಟ ತಾಲ್ಲೂಕಿನ ಪ್ರಪ್ರಥಮ ಪ್ರೌಢಶಾಲೆ ಕಟ್ಟಡ ಅಡಿಗಲ್ಲು ಸ್ಥಾಪನಾ ಮಹೋತ್ಸವವನ್ನು ನೆರವೇರಿಸಲು ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಸಮ್ಮತಿಸಿದ್ದಕ್ಕೆ ಶಿಡ್ಲಘಟ್ಟ ಪುರಸಭೆಯ ಪ್ರಥಮ ಅಧ್ಯಕ್ಷ ಬಿ.ವಿರೂಪಾಕ್ಷಪ್ಪ ಅವರು ವಂದನೆಯ ರೂಪದಲ್ಲಿ ಅರ್ಪಿಸಿದ್ದ ಬಿನ್ನವತ್ತಳೆಯಿದು.


 ಶಿಡ್ಲಘಟ್ಟದ ಪ್ರಥಮ ಪುರಸಭಾ ಅಧ್ಯಕ್ಷ ಬಿ.ವಿರೂಪಾಕ್ಷಪ್ಪ.

 ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಬಹುತೇಕ ಮಂದಿ ಶಿಕ್ಷಣಕ್ಕೆ ಚಿಕ್ಕಬಳ್ಳಾಪುರಕ್ಕೆ ಹೋಗಬೇಕಾಗಿತ್ತು. ಒಪ್ಪೊತ್ತಿನ ಊಟ ಮಾಡಿಕೊಂಡು ರೈಲನ್ನೇರಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ರಾತ್ರಿ ನಂತರವಷ್ಟೇ ಹಿಂತಿರುಗುತ್ತಿದ್ದರು.  ಒಮ್ಮೆ ರೈಲಿಗೆ ಹತ್ತುವ ವೇಳೆ ವಿದ್ಯಾರ್ಥಿಯೊಬ್ಬ ರೈಲಿನಡಿ ಸಿಲ್ಲುಕಿ ಮೃತಪಟ್ಟಾಗ, "ನಮ್ಮೂರಿನಲ್ಲಿ ಪ್ರೌಢಶಾಲೆ ಇದ್ದಿದ್ದರೆ ಈ ಅನಾಹುತವೇ ಸಂಭವಿಸುತ್ತಿರಲಿಲ್ಲ್" ಎಂಬ ಮಾತು ಹಲವರಿಂದ ಕೇಳಿ ಬಂತು. ಹೇಗಾದರೂ ಮಾಡಿ ಶಿಡ್ಲಘಟ್ಟದಲ್ಲಿ  ಪ್ರೌಢಶಾಲೆಯೊಂದನ್ನು ಸ್ಥಾಪಿಸಲೇಬೇಕು ಎಂದು ಪಣತೊಟ್ಟ ಬ್ರಿಟಿಷ್ ಆಡಳಿತದ ಪುರಸಭೆಯ ಉಪಾಧ್ಯಕ್ಷರಾಗಿದ್ದ ಬಿ.ವಿರೂಪಾಕ್ಷಪ್ಪ ಅವರು ಪ್ರೌಢಶಾಲೆ ಕಟ್ಟಡಕ್ಕಾಗಿ ೩೦ ಸಾವಿರ ರೂಪಾಯಿ ದಾನ ನೀಡಿದರು. ಕೋಲಾರ ಜಿಲ್ಲಾ ಬೋರ್ಡ್ ಕೂಡ ೧೦ ಸಾವಿರ ರೂಪಾಯಿ ನೀಡಿತ್ತು.
 ದೇಶ ಸ್ವಾತಂತ್ರ್ಯಗೊಳ್ಳಲು ಇನ್ನೂ ಎರಡು ತಿಂಗಳು ಬಾಕಿಯಿರುವಾಗಲೇ ಶಿಡ್ಲಘಟ್ಟದ ಮೊದಲ ಪ್ರೌಢಶಾಲೆ ಆರಂಭಗೊಂಡಿತು. ೧೯೪೭ ರ  ಜೂನ್ ೧೧ ರಂದು ಆರಂಭಗೊಂಡ ಪ್ರೌಢಶಾಲೆ ನಡೆಸಲು ಬಿ.ವಿರೂಪಾಕ್ಷಪ್ಪ ಅವರು ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ಅದಕ್ಕೆ ಸರ್ಕಾರ "ವಿರೂಪಾಕ್ಷಪ್ಪ ಹೈಸ್ಕೂಲ್" ಎಂದೇ ಹೆಸರಿಸಿತ್ತು. ಸುಮಾರು ನಾಲ್ಕು ವರ್ಷಗಳ ಕಾಲ ಅವರ ಮನೆಯಲ್ಲೇ ಪ್ರೌಢಶಾಲೆ ನಡೆಯಿತು. ಬಿನ್ನವತ್ತಳೆಯಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ ೧೯೫೧ ರಲ್ಲಿ ಅವರ ಮನೆಯಲ್ಲಿ ನಡೆಯುತ್ತಿದ್ದ ಪ್ರೌಢಶಾಲೆಯಲ್ಲಿ ೧೬೯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.
  ಕೆಲ ದಾನಿಗಳ ಸಹಾಯ ಪಡೆದು ೧೩ ಎಕರೆ ಒಂದು ಗುಂಟೆ ಜಮೀನನ್ನು ಖರೀದಿಸಿ ಅದನನ್ನು ದಾನ ಮಾಡಿದ ಬಿ.ವಿರೂಪಾಕ್ಷಪ್ಪ ಅವರು ಮೈಸೂರು ಮಹಾರಾಜರಿಂದ ೧೯೫೧ ರ ಆಗಸ್ಟ್ ೧೩ ರಂದು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿ.ವಿರೂಪಾಕ್ಷಪ್ಪ ಅವರು ತಮ್ಮ ಪತ್ನಿ ಸೂಗಮ್ಮ ಹೆಸರಿನಲ್ಲಿ ಪಟ್ಟಣದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಕ್ಕೆ ೧೦ ಸಾವಿರ ರೂಪಾಯಿ ನೀಡಿದ್ದರು.

