Tuesday, July 2, 2013

ಮೂರು ಕೆರೆಗಳ ಕಥೆ


ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ವೆಂಕಟಾಪುರದ ಬಳಿಯಿರುವ ತಿಪ್ಪಸಾನಿ ಕೆರೆ ಮತ್ತು ಅದರ ಏರಿಯ ಮೇಲಿನ ಪಾರಂಪರಿಕ ಬೇವಿನ ವೃಕ್ಷದ ವಿಹಂಗಮ ನೋಟ.


 ಮಲೆನಾಡಷ್ಟೇ ಪ್ರವಸೋದ್ಯಮಕ್ಕೆ ಸೂಕ್ತ ಎಂದುಕೊಳ್ಳುವವರೂ ಅಚ್ಚರಿಗೊಳ್ಳುವಂತಹ ಪ್ರದೇಶಗಳು ಶಿಡ್ಲಘಟ್ಟ ತಾಲ್ಲೂಕಿನಲ್ಲಿವೆ. ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ವೆಂಕಟಾಪುರದ ಬಳಿ- ಸುತ್ತ ಏಳುಬೆಟ್ಟಗಳ ಸಾಲು. ನಡುವೆ ಮೂರು ಕೆರೆಗಳು ಇದ್ದು ಅತ್ಯಂತ ರಮಣೀಯ ದೃಶ್ಯಾವಳಿಗಳಿಂದ ಕೂಡಿದೆ.
 ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರದಿಂದ ಸಾದಲಿಗೆ ಹೋಗುವ ಮಾರ್ಗದ ಮಧ್ಯೆ ಸೂಳೆಕೆರೆಗಳೆಂದೇ ಪ್ರಸಿದ್ಧವಾದ ಮೂರು ಕೆರೆಗಳು ಕಾಣಸಿಗುತ್ತವೆ. ಅದರ ಸುತ್ತ ಆವರಿಸಿರುವ ಏಳು ಬೆಟ್ಟಗಳನ್ನು ನಲ್ಲಕೊಂಡಲು ಎಂದು ಕರೆಯುತ್ತಾರೆ. ಕಪ್ಪುಬಣ್ಣದ ಜಡೆಯನ್ನು ಹೆಣೆದಂತೆ ಅಥವಾ ಬೆಂಕಿಯಿಂದ ಸುಟ್ಟು ಕರಕಲಾದಂತೆ ಕಾಣುವ ಕಪ್ಪು ಬಣ್ಣದ ಕಲ್ಲುಗಳು ಈ ಬೆಟ್ಟಗಳ ಮೇಲೆ ಇರುವುದರಿಂದ ಇವಕ್ಕೆ ನಲ್ಲಕೊಂಡಲು ಎಂಬ ಹೆಸರು ಬಂದಿದೆ. ಇಲ್ಲಿರುವ ಮೂರು ಕೆರೆಗಳನ್ನು ಮೂವರು ವೇಶ್ಯೆಯರು ಕಟ್ಟಿಸಿದ್ದು, ತಿಪ್ಪಸಾನಿಕೆರೆ, ರಾಜಸಾನಿಕೆರೆ ಮತ್ತು ನಲ್ಲಸಾನಿಕೆರೆ ಎಂದು ಅವರ ಹೆಸರಿನಿಂದಲೇ ಇವು ಕರೆಯಲ್ಪಡುತ್ತವೆ.
 ಮೂವರೂ ವೇಶ್ಯೆಯರು ಅಕ್ಕತಂಗಿಯರಾಗಿದ್ದು ತಾವು ಗಳಿಸಿದ ಹಣ ಜನಸಾಮಾನ್ಯರ ಬದುಕಿಗೆ ಸದ್ವಿನಿಯೋಗ ಆಗಲೆಂದು ಕೆರೆಗಳನ್ನು ನಿರ್ಮಿಸಿದ್ದಾರೆ. ನಲ್ಲಸಾನಿಕೆರೆಗಿಂತ ಕೊಂಚ ಮೇಲ್ಭಾಗದಲ್ಲಿ ರಾಜಸಾನಿ ಕೆರೆಯಿದೆ. ಇದಕ್ಕಿಂತಲೂ ಕೊಂಚ ಮೇಲ್ಭಾಗದಲ್ಲಿ ತಿಪ್ಪಸಾನಿ ಕೆರೆಯಿದೆ. ಈ ಮೂರೂ ಕೆರೆಗಳು ಈಗಲೂ ಈ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಯ ಹಲವಾರು ಹಳ್ಳಿಗಳ ಜನರಿಗೆ ವರದಾನವಾಗಿದ್ದು, ಕೃಷಿಗೆ ನೀರನ್ನು ಒದಗಿಸುತ್ತಿವೆ.
