Sunday, June 13, 2010

ಕಬಿನಿ ದಂಡೆಯಲ್ಲಿ ವನ್ಯಜೀವಿ ದರ್ಶನ

‘ಟಪ್’ ಎಂದು ಜೀಪಿಗೆ ಹೊಡೆದ ತಕ್ಷಣ ಜೀಪು ನಿಂತಿತು. ಜೀಪಿನ ಕಿಟಕಿಯಿಂದ ಅರ್ಧ ಮೈಯನ್ನು ಹೊರಗಿಟ್ಟುಕೊಂಡು ಸುತ್ತೆಲ್ಲಾ ಗಮನಿಸುತ್ತಿದ್ದ ಜೀವನ್ ಮತ್ತು ವಾಹನ ಓಡಿಸುತ್ತಿದ್ದ ಡ್ರೈವರ್ ನಡುವೆ ನಡೆದ ಮೂಕ ಸಂಭಾಷಣೆಯಿದು.

“ಶ್! ಶಬ್ಧ ಮಾಡಬೇಡಿ. ಅಲ್ಲಿ ನೋಡಿ ಹುಲಿ ಬರುತ್ತಿದೆ ನೀರು ಕುಡಿಯಲು” ಎಂದು ಕೈ ತೋರಿಸಿದರು.

ನಮಗೆಲ್ಲ ರೋಮಾಂಚನ. ಝೂಮ್ ಲೆನ್ಸ್‌ನಲ್ಲಿ ಹುಲಿರಾಯನನ್ನು ನೋಡುತ್ತಿದ್ದಂತೆಯೇ ನನಗೆ ಕ್ಲಿಕ್ಕಿಸುವುದೂ ಮರೆತುಹೋಯಿತು.

“ಫೋಟೋ ತೆಗೀರಿ ಸರ್...” ಎಂದು ಜೀವನ್ ತಿವಿದಾಗಲೇ ವಾಸ್ತವಕ್ಕೆ ಮರಳಿದ್ದು. ಅದರದೇ ಮನೆಯಲ್ಲಿ ಅಂದರೆ ಕಾಡಲ್ಲಿ ಹುಲಿಯನ್ನು ನೋಡುವುದಂತೂ ಎಂಥವರಿಗೂ ಮರೆಯಲಾಗದ ಅನುಭವ.

ಜೀವನ್ ಕಬಿನಿ ಜಂಗಲ್ ಲಾಡ್ಜಸ್‌ನ ನ್ಯಾಚುರಲಿಸ್ಟ್. ತೆರೆದ ಜೀಪಿನಲ್ಲಿ ಪ್ರವಾಸಿಗರನ್ನು ಕಾಡಿನಲ್ಲಿ ಕರೆದೊಯ್ದು ವನ್ಯ ಪ್ರಾಣಿಗಳನ್ನು ತೋರಿಸುತ್ತಾರೆ.

ಕಬಿನಿ ನದಿಯ ಉತ್ತರದಲ್ಲಿ ೬೫೦ ಚದರ ಕಿಮೀ ವ್ಯಾಪ್ತಿಯ ನಾಗರಹೊಳೆ ಅಭಯಾರಣ್ಯವಿದೆ. ಈಶಾನ್ಯದಲ್ಲಿ ೮೭೪ ಚದರ ಕಿಮೀ ವ್ಯಾಪಿಸಿರುವ ಬಂಡೀಪುರ ಮತ್ತು ೩೨೧ ಚದರ ಕಿಮೀ ವ್ಯಾಪ್ತಿಯ ಮದುಮಲೈ ಅಭಯಾರಣ್ಯಗಳು ಹಾಗೂ ನೈರುತ್ಯದಲ್ಲಿ ೩೪೫ ಚದರ ಕಿಮೀ ವ್ಯಾಪ್ತಿಯ ಕೇರಳದ ವೈನಾಡ್ ಅಭಯಾರಣ್ಯಗಳಿವೆ. ಇಷ್ಟು ಸಮೃದ್ಧ ಜೀವಜಾಲ ಕಂಡೊಡನೆ ಬ್ರಿಟಿಷರು ಮತ್ತು ರಾಜಮಹಾರಾಜರು ಬೇಟೆಯಾಡಲಿದು ಉತ್ತಮ ಸ್ಥಳವೆಂದು ನಿರ್ಧರಿಸಿ ಹೆಚ್.ಡಿ.ಕೋಟೆಯ ಅಂತರಸಂತೆ ವಲಯದ ಕಾರಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಅದ್ಭುತವಾದ ಬಂಗಲೆಗಳನ್ನು ನಿರ್ಮಿಸಿದ್ದರು. ಹಾಗೆಯೇ ಅನೇಕ ಹುಲಿಗಳನ್ನು ಬೇಟೆಯೂ ಆಡಿದರು.