 ಬಿ.ವಿರೂಪಾಕ್ಷಪ್ಪ ಅವರ ಸಮಾಜ ಸೇವೆಗಾಗಿ ಮೈಸೂರು ಸಂಸ್ಥಾನದ ವತಿಯಿಂದ ಜಯಚಾಮರಾಜ ಒಡೆಯರ್ ಅವರು ನೀಡಿದ್ದ ಗಂಡುಬೇರುಂಡ ಲಾಂಛನವಿರುವ ಬಂಗಾರದ ಪದಕ.

ಬಿ.ವಿರೂಪಾಕ್ಷಪ್ಪ ಅವರ ಸಮಾಜ ಸೇವೆಗಾಗಿ ಮೈಸೂರು ಸಂಸ್ಥಾನದ ವತಿಯಿಂದ ಜಯಚಾಮರಾಜ ಒಡೆಯರ್ ಅವರು ಗಂಡುಬೇರುಂಡ ಲಾಂಛನವಿರುವ ನಾಲ್ಕೂವರೆ ತೊಲದ ಬಂಗಾರದ ಪದಕ ಮತ್ತು ಒಂದೂವರೆ ಕೆಜಿ ತೂಕದ ಮೈಸೂರು ಸಂಸ್ಥಾನದ ಲಾಂಛನವಿರುವ ಬೆಳ್ಳಿತಟ್ಟೆಯನ್ನು ನೀಡಿ ಗೌರವಿಸಿದ್ದರು.
ಪ್ರೌಢಶಾಲೆ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಯಾಗುವ ವೇಳೆಗೆ ಮೈಸೂರು ಸಂಸ್ಥಾನ ತನ್ನ ಅಧಿಕಾರವನ್ನು ಕಳೆದುಕೊಂಡಿತ್ತು. ವಿಧಾನಸಭೆ ಚುನಾವಣೆಗಳು ನಡೆದವು. ಆಗಿನ ಮುಖ್ಯಮಂತ್ರಿ ಕೆ.ಹನುಮಂತಯ್ಯ ಅವರು ೧೯೫೪ರ  ಜೂನ್ ೫ ರಂದು ಪಟ್ಟಣದ "ವಿರೂಪಾಕ್ಷಪ್ಪ ಹೈಸ್ಕೂಲ್" ಕಟ್ಟಡವನ್ನು ಉದ್ಘಾಟಿಸಿದರು.