 ಕರ್ನಾಟಕ ಜೀವ ವೈವಿದ್ಯ ಮಂಡಳಿಯು ರಾಜ್ಯದ ಹತ್ತು ಮರಗಳನ್ನು ‘ಪರಂಪರೆ ಮರಗಳು’(ಹೆರಿಟೇಜ್ ಟ್ರೀಸ್) ಎಂದು ಜೈವಿಕ ವಿಜ್ಞಾನ ವೈವಿದ್ಯ ಕಾಯ್ದೆ ೨೦೦೨ರ ಕಲಂ ೬೩(೨)(ಜಿ) ಅನ್ವಯ ಘೋಷಿಸಿದೆ. ಈ ಹತ್ತು ಪರಂಪರೆ ಮರಗಳ ಪೈಕಿ ತಿಪ್ಪಸಾನಿ ಕೆರೆ ಏರಿಯ ಮೇಲಿರುವ ೨೦೦ ವರ್ಷಕ್ಕೂ ಹಳೆಯದಾದ ಬೇವಿನ ಮರವೂ ಸೇರಿದೆ.
 ಈ ಪರಂಪರೆಯ ವೃಕ್ಷದೊಂದಿಗೆ ಇನ್ನೂ ಹತ್ತು ಬೃಹತ್ ಗಾತ್ರದ ಬೇವಿನ ಮರಗಳಿವೆ. ಸುತ್ತಲೂ ಹೊಂಗೆ ತೋಪಿದೆ. ವೃಕ್ಷದ ಕೆಳಗೆ ಮುನೇಶ್ವರನ ಪುಟ್ಟ ದೇಗುಲವಿದೆ. ಆದರಿಂದಲೇ ಈ ಕಟ್ಟೆಯನ್ನು ಮುನಿಯಪ್ಪನ ಕಟ್ಟೆ ಎಂದು ಕರೆಯುತ್ತಾರೆ. ಇಲ್ಲಿ ಗಂಗಮ್ಮ ಮತ್ತು ಅಕ್ಕಯ್ಯಗಾರು ಎಂದು ಕರೆಯುವ ಪುಟ್ಟ ಗುಡಿಗಳೂ ಇವೆ. ದೇಗುಲದ ಮುಂಭಾಗದಲ್ಲಿ ದೇವಕಣಿಗಲೆ ಮರವಿದೆ. ಕಟ್ಟೆಯ ಬಲಭಾಗದಲ್ಲಿ ಬಿಲ್ಲುಬಾಣಗಳನ್ನು ಹಿಡಿದಿರುವ ಮೂವರು ವೀರರ ವೀರಗಲ್ಲೊಂದಿದೆ. ಎಷ್ಟೇ ಬಿರುಬಿಸಿಲಿದ್ದರೂ ಈ ಪ್ರದೇಶ ಮಾತ್ರ ಸದಾ ತಂಪಾಗಿರುತ್ತದೆ.
 ‘ಈ ಬೆಟ್ಟಗಳಲ್ಲಿ ಚಿರತೆ, ಜಿಂಕೆ, ಮೊಲ, ಕರಡಿ, ನರಿ ಮುಂತಾದ ಪ್ರಾಣಿಗಳು ವಾಸವಾಗಿದ್ದವು. ತಿಪ್ಪಸಾನಿಕೆರೆ ಅಥವಾ ತಿಪ್ಪರಾಸಕೆರೆಯ ಕಟ್ಟೆಯ ಮೇಲಿರುವ ಬೇವಿನ ಮರಗಳನ್ನು ನಾನು ಚಿಕ್ಕಂದಿನಿಂದಲೇ ನೋಡ್ದಿದೇನೆ. ಕೆರೆಗಳನ್ನು ಕಟ್ಟಿದ ಮಹಾತಾಯಿಯರೇ ಇವನ್ನೂ ನೆಟ್ಟಿರಬೇಕು.
 ರಾಜಸಾನಿ ಕೆರೆಯ ಬಗ್ಗೆ ನಮ್ಮಲ್ಲಿ ಒಂದು ಜನಪದ ಕತೆಯಿದೆ. ರಾಜಸಾನಿಯು ತನ್ನ ಸಹೋದರಿ ಕಟ್ಟಿಸಿದ್ದ ನಲ್ಲಸಾನಿಕೆರೆಗಿಂತ ದೊಡ್ಡದಾದ ಕೆರೆಯನ್ನು ತನ್ನ ಹೆಸರಿನಲ್ಲಿ ಕಟ್ಟಿಸಲು ತೀರ್ಮಾನಿಸಿ ಬೆಟ್ಟಗುಡ್ಡಗಳ ನಡುವಿನ ಸುಂದರ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ತನ್ನಲ್ಲಿದ್ದ ಹಣವನ್ನೆಲ್ಲಾ ವೆಚ್ಚಮಾಡಿದಳು. ಆದರೆ ಇನ್ನೂ ಕೆಲಸ ಬಾಕಿ ಉಳಿದಿರುತ್ತದೆ. ಕೆರೆ ಕೆಲಸದಲ್ಲಿ ತೊಡಗಿದ್ದ ಒಡ್ಡರು ‘ಮೂರು ತೂಮುಡು(ಒಂದು ತೂಮುಡು ಅಂದರೆ ನಾಲ್ಕು ಸೇರು) ರೂಕಲು(ನಾಣ್ಯಗಳು)’ ಕೊಟ್ಟರೆ ಕೆಲಸ ಮುಗಿಸುತ್ತೇವೆನ್ನುತ್ತಾರೆ. ಅದನ್ನು ಪೂರೈಸಲು ಆಕೆ ಬಚ್ಚನಹಳ್ಳಿಯ ಮೇಕೆಗಳ ಯಜಮಾನನ ಸಹಾಯ ಯಾಚಿಸುತ್ತಾಳೆ.