ಆದರೆ ಈಗ ಆ ಬಂಗಲೆಗಳು ಸರ್ಕಾರ ನಡೆಸುತ್ತಿರುವ ಕಬಿನಿ ಜಂಗಲ್ ರಿವರ್ ಲಾಡ್ಜಸ್‌ನ ಭಾಗವಾಗಿದೆ. ಇಲ್ಲಿ ತರಭೇತಿ ಹೊಂದಿದ ಪ್ರಕೃತಿ ವಿಜ್ಞಾನಿಗಳಿದ್ದಾರೆ. ಬೆಳಿಗ್ಗೆ ಎರಡೂವರೆ ಗಂಟೆ ಮತ್ತು ಮಧ್ಯಾಹ್ನ ಎರಡೂವರೆ ಗಂಟೆ ಕಾಡಿನೊಳಗೆ ತೆರೆದ ಜೀಪಿನಲ್ಲಿ ಸುತ್ತಿಸುತ್ತಾರೆ. ಜಿಂಕೆಗಳು, ಲಂಗೂರ್‌ಗಳು, ದೊಡ್ಡ ಅಳಿಲು, ಕಾಡು ನಾಯಿಗಳು, ಹುಲಿ, ಚಿರತೆ, ಆನೆಗಳು, ಕಾಡು ಹಂದಿಗಳು, ಸಾಂಬಾರ್, ಮೌಸ್ ಡೀರ್, ಬಾರ್ಕಿಂಗ್ ಡೀರ್, ಕಾಟಿ, ವಿವಿಧ ಹಕ್ಕಿಗಳು ಅವುಗಳ ವಾಸಸ್ಥಾನದಲ್ಲೇ ನೋಡುವುದರಿಂದ ವನ್ಯಜೀವಿಗಳ ಮೇಲೆ ಪ್ರೀತಿ, ಗೌರವ ಮತ್ತು ಆದರ ಹುಟ್ಟಿಸುತ್ತದೆ.

ಕೇರಳದ ವೈನಾಡಿನಲ್ಲಿ ಜನಿಸಿ ಕಾವೇರಿ ನದಿಯನ್ನು ಸೇರಿ ಬಂಗಾಳಕೊಲ್ಲಿ ಸೇರುವ ಕಬಿನಿ ನದಿಗೆ ಹೆಚ್.ಡಿ.ಕೋಟೆಯಿಂದ ಹದಿನಾಲ್ಕು ಕಿಮೀ ದೂರದಲ್ಲಿ ಬೀಚಗಾನಹಳ್ಳಿ ಮತ್ತು ಬಿದರಹಳ್ಳಿ ನಡುವೆ ಅಣೆಕಟ್ಟನ್ನು ಕಟ್ಟಲಾಗಿದೆ. ಬೇಸಿಗೆಯಲ್ಲಿ ಬಿಸಿಲು ಏರಿದಂತೆ ಕಬಿನಿ ಅಣೆಕಟ್ಟಿನ ಒಡಲಲ್ಲಿ ನೀರು ನಿಧಾನವಾಗಿ ಖಾಲಿಯಾಗುತ್ತದೆ. ನೀರಿನಡಿಯಲ್ಲಿ ಮುಳುಗಿರುವ ವಿಶಾಲಭೂಮಿ ಹೊರ ಪ್ರಪಂಚಕ್ಕೆ ತೆರೆದುಕೊಂಡು ಅಲ್ಲಿ ಚಿಗುರು ಹಸಿರು ಹೊರಹೊಮ್ಮುತ್ತದೆ. ಆಗ ನಾಗರಹೊಳೆ, ಬಂಡೀಪುರ, ಮದುಮಲೈ, ವೈನಾಡಿನ ಆನೆಗಳು, ಕಾಡುಕೋಣಗಳು ಹಿಂಡುಹಿಂಡಾಗಿ ಹಿನ್ನೀರಿನತ್ತ ವಲಸೆ ಬರುತ್ತವೆ. ಆಗ ಒಮ್ಮಗೇ ೬೦ ರಿಂದ ೭೦ ಆನೆಗಳು ಹಿಂಡು ಹಿಂಡಾಗಿ ಕಾಣಿಸುತ್ತವೆ. ದೋಣಿಯಲ್ಲಿ ಕುಳಿತು ಆನೆಗಳ ಹಿಂಡನ್ನು ಬಿದಿರ ಹಿನ್ನೆಲೆಯಲ್ಲಿ ನೋಡಲು ತುಂಬಾ ಚೆನ್ನಾಗಿರುತ್ತದೆ. ಒಣ ಮರಗಳ ಮೇಲೆ ಕುಳಿತ ಬೆಳ್ಳಕ್ಕಿಗಳು, ನೀರು ಕಾಗೆಗಳು, ಸ್ನೇಕ್ ಬರ್ಡ್, ಮಿಂಚುಳ್ಳಿಗಳು, ಹದ್ದುಗಳು, ಬಾತುಗಳು ಇತ್ಯಾದಿ ಹಕ್ಕಿಗಳನ್ನು ನೋಡುತ್ತಾ ಸಾಗಿದಂತೆ ನಮ್ಮ ಎಣಿಕೆಯೇ ತಪ್ಪುತ್ತದೆ.