ಮೈಸೂರು ಮಹಾರಾಜರಿಂದ ಅಡಿಗಲ್ಲು ಹಾಕಲ್ಪಟ್ಟ ತಾಲ್ಲೂಕಿನಲ್ಲಿ ಮೊದಲ ಪ್ರೌಢಶಾಲೆ ಕಟ್ಟಡದ ಶಂಕುಸ್ಥಾಪನಾ ಕಲ್ಲು.

 "ಆಗಿನ ಹಿರಿಯರ ಸಾಮಾಜಿಕ ಕಳಕಳಿಯಿಂದ ಪಟ್ಟಣದಲ್ಲಿ ಪ್ರಾರಂಭಗೊಂಡ ಏಕೈಕ ಪೌಢಶಾಲೆಯಲ್ಲಿ ಓದಿ ಹಲವಾರು ಮಂದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದೇ ಸ್ಥಳದಲ್ಲಿ ಈಗ ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ನೆಹರೂ ಕ್ರೀಡಾಂಗಣ ಮತ್ತು ಪುರಸಭೆಗೆ ಆದಾಯ ತರುವ ಅಂಗಡಿ ಮಳಿಗೆಗಳು ನಿರ್ಮಾಣಗೊಂಡಿವೆ. 
ಮೊದಲಿದ್ದ "ಶ್ರೀ ವಿರೂಪಾಕ್ಷಪ್ಪ ಹೈಸ್ಕೂಲ್" ಎಂಬ ಹೆಸರು ಪ್ರೌಢಶಾಲೆಯ ಪ್ರಾಂಶುಪಾಲರ ಕೊಠಡಿಯ ಗೋಡೆಯಲ್ಲಿ ಶಂಕುಸ್ಥಾಪನಾ ಫಲಕದಲ್ಲಿ ಮಾತ್ರ ಉಳಿದಿದೆ. ಈಗ ತಾಲ್ಲೂಕಿನಲ್ಲಿ ಹಲವಾರು ಪ್ರೌಢಶಾಲೆಗಳಿವೆ, ಕಾಲೇಜುಗಳಿವೆ, ವಾಹನ ಸೌಕರ್ಯಗಳಿವೆ. ವಿದ್ಯೆ, ಆರೋಗ್ಯ ಮತ್ತು ಆಹಾರದ ಕೊರತೆಯಿದ್ದ ಕಾಲದಲ್ಲಿ ತಾಲ್ಲೂಕಿನ ಏಳ್ಗೆಗಾಗಿ ಶ್ರಮಿಸಿದವರನ್ನು ನೆನೆಯಬೇಕು" ಎಂದು ವಿರೂಪಾಕ್ಷಪ್ಪ ಹೈಸ್ಕೂಲ್‌ನ ವಿದ್ಯಾರ್ಥಿ ಮತ್ತು ನಿವೃತ್ತ ಪ್ರಾಧ್ಯಾಪಕ ಆರ್.ಆಂಜನೇಯ ಹೇಳುತ್ತಾರೆ.


 ಮೈಸೂರು ಸಂಸ್ಥಾನದ ವತಿಯಿಂದ ಜಯಚಾಮರಾಜ ಒಡೆಯರ್ ಅವರು  ಒಂದೂವರೆ ಕೆಜಿ ತೂಕದ ಮೈಸೂರು ಸಂಸ್ಥಾನದ ಗಂಡುಬೇರುಂಡ ಲಾಂಛನವಿರುವ ಬೆಳ್ಳಿತಟ್ಟೆ.
 

 

1 comment:

Raja said...

Excellent post. Wish we can go back to those glorious time when the Ruler and Ruled believed in the maxim "by the people and for the people ..."

Keep up your good work!