 ಬಚ್ಚನಹಳ್ಳಿಯ ಮೇಕೆಗಳ ಯಜಮಾನ ಬಂದು ತಾನು ಕೊಡೆವೆನೆಂದು ತಿಳಿಸಿದಾಗ ಒಡ್ಡರು ಕೆಲಸ ಮುಗಿಸಿಕೊಡುತ್ತಾರೆ. ಆದರೆ ಬುದ್ಧಿವಂತನಾದ ಯಜಮಾನ ಗುದ್ದಲಿಯ ಕೋಲು ತೆಗೆದು ಅದರ ತೂಮು(ತೂತು) ತುಂಬಾ ಹಣ ತುಂಬಿ ಅಳೆದು ಅವರಿಗೆ ಕೊಡುತ್ತಾನೆ. ತಾವು ಮೋಸಹೋದೆವೆಂದು ಅರಿವಾದ ಒಡ್ಡರು, ‘ಈ ಕೆರೆಯಲ್ಲಿ ನೀರು ನಿಲ್ಲದಿರಲಿ’ ಎಂದು ಶಪಿಸಿದರು. ಈಗಲೂ ಸರ್ಕಾರದಿಂದ ಹಲವಾರು ಬಾರಿ ದುರಸ್ತಿ ಕಾರ್ಯ ನಡೆದರೂ ರಾಜಸಾನಿ ಕೆರೆಯಲ್ಲಿ ಹೆಚ್ಚು ದಿನ ನೀರು ನಿಲ್ಲುವುದಿಲ್ಲ. ಎಲ್ಲ ನೀರು ನಲ್ಲಸಾನಿಕೆರೆಗೆ ಹರಿದು ಹೋಗುತ್ತದೆ’ ಎನ್ನುತ್ತಾರೆ ಎಸ್.ವೆಂಕಟಾಪುರ ಗ್ರಾಮದ ಹಿರಿಯರಾದ ನರಸರಾಮಪ್ಪ.
 ‘ಈ ಕೆರೆಗಳ ಪಕ್ಕದಲ್ಲೇ ಇರುವ ಬೆಟ್ಟಗಳ ಸಾಲು ಚಾರಣ ಪ್ರಿಯರಿಗೆ ಸೂಕ್ತವಾಗಿದೆ. ಕೆರೆಗೆ ಆತುಕೊಂಡಂತಿರುವ ಬೆಟ್ಟದ ಮೇಲೆ ಬೊಂಬೆಗಳಂತೆ ನಿಂತ ಕಲ್ಲುಬಂಡೆಗಳು ಆಕರ್ಷಕವಾಗಿವೆ. ಅದಕ್ಕೆಂದೇ ಇಲ್ಲಿನ ಜನರು ಇದನ್ನು ಬೊಮ್ಮಲಕೊಂಡ ಎನ್ನುತ್ತಾರೆ. ಹಿಂದೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಪರಿಸರಕ್ಕೆ ಮಾತ್ರ ಸೀಮಿತವಾಗಿದ್ದ ಜಾಲಾರಿ ಮರಗಳು ಇಲ್ಲಿ ಯಥೇಚ್ಛವಾಗಿದ್ದವು. ಈಗ ಸಣ್ಣ ಪುಟ್ಟ ಮರಗಳು ಮತ್ತು ಔಷಧೀಯ ಸಸ್ಯಗಳನ್ನು ಕಾಣಬಹುದು. ಈ ಬೆಟ್ಟಗಳಲ್ಲಿ ಹಲವಾರು ಗುಹೆಗಳಿವೆ. ಜಿಂಕೆ, ನವಿಲು, ಕಾಡುಹಂದಿ, ಮೊಲ ಮುಂತಾದ ಪ್ರಾಣಿಗಳೂ ಇಲ್ಲಿ ವಾಸಿಸುತ್ತವೆ’ ಎಂದು ಅವರು ತಿಳಿಸಿದರು.

2 comments:

Krishnanand said...

Nimma lekhana odi illi chaarana maaduva bayakeyaagide . Dayamaadi talapalu daari mattu yaaradaru sookta margadarshakaru sigabahude ?

jaimillejaason said...

Benjamin Moore Titanium - Home - Tianium Art
Benjamin Moore titanium - Home - Tianium Art. titanium alloys - Home. Tianium Art. - Home. Tianium Art. - camillus titanium Home. Tianium Art. - titanium exhaust Home. Titanium black titanium wedding band Art. - Home. Tianium Art. ion chrome vs titanium - Home.