ಭಾರತದ ದಕ್ಷಿಣ ತುದಿಯಿಂದ ಪ್ರಾರಂಭವಾಗಿ ಗುಜರಾತ್‌ವರೆಗೆ ೧,೬೦೦ ಕಿಮೀ ಉದ್ದದ, ೧,೬೦,೦೦೦ ಚದರ ಕಿಮೀ ವ್ಯಾಪ್ತಿಯ ಪಶ್ಚಿಮಘಟ್ಟವನ್ನು ದೇಶದ ಅತಿದೊಡ್ಡ ಜೈವಿಕ ತಾಣವೆಂದು ಪರಿಗಣಿಸಲಾಗಿದೆ. ಇದರ ಪ್ರತಿನಿಧಿಯಾದ ಕಬಿನಿ ಸುತ್ತಮುತ್ತಲ ತಾಣ ಜೀವವೈವಿದ್ಯದ ದರ್ಶನ ಮಾಡಿಸುವಲ್ಲಿ ಹೇಳಿ ಮಾಡಿಸಿದಂತ ತಾಣ.


















ಮಲಬಾರ್ ಜೈಂಟ್ ಸ್ಕ್ವಿರ್ಲ್


ಬಾರ್ಕಿಂಗ್ ಡೀರ್






ಆಸ್ಪ್ರೇ ಹಕ್ಕಿ


ಸ್ನೇಕ್ ಬರ್ಡ್


ಆಸ್ಪ್ರೇ ಹಕ್ಕಿ


ನೀರು ಕಾಗೆ

16 comments:

suresh kota said...

Excellent!

ಸವಿಗನಸು said...

ಒಳ್ಳೆ ಮಾಹಿತಿಯೊಂದಿಗೆ ಸೊಗಸಾದ ಫೋಟೋಗಳು...
ನಿಮ್ಮ ಸಾಹಸಕ್ಕೊಂದು ಸಲಾಮ್....

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಅವರೆ,
ಮಾಹಿತಿಯೊಂದಿಗೆ ವನ್ಯಜೀವಿ ಚಿತ್ರಗಳೂ, ಹಕ್ಕಿಗಳು ಅವುಗಳ ಹೆಸರುಗಳನ್ನೂ ತಿಳಿಸಿದ್ದೀರಿ. ಬಹಳ ಅಪರೂಪದ ಚಿತ್ರಗಳು.
ಇನ್ನಷ್ಟು ಬರಹ-ಚಿತ್ರಗಳ ನಿರೀಕ್ಷೆಯಲ್ಲಿ,

ಸ್ನೇಹದಿಂದ,

ಸುಮ said...

ಉತ್ತಮ ಮಾಹಿತಿ ಮತ್ತು ಫೋಟೋಗಳು ಸರ್ . ನಮ್ಮ ಪಶ್ಛಿಮಘಟ್ಟ ಸಾಲು ಪ್ರಪಂಚದ ಎಂಟು "ಜೈವಿಕ ಹಾಟ್ ಸ್ಪಾಟ್ " ಗಳಲ್ಲೊಂದು .
ಕಬಿನಿ ಅರಣ್ಯದಲ್ಲಿ ಸಫಾರಿ ಮಾಡಲು ಮೊದಲೇ ಬುಕಿಂಗ ಏನಾದ್ರೂ ಮಾಡಿಸಬೇಕಾ ಸರ್?

PARAANJAPE K.N. said...

ಅಪರೂಪದ ಚಿತ್ರ-ಮಾಹಿತಿ, ಚೆನ್ನಾಗಿದೆ.

Nisha said...

Stupendo fantabulously fantastic

Dr.D.T.Krishna Murthy. said...

ಚಿತ್ರಗಳು,ಮಾಹಿತಿ ಎರಡೂ ಅದ್ಭುತ!

ದೀಪಸ್ಮಿತಾ said...

ಕಾಡಿನಲ್ಲಿ ಹುಲಿಯನ್ನು ನೋಡಲು ಅದೃಷ್ಟ ಮಾಡಿರಬೇಕು. ನಿಮಗೆ ಒಳ್ಳೆ ಪೋಸ್ ಕೊಟ್ಟಿದ್ದಾನೆ ಹುಲಿರಾಯ. ಚಿರತೆರಾಯರು ಮತ್ತು ಇತರ ಜೀವಿಗಳೂ ಕೂಡ. ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಪ್ರಾಣಿಗಳನ್ನು ನೋಡುವುದೇ ಸೊಗಸು. ಅವುಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಡುವ ಬುದ್ಢಿ ಕಾಡುಗಳ್ಳರಿಗೆ(poachers) ಬರಲಿ. ಒಳ್ಳೆ ಚಿತ್ರಗಳು ಮತ್ತು ಮಾಹಿತಿ ಸರ್

sunaath said...

ಅತ್ಯುತ್ತಮ ಫೋಟೋಗಳು.

ಮನದಾಳದಿಂದ............ said...

ಮಲ್ಲಿ ಸರ್,
ಸುಂದರ ಫೋಟೋಗಳು.........
ಉತ್ತಮ ಮಾಹಿತಿ.........
ನಾನು ಚಿಕ್ಕವನಿದ್ದಾಗ ನಮ್ಮ ಮನೆ ಮುಂದೇ(ಗದ್ದೆಯಲ್ಲಿ) ಕಾಡುಕೋಣಗಳು ಹೆದರದೆ ಬರುತ್ತಿದ್ದವು. ದನ ಮೇಯಿಸುವಾಗ ಹುಲಿಗಳಿಂದ ದನಗಳನ್ನು ರಕ್ಷಿಸಲು ತುಂಬಾ ಕಷ್ಟವಾಗುತ್ತಿತ್ತು.(ಈಗಲೂ ಇದೆ) ಆದರೆ ಈಗ ಆ ವೈಭವ ತುಂಬಾ ಕಡಿಮೆಯಾಗಿದೆ.
ಈ ಚಿತ್ರಗಳನ್ನು ನೋಡಿ ತುಂಬಾ ಸಂತೋಷವಾಯಿತು........

ಸೀತಾರಾಮ. ಕೆ. / SITARAM.K said...

ಅದ್ಭುತ ಛಾಯಚಿತ್ರಗಳು. ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

Guruprasad said...

ಮಲ್ಲಿಕಾರ್ಜುನ್ ಸರ್,,
ತುಂಬಾ ಒಳ್ಳೆಯ ಪ್ರವಾಸ ಬರಹ.. ಒಳ್ಳೆಯ ಮಾಹಿತಿಯೊಂದಿಗೆ,,, ಅದ್ಬುತ ಚಿತ್ರಗಳನ್ನು ತೋರಿಸಿದ್ದೀರಿ..... ತುಂಬಾ ಚೆನ್ನಾಗಿ ಇದೆ...
ಗುರು

ಸುಧೇಶ್ ಶೆಟ್ಟಿ said...

super!

bannerughattadalli huliyannu nodidaaga thumba exciting aagittu... nimma bloginalliruvudu innoo romanchanakaariyaagide,... :)

Ittigecement said...

ಹುಡುಕಾಟದ ಮಲ್ಲಿಕಾರ್ಜುನ್...

ವಾಹ್ !

ಅದ್ಭುತ ಫೋಟೊಗಳು...!
ಸೂಪರ್... ತುಂಬಾ ಖುಷಿಯಾಗುತ್ತದೆ..

ನಿಮ್ಮ ವಿವರಣೆಕೂಡ ಎಲ್ಲ ಮಾಹಿತಿ ಕೊಡುತ್ತದೆ...

ಅಭಿನಂದನೆಗಳು...

veena said...

ನಿಮ್ದೇನಾ ಫೊಟೋಗ್ರಾಫಿ? ತುಂಬಾ ಸೊಗಸಾಗಿದೆ. ನಿಮ್ಮ ಬ್ಲಾಗ್ ಗೆ ಮತ್ತೆ ಮತ್ತೆ ಬರುವ ಆಸೆ..

AntharangadaMaathugalu said...

ಅತ್ಯುತ್ತಮ ಚಿತ್ರಗಳು........

ಶ್ಯಾಮಲ